Sheikh Hasina: ಶೇಖ್ ಹಸೀನಾ ಗಡಿಪಾರಿಗೆ ಬಾಂಗ್ಲಾ ಒತ್ತಾಯ; ಭಾರತ ಹೇಳಿದ್ದೇನು?
Bangladesh: ಬಾಂಗ್ಲಾದೇಶದಲ್ಲಿ ಮರಣ ದಂಡನೆಗೆ ಗುರಿಯಾದ ಶೇಖ್ ಹಸೀನಾರನ್ನು ಒಪ್ಪಿಸುವಂತೆ ಬಾಂಗ್ಲಾ ಪತ್ರ ಬರೆದ ಬೆನ್ನಲ್ಲೇ ಭಾರತ ಪ್ರತಿಕ್ರಿಯೆ ನೀಡಿದೆ. ನೆರೆಯ ರಾಷ್ಟ್ರವಾಗಿ, ಭಾರತವು ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಬದ್ಧವಾಗಿದೆ, ಅದರಲ್ಲಿ ಶಾಂತಿ, ಪ್ರಜಾಪ್ರಭುತ್ವ, ಸೇರ್ಪಡೆ ಮತ್ತು ಸ್ಥಿರತೆ ಸೇರಿವೆ ಎಂದು ಹೇಳಿದೆ.
ಶೇಖ್ ಹಸೀನಾ -
ಢಾಕಾ: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿಗೆ ನಿನ್ನೆ (ಸೋಮವಾರ) ICT ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿದೆ. ಬಾಂಗ್ಲಾ ವಿದೇಶಾಂಗ (Sheikh Hasina) ಇಲಾಖೆ ಭಾರತ ಸರ್ಕಾರಕ್ಕೆ ಹಸೀನಾರನ್ನು ಹಸ್ತಾಂತರಿಸುವಂತೆ ಪತ್ರ ಬರೆದಿದ್ದು, ಭಾರತ ಇದೀಗ ಪ್ರತಿಕ್ರಿಯೆ ನೀಡಿದೆ. ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ನೀಡಿದ ತೀರ್ಪನ್ನು ಭಾರತ ಸೋಮವಾರ ಔಪಚಾರಿಕವಾಗಿ ಗಮನಿಸಿದೆ ಎಂದು ಹೇಳಿದ್ದು, "ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಬದ್ಧವಾಗಿದೆ" ಎಂದು ಹೇಳಿದೆ.
ನೆರೆಯ ರಾಷ್ಟ್ರವಾಗಿ, ಭಾರತವು ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಬದ್ಧವಾಗಿದೆ, ಅದರಲ್ಲಿ ಶಾಂತಿ, ಪ್ರಜಾಪ್ರಭುತ್ವ, ಸೇರ್ಪಡೆ ಮತ್ತು ಸ್ಥಿರತೆ ಸೇರಿವೆ. ಆ ನಿಟ್ಟಿನಲ್ಲಿ ನಾವು ಯಾವಾಗಲೂ ಎಲ್ಲಾ ಪಾಲುದಾರರೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುತ್ತೇವೆ" ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಆಗಸ್ಟ್ 2024 ರಲ್ಲಿ ನಡೆದ ಹಿಂಸಾಚಾರದ ನಂತರ ಶೇಖ್ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ದೆಹಲಿಯಲ್ಲಿ ಸರ್ಕಾರದ ನೆರವಿನಲ್ಲಿ ನೆಲೆಸಿದ್ದಾರೆ. ಇಂದು ಶೇಖ್ ಹಸೀನಾರಿಗೆ ಗಲ್ಲುಶಿಕ್ಷೆ ಆದೇಶ ಹೊರಬಿದ್ದ ನಂತರ ಭಾರತವು ಅಧಿಕೃತವಾಗಿ ಪ್ರಕಟಣೆಯೊಂದು ಹೊರಡಿಸಿದೆ.
ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ಪ್ರಕಟಿಸಿದೆ. ನ್ಯಾಯಮೂರ್ತಿ ಎಂ.ಡಿ ಗೋಲಮ್ ಮೊರ್ತುಜಾ ಮಜುಂದಾರ್ ನೇತೃತ್ವದ ತ್ರಿಸದಸ್ಯ ನ್ಯಾಯಮಂಡಳಿಯು ಹಸೀನಾ ಅವರ ಇಬ್ಬರು ಸಹಾಯಕರಾದ ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಾಲ್ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥ ಚೌಧುರಿ ಅಬ್ದುಲ್ಲಾ ಅಲ್ ಮಾಮುನ್ ಅವರಿಗೂ ಮರಣದಂಡನೆ ವಿಧಿಸಿದೆ.
ಬಾಂಗ್ಲಾದೇಶ ಹಸೀನಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕೋರಿದಾಗ, ಬಾಂಗ್ಲಾದೇಶದಿಂದ ಗಡಿಪಾರು ವಿನಂತಿಯನ್ನು ಸ್ವೀಕರಿಸಲಾಗಿದೆ ಎಂದು ಭಾರತ ಹೇಳಿತ್ತು. ಆದರೆ ಆ ಸಮಯದಲ್ಲಿ, ಅದು ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿತ್ತು. ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನಸ್ ಅವರು ಮಾಜಿ ಪ್ರಧಾನಿಗೆ ಶೇಖ್ ಹಸೀನಾ ಅವರಿಗೆ ಗಲ್ಲು ಶಿಕ್ಷೆಯ ತೀರ್ಪನ್ನು ಸ್ವಾಗತಿಸಿದ್ದಾರೆ. ಮಾನವತೆಯ ವಿರುದ್ಧದ ಅಪರಾಧ ಪ್ರಕರಣದಲ್ಲಿ ಶೇಖ್ ಹಸೀನಾ ಮತ್ತು ಅಸಾದುಜ್ಜಮಾನ್ ಖಾನ್ ಕಮಲ್ ಅವರಿಗೆ ಮರಣದಂಡನೆ ವಿಧಿಸಿರುವುದು ಐತಿಹಾಸಿಕ ತೀರ್ಪು" ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.