World Tuberculosis Day: ವಿಶ್ವ ಕ್ಷಯರೋಗ ದಿನ: ಲಕ್ಷಣಗಳೇನು? ತಡೆ ಹೇಗೆ?
World Tuberculosis Day: ಇಂದಿಗೂ ವರ್ಷಂಪ್ರತಿ ಸುಮಾರು ಒಂದು ಕೋಟಿ ಟಿಬಿ ಪ್ರಕರಣಗಳು ವಿಶ್ವದೆಲ್ಲೆಡೆ ವರದಿಯಾಗುತ್ತಿವೆ. ಈ ಪ್ರಕರಣಗಳಲ್ಲಿ ಭಾರತಕ್ಕೆ ಸಿಂಹ ಪಾಲಿರುವುದು ದುರದೃಷ್ಟಕರ ಸಂಗತಿ. ಹಾಗಾಗಿ ಈ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನ ಆಚರಿಸಲಾಗುತ್ತದೆ. ಟಿಬಿ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.

tuberculosis

ನವದೆಹಲಿ: ವಿಶ್ವವನ್ನು ಕಾಡುತ್ತಿರುವ ಹಲವು ಮಾರಣಾಂತಿಕ ಸೋಂಕುಗಳ ಪೈಕಿ ಕ್ಷಯವೂ ಒಂದು. ಜಗತ್ತಿನಲ್ಲಿ ಹೆಚ್ಚಾಗಿ ಸಂಭವಿಸುತ್ತಿರುವ ರೋಗ ಜನ್ಯ ಮರಣಗಳಿಗೆ ಕ್ಷಯ ಅಥವಾ ಟಿಬಿ ರೋಗ ಮೊದಲ ಹತ್ತು ಸ್ಥಾನಗಳಲ್ಲಿದೆ. ಇಂದಿಗೂ ವರ್ಷಂಪ್ರತಿ ಸುಮಾರು 1 ಕೋಟಿ ಟಿಬಿ ಪ್ರಕರಣಗಳು ವಿಶ್ವದೆಲ್ಲೆಡೆ ವರದಿಯಾಗುತ್ತಿವೆ. ಈ ಪ್ರಕರಣಗಳಲ್ಲಿ ಭಾರತಕ್ಕೆ ಸಿಂಹಪಾಲಿರುವುದು ವಿಷಾದನೀಯ. ಹಾಗಾಗಿ ಈ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನ (World Tuberculosis Day) ಎಂದು ಆಚರಿಸಲಾಗುತ್ತಿದೆ. ಟಿಬಿ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.
ಕ್ಷಯ ಎನ್ನುವುದೊಂದು ಬ್ಯಾಕ್ಟೀರಿಯಾ ಸೋಂಕು. ಮೈಕೊಬ್ಯಾಕ್ಟೀರಿಯಂ ಟ್ಯುಬರ್ಕಿಲೋಸಿಸ್ ಎನ್ನುವ ಬ್ಯಾಕ್ಟೀರಿಯಾದಿಂದ ಗಾಳಿಯ ಮೂಲಕ ಈ ರೋಗ ಹರಡುತ್ತದೆ. ಮೊದಲಿಗೆ ಶ್ವಾಸಕೋಶಕ್ಕೆ ತಗುಲುವ ಈ ರೋಗ, ಕ್ರಮೇಣ ಬೆನ್ನುಹುರಿ, ಮೆದುಳು, ಕರುಳು ಸೇರಿದಂತೆ ದೇಹದ ಇತರ ಭಾಗಗಳಿಗೂ ವ್ಯಾಪಿಸಬಹುದು. ಮೂರು ವಾರಗಳಾದರೂ ವಾಸಿಯಾಗದಂತಹ ತೀವ್ರ ಕೆಮ್ಮು ಬಾಧಿಸುತ್ತಿದ್ದರೆ ವೈದ್ಯಕೀಯ ತಪಾಸಣೆ ಮಾಡಿಸಲೇಬೇಕು. ಇದಲ್ಲದೆ ಈ ಸೋಂಕು ಪೀಡಿತರಲ್ಲಿ ಇನ್ನೂ ಹಲವು ಲಕ್ಷಣಗಳು ಕಾಣಿಸುತ್ತವೆ.
ರೋಗ ಲಕ್ಷಣಗಳು
ತೀವ್ರವಾದ ಕೆಮ್ಮು, ಎದೆನೋವು, ರಕ್ತಮಿಶ್ರಿತ ಕಫ, ಉಸಿರಾಟದ ತೊಂದರೆ, ಜ್ವರ, ರಾತ್ರಿ ಬೆವರುವುದು, ಹಸಿವಾಗದಿರುವುದು, ತೀವ್ರ ಆಯಾಸ, ಬೆನ್ನುನೋವು, ತಲೆನೋವು, ಕಿಬ್ಬೊ ಟ್ಟೆಯಲ್ಲಿ ನೋವು, ಗುಣವಾಗದ ಹುಣ್ಣುಗಳು, ಮಲಬದ್ಧತೆ, ಸಂವೇದನೆ ಕಳೆದುಕೊಳ್ಳುವುದು- ಹೀಗೆ ಹಲವು ರೀತಿಯಲ್ಲಿ ಲಕ್ಷಣಗಳು ಗೋಚರಿಸಬಹುದು. ಎದೆಯ ಎಕ್ಸ್ ರೇ ಮಾಡಿ, ಕಫದ ಪರೀಕ್ಷೆ ಮಾಡಿದಾಗಲೇ ಈ ರೋಗವನ್ನು ನಿಖರವಾಗಿ ಪತ್ತೆ ಮಾಡಲು ಸಾಧ್ಯ. ಇದು ನಿಶ್ಚಿತವಾಗಿ ಸೋಂಕು ರೋಗವಾಗಿದ್ದು, ಒಬ್ಬ ರೋಗಿಯಿಂದ 15 ಆರೋಗ್ಯವಂತರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ರೋಗಿಯನ್ನು ಪ್ರತ್ಯೇಕವಾಗಿ ಇರಿಸುವುದು ಅನಿವಾರ್ಯ.
ಕಾರಣವೇನು?
ಕ್ಷಯದ ಸೋಂಕು ಬಹಳ ಮಂದಿಯಲ್ಲಿ ಸುಪ್ತವಾಗಿ ಇರಬಹುದು. ವ್ಯಕ್ತಿಗಳ ರೋಗ ನಿರೋಧಕತೆ ಚೆನ್ನಾಗಿದ್ದಷ್ಟೂ ಬ್ಯಾಕ್ಟೀರಿಯಾ ಸಕ್ರಿಯವಾಗದಂತೆ ತಡೆಯುತ್ತದೆ. ಇಂಥವರಿಂದ ರೋಗ ಹರಡುವ ಸಂಭವ ಕಡಿಮೆ. ಆದರೆ ಇಂಥವರಲ್ಲಿ ಎಂದಾದರೂ ಪ್ರತಿರೋಧಕತೆ ಕಡಿಮೆಯಾದರೆ ಕ್ಷಯ ಸಕ್ರಿಯವಾಗುತ್ತದೆ. ಹೀಗೆ ಸಕ್ರಿಯ ಟಿಬಿ ಇರುವಂಥವರು ಸೀನಿದಾಗ, ಕೆಮ್ಮಿದಾಗ, ಮಾತಾಡುವಾಗ ಗಾಳಿಯಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ. ಅದು ಗಾಳಿಯ ಮೂಲಕ ಆರೋಗ್ಯವಂತರ ಉಸಿರಲ್ಲಿ ಸೇರಿದರೆ, ಸೋಂಕು ದೇಹ ಸೇರಿದಂತೆ. ಆದರೆ ಸೋಂಕಿತರನ್ನು ಮುಟ್ಟುವುದರಿಂದ, ಅವರ ವಸ್ತುಗಳನ್ನು ಮುಟ್ಟುವುದರಿಂದ ಈ ರೋಗಾಣುಗಳು ಹರಡುವುದಿಲ್ಲ.
ಚಿಕಿತ್ಸೆ
ಕೆಲವೇ ವಾರಗಳಲ್ಲಿ ಮುಗಿಯುವ ಚಿಕಿತ್ಸೆ ಇದಲ್ಲವಾಗಿದ್ದು, ದೀರ್ಘ ಕಾಲದ ಶುಶ್ರೂಷೆಯ ಅಗತ್ಯವಿರುತ್ತದೆ. ಆದರೆ ಅಲ್ಪ ಕಾಲದ ಚಿಕಿತ್ಸೆಯ ನಂತರ, ತಮ್ಮ ಆರೋಗ್ಯ ಸುಧಾರಿಸಿದೆ ಎನಿಸಿ ಚಿಕಿತ್ಸೆಯನ್ನು ಅರ್ಧಕ್ಕೇ ನಿಲ್ಲಿಸಿದ ಪ್ರಕರಣಗಳು ಬಹಳಷ್ಟಿವೆ. ಇದರಿಂದ ರೋಗ ಮರುಕಳಿಸಿ, ಔಷಧಿಗೂ ಬ್ಯಾಕ್ಟೀರಿಯಾಗಳು ಬಗ್ಗುವುದಿಲ್ಲ. ಹಾಗಾಗಿ ವೈದ್ಯರು ಹೇಳುವವರೆಗೆ, ಕನಿಷ್ಠ 12 ತಿಂಗಳು ಚಿಕಿತ್ಸೆಯನ್ನು ಮುಂದುವರಿಸಬೇಕು. ಟಿಬಿ ಚಿಕಿತ್ಸೆಯ ಸಂದರ್ಭದಲ್ಲಿ ಮತ್ತು ನಂತರವೂ ಸರಿಯಾದ ಆಹಾರ ಕ್ರಮವನ್ನು ಅನುಸರಿಸಬೇಕು. ಋತುಮಾನದ ತರಕಾರಿಗಳು, ಹಣ್ಣುಗಳು, ಹಸಿರು ಸೊಪ್ಪುಗಳು, ಸಿರಿಧಾನ್ಯಗಳು, ಕಾಯಿ-ಬೀಜಗಳು, ವಿಟಮಿನ್ ಸಿ ಹೇರಳವಾದ ತಿನಿಸುಗಳು, ಖನಿಜಯುಕ್ತ ಆಹಾರಗಳು ಅಗತ್ಯವಾಗಿಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಪ್ರತಿರೋಧಕತೆ ಪ್ರಬಲವಾದಷ್ಟೂ ಬೇಗ ರೋಗಾಣುಗಳು ದುರ್ಬಲವಾಗುತ್ತವೆ.
ಪ್ರಸರಣ ತಡೆಗೆ
ಸಕ್ರಿಯ ಟಿಬಿ ಇರುವವರು ಸ್ವಚ್ಛ ಗಾಳಿ-ಬೆಳಕು ಇರುವ ಜಾಗದಲ್ಲೇ ವಿಶ್ರಾಂತಿ ಪಡೆಯುವುದು ಕಡ್ಡಾಯ. ಹಾಗಿಲ್ಲದಿದ್ದರೆ ಕುಟುಂಬದ ಇತರರೂ ಸೋಂಕಿಗೆ ಒಳಗಾಗಬಹುದು. ಕೆಮ್ಮುವಾಗ-ಸೀನುವಾಗ ಮೂಗು-ಬಾಯಿಯನ್ನು ಮುಚ್ಚಿಕೊಳ್ಳಲೇಬೇಕು. ಮಾತಾಡುವಾಗ ಮಾಸ್ಕ್ ಧರಿಸುವುದು ಉತ್ತಮ. ಸೋಂಕಿತರನ್ನು ಆರೈಕೆ ಮಾಡುವವರು ಸಹ ವೈಯಕ್ತಿಕ ಶುಚಿತ್ವವನ್ನು ಕಾಪಾಡಿ ಕೊಳ್ಳಬೇಕು. ಆರೈಕೆ ಮಾಡುವವರೂ ರೋಗಿಗಳ ಸಮೀಪ ಹೋಗುವಾಗ ಮಾಸ್ಕ್ ಧರಿಸುವುದು ಒಳ್ಳೆಯದು. ಸಮತೋಲಿತ ಆಹಾರವನ್ನು ಕುಟುಂಬದ ಉಳಿದವರೂ ಸೇವಿಸುತ್ತಿದ್ದಂತೆ ಸೋಂಕು ಪ್ರಸರಣ ತಡೆಗೆ ಅನುಕೂಲವಾಗುತ್ತದೆ.
ಇದನ್ನು ಓದಿ: Health Tips: ಲೈಂಗಿಕ ಕ್ರಿಯೆಯ ನಂತರ ನೀವು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳಾವುವು ಗೊತ್ತಾ?
ಲಸಿಕೆ
ಬದುಕಿನ ಯಾವುದೇ ಘಟ್ಟದಲ್ಲಿ ಟಿಬಿ ಅಂಟಬಹುದು. ಇದಕ್ಕೆ ವಯಸ್ಸು, ಲಿಂಗ, ಕಾಲ-ದೇಶಗಳ ಹಂಗಿಲ್ಲ. ಹಾಗಾಗಿ ಪುಟ್ಟ ಮಕ್ಕಳಿಗೆ ಬಿಸಿಜಿ ಲಸಿಕೆಯನ್ನು ನೀಡುವುದು ಕಡ್ಡಾಯ. ಇದರಿಂದ ಒಂದೊಮ್ಮೆ ಟಿಬಿ ಬಂದರೆ ಸೋಂಕು ಮಾರಣಾಂತಿಕವಾಗುವುದನ್ನು ತಡೆಯಬಹುದು. ಒಳ್ಳೆಯ ಆಹಾರ, ಗಾಢ ನಿದ್ದೆ, ನಿಯಮಿತ ವ್ಯಾಯಾಮ, ಸಿಗರೇಟ್-ಮದ್ಯದಿಂದ ದೂರ ಇರುವುದು- ಇಂಥವೆಲ್ಲವೂ ಟಿಬಿಯನ್ನು ನಮ್ಮಿಂದ ದೂರ ಮಾಡುತ್ತವೆ. ಒಂದೊಮ್ಮೆ ಸೋಂಕು ತಗುಲಿದರೂ, ಬೇಗನೇ ಚೇತರಿಸಿಕೊಳ್ಳಲು ದೇಹಕ್ಕೆ ನೆರವಾಗುತ್ತವೆ.