ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Winter Session: 2026ರ ಜೂನ್ ವೇಳೆಗೆ ತುಂಗಭದ್ರಾ ಅಣೆಕಟ್ಟಿನ ಎಲ್ಲ ಗೇಟ್‌ಗಳ ಬದಲಾವಣೆ; ಡಿ.ಕೆ. ಶಿವಕುಮಾರ್

DK Shivakumar: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಸನಗೌಡ ಬಾದರ್ಲಿ, ತುಂಗಭದ್ರಾ ಅಣೆಕಟ್ಟು ಗೇಟ್‌ಗಳ ಬದಲಾವಣೆಗಳ ಬಗ್ಗೆ ಕೇಳಿದಾಗ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, 2026ರ ಜೂನ್ ತಿಂಗಳ ವೇಳೆಗೆ ತುಂಗಭದ್ರಾ ಅಣೆಕಟ್ಟಿನ ಎಲ್ಲ 33 ಗೇಟ್‌ಗಳ ಬದಲಾವಣೆ ಕಾರ್ಯ ಪೂರ್ಣಗೊಳ್ಳಲಿದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಜೂನ್ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲ ಗೇಟ್‌ ಬದಲಾವಣೆ: ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -

Profile
Siddalinga Swamy Dec 18, 2025 6:46 PM

ಬೆಳಗಾವಿ, ಡಿ.18: ʼʼ2026ರ ಜೂನ್ ತಿಂಗಳ ವೇಳೆಗೆ ತುಂಗಭದ್ರಾ ಅಣೆಕಟ್ಟೆಯ (Tungabhadra Dam) ಎಲ್ಲ 33 ಗೇಟ್‌ಗಳನ್ನು ಬದಲಾವಣೆ ಕಾರ್ಯ ಪೂರ್ಣಗೊಳ್ಳಲಿದ್ದು, ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಭರವಸೆ ನೀಡಿದರು. ಸುವರ್ಣ ವಿಧಾನ ಸೌಧದದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.‌

ಕಾಂಗ್ರೆಸ್ ಸದಸ್ಯ ಬಸನಗೌಡ ಬಾದರ್ಲಿ, ತುಂಗಭದ್ರಾ ಅಣೆಕಟ್ಟು ಗೇಟ್‌ಗಳ ಬದಲಾವಣೆಗಳ ಬಗ್ಗೆ ಕೇಳಿದಾಗ, ʼʼಕಳೆದ ವರ್ಷ 19ನೇ ಗೇಟ್ ತುಂಡರಿಸಿದಾಗ ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ನಾನೂ ಗಾಬರಿಯಾಗಿದ್ದೆ. ಆಗ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಜನಾರ್ದನ ರೆಡ್ಡಿ ಸೇರಿದಂತೆ ಅನೇಕರು ನಮ್ಮನ್ನು ಟೀಕೆ ಮಾಡಿದರು. ಆಗ ನಾನು ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದಿದ್ದೆವು. ನಾವು ಕೇವಲ 7 ದಿನಗಳಲ್ಲಿ ಗೇಟ್ ಬದಲಾವಣೆ ಮಾಡಿದೆವು. ನಂತರ ನಾವು ಕೇಂದ್ರ ಜಲ ಆಯೋಗದ ಮಾಜಿ ಮುಖ್ಯಸ್ಥ ಎಂ.ಕೆ. ಬಜಾಜ್ ಅವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿ, ಇಡೀ ರಾಜ್ಯದ ಎಲ್ಲ ಅಣೆಕಟ್ಟುಗಳ ಗೇಟ್‌ಗಳ ಪರಿಶೀಲನೆಗೆ ಸೂಚಿಸಿದೆವು. ಈ ಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಟಿಬಿ ಅಣೆಕಟ್ಟಿನ ಎಲ್ಲ 33 ಗೇಟ್‌ಗಳ ಬದಲಾವಣೆಗೆ ಮುಂದಾಗಿದ್ದು, 52 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆʼʼ ಎಂದು ಭರವಸೆ ನೀಡಿದರು.

ʼʼಈ ವಿಚಾರದಲ್ಲಿ ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ಉತ್ತಮ ಗುಣಮಟ್ಟದ ಕಾಮಗಾರಿ ನಡೆಯಲಿದೆ. ನಮ್ಮ ರಾಜ್ಯದಿಂದ 10 ಕೋಟಿ ರೂ. ಹಾಗೂ ಆಂಧ್ರ ಪ್ರದೇಶದಿಂದ 20 ಕೋಟಿ ರೂ. ಅನುದಾನ ನೀಡಲಾಗಿದೆ. ಇದಕ್ಕೆ ಅಗತ್ಯವಿರುವ ಹಣವನ್ನು ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಅಣೆಕಟ್ಟುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಅವರು ತಿಳಿಸಿದರು.

ಕೆಳಮನೆಯಲ್ಲಿ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ ಅಂಗೀಕಾರ

ಆದ್ಯತೆ ಮೇರೆಗೆ ವರಾಹಿ ಯೋಜನೆ ಬಾಕಿ ಕಾಮಗಾರಿ ಪೂರ್ಣ

ವಿಧಾನ ಪರಿಷತ್‌ನ ಗಮನ ಸೆಳೆವ ಸೂಚನೆ ವೇಳೆ ಕಾಂಗ್ರೆಸ್ ಸದಸ್ಯ ಮಂಜುನಾಥ್ ಭಂಡಾರಿ, ವರಾಹಿ ಯೋಜನೆ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ʼʼಈ ಯೋಜನೆಗೆ ಸಂಬಂಧಿಸಿದಂತೆ ಅರಣ್ಯ ಭೂಮಿ ಬಿಡುಗಡೆ ಬಾಕಿ ಇದೆ. ವರಾಹಿ ಯೋಜನೆಯ ಎಲ್ಲ ಬಾಕಿ ಕಾಮಗಾರಿಗಳಿಗೆ ಆವಶ್ಯಕತೆ ಇರುವ ಅರಣ್ಯ ಭೂಮಿ ಪಡೆದು ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗುವುದು. ಎಲ್ಲ ಸರ್ಕಾರಗಳು ಇದನ್ನು ಮಾಡಬೇಕಿತ್ತು. ಅರಣ್ಯ ಇಲಾಖೆ ಅಡಚಣೆಯಿಂದ ಸಾಧ್ಯವಾಗಿಲ್ಲ. 3,519 ಕೋಟಿ ರೂ. ಅಂದಾಜು ಯೋಜನೆ ವರದಿ ಸಿದ್ಧಪಡಿಸಿದ್ದು, ಇದರ ಪರಿಶೀಲನೆ ಮಾಡಲಾಗುತ್ತಿದೆ. ಈ ಯೋಜನೆ ಸ್ಥಳಕ್ಕೆ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಇಲ್ಲಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜತೆ ಸಭೆ ಮಾಡುತ್ತೇನೆʼʼ ಎಂದು ಅವರು ಭರವಸೆ ನೀಡಿದರು.