ಬೆಳಗಾವಿ ಜೈಲಿನಿಂದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಜೈಲಿನಿಂದ ರಿಲೀಸ್; ಸನ್ಮಾನ ಮಾಡಲು ಹೋದವರು ವಶಕ್ಕೆ!
ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ನಟೋರಿಯಸ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು ಮಂಜೂರಾಗಿದ್ದು, ಗುರುವಾರ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ. ಮಹೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿದ್ದ ನಾಗ ಕಳೆದ ಹಲವು ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ.
ಸಂಗ್ರಹ ಚಿತ್ರ -
ಬೆಳಗಾವಿ: ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ನಟೋರಿಯಸ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ (Wilson Garden Naga) ಜಾಮೀನು ಮಂಜೂರಾಗಿದ್ದು, ಗುರುವಾರ ಬೆಳಗಾವಿಯ (Belagavi) ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯ ವೇಳೆ ಆತನಿಗೆ ಸನ್ಮಾನ ಮಾಡಲು ಹೋದ ಹುಡುಗರ ಗುಂಪೊಂದನ್ನು ಸಿಸಿಬಿ, ಒಸಿಡಬ್ಲ್ಯೂ ವಿಂಗ್ ವಶಕ್ಕೆ ಪಡೆದಿದೆ.
ಜಾಮೀನು ಆದೇಶದ ನಂತರ ಕಾನೂನು ಪ್ರಕ್ರಿಯೆ ಪೂರ್ಣಗೊಂಡು ನಾಗನನ್ನು ಮೊದಲು ಬೆಳಗಾವಿ ಜಿಲ್ಲಾಸ್ಪತ್ರೆಯ ಕೈದಿ ವಾರ್ಡಿಗೆ ಕರೆತಂದು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಆರೋಗ್ಯ ಪರಿಶೀಲನೆ ನಂತರ ಜೈಲು ಅಧಿಕಾರಿಗಳು ಅಧಿಕೃತವಾಗಿ ಬಿಡುಗಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.
ಮಹೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿದ್ದ ನಾಗ ಕಳೆದ ಹಲವು ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ. ಸೆಷನ್ಸ್ ಕೋರ್ಟ್ ಇತ್ತೀಚೆಗೆ ಆತನಿಗೆ ಜಾಮೀನು ಮಂಜೂರು ಮಾಡಿದ ಹಿನ್ನೆಲೆ ಬಿಡುಗಡೆ ಸಾಧ್ಯವಾಯಿತು. ಆದರೆ ತಾಂತ್ರಿಕ ಕಾರಣಗಳಿಂದ ಒಂದು ದಿನ ವಿಳಂಬವಾಗಿದ್ದು, ಬಿಡುಗಡೆ ಪ್ರಕ್ರಿಯೆ ಗುರುವಾರ ಅಂತಿಮಗೊಂಡಿದೆ. ಜೈಲು ಹೊರಗೆ ವಿಲ್ಸನ್ ಗಾರ್ಡನ್ ನಾಗನನ್ನು ಸ್ವಾಗತಿಸಲು ಸುಮಾರು ಹತ್ತಕ್ಕೂ ಹೆಚ್ಚು ಸಹಚರರು ಆಗಮಿಸಿದ್ದರು. ಆದರೆ ಜೈಲು ಸುತ್ತಮುತ್ತ ಗುಂಪು ಸೇರುವ ಸಾಧ್ಯತೆ ಹಿನ್ನೆಲೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು.
ವಿಲ್ಸನ್ ಗಾರ್ಡನ್ ನಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರೊಂದಿಗೆ ಕುರ್ಚಿಯಲ್ಲಿ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಈ ಘಟನೆ ಜೈಲು ಶಿಸ್ತಿನ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ನಂತರ ಆತನನ್ನು ಬೆಂಗಳೂರಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಸಿದ್ದಾಪುರ ಮಹೇಶ್ನನ್ನು 2023ರ ಆಗಸ್ಟ್ 4ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವಿರೋಧಿ ಗ್ಯಾಂಗ್ನ ದುಷ್ಕರ್ಮಿಗಳು ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಿದರು. ಇದು ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆಯಾಗಿತ್ತು. ಈ ಪ್ರಖರಣದಲ್ಲಿ ನಾಗ ಪ್ರಮುಖ ಆರೋಪಿಯಾಗಿದ್ದನು.
ಭಯೋತ್ಪಾದಕ ಸಂಘಟನೆಗೆ ಯುವಕರ ನೇಮಕಾತಿ; ಅಪರಾಧಿ ಹಮ್ರಾಜ್ ವರ್ಶಿದ್ ಶೇಖ್ಗೆ 7 ವರ್ಷ ಜೈಲು ಶಿಕ್ಷೆ
ಆರೋಗ್ಯ ಸಮಸ್ಯೆಗಳ ಕಾರಣದಿಂದ ಕಳೆದ ಒಂದು ವಾರದಿಂದ ನಾಗನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ವೈದ್ಯಕೀಯ ತಪಾಸಣೆ ಮತ್ತು ಜಾಮೀನು ಆದೇಶದ ಹಿನ್ನೆಲೆ ಇದೀಗ ಬಿಡುಗಡೆ ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.