ಬಳ್ಳಾರಿ ಫೈರಿಂಗ್ ಕೇಸ್ ಸಿಐಡಿ ತನಿಖೆಗೆ? ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
Ballary Case: ಬಳ್ಳಾರಿಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಕೂಡ ಕೊಡುವುದರ ಬಗ್ಗೆ ಯೋಚನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಕುರಿತು ಸಿಎಂ ಜೊತೆ ಮಾತನಾಡುವುದಾಗಿ ಸಚಿವರು ಹೇಳಿದ್ದಾರೆ.
ಬಳ್ಳಾರಿ ಕೇಸ್ -
ಬೆಂಗಳೂರು: ಬಳ್ಳಾರಿಯಲ್ಲಿ ಗುಂಡೇಟಿಗೆ ಬಲಿಯಾದ (Ballary Case) ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಕೂಡ ಕೊಡುವುದರ ಬಗ್ಗೆ ಯೋಚನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ (Dr . G Parameshwar) ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಚಿವ, ಈ ಪ್ರಕರಣವನ್ನ ಸಿಐಡಿ ತನಿಖೆಗೆ ವಹಿಸುವ ವಿಚಾರದ ಬಗ್ಗೆ ಯೋಚನೆ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಮಾತಾಡ್ತೀನಿ, ಅಗತ್ಯ ಇದ್ರೆ ಸಿಐಡಿ ತನಿಖೆಗೆ ಒಪ್ಪಿಸ್ತೀವಿ ಎಂದು ಹೇಳಿದರು.
ಈಗಾಗಲೇ ತನಿಖೆ ನಡೆಯುತ್ತಿದೆ. ಪೊಲೀಸ್ ಗನ್ ಹಾಗೂ ರಿವಾಲ್ವರ್ನಿಂದ ಫೈರ್ ಆಗಿಲ್ಲ ಇದನ್ನು ADGP ಖಾತ್ರಿ ಪಡಿಸಿದ್ದಾರೆ ಎಂದ ಗೃಹ ಸಚಿವ ಜಿ. ಪರಮೇಶ್ವರ್, ಖಾಸಗಿ ಗನ್ನಿಂದ ಫೈರ್ ಆಗಿರೋದು, ಈ ಕೇಸ್ನ ತನಿಖೆ CID, SIT ಕೊಡೋ ಸಾಧ್ಯತೆ ಇದೆ, ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ ಎಂದು ಅವರು ಹೇಳಿದರು. ತಮ್ಮ ಕುಟುಂಬಕ್ಕೆ ಭದ್ರತೆ ಕೋರಿ ಸಿಎಂ, ಗೃಹ ಸಚಿವರಿಗೆ ಶಾಸಕ ಜನಾರ್ದನರೆಡ್ಡಿ ಪತ್ರ ಬರೆದ ವಿಚಾರ ಸಂಬಂಧವೂ ಪ್ರತಿಕ್ರಿಯಿಸಿದ ಪರಮೆಶ್ವರ್, ಶಾಸಕರ ಲೆಟರ್ ನನಗೆ ಇನ್ನೂ ತಲುಪಿಲ್ಲ. ಪತ್ರ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಸಿಎಂ ಜೊತೆ ಜಮೀರ್ ಮಾತು
ತೋರಣಗಲ್ ನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಶಾಸಕ ಭರತ್ ರೆಡ್ಡಿ ಅವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಮುಖ್ಯಮಂತ್ರಿಯವರು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಡಿಜಿಪಿ ಹಿತೇಂದ್ರ, ಬಳ್ಳಾರಿ ವಲಯದ ಐಜಿ ವರ್ತಿಕಾ ಕಟಿಯಾರ್ ಹಾಗೂ ದಾವಣಗೆರೆ ವಲಯದ ಐಜಿ ರವಿಕಾಂತೇಗೌಡ ಅವರಿಂದಲೂ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಸಿಎಂ ಭೇಟಿಯಾದ ಶಾಸಕ ಭರತ್ ರೆಡ್ಡಿ; ಬಳ್ಳಾರಿ ಗಲಭೆ ಬಗ್ಗೆ ಚರ್ಚೆ
ಮೃತ ರಾಜಶೇಖರ್ ನಿವಾಸಕ್ಕೆ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ, ಸಾಂತ್ವನ ಹೇಳಿದರು. ಜಮೀರ್, ಶಾಸಕ ಭರತ್ ರೆಡ್ಡಿ, ಕಂಪ್ಲಿ ಗಣೇಶ್ ಒಟ್ಟಿಗೆ ಸೇರಿ ವೈಯಕ್ತಿಕವಾಗಿ 25 ಲಕ್ಷ ನಗದು ಪರಿಹಾರ ನೀಡಿದರು. ಅಲ್ಲದೆ, ಸ್ಲಂ ಬೋರ್ಡ್ ಕಡೆಯಿಂದ ಮನೆ ಕಟ್ಟಿಸಿಕೊಡ್ತೇವೆ. ರಾಜಶೇಖರ್ ಅಣ್ಣನಿಗೆ ಕೆಲಸ ಕೊಡಿಸುವುದಾಗಿ ಜಮೀರ್ ಭರವಸೆ ಕೊಟ್ಟಿದ್ದಾರೆ.