Ex MLC Kidnap: ಆನೇಕಲ್ನಲ್ಲಿ ಮಾಜಿ ಎಂಎಲ್ಸಿ ಕಿಡ್ನ್ಯಾಪ್; ಗನ್ ತೋರಿಸಿ 3 ಕೋಟಿಗೆ ಬೇಡಿಕೆ!
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹಿಲಲಿಯಲ್ಲಿರುವ ಗೋಲ್ಡ್ ಕಾಯಿನ್ ಕ್ಲಬ್ನಿಂದ ಮನೆಗೆ, ಕಾರಿನಲ್ಲಿ ಹೊರಟಿದ್ದ ಮಾಜಿ ಎಂಎಲ್ಸಿ ದಯಾನಂದ ರೆಡ್ಡಿ ಅವರನ್ನು ಕಿಡ್ನ್ಯಾಪ್ ಮಾಡಲಾಗಿದೆ. ದುಷ್ಕರ್ಮಿಗಳು ಗನ್ ತೋರಿಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮಾಜಿ ಎಂಎಲ್ಸಿ ದಯಾನಂದ ರೆಡ್ಡಿ. -
ಬೆಂಗಳೂರು: ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ದಯಾನಂದ ರೆಡ್ಡಿ (Dayananda Reddy) ಅವರನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಡರಾತ್ರಿ 12:15ರ ಸುಮಾರಿಗೆ ದಯಾನಂದ ಅವರನ್ನು ಕಿಡ್ನಾಪ್ ಮಾಡಿ 3 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹಿಲಲಿಯಲ್ಲಿರುವ ಗೋಲ್ಡ್ ಕಾಯಿನ್ ಕ್ಲಬ್ನಿಂದ ಮನೆಗೆ, ಕಾರಿನಲ್ಲಿ ಹೊರಟಿದ್ದ ಮಾಜಿ ಎಂಎಲ್ಸಿ ಅವರನ್ನು ಬೈಕ್ನಲ್ಲಿ ಇಬ್ಬರು ಅಡ್ಡಗಟ್ಟಿದ್ದಾರೆ. ಈ ವೇಳೆ, ನಿಮಗೆ ಗಿಫ್ಟ್ ಬಂದಿದೆ ಎಂದು ಕಾಟನ್ ಬಾಕ್ಸ್ ತೋರಿಸಿ ನಿಲ್ಲಿಸಿದ್ದಾರೆ.
ದಯಾನಂದ ಅವರು ಕಾರಿನ ಡೋರ್ ಲಾಕ್ ಓಪನ್ ಮಾಡುತ್ತಿದ್ದಂತೆ ಓರ್ವ ಕಾರಿಗೆ ನುಗ್ಗಿ, ಗನ್ ತೋರಿಸಿ ತಾನು ಹೇಳಿದ ಕಡೆ ಕಾರು ಚಲಾಯಿಸುವಂತೆ ಸೂಚನೆ ನೀಡಿದ್ದಾನೆ. ಅಷ್ಟೊತ್ತಿಗೆ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಹಿಂಬಾಲಿಸಿದ್ದಾರೆ. ಇದಾದ ನಂತರ, ಅತ್ತಿಬೆಲೆಯ ಕೆಎಚ್ಬಿ ಬಡಾವಣೆ ಬಳಿ ಕರೆದೊಯ್ದು ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. “ನಿನ್ನ ಕೊಲ್ಲಲು 10 ಕೋಟಿ ಸುಫಾರಿ ಕೊಟ್ಟಿದ್ದಾರೆ” ಎಂದು ಕುತ್ತಿಗೆಗೆ ಗನ್ ಇಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ವೇಳೆ ದಯಾನಂದ ರೆಡ್ಡಿಯವರು ಆ ಹಣವನ್ನು ನಾನೇ ಕೊಡುತ್ತೇನೆ ಕೊಲ್ಲಬೇಡಿ ಎಂದು ಮನವಿ ಮಾಡಿದ್ದಾರೆ. ಅದರಂತೆ, ಮೊದಲು ಮೂರು ಕೋಟಿ ಡಿಮ್ಯಾಂಡ್ ಮಾಡಿದ ಕಿಡ್ನ್ಯಾಪರ್ಸ್, ಅಂತಿಮವಾಗಿ ಎರಡು ಕೋಟಿಗೆ ಒಪ್ಪಿಕೊಂಡಿದ್ದಾರೆ. ಆದರೆ, ಈಗ ಹಣ ಇಲ್ಲ ಬೆಳಗ್ಗೆ ಬ್ಯಾಂಕ್ ಓಪನ್ ಟೈಮ್ಗೆ ನೀಡುವುದಾಗಿ ಮನವಿ ಮಾಡಿದ್ದಾರೆ.
ಮುಂದುವರಿದು, ಹಣ ಡ್ರಾ ಮಾಡಿದ ಬಳಿಕ ಫೋನ್ ಮಾಡುವಂತೆ ತಿಳಿಸಿ, ಫೋನ್ ನಂಬರ್ ನೀಡಿ ಮುಂಜಾನೆ 4 ಗಂಟೆ ಸುಮಾರಿಗೆ ಬಿಟ್ಟು ಕಳುಹಿಸಿರುವುದಾಗಿ ದೂರು ನೀಡಿದ್ದಾರೆ. ಈ ಸಂಬಂಧ ಮಾಜಿ ಎಂಎಲ್ಸಿ ನೀಡಿದ ದೂರು ಆಧರಿಸಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಅಪಹರಣಕಾರರಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.