ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ಹೋರಾಟ: ಡಿಸಿಎಂ ಡಿ.ಕೆ. ಶಿವಕುಮಾರ್
Congress Protest in Delhi: ದೇಶದ ಚುನಾವಣೆಗಳು ಈಗ ನ್ಯಾಯಸಮ್ಮತವಾಗಿಲ್ಲ. ಮತಕಳ್ಳತನ ಮಾಡಲಾಗುತ್ತಿದೆ. ಹೀಗಾಗಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂಬ ಸಂದೇಶವನ್ನು ಹೋರಾಟದ ಮೂಲಕ ನೀಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿ ಎಐಸಿಸಿ ಕಚೇರಿಯಲ್ಲಿ ಹೈ ಕಮಾಂಡ್ ನಾಯಕರೊಂದಿಕೆ ಡಿ.ಕೆ.ಶಿವಕುಮಾರ್. -
ನವದೆಹಲಿ, ಡಿ.14: “ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿ, ವೋಟ್ ಚೋರಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಾವು ಮತಕಳ್ಳತನ ವಿರುದ್ಧದ ಹೋರಾಟ ಆರಂಭಿಸಿದ್ದೆವು. ಈಗ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂಬ ಸಂದೇಶ ನೀಡಲಾಗುತ್ತಿದೆ. ದೇಶದ ಚುನಾವಣೆಗಳು ಈಗ ನ್ಯಾಯಸಮ್ಮತವಾಗಿಲ್ಲ. ಮತಕಳ್ಳತನ ಮಾಡಲಾಗುತ್ತಿದೆ. ಇದಕ್ಕೆ ಸಾವಿರಾರು ಉದಾಹರಣೆಗಳಿವೆ. ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಇನ್ನು ಹಲವು ಬಾರಿ ಮಾಧ್ಯಮಗೋಷ್ಠಿ ಮೂಲಕ ದಾಖಲೆಗಳನ್ನು ಬಹಿರಂಗಗೊಳಿಸಿದ್ದಾರೆ. ಇಷ್ಟಾದರೂ ಚುನಾವಣಾ ಆಯೋಗದಿಂದ ಸರಿಯಾದ ಉತ್ತರ ಸಿಗುತ್ತಿಲ್ಲ. ಹೀಗಾಗಿ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸಲು ನಾವು ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ರಾಜ್ಯದ ಸುಮಾರು 4 ಸಾವಿರ ಕಾರ್ಯಕರ್ತರು ಭಾಗಿ
“ದೆಹಲಿಯ ಪ್ರತಿಭಟನೆಗೆ ರಾಜ್ಯದಿಂದ ಆಗಮಿಸುವ 1500 ಕಾರ್ಯಕರ್ತರಿಗೆ ನಾವು ವಾಸ್ತವ್ಯದ ವ್ಯವಸ್ಥೆ ಕಲ್ಪಿಸಿದ್ದೇವೆ. ಸುಮಾರು 2 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ನಾಯಕರು ತಮ್ಮ ವ್ಯವಸ್ಥೆ ತಾವೇ ಮಾಡಿಕೊಂಡಿದ್ದಾರೆ. ಕೆಲವರು ವಿಮಾನ, ಮತ್ತೆ ಕೆಲವರು ರೈಲಲ್ಲಿ ಆಗಮಿಸಿದ್ದಾರೆ. ಸುಮಾರು 3500 ರಿಂದ 4000 ಜನ ಪ್ರತಿಭಟನೆಗೆ ಬಂದಿದ್ದಾರೆ. ಮತಕಳ್ಳತನ ವಿರುದ್ಧ ರಾಜ್ಯದಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ 1.42 ಕೋಟಿ ಸಹಿ ಸಂಗ್ರಹ ಮಾಡಲಾಗಿದೆ. ಇಲ್ಲಿ ಸೇರಿರುವ ನಾಯಕರು, ಕಾರ್ಯಕರ್ತರೇ ಈ ಹೋರಾಟದ ಉತ್ಸಾಹಕ್ಕೆ ಸಾಕ್ಷಿ. ಇಲ್ಲಿರುವ ಪ್ರತಿಯೊಬ್ಬರೂ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳಬೇಕು, ಮತದಾನದ ಹಕ್ಕು ಕಾಪಾಡಬೇಕು ಎಂದು ಬಂದಿದ್ದಾರೆ” ಎಂದು ತಿಳಿಸಿದರು.
ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗೆ ಮತಕಳ್ಳತನದ ವಿರುದ್ಧ ಹೋರಾಟ: ಡಿ.ಕೆ. ಶಿವಕುಮಾರ್
“ದೆಹಲಿಗೆ ಬರುವ ವಾಹನಗಳನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆಯಂತೆ. ವಾಹನ ದೆಹಲಿಯೊಳಗೆ ಪ್ರವೇಶ ಮಾಡಲು ಅವಕಾಶ ನೀಡುತ್ತಿಲ್ಲ. ಯಾಕೆ ಈ ರೀತಿ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಯಾಕೆ ಗಾಬರಿಯಾಗುತ್ತಿದೆ ಗೊತ್ತಿಲ್ಲ. ನಮ್ಮ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಕಚೇರಿಗೆ ಬರುವಂತೆ ನಮಗೆ ಆಹ್ವಾನ ನೀಡಿದ್ದಾರೆ. ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಅಲ್ಲಿಂದ ನಾವು ಬಸ್ ಮೂಲಕ ರಾಮಲೀಲಾ ಮೈದಾನಕ್ಕೆ ತೆರಳುತ್ತೇವೆ. ಈ ಪ್ರತಿಭಟನೆಗಾಗಿ ನಾವು ನಮ್ಮ ಕಾರ್ಯಕರ್ತರಿಗೆ ವಿಶೇಷವಾಗಿ ಚಳಿ ವಾತಾವರಣಕ್ಕೆ ಅನುಕೂಲವಾಗುವಂತೆ ಟೀ ಶರ್ಟ್ ಮಾಡಿಸಲಾಗಿದೆ” ಎಂದು ತಿಳಿಸಿದರು.
ಸೋಲು, ಗೆಲುವಿಗೆ ಕಾಂಗ್ರೆಸಿಗರು ಯೋಚಿಸುವುದಿಲ್ಲ:
ಸೋಲಿನ ಹತಾಶೆಯಿಂದ ಕಾಂಗ್ರೆಸ್ ಈ ರೀತಿ ಸಮಾವೇಶ ಮಾಡುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ತಮ್ಮ ಖುಷಿಗೆ ಏನು ಬೇಕಾದರೂ ಮಾತನಾಡುತ್ತಾರೆ. ನಾವು ಕಾಂಗ್ರೆಸಿಗರು ಸೋಲು, ಗೆಲುವಿನ ಬಗ್ಗೆ ಯೋಚನೆ ಮಾಡುವುದಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಹಾಗೂ ಸಂವಿಧಾನ ತಂದು ಕೊಟ್ಟಾಗ ನಮ್ಮ ಹಿರಿಯರು ಸಾಕಷ್ಟು ಪ್ರಾಣತ್ಯಾಗ ಮಾಡಿದ್ದಾರೆ. ಈ ದೇಶದ ಆರ್ಥಿಕ ತಜ್ಞನಿಗೆ ಸೋನಿಯಾ ಗಾಂಧಿ ಅವರು ಅಧಿಕಾರ ತ್ಯಾಗ ಮಾಡಿದರು. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದರು. ಜವಾಹರ್ ಲಾಲ್ ನೆಹರು, ಗಾಂಧೀಜಿ ಸೇರಿದಂತೆ ಅನೇಕ ಮಹನೀಯರು ಜೈಲುವಾಸ ಅನುಭವಿಸಿದರು. ನೂರು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿ ಅವರು ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದರು. ಇಂದು ಪಕ್ಷ ಕಷ್ಟಕಾಲದಲ್ಲಿರುವಾಗ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಅಧ್ಯಕ್ಷರಾಗಿದ್ದಾರೆ” ಎಂದು ತಿಳಿಸಿದರು.