Bengaluru India Nano 2026: ಬೆಂಗಳೂರನ್ನು ಜಾಗತಿಕ 'ಡೀಪ್-ಟೆಕ್' ರಾಜಧಾನಿಯಾಗಿ ಮಾಡುವ ಗುರಿ: ಸಿಎಂ ಡಿ.ಕೆ. ಶಿವಕುಮಾರ್
CM DK Shivakumar: ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ 14ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದ್ದಾರೆ. ಬೆಂಗಳೂರು ಭಾರತವನ್ನು ಜಾಗತಿಕ ಐಟಿ ಭೂಪಟದಲ್ಲಿ ನಿಲ್ಲಿಸಿದೆ. ಈಗ ಭಾರತವನ್ನು ಜಾಗತಿಕ 'ಡೀಪ್-ಟೆಕ್' ಭೂಪಟದಲ್ಲಿ ನಿಲ್ಲಿಸುವ ಸಮಯ ಬಂದಿದೆ. ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ.
-
ಬೆಂಗಳೂರು, ಆ.4: ನ್ಯಾನೋ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ಸೆಮಿಕಂಡಕ್ಟರ್ಗಳು, ಜೈವಿಕ ತಂತ್ರಜ್ಞಾನ ಮತ್ತು ಕ್ವಾಂಟಮ್ ತಂತ್ರಜ್ಞಾನ ಸೇರಿದಂತೆ 'ಡೀಪ್ ಟೆಕ್'ಗಳ ಜಾಗತಿಕ ಕೇಂದ್ರವಾಗಿ ಬೆಂಗಳೂರನ್ನು ರೂಪಿಸುವ ಮೂಲಕ ಕರ್ನಾಟಕವು ಮುಂದಿನ ತಾಂತ್ರಿಕ ಕ್ರಾಂತಿಯ ನೇತೃತ್ವ ವಹಿಸುವಂತೆ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ತಿಳಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿರುವ 14ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ, ಅವರು ಮಾತನಾಡಿದರು.
ಬೆಂಗಳೂರು ಭಾರತವನ್ನು ಜಾಗತಿಕ ಐಟಿ ಭೂಪಟದಲ್ಲಿ ನಿಲ್ಲಿಸಿದೆ. ಈಗ ಭಾರತವನ್ನು ಜಾಗತಿಕ 'ಡೀಪ್-ಟೆಕ್' ಭೂಪಟದಲ್ಲಿ ನಿಲ್ಲಿಸುವ ಸಮಯ ಬಂದಿದೆ. ಸರ್ಕಾರ, ಶೈಕ್ಷಣಿಕ ಕ್ಷೇತ್ರ, ಉದ್ಯಮ ಮತ್ತು ಉದ್ಯಮಿಗಳ ನಡುವಿನ ಸಹಯೋಗದಿಂದ ಮಾತ್ರ ನಾವೀನ್ಯತೆ ಬೆಳೆಯಲು ಸಾಧ್ಯ. ಈ ಪಾಲುದಾರಿಕೆಯೇ ಕರ್ನಾಟಕದ ಬಹುದೊಡ್ಡ ಶಕ್ತಿ. ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರ ದೂರದೃಷ್ಟಿಯು ಸಂಶೋಧಕರ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಹೇಳಿದರು.
ಕರ್ನಾಟಕದಲ್ಲಿರುವ ಪ್ರಮುಖ ಸಂಶೋಧನಾ ಸಂಸ್ಥೆಗಳು, ನವೋದ್ಯಮಗಳು (ಸ್ಟಾರ್ಟ್ಅಪ್ಗಳು), ಬಹುರಾಷ್ಟ್ರೀಯ ಸಂಶೋಧನೆ ಹಾಗೂ ಅಭಿವೃದ್ಧಿ (R&D) ಕೇಂದ್ರಗಳು ಮತ್ತು ವಿಶ್ವವಿದ್ಯಾಲಯಗಳ ಬಲವಾದ ಪರಿಸರ ವ್ಯವಸ್ಥೆಯು (ecosystem) ಡೀಪ್-ಟೆಕ್ ನಾವೀನ್ಯತೆಯಲ್ಲಿ ಜಾಗತಿಕವಾಗಿ ಮುಂಚೂಣಿಗೆ ಬರಲು ರಾಜ್ಯಕ್ಕೆ ಅನನ್ಯ ಅನುಕೂಲವನ್ನು ನೀಡಿದೆ ಎಂದರು.

ನ್ಯಾನೋ ತಂತ್ರಜ್ಞಾನವು ಇನ್ನು ಮುಂದೆ ಕೇವಲ ಸಂಶೋಧನಾ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಆರೋಗ್ಯ ರಕ್ಷಣೆ, ಎಲೆಕ್ಟ್ರಾನಿಕ್ಸ್, ಇಂಧನ, ಕೃಷಿ, ಸಾರಿಗೆ, ಬಾಹ್ಯಾಕಾಶ, ರಕ್ಷಣೆ ಮತ್ತು ಸುಧಾರಿತ ಉತ್ಪಾದನಾ ಕ್ಷೇತ್ರಗಳನ್ನು ಪರಿವರ್ತಿಸುವ ಮೂಲಭೂತ ತಂತ್ರಜ್ಞಾನವಾಗಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ, ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕ್ವಾಂಟಮ್ ತಂತ್ರಜ್ಞಾನ, ಸೆಮಿಕಂಡಕ್ಟರ್ಗಳು ಮತ್ತು ಸುಧಾರಿತ ಸಾಮಗ್ರಿಗಳ (advanced materials) ಸಮ್ಮಿಲನದಿಂದ ಭವಿಷ್ಯವು ರೂಪುಗೊಳ್ಳಲಿದೆ. ಈ ತಾಂತ್ರಿಕ ಕ್ರಾಂತಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿರಲು ಬಯಸುತ್ತದೆ ಎಂದು ಹೇಳಿದರು.
1893ರಲ್ಲಿ ಜಪಾನ್ನಿಂದ ಅಮೆರಿಕಕ್ಕೆ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ ಉದ್ಯಮಿ ಜಮ್ಶೆಟ್ಜಿ ಟಾಟಾ ಮತ್ತು ಸ್ವಾಮಿ ವಿವೇಕಾನಂದರ ನಡುವೆ ನಡೆದ ಐತಿಹಾಸಿಕ ಭೇಟಿಯನ್ನು ಸ್ಮರಿಸಿಕೊಂಡರು. ವೈಜ್ಞಾನಿಕ ಸಂಶೋಧನೆ ಮತ್ತು ರಾಷ್ಟ್ರ ನಿರ್ಮಾಣದ ಕುರಿತು ಅವರಿಬ್ಬರ ನಡುವೆ ನಡೆದ ಚರ್ಚೆಗಳು ಅಂತಿಮವಾಗಿ ಭಾರತೀಯ ವಿಜ್ಞಾನ ಸಂಸ್ಥೆ (IISc) ಸ್ಥಾಪನೆಗೆ ಕಾರಣವಾದವು ಎಂದರು. ಮೈಸೂರು ಸಂಸ್ಥಾನದ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರಿನಲ್ಲಿ ಸುಮಾರು 370 ಎಕರೆ ಜಮೀನನ್ನು ದಾನವಾಗಿ ನೀಡಿ, ಸಂಸ್ಥೆಗೆ ಆರ್ಥಿಕ ಹಾಗೂ ಮೂಲಸೌಕರ್ಯ ನೆರವು ನೀಡಿದ್ದರಿಂದ ಈ ಕನಸು ನನಸಾಯಿತು ಎಂದು ಅವರು ಸ್ಮರಿಸಿದರು.
ವೈಜ್ಞಾನಿಕ ನಾಯಕತ್ವಕ್ಕಾಗಿ ರಾಷ್ಟ್ರಗಳ ನಡುವೆ ಸ್ಪರ್ಧೆ
ಇಂದು ರಾಷ್ಟ್ರಗಳು ಕೇವಲ ಹೂಡಿಕೆಗಳಿಗಾಗಿ ಸ್ಪರ್ಧಿಸುತ್ತಿಲ್ಲ, ಬದಲಿಗೆ ವೈಜ್ಞಾನಿಕ ನಾಯಕತ್ವಕ್ಕಾಗಿ ಸ್ಪರ್ಧಿಸುತ್ತಿವೆ. ಸುಧಾರಿತ ಸಾಮಗ್ರಿಗಳು, ನ್ಯಾನೋ ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ತಂತ್ರಜ್ಞಾನಗಳು ಮತ್ತು AI ಆಧಾರಿತ ಉತ್ಪಾದನೆಯಲ್ಲಿ ಯಾರು ಮುಂಚೂಣಿಯಲ್ಲಿರುತ್ತಾರೋ ಅವರು ಮುಂಬರುವ ದಶಕಗಳ ಜಾಗತಿಕ ಅರ್ಥವ್ಯವಸ್ಥೆಯನ್ನು ರೂಪಿಸಲಿದ್ದಾರೆ. ಆ ನಾಯಕರ ಸಾಲಿನಲ್ಲಿ ಕರ್ನಾಟಕವೂ ಇರಲಿದೆ ಎಂದರು.
ಶೈಕ್ಷಣಿಕ ಕ್ಷೇತ್ರ, ಉದ್ಯಮ ಮತ್ತು ಸ್ಟಾರ್ಟ್ಅಪ್ಗಳ ನಡುವಿನ ಹೆಚ್ಚಿನ ಸಹಯೋಗದ ಮೂಲಕ ವೈಜ್ಞಾನಿಕ ಕಲ್ಪನೆಗಳು ಪ್ರಯೋಗಾಲಯಗಳಿಂದ ಉದ್ಯಮಗಳಿಗೆ ಮತ್ತು ಸಂಶೋಧನಾ ಪ್ರಬಂಧಗಳಿಂದ ವಾಣಿಜ್ಯ ಉತ್ಪನ್ನಗಳಾಗಿ ವೇಗವಾಗಿ ತಲುಪುವ ವಾತಾವರಣವನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ತಿಳಿಸಿದರು.
ನ್ಯಾನೋ ತಂತ್ರಜ್ಞಾನದಿಂದ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿ
ನ್ಯಾನೋ ತಂತ್ರಜ್ಞಾನವು ನಿರ್ದಿಷ್ಟ ಔಷಧ ತಲುಪಿಸುವಿಕೆ (targeted drug delivery) ಮತ್ತು ನಿಖರ ವೈದ್ಯಕೀಯ (precision medicine) ಮೂಲಕ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿ ತರಲಿದೆ. ಸ್ಮಾರ್ಟ್ ರಸಗೊಬ್ಬರಗಳು ಹಾಗೂ ದಕ್ಷ ನೀರು ನಿರ್ವಹಣೆಯೊಂದಿಗೆ ಕೃಷಿಯನ್ನು ಸುಧಾರಿಸಲಿದೆ; ಮತ್ತು ಸ್ವಚ್ಛ ಇಂಧನ, ಬಲವಾದ ಮೂಲಸೌಕರ್ಯ ಹಾಗೂ ಸುಸ್ಥಿರ ಉತ್ಪಾದನೆಯನ್ನು ಸಾಧ್ಯವಾಗಿಸಲಿದೆ. ಜಾಗತಿಕ ಕಂಪನಿಗಳು ಬೆಂಗಳೂರಿನಲ್ಲಿ ಕೇವಲ ದೈನಂದಿನ ಕಾರ್ಯಾಚರಣೆಗಳಿಗೆ ಸೀಮಿತವಾಗದೆ, ಅದಕ್ಕಿಂತ ಮೀರಿದ ಕೆಲಸಗಳನ್ನು ಮಾಡಬೇಕು ಎಂದು ಮನವಿ ಮಾಡಿದರು.
ಯುವ ವಿಜ್ಞಾನಿಗಳು ದೊಡ್ಡ ಕನಸುಗಳನ್ನು ಕಾಣಲು ಮತ್ತು ಸವಾಲಿನ ವೈಜ್ಞಾನಿಕ ಸಮಸ್ಯೆಗಳನ್ನು ಪರಿಹರಿಸಬೇಕು ಕರೆ ನೀಡಿದರು. ಇದಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು. ತಾಂತ್ರಿಕ ಪ್ರಗತಿಯು ಮಾನವ ಕೇಂದ್ರಿತವಾಗಿರಬೇಕು. ಜನರ ಜೀವನಮಟ್ಟವನ್ನು ಸುಧಾರಿಸುವುದು, ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಪರಿಸರವನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿರಬೇಕು ಎಂದು ಅವರು ಪ್ರತಿಪಾದಿಸಿದರು.
ಸಚಿವ ಸಂಪುಟದಲ್ಲಿ ಮಹಿಳೆಯರಿಗೇಕಿಲ್ಲ ಸ್ಥಾನ? ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಸಾಫ್ಟ್ವೇರ್ ನಾವೀನ್ಯತೆ ಮೂಲಕ ಬೆಂಗಳೂರು ಈಗಾಗಲೇ ಭಾರತದ ಸಿಲಿಕಾನ್ ವ್ಯಾಲಿಯಾಗಿ ಗುರುತಿಸಿಕೊಂಡಿದೆ. ಅದರ ಮುಂದಿನ ಅಧ್ಯಾಯವು ನ್ಯಾನೋ ತಂತ್ರಜ್ಞಾನ, ಸೆಮಿಕಂಡಕ್ಟರ್, ಸುಧಾರಿತ ಉತ್ಪಾದನೆ, ಕ್ವಾಂಟಮ್ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಂತಹ ಡೀಪ್ ತಂತ್ರಜ್ಞಾನಗಳ ಮೂಲಕ ಬರೆಯಲ್ಪಡುತ್ತದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.