"ಫ್ಲಿಪ್ಕಾರ್ಟ್ ರೈತರ ಪರವಾಗಿಯೇ ಇದೆ"; 1 ರೂ.ಗೆ ಒಂದು ಲೀಟರ್ ಹಾಲಿನ ಕುರಿತು ಇ ಕಾಮರ್ಸ್ ಸಂಸ್ಥೆ ಹೇಳಿದ್ದೇನು?
ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಲು ಮುಂದಾಗಿರುವ ಫ್ಲಿಪ್ಕಾರ್ಟ್ ಇ ಕಾಮರ್ಸ್ ಸಂಸ್ಥೆಯ ವಿರುದ್ಧ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಹಾಗೂ ಪ್ರಧಾನಿಗೆ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ದೂರು ನೀಡುತ್ತೇನೆಂದು ಹೇಳಿದ ಕುರಿತು ಫ್ಲಿಪ್ಕಾರ್ಟ್ ಪ್ರತಿಕ್ರಿಯೆ ನೀಡಿದೆ
ಸಂಗ್ರಹ ಚಿತ್ರ -
ಬೆಂಗಳೂರು: ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಲು ಮುಂದಾಗಿರುವ ಫ್ಲಿಪ್ಕಾರ್ಟ್ ಇ ಕಾಮರ್ಸ್ ಸಂಸ್ಥೆಯ ವಿರುದ್ಧ (Flipkart 1 rupees) ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಹಾಗೂ ಪ್ರಧಾನಿಗೆ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ದೂರು ನೀಡುತ್ತೇನೆಂದು ಹೇಳಿದ ಕುರಿತು ಫ್ಲಿಪ್ಕಾರ್ಟ್ ಪ್ರತಿಕ್ರಿಯೆ ನೀಡಿದೆ. ಫ್ಲಿಪ್ ಕಾರ್ಟ್ ತನ್ನ ಗ್ರಾಹಕರ ಮೌಲ್ಯ ಹೆಚ್ಚಿಸುವ ದೃಷ್ಟಿಯಿಂದ ನಿಯತಕಾಲಿಕವಾಗಿ ಬ್ಯಾಂಕಿಂಗ್ ಪಾಲುದಾರರ ಸಹಭಾಗಿತ್ವದಲ್ಲಿ ತನ್ನ ಪ್ಲಾಟ್ ಫಾರ್ಮ್ ನಲ್ಲಿ ಸೀಮಿತ ಅವಧಿಯ ಪ್ರಚಾರ ಅಭಿಯಾನಗಳನ್ನು ಕೈಗೊಳ್ಳುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಫ್ಲಿಪ್ ಕಾರ್ಟ್ ನ ಮಾರ್ಕೆಟ್ ಪ್ಲೇಸ್ ನಲ್ಲಿ ಮಾರಾಟಗಾರರು ತಮ್ಮ ವೈಯ್ಯಕ್ತಿಕ ದರಗಳನ್ನು ನಿರ್ಧರಿಸುತ್ತಾರೆ. ಎಲ್ಲಾ ಡೈರಿ ಪಾಲುದಾರರು ಮತ್ತು ಮಾರಾಟಗಾರರು ನಿಗದಿಪಡಿಸಿದ ದರವನ್ನೇ ಅವರು ಪೂರೈಸುವ ಉತ್ಪನ್ನಗಳಿಗೆ ಪಡೆಯುತ್ತಲೇ ಇರುತ್ತಾರೆ ಮತ್ತು ಈ ಪ್ರಚಾರ ಅಭಿಯಾನಗಳಿಂದ ರೈತರಿಂದ ಖರೀದಿಸುವ ದರಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಮಾರುಕಟ್ಟೆ ಪ್ರವೇಶಿಸುವ ಅವಕಾಶವನ್ನು ವಿಸ್ತರಣೆ ಮಾಡಲು ಮತ್ತು ಅವರ ಬೆಳವಣಿಗೆಯನ್ನು ಬೆಂಬಲಿಸಲು ಫ್ಲಿಪ್ ಕಾರ್ಟ್ ದೇಶಾದ್ಯಂತ ರೈತರು, ಸಹಕಾರಿ ಸಂಸ್ಥೆಗಳು ಮತ್ತು ಮಾರಾಟಗಾರರೊಂದಿಗೆ ಕೆಲಸ ಮಾಡಲು ಸದಾ ಬದ್ಧವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಏನಿದು ವಿವಾದ?
"ಹಣ ಮಾಡುವ ಭರದಲ್ಲಿ ಫ್ಲಿಪ್ ಕಾರ್ಟ್ ಎನ್ನುವ ಸಂಸ್ಥೆ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡಲು ಮುಂದಾಗಿದೆ. ರೈತ ಸಮುದಾಯವನ್ನ ಧ್ವಂಸ ಮಾಡುವಂತಹ ಕೃತ್ಯಕ್ಕೆ ಕೈ ಹಾಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಇಡೀ ದೇಶದಾದ್ಯಂತ ದಂಗೆ ಮಾಡಬೇಕಾದ ಪರಿಸ್ಥಿತಿ ಉಂಟಾಗಲಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದ್ದರು. ಅಷ್ಟೇ ಅಲ್ಲದೇ ಇ ಕಾಮರ್ಸ್ ಸಂಸ್ಥೆಯ ವಿರುದ್ಧ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಹಾಗೂ ಪ್ರಧಾನಿಗೆ ದೂರು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದರು.
"ರೈತರಿಗೆ ನಾವು 38, 39, 40 ರೂಪಾಯಿ ಹಣವನ್ನು ಪಾವತಿ ಮಾಡುತ್ತಿದ್ದೇವೆ. ಇವರು ಒಂದು ರೂಪಾಯಿಗೆ ಕೊಡುವುದಕ್ಕೆ ಹೇಗೆ ಸಾಧ್ಯವಾಗುತ್ತದೆ. ಯಾರಿಂದ ಖರೀದಿ ಮಾಡುತ್ತಿದ್ದಾರೆ. ಎಲ್ಲಿಂದ ಹಾಲು ಬರುತ್ತಿದೆ ಎಂದು ತಿಳಿದುಕೊಳ್ಳಬೇಕಿದೆ. ರೈತರು ಯಾರಿಗೆ ಹಾಲು ಮಾರಾಟ ಮಾಡುತ್ತಾರೆ ಎಂಬುದು ತಿಳಿಯುವುದಿಲ್ಲ. ಬಲ್ಕ್ ಮಿಲ್ಕ್ ಉತ್ಪಾದಕರ ಬಳಿ ಸೇರಿದಂತೆ ಎಲ್ಲಿ ಅವರು ಹಾಲು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಯುವುದಿಲ್ಲ. ಅಥವಾ ಹಾಲಿನ ಪೌಡರ್ ಬೆರೆಸುತ್ತಿದ್ದಾರಾ ಎಂದು ತಿಳಿಯಲು ಸ್ಯಾಂಪಲ್ ಅನ್ನ ತರಿಸುತ್ತಿದ್ದೇನೆ. ಅದನ್ನು ಲ್ಯಾಬ್ ನಲ್ಲಿ ಪರಿಶೀಲನೆ ಮಾಡಲು ತಿಳಿಸಿದ್ದೇನೆ. ಸಹಕಾರಿ ಸಂಘಗಳು ಒಮ್ಮೆ ಮುಗ್ಗರಿಸಿದರೆ ಇದರ ನೇರ ಪರಿಣಾಮ ರೈತರ ಮೇಲೆ ಬೀಳುತ್ತದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು.