Bangalore News: ಹಾಸನ ಕುರುಬರ ಸಂಘದ ಮಾಜಿ ಅಧ್ಯಕ್ಷ ಪಟೇಲ್ ಶಿವಪ್ಪರನ್ನು ಹುಡಾ ಅಧ್ಯಕ್ಷ ಹುದ್ದೆಗೆ ನೇಮಿಸಬಾರದು: ಡಾ. ಶ್ರೀನಾಥ್ ಚೌಡಪ್ಪ ಒತ್ತಾಯ
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕುರುಬ ಸಮುದಾಯದ ಪಟೇಲ್ ಶಿವಪ್ಪ ಅವರು ಮುಖ್ಯ ಮಂತ್ರಿಗಳಿಗೆ ಸಮೀಪವಾಗಿದ್ದು, ಜಾತಿ ಪ್ರೇಮ ದಿಂದ ಅವರನ್ನು ರಕ್ಷಿಸಲಾಗುತ್ತಿದೆ. ಜೊತೆಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ನೇಮಿಸುತ್ತಿದ್ದು, ಇದನ್ನು ವಿರೋಧಿಸಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ್ ಅವರಿಗೆ ಪತ್ರ ಬರೆದಿದ್ದೇನೆ.

-

ಬೆಂಗಳೂರು: ಹಾಸನ ಕುರುಬರ ಸಂಘದ ಮಾಜಿ ಅಧ್ಯಕ್ಷ ಪಟೇಲ್ ಶಿವಪ್ಪ ಅವರು ಕನಕ ಭವನ ನಿರ್ಮಾಣದಲ್ಲಿ ಕೋಟ್ಯಂತರ ರೂ ಭ್ರಷ್ಟಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದು, ಇವರನ್ನು ಸರ್ಕಾರ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ [ಹುಡಾ] ಅಧ್ಯಕ್ಷ ಹುದ್ದೆಗೆ ನೇಮಿಸುತ್ತಿರುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅರಕಗೋಡು ತಾಲ್ಲೂಕಿನ ಚಿಕ್ಕರಕಲಗೂಡು ಗ್ರಾಮದ ವೈದ್ಯ ಡಾ. ಶ್ರೀನಾಥ್ ಚೌಡಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕುರುಬ ಸಮುದಾಯದ ಪಟೇಲ್ ಶಿವಪ್ಪ ಅವರು ಮುಖ್ಯಮಂತ್ರಿಗಳಿಗೆ ಸಮೀಪವಾಗಿದ್ದು, ಜಾತಿ ಪ್ರೇಮ ದಿಂದ ಅವರನ್ನು ರಕ್ಷಿಸಲಾಗುತ್ತಿದೆ. ಜೊತೆಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ನೇಮಿಸುತ್ತಿದ್ದು, ಇದನ್ನು ವಿರೋಧಿಸಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ್ ಅವರಿಗೆ ಪತ್ರ ಬರೆದಿದ್ದೇನೆ. ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಹಾಸನ ಜಿಲ್ಲಾಧಿಕಾರಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ಅವರ ಗಮನಕ್ಕೆ ಈ ವಿಷಯ ತಂದಿದ್ದೇನೆ ಎಂದರು.
ಇದನ್ನೂ ಓದಿ: Bangalore News: ಐಬಿಎಸ್ ಬ್ಯುಸಿನೆಸ್ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಹಾಸನದಲ್ಲಿ ಈ ವಿಷಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಪಟೇಲ್ ಶಿವಪ್ಪ ಅವರು ಹಾಸನ ಕುರುಬ ಸಂಘದ ಜಿಲ್ಲಾಧ್ಯಕ್ಷರಾಗಿದ್ದಾಗ ನಡೆಸಿದ ಕನಕ ಭವನ ನಿರ್ಮಾಣದಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ನಡೆಸಿದ್ದು, ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಸಂಘದ ನಿಧಿಯನ್ನು ದುರ್ಬಳಕೆ ಮಾಡಿ ಕೊಂಡಿದ್ದಾರೆ. ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ಕಾರ 4 ಕೋಟಿ ರೂ ಅನುದಾನ ನೀಡಿತ್ತು. ಇದಲ್ಲದೇ ಸಂಘದ ಪ್ರತಿ ಸದಸ್ಯರಿಂದ 500 ರೂ ವಸೂಲಿ ಮಾಡಿ ಹಣ ದುರುಪಯೋಗ ಮಾಡಿ ಕೊಂಡಿದ್ದರು. ಪಟೇಲ್ ಶಿವಪ್ಪ ಏಐಸಿಸಿ ಸಕ್ರಿಯ ಸದಸ್ಯರು ಮತ್ತು ಮುಖ್ಯಮಂತ್ರಿಗಳ ನಿಕಟ ಸಂಬಂಧದ ಲಾಭ ಪಡೆದಿದ್ದಾರೆ. ಹಾಸನದ 4ನೇ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಪೊಲೀಸರು ಬಿ ವರದಿ ಸಲ್ಲಿಸುವ ಮೂಲಕ ಪಟೇಲ್ ಶಿವಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದರು.
ರಾಜ್ಯ ಸರ್ಕಾರದ ಯಾವುದೇ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಸರಿಯಲ್ಲ. ಹುಡಾ ಹಾಸನ ನಗರದ ಮಧ್ಯಮ ವರ್ಗದ ಮತ್ತು ಕೆಳವರ್ಗದ ಕುಟುಂಬಗಳಿಗೆ ವಸತಿ ಅಗತ್ಯವನ್ನು ಸುಗಮಗೊಳಿಸಲು ಹಲವು ಸಾರ್ವಜನಿಕ ಹಿತಾಸಕ್ತಿ ಯೋಜನೆ ಗಳನ್ನು ಜಾರಿಗೊಳಿಸಲಿದ್ದು, ಇಂತಹ ಮಹತ್ವದ ಹುದ್ದೆಗೆ ಕಳಂಕ ರಹಿತ ವ್ಯಕ್ತಿಗಳನ್ನು ನೇಮಿಸ ಬೇಕು. ಪಟೇಲ್ ಶಿವಪ್ಪ ಅವರ ವಿರುದ್ಧದ ಇಲಾಖಾ ವಿಚಾರಣೆ ಮತ್ತು ಸದರಿ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಅವರನ್ನು ಯಾವುದೇ ಪ್ರಾಧಿಕಾರದ ನಾಮನಿರ್ದೇಶಿತ ಅಧ್ಯಕ್ಷರನ್ನಾಗಿ ನೇಮಿಸಬಾರದು. ಹಾಗೊಂದು ವೇಳೆ ನೇಮಕ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಡಾ. ಶ್ರೀನಾಥ್ ಚೌಡಪ್ಪ ಎಚ್ಚರಿಕೆ ನೀಡಿದ್ದಾರೆ.