KPSC Recruitment Scam: ಕೆಪಿಎಸ್ಸಿ: 6 ಫಲಾನುಭವಿಗಳಿಂದ ತಪ್ಪೊಪ್ಪಿಗೆ
ಅಭ್ಯರ್ಥಿಯೊಬ್ಬರು ನೀಡಿದ ಮಾಹಿತಿಯಂತೆ ಒಂದು ಪಶುವೈದ್ಯಾಧಿಕಾರಿ ಹುದ್ದೆಗೆ ಬರೋಬ್ಬರಿ 40 ಲಕ್ಷ ರು.ಗೆ ಡೀಲ್ ಕುದುರಿಸಲಾಗಿತ್ತು. ಬೆಂಗಳೂರಿನ ರಾಜಾಜಿ ನಗರದ ರಹಸ್ಯ ಕಚೇರಿ ಯಲ್ಲಿ ಕೋಟ್ಯಂತರ ರು. ವ್ಯವಹಾರದ ಮಾತುಕತೆ ನಡೆದಿದೆ. ವಾಟ್ಸ್ಆಪ್ ಮೂಲಕವೇ ಸಂವಹನ ನಡೆಸಿ, ಪರೀಕ್ಷೆಗೂ ಮುನ್ನವೇ ಮುಂಗಡವಾಗಿ 20 ಲಕ್ಷ ರು. ಮಧ್ಯವರ್ತಿಗಳಿಗೆ ತಲುಪಿಸಲಾಗಿತ್ತು.
-
ಕರ್ಮಕಾಂಡದ ಬಗೆ ಸಿಐಡಿಗೆ ಸಾಕ್ಷ್ಯ, 40 ಲಕ್ಷ ರು. ಲಂಚ ಕೊಟ್ಟ ಬಗ್ಗೆ ಒಪ್ಪಿಗೆ
ಬೆಂಗಳೂರಿನಲ್ಲಿ ರಹಸ್ಯ ವ್ಯವಹಾರ, ಪರೀಕ್ಷೆಗೆ ಮುನ್ನ 20 ಲಕ್ಷ ರು. ಮುಂಗಡ!
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ಅಕ್ರಮದ ಕುರಿತು ಮಹತ್ವದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ತನಿ ಖೆಯ ವೇಳೆ ಒಟ್ಟು 6 ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿ ಸಿದ್ದು, ಹಣ ಕೊಟ್ಟು ಅಕ್ರಮ ಮಾರ್ಗದಲ್ಲಿ ಪರೀಕ್ಷೆ ಬರೆದಿದ್ದಾಗಿ ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಅಭ್ಯರ್ಥಿಯೊಬ್ಬರು ನೀಡಿದ ಮಾಹಿತಿಯಂತೆ ಒಂದು ಪಶುವೈದ್ಯಾಧಿಕಾರಿ ಹುದ್ದೆಗೆ ಬರೋಬ್ಬರಿ 40 ಲಕ್ಷ ರು.ಗೆ ಡೀಲ್ ಕುದುರಿಸಲಾಗಿತ್ತು. ಬೆಂಗಳೂರಿನ ರಾಜಾಜಿ ನಗರದ ರಹಸ್ಯ ಕಚೇರಿಯಲ್ಲಿ ಕೋಟ್ಯಂತರ ರು. ವ್ಯವಹಾರದ ಮಾತುಕತೆ ನಡೆದಿದೆ. ವಾಟ್ಸ್ಆಪ್ ಮೂಲಕವೇ ಸಂವಹನ ನಡೆಸಿ, ಪರೀಕ್ಷೆಗೂ ಮುನ್ನವೇ ಮುಂಗಡವಾಗಿ 20 ಲಕ್ಷ ರು. ಮಧ್ಯವರ್ತಿಗಳಿಗೆ ತಲುಪಿಸಲಾಗಿತ್ತು.
ವಿಚಾರಣೆ ವೇಳೆ ಅಭ್ಯರ್ಥಿಗಳು ಬಾಯ್ಬಿಟ್ಟ ಹಲವು ಸಂಗತಿಗಳು ಸಿಐಡಿ ತನಿಖಾಧಿಕಾರಿಗಳನ್ನೇ ಬೆಚ್ಚಿ ಬೀಳಿಸಿವೆ. ಪರೀಕ್ಷೆಗೆ ಕೆಲ ದಿನಗಳ ಮುಂಚೆ ಯೇ ಪ್ರಶ್ನೆಪತ್ರಿಕೆ ಅಕ್ರಮವಾಗಿ ಅಭ್ಯರ್ಥಿಗಳ ಕೈಗೆ ತಲುಪಿತ್ತು. ಪರೀಕ್ಷಾ ದಿನದಂದು ಅಭ್ಯರ್ಥಿಗಳು ತಮಗೆ ಹಂಚಿಕೆಯಾಗಿದ್ದ ಸಾಮಾನ್ಯ ಪರೀಕ್ಷಾ ಕೇಂದ್ರಗಳಿಗೆ ಹೋಗಿರಲಿಲ್ಲ. ಬದಲಾಗಿ ಬೆಂಗಳೂರಿನ ರೆಸಾರ್ಟ್ಗಳು, ತುಮಕೂರಿನ ದೇವರಾ ಯನದುರ್ಗ ಹಾಗೂ ಆಂಧ್ರಪ್ರದೇಶದ ರೆಸಾರ್ಟ್ಗಳಲ್ಲಿ ಕುಳಿತು ಪರೀಕ್ಷೆ ಬರೆಯಲಾಗಿತ್ತು.
ಇದನ್ನೂ ಓದಿ: KPSC Recruitment Scam: ಕೆಪಿಎಸ್ಸಿ ನೇಮಕಾತಿ ಅಕ್ರಮ; ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅರೆಸ್ಟ್
ಬಸವರಾಜ್ ಕನ್ನಾಳೆ ಸೂತ್ರಧಾರ: ಕೆಪಿಎಸ್ಸಿ ಅಕ್ರಮ ಜಾಲದ ಹಿಂದೆ ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿದಂತೆ ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳು ಹಾಗೂ ಆಡಳಿತ ವ್ಯವಸ್ಥೆಯ ಅಧಿಕಾರಿ ಗಳು ಭಾಗಿಯಾಗಿರುವ ಬಗ್ಗೆ ಅಭ್ಯರ್ಥಿಗಳು ಸಿಐಡಿಗೆ ವಿವರವಾದ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾರಿಗೆ ಎಷ್ಟು ಕೋಟಿ ರು. ಲಂಚ ನೀಡಲಾಗಿದೆ, ಡೀಲ್ ಎಲ್ಲಿ ಮತ್ತು ಯಾರ ಸಮ್ಮುಖದಲ್ಲಿ ನಡೆದಿದೆ ಎನ್ನುವ ದಾಖಲೆ ಸಹಿತ ವಿವರಗಳನ್ನು ಸಿಐಡಿ ಅಧಿಕಾರಿಗಳು ಕಲೆ ಹಾಕಿದ್ದಾರೆ.
ಇತ್ತೀಚೆಗಷ್ಟೇ ಸಿಐಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದೆ. ಈಗ ಅಭ್ಯರ್ಥಿಗಳ ತಪ್ಪೊಪ್ಪಿಗೆಯಿಂದ ತನಿಖೆಯ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿದೆ. ಶೀಘ್ರದ ಇನ್ನಷ್ಟು ಪ್ರಭಾವಿಗಳ ಬಂಧನವಾಗುವ ಸಾಧ್ಯತೆಯಿದೆ. ಹಗರಣದಲ್ಲಿ ಭಾಗಿಯಾಗಿದ್ದ 10 ಅಭ್ಯರ್ಥಿಗಳು ಅಪ್ರೂವರ್ ಆಗಲು ಸಿದ್ಧವಿದ್ದು, ಸಿಐಡಿ ಮುಂದೆ ತಮ್ಮ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲು ಸಿದ್ಧರಾಗಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಭ್ಯರ್ಥಿಗಳ ಅಪ್ರೂವರ್ ಹೇಳಿಕೆಯನ್ನ ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಡಿವೈಎಸ್ಪಿ ನೇಮಕದಲ್ಲೂ ಅಕ್ರಮ?
ಐಎಎಸ್ ಅಧಿಕಾರಿ ಜ್ಞಾನೇಂದ್ರ ಹಾಗೂ ಬಸವರಾಜ ಕನ್ನಾಳೆ ಅವರ ವಿಚಾರಣೆಯಲ್ಲಿ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಇಬ್ಬರ ನಡುವೆ ಸಂಪರ್ಕ ಇರುವುದು ದೃಢವಾಗಿದೆ. ಇನ್ನು ಪಶು ವೈದ್ಯರ ನೇಮಕಾತಿ ತನಿಖೆ ವೇಳೆ ಬೇರೆ ಅಕ್ರಮಗಳ ಬಗ್ಗೆಯೂ ಶಂಕೆ ವ್ಯಕ್ತವಾಗಿವೆ. ಡಿವೈಎಸ್ಪಿ ನೇಮಕಾತಿಯಲ್ಲೂ ನಡೆದಿದೆಯಾ ಅಕ್ರಮ ನಡೆದಿರುವ ಅನುಮಾನಗಳ ವ್ಯಕ್ತವಾಗಿವೆ. 2023-24ರಲ್ಲಿ ನಡೆದಿದ್ದ ಗೆಜೆಟೆಡ್ ಪ್ರೊಬೇಶನರಿ ಪರೀಕ್ಷಾ ಅಭ್ಯರ್ಥಿಗಳ ಜತೆ ಕನ್ನಾಳೆ ಫೋಟೋ ತೆಗೆಸಿಕೊಂಡಿದ್ದಾನೆ. ಅಭ್ಯರ್ಥಿಗಳ ಜತೆ ಕನ್ನಾಳೆ ಸತತ ಸಂಪರ್ಕದಲ್ಲಿ ಇರುವ ಮಾಹಿತಿ ಸಹ ಲಭ್ಯವಾಗಿದೆ. ಇದರಿಂದ ಸಿಐಡಿ ಅಧಿಕಾರಿಗಳು ಎಲ್ಲಾ ಬೇರೆ ಬೇರೆ ಆಯಾಮಾಗಳಲ್ಲೂ ತೀವ್ರ ವಿಚಾರಣೆ ನಡೆಸಿದ್ದಾರೆ
ಸಿಐಡಿ ತನಿಖೆಯಲ್ಲಿ
1. ಶಿವಶಂಕರಪ್ಪ (ಎ1), ಕೆಪಿಎಸ್ಸಿ ಸದಸ್ಯರು (ಎ2), ಅಧಿಕಾರಿಗಳು(ಎ2), 29 ಅಭ್ಯರ್ಥಿಗಳು (ಎ4), ಜ್ಞಾನೇಂದ್ರ ಕುಮಾರ್ (ಎ5) ಆರೋಪಿಗಳು
2. ಬಂಧಿತ ಅಧಿಕಾರಿ ಜ್ಞಾನೇಂದ್ರ ಹಾಗೂ ಬಸವರಾಜ್ ಕನ್ನಾಳೆ ನಡುವಿನ ಅಕ್ರಮ ಸಂಪರ್ಕದ ಕುರಿತು ತೀವ್ರ ವಿಚಾರಣೆ.
3. ಬಂಧಿತರ ಹಾಗೂ ಅಭ್ಯರ್ಥಿಗಳ ಬ್ಯಾಂಕ್ ಖಾತೆಗಳ ಪರಿಶೀಲನೆ, ಕೃತ್ಯಕ್ಕೆ ಬಳಸಿದ ಎಲೆಕ್ಟ್ರಾನಿಕ್ ಡಿವೈಸ್ಗಳು ವಶ. ಕನ್ನಾಳೆ ಮೊಬೈಲ್ನಲ್ಲಿ ದೊರಕಿದ ಡೇಟಾದ ಮೇಲೆ ತನಿಖೆ ಚುರುಕು