Dharmasthala Chalo: ಧರ್ಮಸ್ಥಳ ವಿರುದ್ಧ ಪಿತೂರಿ ಕುರಿತು ಎನ್ಐಎ ತನಿಖೆಯಾಗಲಿ: ಬಿ.ವೈ. ವಿಜಯೇಂದ್ರ ಒತ್ತಾಯ
Dharmasthala Chalo: ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ಅವಮಾನ ಮಾಡುವ ಸರ್ಕಾರವಿದೆ. ಹಿಂದೂಗಳ ಪವಿತ್ರ ಕ್ಷೇತ್ರಕ್ಕೆ ಅಪಚಾರ ಎಸಗುತ್ತಿರುವವರಿಗೆ ಪಾಠ ಕಲಿಸಬೇಕು. ಕ್ಷೇತ್ರದ ಬಗ್ಗೆ ದಿನನಿತ್ಯ ಅಪಪ್ರಚಾರ ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

-

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ನಿಮ್ಮ ಎಸ್ಐಟಿ ತನಿಖೆ ನಡೆಯಲಿ. ಆದರೆ, ದೇಶ ದ್ರೋಹಿಗಳು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹೊರ ದೇಶಗಳಿಂದಲೂ ಕೋಟಿ ಕೋಟಿ ಪಡೆದು ಶ್ರೀ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಹಿಂದಿರುವ ಕೈಗಳನ್ನು ಹತ್ತಿಕ್ಕುವ ಕೆಲಸವಾಗಬೇಕೆಂದರೆ ಕಾಂಗ್ರೆಸ್ ಸರ್ಕಾರದಿಂದ ಆಗಲ್ಲ, ಈ ಪ್ರಕರಣವನ್ನು ಸಿಬಿಐ ಅಥವಾ ಎನ್ಐಎ ತನಿಖೆಗೆ ವಹಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (B.Y. Vijayendra) ಆಗ್ರಹಿಸಿದರು.
ಧರ್ಮಸ್ಥಳದಲ್ಲಿ ಬಿಜೆಪಿ ವತಿಯಿಂದ ಸೋಮವಾರ ಆಯೋಜಿಸಿದ್ದ ಧರ್ಮಸ್ಥಳ ಚಲೋ ಬೃಹತ್ ಸಮಾವೇಶದಲ್ಲಿ (Dharmasthala Chalo) ಅವರು ಮಾತನಾಡಿದ್ದಾರೆ. ಬಿಜೆಪಿ ರಾಜಕೀಯ ಕಾರಣಕ್ಕೆ ಧರ್ಮಸ್ಥಳ ಚಲೋ ನಡೆಸುತ್ತಿದ್ದಾರೆ ಎಂದು ಕೆಲವರು ಟೀಕೆ ಮಾಡಿದರು. ಆದರೆ, ನಾನು ಸ್ಪಷ್ಟಪಡಿಸುವುದು ಏನೆಂದರೆ ಸಮಾವೇಶಕ್ಕೆ ಬಂದವರು, ಸ್ವಾಭಿಮಾನಿ ಹಿಂದೂ ಕಾರ್ಯಕರ್ತರು ಬಂದಿದ್ದಾರೆ ವಿನಾ, ಯಾರಿಗೂ ದುಡ್ಡು ಕೊಟ್ಟು ಕರೆಸುವ ಕೆಲಸ ಮಾಡಿಲ್ಲ.
ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ಅವಮಾನ ಮಾಡುವ ಸರ್ಕಾರವಿದೆ. ಹಿಂದೂಗಳ ಪವಿತ್ರ ಕ್ಷೇತ್ರಕ್ಕೆ ಅಪಚಾರ ಎಸಗುತ್ತಿರುವವರಿಗೆ ಪಾಠ ಕಲಿಸಬೇಕು. ಕ್ಷೇತ್ರದ ಬಗ್ಗೆ ದಿನನಿತ್ಯ ಅಪಪ್ರಚಾರ ನಡೆಯುತ್ತಿದೆ ಎಂದು ಕಿಡಿಕಾರಿದರು.
ಎಸ್ಐಟಿ ರಚನೆ ಮಾಡಿದಾಗ ನಾವು ಸ್ವಾಗತಿಸಿದೆವು. ರಾಜ್ಯ ಸರ್ಕಾರ ಪ್ರಮಾಣಿಕವಾಗಿ ನಡೆದುಕೊಳ್ಳುತ್ತಿದೆ ಎಂದು ನಾವು ತಿಳಿದಿದ್ದೆವು. ಆದರೆ, ಹಿಂದೂ ಕಾರ್ಯಕರ್ತರು ಏನಾದರೂ ಪೋಸ್ಟ್ ಮಾಡಿದರೆ ಬಂಧಿಸುವ ಕೆಲಸವಾಗುತ್ತಿದೆ. ಪವಿತ್ರ ಕ್ಷೇತ್ರದ ಬಗ್ಗೆ ಯಾರೋ ದೂರು ನೀಡಿದ್ದಕ್ಕೆ ಪ್ರಾಥಮಿಕ ವಿಚಾರಣೆಯೂ ಮಾಡದೆ ಎಸ್ಐಟಿ ಘೋಷಣೆ ಮಾಡಿದ್ದಾರೆ. ಒಂದು ಕಡೆ ಎಸ್ಐಟಿ ತನಿಖೆ ನಡೆಯುತ್ತಿದ್ದರೂ ನಿತ್ಯ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಸೌಜನ್ಯಾ ಹತ್ಯೆ ಪ್ರಕರಣದ ಮರು ತನಿಖೆಯಾಗಲಿ
ಸೌಜನ್ಯಾ ಪ್ರಕರಣದಲ್ಲಿ ಬಿಜೆಪಿ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿ, ಸೌಜನ್ಯಾ ಹತ್ಯೆ ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ಘೋಷಣೆ ಮಾಡಲಿ. ಈ ವಿಚಾರದಲ್ಲಿ ನಾವು ಸಂಪೂರ್ಣವಾಗಿ ಬೆಂಬಲ ಕೊಡುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯನವರೇ ನಿಮ್ಮ ಆಡಳಿತ ವೈಖರಿ ನೋಡುತ್ತಿದ್ದೇವೆ. ಧರ್ಮಸ್ಥಳದ ನಂತರ ಈಗ ಚಾಮುಂಡಿ ಬೆಟ್ಟಕ್ಕೆ ಕೈ ಹಾಕಲು ಹೋಗಿದ್ದೀರಿ. ಈ ಹಿಂದೂ ವಿರೋಧಿ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಬೇಕು. ಅಣ್ಣಪ್ಪ ಸ್ವಾಮಿ, ಮಂಜುನಾಥಸ್ವಾಮಿ ವಿಚಾರದಲ್ಲಿ ಭಕ್ತರು ಸಮಾಧಾನವಾಗಿ ಕುಳಿತಿದ್ದರು. ಈಗ ಭಕ್ತರ ಸಹನೆಯ ಕಟ್ಟೆ ಒಡೆಯುವ ಸ್ಥಿತಿ ಬಂದಿದೆ.
ನಿಮ್ಮ ಎಸ್ಐಟಿ ತನಿಖೆ ನಡೆಯಲಿ. ಆದರೆ, ದೇಶ ದ್ರೋಹಿಗಳು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹೊರ ದೇಶಗಳಿಂದಲೂ ಕೋಟಿ ಕೋಟಿ ಪಡೆದು ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಹಿಂದೆ ಯಾವುದೇ ಶಕ್ಷಿ ಇದ್ದರೂ ಅವರನ್ನು ಹತ್ತಿಕ್ಕುವ ಕೆಲಸವಾಗಬೇಕು ಎಂದರೆ, ಕಾಂಗ್ರೆಸ್ ಸರ್ಕಾರದಿಂದ ಆಗಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ಅಥವಾ ಎನ್ಐಎ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | Dharmasthala Chalo: ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಸಮಾಜ ತಿರಸ್ಕರಿಸಬೇಕು: ಜೋಶಿ
ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ಮಾಡಬಾರದು. ಇದರ ಹಿಂದೆ ಷಡ್ಯಂತ್ರ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ, ಸದನದಲ್ಲಿ ನಮಸ್ತೇ ಸದಾ ವತ್ಸಲೆ ಎಂದು ಗೀತೆ ಹೇಳಿದ್ದಕ್ಕೆ ಡಿಕೆಶಿಯಿಂದ ಕ್ಷಮೆ ಕೇಳಿಸಿದ್ದಾರೆ. ಭಾರತ ಮಾತೆಯನ್ನು ಗೌರವಿಸುವುದು ಕೂಡ ಅಕ್ಷಮ್ಯ ಅಪರಾಧವೆಂದು ಭಾವಿಸುವ ಕಾಂಗ್ರೆಸ್ನಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ನಮ್ಮ ಧರ್ಮಸ್ಥಳ ಚಲೋವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಕ್ಷೇತ್ರದ ವಿರುದ್ಧ ಪಿತೂರಿ ಬಗ್ಗೆ ಎನ್ಐಎ, ಸಿಬಿಐ ಮೂಲಕ ತನಿಖೆಯಾಗಲಿ ಎಂದು ಆಗ್ರಹಿಸಿದರು.