Chikkaballapur News: ಅರಿತ್ಮೆಟಿಕ್ ಜೀನಿಯಸ್ ಸ್ಪರ್ಧೆಯಲ್ಲಿ 1800 ವಿದ್ಯಾರ್ಥಿಗಳ ಭಾಗಿ
ಮೆದುಳಿನ ಚುರುಕುತನ ಹೆಚ್ಚಿಸಿಕೊಳ್ಳಲು ಅನುಸರಿಸಬಹುದಾದ ಹಲವು ಸರಳ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು, ಗಣಿತದ ಲೆಕ್ಕಾಚಾರಗಳನ್ನು ಸುಲಭವಾಗಿ ಮಾಡುವ ವಿವಿಧ ಸೂತ್ರಗಳು ಮತ್ತು ತಂತ್ರಗಳನ್ನು ಪರಿಚಯಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ವಿದ್ಯಾರ್ಥಿ ಗಳು ವೇಗ ಮತ್ತು ನಿಖರತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು
-
ಚಿಕ್ಕಬಳ್ಳಾಪುರ: ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಗಣಿತ ವಿಷಯದ ಬಗ್ಗೆ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಎಸ್ಐಪಿ ಅಬಾಕಸ್ ಅಕಾಡೆಮಿ ವತಿಯಿಂದ ಜಿಲ್ಲಾ ಮಟ್ಟದ ಅರಿತ್ಮೆಟಿಕ್ ಜೀನಿಯಸ್ ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸಲಾಗಿತ್ತು.
ನಗರದ ಶೆಟ್ಟಿಹಳ್ಳಿ ಬಡಾವಣೆಯಲ್ಲಿರುವ ಎಸ್ಐಪಿ ಅಬಾಕಸ್ ಕೇಂದ್ರದ ವತಿಯಿಂದ ನಗರದ ಎಸ್ಜೆಸಿಐಟಿ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 1800 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಎಸ್ಐಪಿ ಅಬಾಕಸ್ ಕರ್ನಾಟಕ-ಗೋವಾ ರಾಜ್ಯ ಮುಖ್ಯಸ್ಥ ಹೆಚ್.ಎನ್. ನರೇಂದ್ರ, ಮಕ್ಕಳ ಬೌದ್ಧಿಕ ಮಟ್ಟ ವೃದ್ಧಿ ಹಾಗೂ ಮಾನಸಿಕ ವ್ಯಕ್ತಿತ್ವದ ಬೆಳವಣಿಗೆಗೆ ಪ್ರಾಯೋಗಿಕ ತರಬೇತಿ ವಿಧಾನಗಳು ಸಹಕಾರಿಯಾಗುತ್ತವೆ. ಅಬಾಕಸ್ ತರಬೇತಿಯ ಮೂಲಕ ಮಕ್ಕಳಲ್ಲಿ ಗಣಿತದ ಮೇಲಿನ ಆಸಕ್ತಿ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: Chikkanayakanahalli News: ಅಬಕಾರಿ ಇಲಾಖೆ ಕಾರ್ಯಾಚರಣೆಯ ಮಾಹಿತಿ ಚಾಲಕನಿಂದಲೇ ಸೋರಿಕೆ; ಅಧಿಕಾರಿ ಅಸಹಾಯಕತೆ
ಮೆದುಳಿನ ಚುರುಕುತನ ಹೆಚ್ಚಿಸಿಕೊಳ್ಳಲು ಅನುಸರಿಸಬಹುದಾದ ಹಲವು ಸರಳ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು, ಗಣಿತದ ಲೆಕ್ಕಾಚಾರಗಳನ್ನು ಸುಲಭವಾಗಿ ಮಾಡುವ ವಿವಿಧ ಸೂತ್ರಗಳು ಮತ್ತು ತಂತ್ರಗಳನ್ನು ಪರಿಚಯಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ವಿದ್ಯಾರ್ಥಿಗಳು ವೇಗ ಮತ್ತು ನಿಖರತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪೋಷಕರು ಮಕ್ಕಳಿಗೆ ತಮ್ಮ ಸಮಯವನ್ನು ಮೀಸಲಿಟ್ಟು ಅವರ ವಿದ್ಯಾಭ್ಯಾಸದ ಜೊತೆಗೆ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಸ್ಪರ್ಧೆಯಲ್ಲಿ ನಗರದ ಕೆ.ವಿ. ಇಂಗ್ಲೀಷ್ ಸ್ಕೂಲ್, ಬಿಜಿಎಸ್ ಇಂಗ್ಲೀಷ್ ಸ್ಕೂಲ್, ಗುರುಕುಲ ಇಂಟರ್ ನ್ಯಾಷನಲ್ ಸ್ಕೂಲ್, ಆಕಾಶ್ ಗ್ಲೋಬಲ್ ಸ್ಕೂಲ್ ಹಾಗೂ ಪ್ರಕೃತಿ ವಿದ್ಯಾನಿಕೇತನ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಎಸ್ಐಪಿ ಅಬಾಕಸ್ ಅಕಾಡೆಮಿಯ ಕರ್ನಾಟಕ ರಾಜ್ಯ ಮುಖ್ಯಸ್ಥೆ ಶಿಲ್ಪಾ, ಚಿಕ್ಕಬಳ್ಳಾಪುರ ಕೇಂದ್ರದ ಮುಖ್ಯಸ್ಥೆ ದಾಕ್ಷಾಯಿಣಿ ಮುನಿಕೃಷ್ಣ, ಬೆಂಗಳೂರು ಗಿರಿನಗರ ಕೇಂದ್ರದ ಮುಖ್ಯಸ್ಥೆ ಉಮಾ ನರೇಂದ್ರ, ಎಚ್ಎಸ್ಆರ್ ಲೇಔಟ್ ಕೇಂದ್ರದ ಶಿಕ್ಷಕಿಯರಾದ ಅಕ್ಕಮಹಾದೇವಿ, ಸುಮಿತ್ರಾ, ವರಲಕ್ಷ್ಮಿ, ಗೀತಾ, ರಜನಿ, ಮೇಘನಾ, ಅರ್ಪಿತಾ, ಸಹಿಸ್ತಾ, ನಾಗೇಂದ್ರ ಹಾಗೂ ಪತ್ರಕರ್ತ ಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.