ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chimul Election: ಚಿಮುಲ್ ಚುನಾವಣೆ: ಗುಡಿಬಂಡೆ ಕ್ಷೇತ್ರದಲ್ಲಿ ಹಣಾಹಣಿ, ಮತದಾರರಿಗೆ ಆಮಿಷದ ಸುರಿಮಳೆ

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆದಿನಾರಾಯಣರೆಡ್ಡಿ ಹಾಗೂ ಎನ್.ಡಿ.ಎ (ಬಿಜೆಪಿ-ಜೆಡಿಎಸ್) ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಯಾಗಿ ಬೈರಾರೆಡ್ಡಿ ಕಣದಲ್ಲಿದ್ದಾರೆ. ವಿಶೇಷವೆಂದರೆ, ಕಳೆದ ಐದು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲೂ ಇವರಿಬ್ಬರೇ ಪರಸ್ಪರ ಎದುರಾಳಿಗಳಾಗಿದ್ದರು. ಅಂದು ಆದಿನಾರಾಯಣರೆಡ್ಡಿ ಸಿಪಿಎಂನಿಂದ ಸ್ಪರ್ಧಿಸಿದ್ದರೆ, ಬೈರಾರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

ಚಿಮುಲ್ ಚುನಾವಣೆ: ಗುಡಿಬಂಡೆ ಕ್ಷೇತ್ರದಲ್ಲಿ ಹಣಾಹಣಿ

-

Ashok Nayak
Ashok Nayak Jan 30, 2026 11:35 PM

ಚಿಕ್ಕಬಳ್ಳಾಪುರ: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಚಿಮುಲ್) ನಿರ್ದೇಶಕ ಸ್ಥಾನಗಳಿಗೆ ಫೆಬ್ರವರಿ ೧ ರಂದು ಚುನಾವಣೆ ನಿಗದಿಯಾಗಿದ್ದು, ಗುಡಿಬಂಡೆ ತಾಲೂಕಿನ ಒಂದು ಸ್ಥಾನಕ್ಕಾಗಿ ರಾಜಕೀಯ ಜಿದ್ದಾಜಿದ್ದಿ ಶುರುವಾಗಿದೆ. ಕೇವಲ 66 ಡೆಲಿಗೇಟ್ ಮತದಾರರಿರುವ ಈ ಕ್ಷೇತ್ರದಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳು ಜಿದ್ದಿಗೆ ಬಿದ್ದಿದ್ದು, ಮತದಾರರನ್ನು ಸೆಳೆಯಲು ಪ್ರವಾಸ ಭಾಗ್ಯ, ಚಿನ್ನದ ಆಭರಣ ಹಾಗೂ ನಗದಿನಂತಹ ಉಡುಗೊರೆಗಳ ಆಮಿಷ ಒಡ್ಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಳೇ ಎದುರಾಳಿಗಳ ನಡುವೆ ಮತ್ತೆ ಅಗ್ನಿ ಪರೀಕ್ಷೆ

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆದಿನಾರಾಯಣರೆಡ್ಡಿ ಹಾಗೂ ಎನ್.ಡಿ.ಎ (ಬಿಜೆಪಿ-ಜೆಡಿಎಸ್) ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಯಾಗಿ ಬೈರಾರೆಡ್ಡಿ ಕಣದಲ್ಲಿದ್ದಾರೆ. ವಿಶೇಷವೆಂದರೆ, ಕಳೆದ ಐದು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲೂ ಇವರಿಬ್ಬರೇ ಪರಸ್ಪರ ಎದುರಾಳಿಗಳಾಗಿದ್ದರು. ಅಂದು ಆದಿನಾರಾಯಣರೆಡ್ಡಿ ಸಿಪಿಎಂನಿಂದ ಸ್ಪರ್ಧಿಸಿದ್ದರೆ, ಬೈರಾರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಬ್ಬರೂ ತಮ್ಮ ಪಕ್ಷಗಳನ್ನು ಬದಲಾಯಿಸಿಕೊಂಡು ಮತ್ತೆ ಮುಖಾಮುಖಿಯಾಗುತ್ತಿದ್ದಾರೆ.

ಇದನ್ನೂ ಓದಿ: Chimul Election: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನೂತನ ಆಡಳಿತ ಮಂಡಳಿಯ ಚುನಾವಣೆಗೆ ಅಖಾಡ ಸಜ್ಜು

ಮತದಾರರ ಒಲವಿಗಾಗಿ ಅಭ್ಯರ್ಥಿಗಳ ಕಸರತ್ತು
ಗುಡಿಬಂಡೆ ತಾಲೂಕಿನ 46 ಹಾಗೂ ಶಿಡ್ಲಘಟ್ಟ ತಾಲೂಕಿನ ೨೦ ಡೆಲಿಗೇಟ್ ಮತದಾರರು ಸೇರಿ ಒಟ್ಟು 66 ಮತದಾರರು ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಸಹಕಾರ ಸಂಘಗಳ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ನೇರ ಹಸ್ತಕ್ಷೇಪ ಇಲ್ಲದಿದ್ದರೂ, ಪ್ರಮುಖ ಪಕ್ಷಗಳ ಮುಖಂಡರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಪ್ರವಾಸದ ಹೆಸರಿನಲ್ಲಿ ಮತದಾರ ರನ್ನು ಗುಪ್ತ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದ್ದು, ತಟಸ್ಥವಾಗಿರುವ ಡೆಲಿಗೇಟ್ ಮನವೊಲಿಸಲು ಸ್ಥಳೀಯ ಮುಖಂಡರು ಹರಸಾಹಸ ಪಡುತ್ತಿದ್ದಾರೆ.

ಗೆಲುವಿನ ವಿಶ್ವಾಸದಲ್ಲಿ ಅಭ್ಯರ್ಥಿಗಳು

ತಮ್ಮ ಆಡಳಿತ ಅವಧಿಯಲ್ಲಿ ಶಿಬಿರ ಕಚೇರಿ ಕಟ್ಟಡ ನಿರ್ಮಾಣ, ಹಸುಗಳ ವಿಮೆ, ವಿದ್ಯಾರ್ಥಿವೇತನ ಹಾಗೂ ರೈತರಿಗೆ ನೀಡಿದ ಸೌಲಭ್ಯಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಆದಿ ನಾರಾಯಣರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಲಿನ ದರವನ್ನು ಲೀಟರ್‌ಗೆ ೨ ರೂಪಾಯಿಗೆ ಹೆಚ್ಚಿಸುವ ಭರವಸೆಯನ್ನೂ ಅವರು ನೀಡಿದ್ದು, ತಾವು ಮಾಡಿದ ಅಭಿವೃದ್ಧಿ ಕೆಲಸಗಳು ಈ ಬಾರಿಯೂ ಕೈಹಿಡಿಯಲಿವೆ ಎಂದು ನಂಬಿದ್ದಾರೆ.

ಇತ್ತ ಎನ್.ಡಿ.ಎ ಅಭ್ಯರ್ಥಿ ಬೈರಾರೆಡ್ಡಿ ಅವರು ಸಂಸದ ಡಾ. ಕೆ. ಸುಧಾಕರ್ ಹಾಗೂ ಶಾಸಕ ರವಿಕುಮಾರ್ ಅವರ ಬೆಂಬಲದೊಂದಿಗೆ ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ವಿಶೇಷವಾಗಿ ಶಿಡ್ಲಘಟ್ಟ ವ್ಯಾಪ್ತಿಯ ೨೦ ಮತಗಳು ಯಾರ ಕಡೆಗೆ ವಾಲಲಿವೆ ಎಂಬುದು ಈ ಚುನಾವಣೆಯ ಫಲಿತಾಂಶದ ಮೇಲೆ ನಿರ್ಣಾಯಕ ಪ್ರಭಾವ ಬೀರಲಿದ್ದು, ಇಬ್ಬರೂ ಅಭ್ಯರ್ಥಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.