Chinthamani News: ಜೂ.5 ರಂದು ರೈತ ಸಂಘದಿಂದ ವಿಧಾನ ಸೌಧ ಮುತ್ತಿಗೆ
ರೈತರಿಗೆ ಮಾರಕ ವಾದ ಭೂಸ್ವಾಧೀನ ಕಾಯ್ದೆಯನ್ನು ಕೇಂದ್ರ ಸರ್ಕಾರವು ವಾಪಸ್ ಪಡೆಯಿತು. ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೆ ತಂದಿದ್ದು ವಾಪಸ್ ಪಡೆಯಲಿಲ್ಲ.ಅಂದಿನ ವಿರೋಧಪಕ್ಷದಲ್ಲಿದ್ದ ಇಂದಿನ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಭರವಸೆ ನೀಡಿದ್ದರು
-
ಚಿಂತಾಮಣಿ: ರಾಜ್ಯ ಸರ್ಕಾರ ಚುನಾವಣಾ ಸಮಯದಲ್ಲಿ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವುದಾಗಿ ರೈತರಿಗೆ ನೀಡಿದ್ದ ಭರವಸೆ ಈಡೇರಿಸದ ಕಾರಣ ಜೂ.5ರಂದು ರೈತ ಸಂಘ ಹಾಗೂ ಹಸಿರುಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ)ನೇತೃತ್ವದಲ್ಲಿ ವಿಧಾನ ಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೀಕಲ್ ರಮಣಾರೆಡ್ಡಿ ತಿಳಿಸಿದರು.
ನಗರದಲ್ಲಿ ರೈತ ಸಂಘ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರಿಗೆ ಮಾರಕ ವಾದ ಭೂಸ್ವಾಧೀನ ಕಾಯ್ದೆಯನ್ನು ಕೇಂದ್ರ ಸರ್ಕಾರವು ವಾಪಸ್ ಪಡೆಯಿತು. ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೆ ತಂದಿದ್ದು ವಾಪಸ್ ಪಡೆಯಲಿಲ್ಲ.ಅಂದಿನ ವಿರೋಧಪಕ್ಷದಲ್ಲಿದ್ದ ಇಂದಿನ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಭರವಸೆ ನೀಡಿದ್ದರು ಎಂದು ತಿಳಿಸಿದರು.
ಆದರೆ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಸರ್ಕಾರ ಕೃಷಿ ಕಾಯ್ದೆಗಳ ಕುರಿತು ಯಾವುದೇ ಕ್ರಮಕೈಗೊಳ್ಳಲಿಲ್ಲ.ಕೃಷಿ ಕಾಯ್ದೆಗಳಿಂದ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳು ತ್ತಿದ್ದಾರೆ. ರೈತರ ಒಪ್ಪಿಗೆ ಇಲ್ಲದೆ ಯಾವುದೇ ಸರ್ಕಾರ ರೈತರ ಜಮೀನನ್ನು ವಶಪಡಿಸಿಕೊಳ್ಳ ಬಾರದು. ಈಗಿನ ಕೃಷಿ ಕಾಯ್ದೆಗಳಲ್ಲಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲು ಅವಕಾಶವಿದೆ. ಈ ಕಾನೂನನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನ ಗಳಲ್ಲಿ ರೈತರು ಬುದ್ದಿ ಕಲಿಸುತ್ತಾರೆ ಎಂದರು.
ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಒತ್ತಾಯಿಸಿ ಜಿಲ್ಲೆಯಿಂದ 10 ಸಾವಿರ ರೈತರು ದ್ವಿಚಕ್ರವಾಹನಗಳಲ್ಲಿ ತೆರಳಿ ವಿಧಾನ ಸೌಧಾಗೆ ಮುತ್ತಿಗೆ ಹಾಕಲಾಗುವುದು. ನಮ್ಮ ಭೂಮಿ, ನೆಲ, ಜಲ ಭಾಷೆಯನ್ನು ಕಾಪಾಡಿಕೊಳ್ಳಲು ಎಲ್ಲರ ಸಹಕಾರ ಅಗತ್ಯ. ಇದು ರೈತರ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ರೈತರನ್ನು ಎದುರು ಹಾಕಿಕೊಂಡ ಯಾವ ಸರ್ಕಾರಗಳು ಉಳಿದಿಲ್ಲ ಎಂದರು.
ಮಳೆಗಾಲ ಆರಂಭವಾಗಿರುವುದರಿಂದ ರೈತರಿಗೆ ಬಿತ್ತನೆ ಬೀಜ,ಗೊಬ್ಬರಗಳು ಸಕಾಲದಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಸಮಸ್ಯೆ ಕುರಿತು ಬಹಳಷ್ಟು ಸಮಸ್ಯೆ ಗಳಿದ್ದು, ಮುಂದಿನ ದಿನಗಳಲ್ಲಿ ಮಾತನಾಡಲಾಗುವುದು. ಎಲ್ಲಾ ಕ್ಷೇತ್ರಗಳು ಅಭಿವೃದ್ದಿ ಯಾಗುತ್ತಿದ್ದರೂ, ಸರ್ಕಾರದಲ್ಲಿ ರೈತರ ಬಗ್ಗೆ ಮಾತನಾಡುವ ಮುಖಂಡರು ತುಂಬಾ ಕಡಿಮೆಯಾಗಿದ್ದಾರೆ ಎಂದು ವಿಷಾದಿಸಿದರು.
ಮುಖಂಡರಾದ ಎನ್.ಸಿ.ಆಂಜನೇಯರೆಡ್ಡಿ, ಹಾಲು ನಾರಾಯಣಸ್ವಾಮಿ, ಸಿದ್ದು ನಾರಾಯಣ ಸ್ವಾಮಿ, ಆನಂದರೆಡ್ಡಿ, ಗಂಜೂರು ನಾರಾಯಣಸ್ವಾಮಿ, ಎಂ.ಎಲ್. ಆಂಜನೇಯರೆಡ್ಡಿ, ಹೊಸವುಡ್ಯ ರೆಡ್ಡಪ್ಪ,ಶೇಖರ್, ಕೆ.ವಿ.ವೆಂಕಟಸ್ವಾಮಿರೆಡ್ಡಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.