ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಂದ ಸಿಎಂ ಭೇಟಿ : ರಾಜಕೀಯ ವಲಯದಲ್ಲಿ ಕುತೂಹಲ
ಸಿದ್ದರಾಮಯ್ಯ ಅವರ ವಿರುದ್ದ ಮುಡಾ ಪ್ರಕರಣ ಬಂದಾಗಲೂ ಮತ್ತು ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ಹೋರಾಟದಲ್ಲೂ ಮಾಧುಸ್ವಾಮಿ ಅವರು ಯಾವುದೇ ಪಾಳಯದಲ್ಲೂ ಗುರುತಿಸಿಕೊಂಡಿರಲಿಲ್ಲ. ಯಡಿಯೂರಪ್ಪ ಅವರ ಆಪ್ತರಲ್ಲಿ ಒಬ್ಬರಾಗಿದ್ದ ಮಾಧುಸ್ವಾಮಿ ಅವರ ಈ ನಡೆ ರಾಜಕೀಯ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿತ್ತು


ಚಿಕ್ಕನಾಯಕನಹಳ್ಳಿ : ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಪಕ್ಷದಿಂದ ಅಂತರ ಕಾಯ್ದು ಕೊಂಡಿದ್ದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ನೊಳಂಬ ಸಮುದಾಯದ ವಿದ್ಯಾರ್ಥಿ ನಿಲಯಕ್ಕೆ ಬೆಂಗಳೂರಿನಲ್ಲಿ ನೀಡಲಾಗಿದ್ದ ನಿವೇಶನಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಈ ಭೇಟಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಭೇಟಿಯೂ ರಾಜಕೀಯ ವಲಯದಲ್ಲಿ ವ್ಯಾಪಕ ಕುತೂಹಲ ಮೂಡಿಸಿದೆ. ಹಿಂದಿನ ಬಿಜೆಪಿ ಸರಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಮಾಧುಸ್ವಾಮಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಚುನಾವಣೆ ನಿರ್ವಹಣೆ ವಿಚಾರದಲ್ಲೂ ಪಕ್ಷದ ಅಧ್ಯಕ್ಷರ ವಿರುದ್ದ ಅಸಮಾ ಧಾನಗೊಂಡಿದ್ದರು.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿಯೂ ವಿ.ಸೋಮಣ್ಣ ಅವರಿಗೆ ಟಿಕೆಟ್ ನೀಡಿದ್ದರಿಂದ ಕೋಪ ಮಾಡಿಕೊಂಡಿದ್ದರು. ಎಲೆಕ್ಷನ್ ಬಳಿಕ ಈ ಭಿನ್ನಾಭಿಪ್ರಾಯ ತೀವ್ರಗೊಂಡಿತ್ತು ಎನ್ನಲಾಗಿತ್ತು.
ಇದೇ ಕಾರಣದಿಂದಾಗಿ, ಸಿದ್ದರಾಮಯ್ಯ ಅವರ ವಿರುದ್ದ ಮುಡಾ ಪ್ರಕರಣ ಬಂದಾಗಲೂ ಮತ್ತು ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ಹೋರಾಟದಲ್ಲೂ ಮಾಧುಸ್ವಾಮಿ ಅವರು ಯಾವುದೇ ಪಾಳಯದಲ್ಲೂ ಗುರುತಿಸಿಕೊಂಡಿರಲಿಲ್ಲ. ಯಡಿಯೂರಪ್ಪ ಅವರ ಆಪ್ತರಲ್ಲಿ ಒಬ್ಬರಾಗಿದ್ದ ಮಾಧುಸ್ವಾಮಿ ಅವರ ಈ ನಡೆ ರಾಜಕೀಯ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿತ್ತು. ಅವರು ಕಾಂಗ್ರೆಸ್ ಸೇರಬಹುದು ಎಂಬ ಸುದ್ದಿಯೂ ಹರಿದಾಡಿತ್ತು.
ಕಾಂಗ್ರೆಸ್ ಸೇರುವ ವದಂತಿಯನ್ನು ಮಾಧುಸ್ವಾಮಿ ಸಾರಾಸಗಟಾಗಿ ತಳ್ಳಿಹಾಕಿದ್ದರು. ಆದರೆ, ಪಕ್ಷದಿಂದ ದೂರ ಉಳಿದಿರುವುದು ಸ್ಪಷ್ಟವಾಗಿತ್ತು. ಈ ನಡುವೆ ಮಾಧುಸ್ವಾಮಿ ಅವರನ್ನು ಪಕ್ಷ ದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸುವುದಾಗಿ ಕೆಲ ಬಿಜೆಪಿ ನಾಯಕರು ಹೇಳಿಕೆಯನ್ನು ನೀಡಿದ್ದರು. ಆದರೆ ಯಾಕೋ ಮಾಧುಸ್ವಾಮಿ ಏಕಾಂಗಿಯಾಗುತ್ತಿದ್ದಾರೆ ಎಂಬ ಭಾವನೆ ಸಾರ್ವಜನಿಕರಲ್ಲಿ ಭಾಸವಾಗುತ್ತಿತ್ತು.