Actress Haripriya & Actor Vashishta Simha: 18ನೇ ಈಶ ಗ್ರಾಮೋತ್ಸವಕ್ಕೆ ಹರಿಪ್ರಿಯಾ, ವಸಿಷ್ಠ ಸಿಂಹ ಹಾಗೂ ಆರ್ಜೆ ಅಮಿತ್ ಚಾಲನೆ
ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈಶ ಗ್ರಾಮೋತ್ಸವವು ಅತ್ಯುತ್ತಮ ಉಪಕ್ರಮವಾಗಿದ್ದು, ಕ್ರೀಡೆಯ ಮೂಲಕ ಗ್ರಾಮೀಣ ಸಮಾಜದಲ್ಲಿ ಆತ್ಮವಿಶ್ವಾಸ ಮತ್ತು ಒಗ್ಗಟ್ಟನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಭಾಗವಹಿಸುವ ಪ್ರತಿಯೊಬ್ಬರೂ ವಿಜೇತರೇ. ಎಲ್ಲ ತಂಡಗಳಿಗೂ ಶುಭವಾಗಲಿ ಎಂದು ಹರಿಪ್ರಿಯಾ ಹಾರೈಸಿದರು.
18ನೇ ಈಶ ಗ್ರಾಮೋತ್ಸವಕ್ಕೆ ಕನ್ನಡ ಚಲನ ಚಿತ್ರ ನಟಿ ಹರಿಪ್ರಿಯಾ, ವಸಿಷ್ಠ ಸಿಂಹ ಹಾಗೂ ರೇಡಿಯೋ ಜಾಕಿ ಆರ್.ಜೆ ಅಮಿತ್ ಚಾಲನೆ ನೀಡಿದ ಚಿತ್ರಗಳು.. -
ಚಿಕ್ಕಬಳ್ಳಾಪುರ : "ಈಶ ಗ್ರಾಮೋತ್ಸವದ ಸೌಹಾರ್ದ ಪಂದ್ಯದಲ್ಲಿ ಭಾಗವಹಿಸಿದ್ದು ನನ್ನನ್ನು ಚಿಕ್ಕಬಳ್ಳಾಪುರದ ಶಾಲಾ ದಿನಗಳಿಗೆ ಕರೆದೊಯ್ದಿತು. ಮತ್ತೆ ಕ್ರೀಡಾಂಗಣಕ್ಕೆ ಇಳಿದ ಅನುಭವ ತುಂಬಾ ಸಂತಸ ನೀಡಿದೆ. ಈ ಸುಂದರ ನೆನಪಿಗಾಗಿ ಈಶಾಗೆ ನಾನು ಕೃತಜ್ಞಳಾಗಿದ್ದೇನೆ" ಎಂದು ನಟಿ ಹರಿಪ್ರಿಯಾ(Actress Haripriya)ಹೇಳಿದರು.
ತಾಲೂಕಿನ ಆವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌರವನಬೆಟ್ಟದ ತಪ್ಪಲಿನ ಸದ್ಗುರು ಸನ್ನಿಧಿಯ ಈಶಾ ಕೇಂದ್ರದಲ್ಲಿ ಶನಿವಾರ ನಡೆದ 18ನೇ ಈಶ ಗ್ರಾಮೋತ್ಸವಕ್ಕೆ ನಟ ವಸಿಷ್ಠ ಸಿಂಹ ಹಾಗೂ ಆರ್ಜೆ ಅಮಿತ್ ಅವರೊಂದಿಗೆ ಸೌಹಾರ್ದ ಪಂದ್ಯವಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿಗಳಿಗೆ ವಿವಿಧ ಕಾನೂನುಗಳ ಕುರಿತು ಅರಿವು ಮೂಡಿಸಿದ ಕಾನೂನು ಅಭಿರಕ್ಷಕರು
ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈಶ ಗ್ರಾಮೋತ್ಸವವು ಅತ್ಯುತ್ತಮ ಉಪಕ್ರಮವಾಗಿದ್ದು, ಕ್ರೀಡೆಯ ಮೂಲಕ ಗ್ರಾಮೀಣ ಸಮಾಜದಲ್ಲಿ ಆತ್ಮವಿಶ್ವಾಸ ಮತ್ತು ಒಗ್ಗಟ್ಟನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಭಾಗವಹಿಸುವ ಪ್ರತಿಯೊಬ್ಬರೂ ವಿಜೇತರೇ. ಎಲ್ಲ ತಂಡಗಳಿಗೂ ಶುಭವಾಗಲಿ ಎಂದು ಹರಿಪ್ರಿಯಾ ಹಾರೈಸಿದರು.
ಸೌಹಾರ್ದ ಪಂದ್ಯದಲ್ಲಿ ಕಳೆದ ವರ್ಷದ ಚಾಂಪಿಯನ್ ತಂಡ ಸೇರಿದಂತೆ ಸೀನಿಯರ್ ಬಾಲಕಿಯರ ಥ್ರೋಬಾಲ್ ತಂಡ ಜೈ ಮಾರುತಿ ಹೊನ್ನೇನಹಳ್ಳಿ ಹಾಗೂ ಜೂನಿಯರ್ ಬಾಲಕಿಯರ ಜೈ ಭಜರಂಗಿ ಹೊನ್ನೇನಹಳ್ಳಿ ತಂಡಗಳು ಸೆಲೆಬ್ರಿಟಿಗಳೊಂದಿಗೆ ಕಣಕ್ಕಿಳಿದು ಕಾರ್ಯಕ್ರಮಕ್ಕೆ ಮೆರುಗು ತಂದವು.
ನಟ ವಸಿಷ್ಠ ಸಿಂಹ (Actor Vashishta Simha)ಮಾತನಾಡಿ, "ಕ್ರೀಡೆಯ ಮೂಲಕ ಗ್ರಾಮೀಣ ಸಮುದಾಯ ಒಗ್ಗೂಡಿಸುವ ಸದ್ಗುರುಗಳ ದೂರದೃಷ್ಟಿಯ ಪ್ರತಿಬಿಂಬವೇ ಈಶ ಗ್ರಾಮೋತ್ಸವ. ಈ ಉಪಕ್ರಮ ದೇಶದ ಪ್ರತಿಯೊಂದು ಹಳ್ಳಿಯನ್ನು ತಲುಪಲಿ" ಎಂದು ಆಶಿಸಿದರು.
ಆರ್ಜೆ ಅಮಿತ್ ಮಾತನಾಡಿ, ಗ್ರಾಮೀಣ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈಶ ಗ್ರಾಮೋತ್ಸವವನ್ನು ಹಳ್ಳಿಗಳ ಹಬ್ಬವನ್ನಾಗಿ ರೂಪಿಸಬೇಕು. ಕ್ರೀಡೆ ಜನರನ್ನು ಒಗ್ಗೂಡಿಸುವ ಶಕ್ತಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸದ್ಗುರುಗಳ ಸಂದೇಶವನ್ನು ಹಂಚಿಕೊಳ್ಳಲಾಯಿತು. "ಈಶ ಗ್ರಾಮೋತ್ಸವವು ಕ್ರೀಡೆಯ ಮೂಲಕ ಜೀವನದ ಸಂಭ್ರಮವನ್ನು ಆಚರಿಸುವ ವೇದಿಕೆ. ಆಟವು ಜಾತಿ, ಧರ್ಮ, ಭಾಷೆ ಸೇರಿದಂತೆ ಎಲ್ಲ ಭೇದಗಳನ್ನು ಮೀರಿ ಜನರನ್ನು ಒಂದುಗೂಡಿಸುತ್ತದೆ. ಸ್ಪರ್ಧೆಗಿಂತ ಭಾಗವಹಿಸು ವಿಕೆ ಮತ್ತು ಕ್ರೀಡಾ ಮನೋಭಾವವೇ ಮುಖ್ಯ" ಎಂದು ಸದ್ಗುರು ಅಭಿಪ್ರಾಯಪಟ್ಟಿದ್ದಾರೆ.
ಈಶ ಗ್ರಾಮೋತ್ಸವವು ವೃತ್ತಿಪರ ಕ್ರೀಡಾಪಟುಗಳಿಗಾಗಿ ಅಲ್ಲ; ಗ್ರಾಮೀಣ ರೈತರು, ಮೀನುಗಾರರು, ದಿನಗೂಲಿ ಕಾರ್ಮಿಕರು, ಕುಶಲಕರ್ಮಿಗಳು, ಗೃಹಿಣಿಯರು ಸೇರಿದಂತೆ ಗ್ರಾಮೀಣ ನಾಗರಿಕರಿಗೆ ಕ್ರೀಡಾ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದೆ.
18ನೇ ಆವೃತ್ತಿಯಲ್ಲಿ ಕರ್ನಾಟಕದ 18 ಜಿಲ್ಲೆಗಳೊಂದಿಗೆ ದೇಶದ 10 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 40 ಸಾವಿರಕ್ಕೂ ಅಧಿಕ ಗ್ರಾಮಗಳಿಂದ 80 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಖೇಲೋ ಇಂಡಿಯಾದ ಮಾನ್ಯತೆ ಪಡೆದಿರುವ ಈ ವರ್ಷದ ಗ್ರಾಮೋ ತ್ಸವದಲ್ಲಿ 7 ಸಾವಿರಕ್ಕೂ ಅಧಿಕ ತಂಡಗಳು ಸ್ಪರ್ಧಿಸಲಿದ್ದು, ಅಂದಾಜು 15 ಸಾವಿರ ಮಹಿಳಾ ಆಟಗಾರ್ತಿಯರು ಭಾಗವಹಿಸಲಿದ್ದಾರೆ.
ಈ ಬಾರಿ ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಸ್ಪರ್ಧೆಗಳು ನಡೆಯಲಿದ್ದು, ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸದ ಗ್ರಾಮೀಣ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಾಲಿಬಾಲ್ಗೆ ಕನಿಷ್ಠ 14 ವರ್ಷ ಹಾಗೂ ಥ್ರೋಬಾಲ್ಗೆ 13 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಕ್ಲಸ್ಟರ್, ವಿಭಾಗ, ಸೆಮಿಫೈನಲ್ ಹಾಗೂ ಫೈನಲ್ ಹಂತಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, ರಾಜ್ಯ ಮಟ್ಟದ ವಿಜೇತ ತಂಡಗಳು ಸೆಪ್ಟೆಂಬರ್ 4ರಿಂದ 6ರವರೆಗೆ ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಆದಿಯೋಗಿ ಸನ್ನಿಧಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಸಲಿವೆ.
ಒಟ್ಟು 21 ಕೋಟಿ ಬಹುಮಾನ ಮೊತ್ತವನ್ನು ವಿವಿಧ ಹಂತಗಳಲ್ಲಿ ವಿತರಿಸಲಾಗುತ್ತದೆ. ಗ್ರ್ಯಾಂಡ್ ಫಿನಾಲೆಯಲ್ಲಿ ವಾಲಿಬಾಲ್ ಹಾಗೂ ಥ್ರೋಬಾಲ್ ವಿಭಾಗದ ವಿಜೇತ ತಂಡಗಳಿಗೆ ತಲಾ 5 ಲಕ್ಷ, ರನ್ನರ್ಅಪ್ ತಂಡಗಳಿಗೆ 3 ಲಕ್ಷ, ಮೂರನೇ ಸ್ಥಾನಕ್ಕೆ 1 ಲಕ್ಷ ಹಾಗೂ ನಾಲ್ಕನೇ ಸ್ಥಾನಕ್ಕೆ 50 ಸಾವಿರ ಬಹುಮಾನ ನೀಡಲಾಗುತ್ತದೆ. ಪ್ಯಾರಾಲಿಂಪಿಕ್ ವಿಭಾಗಕ್ಕೂ ಪ್ರತ್ಯೇಕ ಬಹುಮಾನ ವ್ಯವಸ್ಥೆ ಮಾಡಲಾಗಿದೆ.
ಕಳೆದ ವರ್ಷ ಮಹಿಳೆಯರ ಥ್ರೋಬಾಲ್ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು ತಂಡ ಚಾಂಪಿಯನ್ ಆಗಿದ್ದರೆ, ಪುರುಷರ ವಾಲಿಬಾಲ್ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಗ್ಗಡಿಹಳ್ಳಿ ತಂಡ ರನ್ನರ್ ಅಪ್ ಸ್ಥಾನ ಪಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.