Shidlaghatta News: ಶಿಡ್ಲಘಟ್ಟದಲ್ಲಿ ಅದ್ದೂರಿಯಾಗಿ ನಡೆದ ಶ್ರೀರಾಮ ಶೋಭಾಯಾತ್ರೆ
ಶೋಭಾಯಾತ್ರೆಯಲ್ಲಿ ಮಹಿಳೆಯರು, ಯುವಕರು, ಹಿರಿಯ ನಾಗರಿಕರು ಹಾಗೂ ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿ "ಜೈ ಶ್ರೀರಾಮ" ಘೋಷಣೆಗಳನ್ನು ಮೊಳಗಿಸಿದರು. ಮಹಿಳೆಯರು ಪೂರ್ಣಕುಂಭ, ಆರತಿ ಹಾಗೂ ಭಜನೆಗಳ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರೆ, ಯುವಕರು ಡೊಳ್ಳು ಕುಣಿತ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮ ಹೆಚ್ಚಿಸಿದರು.
-
ಶಿಡ್ಲಘಟ್ಟ: ಶ್ರೀರಾಮ ಶೋಭಾಯಾತ್ರೆ ಆಚರಣೆ ಸಮಿತಿಯ ವತಿಯಿಂದ ಶಿಡ್ಲಘಟ್ಟ ನಗರದಲ್ಲಿ ಶ್ರೀರಾಮ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ನಗರದ ಹನುಮಂತರಪುರ ಗೇಟ್ನ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಗರವನ್ನು ಕೇಸರಿಮಯಗೊಳಿಸಿತು.
ಶೋಭಾಯಾತ್ರೆಯಲ್ಲಿ ಮಹಿಳೆಯರು, ಯುವಕರು, ಹಿರಿಯ ನಾಗರಿಕರು ಹಾಗೂ ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿ "ಜೈ ಶ್ರೀರಾಮ" ಘೋಷಣೆಗಳನ್ನು ಮೊಳಗಿಸಿದರು. ಮಹಿಳೆಯರು ಪೂರ್ಣಕುಂಭ, ಆರತಿ ಹಾಗೂ ಭಜನೆಗಳ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರೆ, ಯುವಕರು ಡೊಳ್ಳು ಕುಣಿತ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮ ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪುಟ್ಟು ಅಂಜಿನಪ್ಪ ಮಾತನಾಡಿ ಶ್ರೀರಾಮ ಶೋಭಾ ಯಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ, ಭಕ್ತಿ ಮತ್ತು ಒಗ್ಗಟ್ಟಿನ ಸಂದೇಶವನ್ನು ಸಾರುತ್ತವೆ. ಸಾವಿರಾರು ಭಕ್ತರು ಭಾಗವಹಿಸಿರುವುದು ಶ್ರೀರಾಮನ ಮೇಲಿನ ಜನರ ಅಪಾರ ಭಕ್ತಿಗೆ ಸಾಕ್ಷಿಯಾಗಿದೆ. ತಾಲೂಕಿನ ಜನರ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಶ್ರೀರಾಮ ನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ಮಾಜಿ ಶಾಸಕ ರಾಜಣ್ಣ ಮಾತನಾಡಿ, "ಶ್ರೀರಾಮನ ಆದರ್ಶಗಳು ಸಮಾಜಕ್ಕೆ ಮಾರ್ಗದರ್ಶಕ ವಾಗಿವೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಜನರನ್ನು ಒಗ್ಗೂಡಿಸಿ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ" ಎಂದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ವೆಂಕಟೇಶ್, ಅನಿಲ್ ಕುಮಾರ್, ನಾಗೇಶ್,ಸ್ಕೂಲ್ ದೇವರಾಜ್, ಡಾ ಸತ್ಯನಾರಾಯಣರಾವ್ ವೆಂಕೋಬರಾವ್, ರಂಜಿತ್, ಭರತ್, ಚಲಪತಿ, ರಾಮಾಂಜನೇಯ ಸೇರಿದಂತೆ ಶ್ರೀರಾಮ ಶೋಭಾಯಾತ್ರೆ ಆಚರಣೆ ಸಮಿತಿಯ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.