ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಶ್ವಕ್ಕೆ ಉನ್ನತ ಗುಣಮಟ್ಟದ ಎಂಜಿನಿಯರುಗಳನ್ನು ನೀಡುವ ಭರವಸೆ ನೀಡಿದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್

ಎ.ಐ ತಂತ್ರಜ್ಞಾನದಷ್ಟೇ ವೇಗವಾಗಿ ಬೆಳೆಯುತ್ತಿರುವ ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನ ಬಳಸಿ ಕೊಂಡಿರುವ ನಮ್ಮ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಇದರಲ್ಲಿ ಪದವಿ ನೀಡಲು ಮುಂದಾಗಿದೆ. ಕ್ಯೂ ನ್ಯೂ, ಕ್ಯೂಪೈವ್‌ಐ ಸಂಸ್ಥೆಗಳೊಟ್ಟಿಗೆ ವಿಟಿಯು ಒಡಂಬಡಿಕೆ ಮಾಡಿ ಕೊಂಡಿದ್ದು ಆಮೂಲಕ ನಮ್ಮ ವಿದ್ಯಾರ್ಥಿಗಳಿಗೆ ಎಂ.ಟೆಕ್ ಸ್ನಾತಕೋತ್ತರ ಪದವಿ ನೀಡುತ್ತಿದೆ.

ವಿಟಿಯು ಮುದ್ದೇನಹಳ್ಳಿಯಲ್ಲಿ ನಡೆದ ರಸಾಯನ -22 ಅಂತರರಾಷ್ಟ್ರೀಯ ಸಮ್ಮೇಳನ

-

Ashok Nayak
Ashok Nayak Jan 8, 2026 10:27 PM

ಚಿಕ್ಕಬಳ್ಳಾಪುರ : ವಿಟಿಯು ವಿಶ್ವಕ್ಕೆ ಉನ್ನತ ಗುಣಮಟ್ಟದ ಎಂಜಿನಿಯರ್‌ಗಳನ್ನು ನೀಡುತ್ತಿದ್ದು 2025ರ ವೇಳೆಗೆ ವಿಶ್ವದಲ್ಲಿ ಸುಮಾರು 3 ಕೋಟಿಗೂ ಅಧಿಕ ಪ್ರತಿಭಾವಂತ ಕೌಶಲ್ಯಪೂರ್ಣ ಇಂಜಿನಿಯರುಗಳನ್ನು ಅರಸಿ ಹುದ್ದೆಗಳು ಸೃಷ್ಟಿಯಾಗಲಿವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಡಾ. ಎಸ್. ವಿದ್ಯಾಶಂಕರ್ ಭವಿಷ್ಯ ನುಡಿದರು.

ನಗರ ಹೊರವಲಯದ ವಿಟಿಯು ಕ್ಯಾಂಪಸ್‌ನಲ್ಲಿ ಗುರುವಾರ ಆಯೋಜಿಸಿದ್ದ ಮೂರು ದಿನಗಳ ಅಂತರಾಷ್ಟ್ರೀಯ ವಿ ಇಂಟರ್‌ನ್ಯಾಷನಲ್ ಸಿಂಪೋಸಿಯಂ ಆನ್ ಸೈನ್ಸ್ ಬಿಯಾಂಡ್ ಬೌಂಡರಿ : ಇನ್ವೆಂಷನ್, ಡಿಸ್ಕವರಿ, ಇನ್ನೋವೇಷನ್ ಅಂಡ್ ಸೊಸೈಟಿ – ರಸಾಯನ-22” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎ.ಐ ತಂತ್ರಜ್ಞಾನದಷ್ಟೇ ವೇಗವಾಗಿ ಬೆಳೆಯುತ್ತಿರುವ ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನ ಬಳಸಿಕೊಂಡಿರುವ ನಮ್ಮ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಇದರಲ್ಲಿ ಪದವಿ ನೀಡಲು ಮುಂದಾಗಿದೆ. ಕ್ಯೂ ನ್ಯೂ, ಕ್ಯೂಪೈವ್‌ಐ ಸಂಸ್ಥೆಗಳೊಟ್ಟಿಗೆ ವಿಟಿಯು ಒಡಂಬಡಿಕೆ ಮಾಡಿ ಕೊಂಡಿದ್ದು ಆಮೂಲಕ ನಮ್ಮ ವಿದ್ಯಾರ್ಥಿಗಳಿಗೆ ಎಂ.ಟೆಕ್ ಸ್ನಾತಕೋತ್ತರ ಪದವಿ ನೀಡುತ್ತಿದೆ. ವಿಶೇಷವಾಗಿ ಸೆಮಿಕಂಡಕ್ಟರ್, ಬಯೋಟೆಕ್, ಮತ್ತು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧ ಪಟ್ಟಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗಿದೆ ಎಂದರು.

ಇದನ್ನೂ ಓದಿ: Chikkaballapur News: 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಕರ್ಷಣೀಯವಾಗಿ ಆಚರಿಸೋಣ

ಗುಣಮಟ್ಟದ ಎಂಜಿನಿಯರ್‌ಗಳನ್ನು ತಯಾರಿಸುವುದರತ್ತ ನಮ್ಮ ಚಿತ್ತವಿದ್ದು ಇದರಿಂದ ವಿಶ್ವದ ಸ್ಥಿರತೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟ ಅವರು ನಮ್ಮಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಾಂಕ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಕೈಗಾರಿಕಾ ಇಂಟರ್ನ್ಶಿಪ್ ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸುವ ಮೂಲಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಐಐಟಿಗಳ ಮಟ್ಟದ ಗುಣಮಟ್ಟದ ಎಂಜಿನಿಯರ್‌ಗಳನ್ನು ರೂಪಿಸುತ್ತಿದೆ ಎಂದರು.

ತಾಂತ್ರಿಕ ಶಿಕ್ಷಣಕ್ಕಾಗಿಯೇ ಯಾವುದಾದರೂ ವಿಶ್ವವಿದ್ಯಾಲಯ ಮೀಸಲಾಗಿದ್ದರೆ ಅದು ವಿಶ್ವೇಶ್ವರ ಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಾತ್ರವಾಗಿದೆ. 1998ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯವು ಬೆಳಗಾವಿಯನ್ನು ಕೇಂದ್ರಸ್ಥಾನವನ್ನಾಗಿ ಹೊಂದಿದ್ದು 4 ಪ್ರಾದೇಶಿಕ ಕ್ಯಾಂಪಸ್‌ಗಳನ್ನು ಒಳಗೊಂಡಿದೆ. ಮುದ್ದೇನಹಳ್ಳಿಯ ಕ್ಯಾಂಪಸ್ 220 ಎಕರೆಯಷ್ಟು ವಿಶಾಲ ಪ್ರದೇಶವನ್ನು ಹೊಂದಿದೆ. ಪ್ರತಿವರ್ಷ 1 ಲಕ್ಷ ವಿದ್ಯಾರ್ಥಿಗಳು ನೋಂದಣಿ ಪಡೆಯುತ್ತಾರೆ. ಪ್ರತಿ ವರ್ಷ ಎರಡು ಘಟಿಕೋತ್ಸವ ನಡೆಯಲಿದ್ದು 600 ಪಿಹೆಚ್‌ಡಿ ಪದವಿ ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಆಧುನಿಕತೆಯ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಜತೆಗೆ ಸಾಗುವುದು ಅನಿವಾರ್ಯವಾಗಿದ್ದು, ಈ ಹಿನ್ನೆಲೆ ಪ್ರತಿವರ್ಷವೂ ಪಠ್ಯಕ್ರಮವನ್ನು ಪರಿಷ್ಕರಿಸ ಲಾಗುತ್ತಿದೆ ಎಂದು ಹೇಳಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಗಳು ಕೇವಲ ಪ್ರಬಂಧ ಮಂಡನೆಗೆ ಸೀಮಿತವಾಗಬಾರದು. ಅವು ಸಮಾಜಮುಖಿಯಾಗಿದ್ದು, ಹೊಸ ಹೊಳಹು ಗಳನ್ನು ನೀಡುವಂತಿರಬೇಕು ಎಂದು ಡಾ. ವಿದ್ಯಾಶಂಕರ್ ಅಭಿಪ್ರಾಯಪಟ್ಟರು.

ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಯಲ್ಲಿ ಚೀನಾ ಶೇ.66ರಷ್ಟು ಸಾಧನೆ ಮಾಡಿದ್ದರೆ, ಭಾರತ ಶೇ.15ರಷ್ಟು ಪ್ರಗತಿ ಸಾಧಿಸಿದ್ದು, ಚೀನಾಗಿಂತ ಸುಮಾರು 10 ವರ್ಷ ಹಿಂದಿದೆ ಎಂದು ಮಾಹಿತಿ ನೀಡಿದರು.

ಮುದ್ದೇನಹಳ್ಳಿ ವಿಟಿಯು ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ಈ ಅಂತಾರಾ ಷ್ಟ್ರೀಯ ಸಮ್ಮೇಳನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರಗಣ್ಯ ಸಾಧನೆ ತೋರಿರುವ ವಿಜ್ಞಾನಿಗಳು, ಪ್ರಾಧ್ಯಾಪಕರು ಹಾಗೂ ಸಂಶೋಧನಾರ್ಥಿಗಳಿಗೆ ಲೀಡರ್‌ಶಿಪ್ ಅವಾರ್ಡ್, ಲೈಫ್‌ ಟೈಮ್ ಅಚೀವ್‌ಮೆಂಟ್ ಅವಾರ್ಡ್, ಗೋಲ್ಡ್ ಮತ್ತು ಸಿಲ್ವರ್ ಮೆಡಲ್ ಅವಾರ್ಡ್ಗಳನ್ನು ಪ್ರದಾನಿಸ ಲಾಗುವುದು ಎಂದು ತಿಳಿಸಿದರು.

ಬೆಂಗಳೂರು ರಾಮನ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ತರುಣ್ ಸೌರದೀಪ್ ಮಾತನಾಡಿ, ಭಾರತ ಜ್ಞಾನದ ತವರು ನೆಲವಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನವು ನಾಗರಿಕ ಲೋಕಕ್ಕೆ ಅನೇಕ ಅವಕಾಶಗಳನ್ನು ನೀಡಿದೆ. ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಅಪ್ಪಸಾಬ ಎ.ಎಚ್., ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಬೆಂಗಳೂರು ಇದರ ನಿರ್ದೇಶಕ ಡಾ. ಪ್ರೊ. ತರುಣ್ ಸೌರದೀಪ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಜಯಕರ್ ಅವರು ತಮ್ಮ ಸಂದೇಶಗಳಲ್ಲಿ ಅಂತರಶಾಖಾ ಸಂಶೋಧನೆ, ನವೀನತೆ ಹಾಗೂ ವಿಜ್ಞಾನಾಧಾರಿತ ಸಾಮಾಜಿಕ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಪಾನ್, ಜರ್ಮನಿ ಸೇರಿದಂತೆ ವಿವಿಧ ದೇಶಗಳಿಂದ ಹಾಗೂ ಭಾರತದಿಂದ ಒಟ್ಟು 50ಕ್ಕೂ ಹೆಚ್ಚು ವಿಜ್ಞಾನಿಗಳನ್ನು ಅವರ ಅತ್ಯುತ್ತಮ ಸಂಶೋಧನಾ ಕೊಡುಗೆ ಗಳಿಗಾಗಿ ಗೌರವಿಸಲಾಯಿತು.

ಮೂರು ದಿನಗಳ ಈ ಸಮ್ಮೇಳನವು ಡಾ. ದಿನೇಶ್ ರಂಗಪ್ಪ ಅವರು ಅಧ್ಯಕ್ಷತೆ ವಹಿಸಿದ್ದು  ಚಿರಂತನ ರಸಾಯನ ಸಂಸ್ಥೆಯ ಅಧ್ಯಕ್ಷ ಬ್ರಜ್ ಗೋಪಾಲ್ ಬಾಗ್ ಹಾಗೂ ಕಾರ್ಯದರ್ಶಿ ಡಾ. ಸಿ. ಬಿ. ಯೆಳಮಗ್ಗದ ಅವರ ಸಹಯೋಗದೊಂದಿಗೆ ಸಮ್ಮೇಳನದ ಸಂಚಾಲಕರಾಗಿ ಡಾ. ಪ್ರಸನ್ನ ಡಿ. ಶಿವರಾಮು ಹಾಗೂ ಸಹ-ಸಂಚಾಲಕರಾಗಿ ಡಾ. ನವ್ಯಾ ರಾಣಿ ಎಂ. ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಾಜಾಸಾಬ್, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜಯಕರ್, ಪಶ್ಚಿಮ ಬಂಗಾಳದ ಚಿರಂತನ ರಸಾಯನ ಸಂಸ್ಥೆ – ವಿದ್ಯಾಸಾಗರ್ ವಿಶ್ವವಿದ್ಯಾಲಯದ ಪ್ರೊ. ಬ್ರಜಾ ಗೋಪಾಲ್ ಬಾಗ್, ವಿಟಿಯು ರಿಜಿಸ್ಟ್ರಾರ್ ಪ್ರಸಾದ್ ಬಿ. ರಾಂಪುರೆ, ಮೌಲ್ಯಮಾಪನ ಕುಲಸಚಿವ ಯು.ಜೆ. ಉಜ್ವಲ್, ಆರ್ಥಿಕ ಅಧಿಕಾರಿ ಪ್ರಶಾಂತ್ ನಾಯಕ್ ಜಿ., ಡಾ. ದಿನೇಶ್ ರಂಗಪ್ಪ, ಡಾ. ಸಿ.ವೈ. ಯೆಲಮಗಡ, ಡಾ. ಪ್ರಸನ್ನ ಡಿ. ಶಿವರಾಮು, ಡಾ. ನವ್ಯರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.