Yoga Namaskara: ಹನುಮ ಜಯಂತಿ ಪ್ರಯುಕ್ತ 108 ಯೋಗ ನಮಸ್ಕಾರ ಮಾಡಿದ ಯೋಗಪಟುಗಳು
Yoga Namaskara: ಹನುಮ ಜಯಂತಿ ಪ್ರಯುಕ್ತ 108 ಯೋಗ ನಮಸ್ಕಾರ ಮಾಡಿದ ಯೋಗಪಟುಗಳು

ಚಿಕ್ಕಬಳ್ಳಾಪುರ: ಹನುಮ ಜಯಂತಿ ಪ್ರಯುಕ್ತ ಶುಕ್ರವಾರ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ “ಸರ್.ಎಂ ವಿಶ್ವೇಶ್ವರಯ್ಯ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಚಿಕ್ಕಬಳ್ಳಾಪುರ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ೧೦೮ ಹನುಮಾನ್ ಆಸನಗಳ ಯೋಗ ನಮಸ್ಕಾರ ನೂರಾರು ಜನರ ಸಮ್ಮುಖದಲ್ಲಿ ಮಾಡಲಾಯಿತು.
೮೦ ವರ್ಷದ ವೃದ್ದರು, ಮಹಿಳೆಯರು, ೧೦೮ ಯೋಗ ನಮಸ್ಕಾರಗಳನ್ನು ಮಾಡಿ ಗಮನ ಸೆಳೆದರು.ಈ ಸಂದರ್ಭದಲ್ಲಿ ಹೆಚ್.ಎಸ್ ಗಾರ್ಡ್ ನಿವಾಸಿ ಡಾ.ರಾಮು ಮಾತನಾಡಿ, ಕಳೆದ ೫೪ ವರ್ಷಗಳಿಂದ ಯೋಗಾಭ್ಯಾಸ ಮತ್ತು ಪ್ರಾಣಾಯಾಮವನ್ನು ಮಾಡುತ್ತಾ ಬಂದಿದ್ದೇನೆ. ಆದ್ದರಿಂದ ೮೦ರ ಇಳಿಯವಯಸ್ಸಲ್ಲೂ ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಹೊಂದಲು ಸಾಧ್ಯವಾಗಿದೆ. ವೃತ್ತಿಯಲ್ಲಿ ವೈದ್ಯನಾಗಿ ನಾನು ಯಶಸ್ಸು ಕಾಣಲು ಯೋಗ ಅಭ್ಯಾಸವೇ ಕಾರಣ.ದಿನ ನಿತ್ಯ ಒಂದು ತಾಸು ಯೋಗ ಮಾಡಿದರೆ. ಮಧುಮೇಹ ಕಾಯಿಲೆ ಬರುವುದಿಲ್ಲ. ಮಧುಮೇಹ ಬರದಂತೆ ನೋಡಿಕೊಂಡರೆ ಶೇ.೭೦ ರಷ್ಟು ಇತರ ಕಾಯಿಲೆಗಳನ್ನು ತಡೆಗಟ್ಟಿದಂತೆ ಆಗುತ್ತದೆ ಎಂದರು.ಯೋಗ ಗುರುಗಳಾದ ಲೋಕನಾಥ್ ಮಾತನಾಡಿ, ಯೋಗ ಪದ್ದತಿ ಆರೋಗ್ಯಕ್ಕೆ ಅವಶ್ಯ. ಉತ್ತಮ ಜೀವನ ಕ್ರಮ ಗಳಲ್ಲಿ ಯೋಗವೂ ಒಂದು.ಚಿಕ್ಕಬಳ್ಳಾಪುರ ನಗರದ ೫ ಕೇಂದ್ರಗಳಲ್ಲಿ ಯೋಗಾಭ್ಯಾಸ ದಿನನಿತ್ಯ ನಡೆಯುತ್ತಿದೆ. ಸರ್.ಎಂ ವಿಶ್ವೇಶ್ವರಯ್ಯ ಯೋಗ ಕೇಂದ್ರದ ತಂಡದವರು ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಪ್ರತಿ ನಿತ್ಯ ಬೆಳಿಗ್ಗೆ ೫. ೩೦ ರಿಂದ ೭ ಗಂಟೆ ವರೆಗೂ ಉಚಿತ ಯೋಗ ತರಬೇತಿಯನ್ನು ನೀಡುತ್ತಿದ್ದಾರೆ.
ಆಸಕ್ತರು ಈ ಕೇಂದ್ರಕ್ಕೆ ಆಗಮಿಸಿ ಶುಲ್ಕ ರಹಿತವಾಗಿ ಯೋಗ ಕಲಿಯಬಹುದು. ಇಂತಹ ಉಚಿತ ಯೋಗ ಕಲಿಕೆಗೆ ಸಹಕಾರ ನೀಡುತ್ತಿರುವ ಯುವ ಜನ ಸೇವಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಅಧಿಕಾರಿ ಗಳಿಗೆ ಧನ್ಯವಾದ ತಿಳಿಸಲು ಇಚ್ಛೆಸುತ್ತೇನೆ. ನಮ್ಮ ಆಹ್ವಾನವನ್ನು ಮನ್ನಿಸಿ ಹನುಮ ಜಯಂತಿಯಂದು ಇಲ್ಲಿಗೆ ಆಗಮಿಸಿ ೧೦೮ ಯೋಗ ನಮಸ್ಕಾರಗಳನ್ನು ಮಾಡುವ ಮೂಲಕ ಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿದರು
೧೦೮ ನಮಸ್ಕಾರಗಳ ಯೋಗಾಭ್ಯಾಸದಲ್ಲಿ ನೂರಾರು ಜನರು ತೊಡಗಿ ಭಕ್ತಿ ಪೂರ್ವಕ ನಮನಗಳನ್ನು ಹನುಮನಿಗೆ ಸಲ್ಲಿಸಿದರು.
ಈ ವೇಳೆ, ಉಪನ್ಯಾಸಕರು ಹಾಗೂ ಬೋಧಕರಾದ ಲೋಕನಾಥ, ಯೋಗ ಗುರುಗಳಾದ ರಾಮಚಂದ್ರ ರೆಡ್ಡಿ, ಮಂಚನಬಲೆ ರವಿ, ವೀಣಾ ಲೋಕನಾಥ್, ಡಾ.ಮಹೇಶ್, ಡ್ಯಾನ್ಸ್ ಶ್ರೀನಿವಾಸ್, ಮೂರ್ತಿ, ಪ್ರಭಾಕರ್, ಸೀನಪ್ಪ, ಹನುಮಂತಪ್ಪ, ನಗರಸಭೆ ಸದಸ್ಯ ವೆಂಕಟೇಶ್, ಯೋಗಾಸಕ್ತರಾದ ಮಂಜುನಾಥ್, ರಮೇಶ್, ಗೀತಾ ಇನ್ನು ಮುಂತಾದವರು ಇದ್ದರು.