ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chittapur RSS March: ಚಿತ್ತಾಪುರದಲ್ಲಿ ನ.16ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಹೈಕೋರ್ಟ್‌ ಗ್ರೀನ್ ಸಿಗ್ನಲ್

Chittapur RSS Route March on November 16: ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನದಲ್ಲಿ 300 ಕಾರ್ಯಕರ್ತರು, 50 ಮಂದಿ ಬ್ಯಾಂಡ್‌ನವರು ಸೇರಿ ಕೇವಲ 350 ಜನರು ಮಾತ್ರವೇ ಸೇರಬಹುದು. ಅದರ ಹೊರತಾಗಿ ಹೆಚ್ಚಿನವರು ಸೇರುವಂತಿಲ್ಲ ಎಂಬುದಾಗಿ ಷರತ್ತುಬದ್ಧ ಅನುಮತಿಯನ್ನು ನೀಡಿ ಹೈಕೋರ್ಟ್ ಆದೇಶಿಸಿದೆ.

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್‌

-

Prabhakara R
Prabhakara R Nov 13, 2025 3:41 PM

ಕಲಬುರಗಿ, ನ.13: ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 16ರಂದು ಆರ್‌ಎಸ್‌ಎಸ್ ಪಥಸಂಚಲನ (Chittapur RSS March) ನಡೆಸಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಹೈಕೋರ್ಟ್‌ನ ಕಲಬುರಗಿ ವಿಭಾಗೀಯ ಪೀಠದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ವಾದ-ಪ್ರತಿವಾದ ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು, ನವೆಂಬರ್ 16ರಂದು ಮಧ್ಯಾಹ್ನ 3.30ರಿಂದ 5.45ರ ಒಳಗಾಗಿ ಪಥಸಂಚಲನ ನಡೆಸಲು ಅನುಮತಿ ನೀಡಿದೆ.

ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡಿರುವ ಬಗ್ಗೆ ಹೈಕೋರ್ಟ್​ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ. 300 ಕಾರ್ಯಕರ್ತರು ಹಾಗೂ 50 ಬ್ಯಾಂಡ್ ವಾದಕರಿಗೆ ಮಾತ್ರ ಅವಕಾಶ ಇರಲಿದ್ದು, ಪಥಸಂಚಲನದಲ್ಲಿ ಒಟ್ಟು 350 ಜನರು ಮಾತ್ರ ಭಾಗಿಯಾಗಬೇಕು‌. ನ.16ರ ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಅವಕಾಶ ನೀಡಲಾಗಿದೆ.

ಪಥಸಂಚಲನಕ್ಕೆ ಅನುಮತಿ ಕೋರಿ ಆರೆಸ್ಸೆಸ್ ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ಸೇರಿದಂತೆ ವಿವಿಧ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠ ಕಳೆದ ನವೆಂಬರ್ 7ರಂದು ಕೈಗೊಂಡು, ಪ್ರತ್ಯೇಕ ದಿನಾಂಕ ನಿಗದಿಪಡಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಪ್ರತ್ಯೇಕ ದಿನಾಂಕ ನಿಗದಿಯಾಗದಿದ್ದರೆ ನ್ಯಾಯಾಲಯವೇ ತೀರ್ಮಾನಿಸಲಿದೆ ಎಂದು ಪೀಠ ತಿಳಿಸಿತ್ತು.

ಹೈಕೋರ್ಟ್ ಆದೇಶದಂತೆ ಮೊದಲು ಕಲಬುರಗಿಯಲ್ಲಿ ಶಾಂತಿ ಸಭೆ ನಡೆದಿತ್ತು. ಆದರೆ, ಯಾವುದೇ ಒಮ್ಮತ ಮೂಡದೆ ಅದು ಅಶಾಂತಿಯಲ್ಲಿ ಅಂತ್ಯವಾಗಿತು. ನಂತರ ಹೈಕೋರ್ಟ್ ಸೂಚನೆಯಂತೆ ಎಜೆ ಶಶಿಕಿರಣ್ ಶೆಟ್ಟಿ ಅವರ ಬೆಂಗಳೂರಿನ ಕಚೇರಿಯಲ್ಲಿ 2ನೇ ಶಾಂತಿ ಸಭೆ ನಡೆದಿದ್ದು, ಅದು ಫಲಪ್ರದವಾಗಿದೆ ಎಂದು ಕಳೆದ ವಿಚಾರಣೆಯಲ್ಲಿ ತಿಳಿಸಲಾಗಿತ್ತು.

ಬೆಂಗಳೂರಿನ ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖಂಡರು ನವೆಂಬರ್ 13 ಅಥವಾ 16ರಂದು ಪಥಸಂಚಲನಕ್ಕೆ ಅವಕಾಶ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಹಿನ್ನೆಲೆಯಲ್ಲಿ ಹೈಕೋರ್ಟ್ ಇಂದು ಮಧ್ಯಾಹ್ನ ವಿಚಾರಣೆ ನಡೆಸಿ, ನ.16ರಂದು ಪಥಸಂಚಲನ ನಡೆಸಲು ಅಂತಿಮ ನಿರ್ಧಾರ ಕೈಗೊಂಡಿದೆ.

ಕೋರ್ಟ್ ತೀರ್ಪಿಗೂ ಮುನ್ನವೇ ತಹಸೀಲ್ದಾರ್‌ ಅನುಮತಿ

ಕೋರ್ಟ್ ತೀರ್ಪಿಗೂ ಮುನ್ನವೇ ಪಥ ಸಂಚಲನಕ್ಕೆ ಚಿತ್ತಾಪುರ ತಹಸೀಲ್ದಾರ್ ನಾಗಯ್ಯ ಸ್ವಾಮಿ ಅವಕಾಶ ಕೊಟ್ಟಿದ್ದರು. ನವೆಂಬರ್ 12ರಂದು ತಹಸೀಲ್ದಾರ್‌ ಆದೇಶ ಪತ್ರ ಹೊರಡಿಸಿದ್ದರು. ತಹಸೀಲ್ದಾರ್ ನೀಡಿದ್ದ ಷರತ್ತುಬದ್ಧ ಅನುಮತಿ ಪ್ರತಿಯನ್ನು ಇಂದು ನ್ಯಾಯಾಲಯಕ್ಕೆ ಅಡ್ವೋಕೇಟ್ ಜನರಲ್ ಸಲ್ಲಿಸಿದ್ದರು.

ಈ ಮೊದಲು ಅಕ್ಟೋಬರ್ 13ರಂದು ಆರ್‌ಎಸ್ಎಸ್ ಪಥಸಂಚಲನಕ್ಕೆ ಅವಕಾಶ ಕೋರಿ ಆರ್‌ಎಸ್ಎಸ್ ಅರ್ಜಿ ಸಲ್ಲಿಸಿತ್ತು. ಈ ವೇಳೆ ತಹಸೀಲ್ದಾರ್ ಹೆಚ್ಚಿನ ವಿವರಣೆ ಕೇಳಿದ್ದರು. ಇದರಂತೆ ಮತ್ತೆ 19ರಂದು ಆರ್‌ಎಸ್ಎಸ್ ಪಥಸಂಚಲನಕ್ಕೆ ಅರ್ಜಿ ಸಲ್ಲಿಸಿತ್ತು. ಸುದೀರ್ಘ ಒಂದು ತಿಂಗಳ ಬಳಿಕ ತಹಸೀಲ್ದಾರ್ ಆರ್‌ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ : Priyank Kharge: ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಭಗವಾಧ್ವಜಗಳ ತೆರವು

ತಹಸೀಲ್ದಾರ್ ಅನುಮತಿ ಆದೇಶದಲ್ಲಿ 300 ಗಣವೇಷಧಾರಿಗಳು ಹಾಗೂ 25 ಬ್ಯಾಂಡ್ ಸಿಬ್ಬಂದಿ ಮಾತ್ರ ಪಾಲ್ಗೊಳ್ಳಬೇಕು ಎಂದು ಆದೇಶ ನೀಡಿದ್ದರು. ಇದೇ ವಿಚಾರವನ್ನು ಇಂದು ಕಲಬುರಗಿ ಹೈಕೋರ್ಟ್ ಪೀಠ ಹೇಳಿತ್ತು. ಆದರೆ ಅರ್ಜಿದಾರ ಪರ ವಕೀಲ ಅರುಣ್ ಶ್ಯಾಮ್ ಮನವಿ ಹಿನ್ನೆಲೆಯಲ್ಲಿ ಬ್ಯಾಂಡ್ ಸಿಬ್ಬಂದಿ ಸಂಖ್ಯೆಯನ್ನು 50ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಒಟ್ಟು 350 ಮಂದಿ ಚಿತ್ತಾಪುರದ ಆರ್‌ಎಸ್ಎಸ್ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ.