ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mekedatu Project: ಮೇಕೆದಾಟು ಯೋಜನೆ ತಡೆಯಲು ಅಗತ್ಯ ಬಿದ್ದರೆ ಕೋರ್ಟಿಗೆ: ತಮಿಳುನಾಡು

ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಕರ್ನಾಟಕವು 67.16 ಟಿಎಂಸಿ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಕೇಂದ್ರ ಸರಕಾರವನ್ನು ವಿರೋಧಿಸುವ ಒಕ್ಕೂಟ ಸ್ಥಾಪನೆಗಾಗಿ ತಮಿಳು ನಾಡಿಗೆ ಭೇಟಿ ನೀಡಿ ಬಂದಿದ್ದಾರೆ. ಅಲ್ಲಿನ ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಿದ್ದಾರೆ. ಆದರೆ ಮೇಕೆದಾಟು ಯೋಜನೆಗೆ ಆ ರಾಜ್ಯವನ್ನು ಒಲಿಸಲು ಸಾಧ್ಯವಾಗಿಲ್ಲ.

ಮೇಕೆದಾಟು ಯೋಜನೆ ತಡೆಯಲು ಅಗತ್ಯ ಬಿದ್ದರೆ ಕೋರ್ಟಿಗೆ: ತಮಿಳುನಾಡು

ಮೇಕೆದಾಟು

ಹರೀಶ್‌ ಕೇರ ಹರೀಶ್‌ ಕೇರ Mar 25, 2025 9:07 AM

ಚೆನ್ನೈ: ಕರ್ನಾಟಕದ ಮೇಕೆದಾಟು ಅಣೆಕಟ್ಟು (Mekedatu Project) ಯೋಜನೆ ತಡೆಯಲು ಅಗತ್ಯ ಬಿದ್ದರೆ ಕೋರ್ಟಿಗೆ ಹೋಗುವುದಾಗಿ ತಮಿಳು ನಾಡು (Tamil Nadu) ಸರಕಾರ ತಿಳಿಸಿದೆ. ಮೇಕೆದಾಟಿನಲ್ಲಿ ಕಾವೇರಿ ನದಿಗೆ (Cauvery River) ಜಲಾಶಯ ನಿರ್ಮಿಸುವ ಯೋಜನೆಗೆ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಯೋಜನೆಯನ್ನು ತಡೆಯುವುದಕ್ಕಾಗಿ ಕಾನೂನು ಕ್ರಮ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಹೇಳಿದ್ದಾರೆ. ಯೋಜನೆಗೆ ಕರ್ನಾಟಕ ಸರ್ಕಾರ ಅನುಮತಿ ಕೋರಿದ ಬೆನ್ನಲ್ಲೇ ಸಚಿವರ ಈ ಹೇಳಿಕೆ ಹೊರಟಿದೆ. 2025-2026ರ ನೀತಿ ಟಿಪ್ಪಣಿಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಿ ಮುರುಗನ್ ಈ ಮಾತು ಹೇಳಿದ್ದಾರೆ.

ಮೇಕೆದಾಟು ಯೋಜನೆ ಸಂಬಂಧ ಕರ್ನಾಟಕವು ಇನ್ನೂ ಅಂತಿಮ ಡಿಪಿಆರ್ ಸಲ್ಲಿಸಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಕರ್ನಾಟಕವು 67.16 ಟಿಎಂಸಿ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ಆದರೆ, ನದಿಪಾತ್ರದ ಕೆಳಗಿನ ರಾಜ್ಯವಾದ ತಮಿಳುನಾಡಿನ ಅನುಮತಿಯಿಲ್ಲದೆ ಕರ್ನಾಟಕವು ಯೋಜನೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ. ಈ ಯೋಜನೆಯು ಕರ್ನಾಟಕದಿಂದ ನದಿ ನೀರಿನ ನೈಸರ್ಗಿಕ ಹರಿವಿಗೆ ತಡೆಯೊಡ್ಡಲಿದೆ ಎಂಬುದು ತಮಿಳುನಾಡಿನ ವಾದವಾಗಿದೆ.

ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶ ಮತ್ತು ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲಂಘಿಸಿ ಕರ್ನಾಟಕವು ಮೇಕೆದಾಟು ಅಥವಾ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸುವುದನ್ನು ತಡೆಯಲು ತಮಿಳುನಾಡು ಸರ್ಕಾರವು ಕಾನೂನು ಕ್ರಮ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ದೊರೈ ಮುರುಗನ್ ಹೇಳಿದ್ದಾರೆ.

ಮೇಕೆದಾಟು ಯೋಜನೆಗೆ ಆದ್ಯತೆಯ ಮೇರೆಗೆ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಳೆದ ತಿಂಗಳು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸಚಿವರು ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಕೇಂದ್ರ ಸರಕಾರವನ್ನು ವಿರೋಧಿಸುವ ಒಕ್ಕೂಟ ಸ್ಥಾಪನೆಗಾಗಿ ತಮಿಳು ನಾಡಿಗೆ ಭೇಟಿ ನೀಡಿ ಬಂದಿದ್ದಾರೆ. ಅಲ್ಲಿನ ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಿದ್ದಾರೆ. ಆದರೆ ಮೇಕೆದಾಟು ಯೋಜನೆಗೆ ಆ ರಾಜ್ಯವನ್ನು ಒಲಿಸಲು ಸಾಧ್ಯವಾಗಿಲ್ಲ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಕೊಳಚೆ ನೀರು ಮತ್ತು ಕೈಗಾರಿಕಾ ತ್ಯಾಜ್ಯ ನೀರನ್ನು ಕರ್ನಾಟಕವು ಕಾವೇರಿ ಮತ್ತು ಪೆನ್ನೈಯಾರ್ ನದಿಗಳಿಗೆ ಬಿಡುತ್ತಿರುವ ಬಗ್ಗೆ ಮಾತನಾಡಿದ ದೊರೈ ಮುರುಗನ್, ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು ಅಂತಾರಾಜ್ಯ ಗಡಿ ಬಳಿಯ ಕಾವೇರಿ ಮತ್ತು ಪೆನ್ನೈಯಾರ್ ನದಿಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸುತ್ತಿದೆ. ಮಾದರಿಗಳ ಗುಣಮಟ್ಟವನ್ನು ಪರೀಕ್ಷಿಸುತ್ತಿದೆ. ಕೇಂದ್ರ ಜಲ ಆಯೋಗ ಕೂಡ ಬಿಳಿಗುಂಡ್ಲುವಿನಲ್ಲಿ ಕಾವೇರಿ ನದಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಅದರ ಗುಣಮಟ್ಟವನ್ನು ಪರಿಶೀಲನೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೈ ಹೈಕಮಾಂಡ್‌ ಗರಂ, ಹೈಕೋರ್ಟ್‌ ಚಾಟಿ: ಮೇಕೆದಾಟು ಪಾದಯಾತ್ರೆಗೆ ಫುಲ್‌ ಸ್ಟಾಪ್‌