Ramalinga Reddy: ಸಿಟಿ ಸಾರಿಗೆ ಖಾಸಗಿಯವರಿಗೆ ಕೊಡಿ ಎಂದ ಮೋಹನದಾಸ್ ಪೈ; ನಿಮ್ಮ ಜೊತೆ ಚರ್ಚೆಗೆ ನಮ್ಮ ಎಂಡಿ ಸಾಕು ಎಂದ ಸಚಿವ ರೆಡ್ಡಿ
ಅಶ್ವಿನ್ ಮಹೇಶ್ ಎಂಬವರು ಟ್ವೀಟ್ ಮಾಡಿದ್ದ ಪೋಸ್ಟ್ ಉಲ್ಲೇಖಿಸಿ ಮೋಹನ್ ದಾಸ್ ಅವರು ಎಕ್ಸ್ನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಗ್ಗೆ ಮತ್ತು ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾರಿಗೆ ಸಚಿವರು ಟಾಂಗ್ ಕೊಟ್ಟಿದ್ದಾರೆ. ಯಾವುದೇ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿ ಚರ್ಚೆಗೆ ಸಿದ್ದ. ನಿಮ್ಮ ಜೊತೆಗೆ ಚರ್ಚೆ ಮಾಡಲು ನಮ್ಮ ಬಿಎಂಟಿಸಿ ಎಂಡಿ ಸಾಕು ಎಂದಿದ್ದಾರೆ.
ರಾಮಲಿಂಗಾ ರೆಡ್ಡಿ, ಮೋಹನದಾಸ್ ಪೈ -
ಬೆಂಗಳೂರು, ಜ.30: ರಸ್ತೆ ಗುಂಡಿ (potholes) ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ್ದ ಉದ್ಯಮಿ ಮೋಹನ್ದಾಸ್ ಪೈ (Mohandas Pai) ಈಗ ರಾಜ್ಯದಲ್ಲಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಟೀಕಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವರು, ʻಟ್ವೀಟ್ ಮಾಡುವುದನ್ನು ಬಿಟ್ಟು ನೇರವಾಗಿ ನಮ್ಮ ಬಿಎಂಟಿಸಿ ಎಂಡಿ ಜೊತೆ ಮುಖಾಮುಖಿ ಚರ್ಚೆಗೆ ಬನ್ನಿʼ ಎಂದು ಪೈ ಅವರಿಗೆ ಸವಾಲ್ ಹಾಕಿದ್ದಾರೆ.
ಅಶ್ವಿನ್ ಮಹೇಶ್ ಎಂಬವರು ಟ್ವೀಟ್ ಮಾಡಿದ್ದ ಪೋಸ್ಟ್ ಉಲ್ಲೇಖಿಸಿ ಮೋಹನ್ ದಾಸ್ ಅವರು ಎಕ್ಸ್ನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಗ್ಗೆ ಮತ್ತು ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾರಿಗೆ ಸಚಿವರು ಟಾಂಗ್ ಕೊಟ್ಟಿದ್ದಾರೆ.
For Minister @RLR_BTM All we have got is shortage of buses and lack of public transport for last 3 years. (Earlier too) Please allow private buses to provide service. As Minister you have thoroughly failed to ensure adequate public transport because of your dogmatic attitude… https://t.co/Is2FC17Z8p
— Mohandas Pai (@TVMohandasPai) January 29, 2026
ʼರಾಮಲಿಂಗರೆಡ್ಡಿಯವರೇ ಸಾರಿಗೆ ಸಚಿವರಾಗಿ ನಿಮ್ಮ ಸಿದ್ಧಾಂತ ಮತ್ತು ನಡೆಯಿಂದ ರಾಜ್ಯಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ನೀಡುವಲ್ಲಿ ನೀವು ವಿಫಲರಾಗಿದ್ದೀರಿ. ಸಾರ್ವಜನಿಕ ಸಾರಿಗೆಯ ಕೊರತೆಯಿಂದ ಜನತೆ ಪರದಾಡುತ್ತಿದ್ದಾರೆ. ದಯವಿಟ್ಟು ಖಾಸಗಿ ವಲಯಕ್ಕೆ ಅವಕಾಶ ನೀಡಿ. ಕಳೆದ ಕೆಲವು ವರ್ಷದಿಂದ ಬಸ್ಗಳ ವ್ಯವಸ್ಥೆ ಸರಿಯಿಲ್ಲ. ಬಸ್ ಓಡಾಟ ಕಡಿಮೆಯಾಗಿದೆ. ಕೇವಲ ಸರ್ಕಾರಿ ಸಂಸ್ಥೆಗಳೇ ಕೆಲಸ ಮಾಡಬೇಕು ಎಂಬ ನಿಮ್ಮ ಹಠಮಾರಿತನ ಏಕೆ? ಜನರಿಗೆ ಸಾರ್ವಜನಿಕ ಸಾರಿಗೆ ಬೇಕು, ಅದನ್ನು ಯಾರು ಒದಗಿಸುತ್ತಾರೆ?ʼ ಎಂದು ಉದ್ಯಮಿ ಮೋಹನ್ ದಾಸ್ ಪೈ ಅವರು ಪೋಸ್ಟ್ ಮಾಡಿದ್ದರು.
ʼಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಯಾವುದೇ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿ ಚರ್ಚೆಗೆ ಸಿದ್ದ. ನಿಮ್ಮ ಜೊತೆಗೆ ಚರ್ಚೆ ಮಾಡಲು ನಮ್ಮ ಬಿಎಂಟಿಸಿ ಎಂಡಿ ಸಾಕು. ದಯಮಾಡಿ ಬಂದು ವಾಸ್ತವಾಂಶಗಳನ್ನು ನೇರವಾಗಿ ಅವರೊಂದಿಗೆ ಚರ್ಚಿಸಿ. ನೀವು ಚರ್ಚೆಗೆ ಬರುತ್ತೀರಾ? ಇಲ್ಲ ಟ್ವೀಟ್ ಮಾಡುತ್ತಲೇ ಇರುತ್ತೀರಾ?ʼ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.
Mr. @TVMohandasPai, Our BMTC MD is enough to handle a face-to-face debate with you on any platform.
— Ramalinga Reddy (@RLR_BTM) January 29, 2026
Kindly come and discuss the facts with them directly. Are you ready to step up, or will you just keep tweeting?
Your view is not just biased—it is fundamentally dogmatic.
You… https://t.co/F2nR7Tk1yN
ʼನಿಮ್ಮ ದೃಷ್ಟಿಕೋನವು ಕೇವಲ ಪಕ್ಷಪಾತವಲ್ಲ. ಇದು ಮೂಲಭೂತವಾಗಿ ಸಿದ್ಧಾಂತವಾಗಿದೆ. ನೀವು ಸಾರ್ವಜನಿಕ ಸೇವೆಯನ್ನು ಬ್ಯಾಲೆನ್ಸ್ ಶೀಟ್ ಆಧಾರದಲ್ಲಿ ನೋಡುತ್ತೀರಿ. ನಾವು ಸಾರ್ವಜನಿಕ ಸಾರಿಗೆ ಸೇವೆಯಾಗಿ ನೋಡುತ್ತೇವೆ. ಶಕ್ತಿ ಯೋಜನೆ ಮೂಲಕ ಕ್ರಾಂತಿ ಮಾಡಿದ್ದೇವೆʼ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ. ನಾವು ಮಹಿಳೆಯರಿಗೆ 650 ಕೋಟಿ ಉಚಿತ ಬಸ್ ಟಿಕೆಟ್ ನೀಡಿದ್ದೇವೆ. ಶಕ್ತಿ ಯೋಜನೆ ಕೇವಲ ʼಯೋಜನೆʼ ಅಲ್ಲ. ಇದು ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಆರ್ಥಿಕ ಸಬಲೀಕರಣ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಬದಲು ನೀವು ನೇರ ಚರ್ಚೆಗೆ ಬನ್ನಿ ಎಂದು ಸವಾಲು ಎಸೆದಿದ್ದಾರೆ.
ಶೇ. 30ರಷ್ಟು ಮಾರ್ಗಗಳು ನಷ್ಟದಲ್ಲಿದ್ದರೂ, ಹಳ್ಳಿಯ ಸಾಮಾನ್ಯ ಮನುಷ್ಯ ಮತ್ತು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಸುಲಭವಾಗಿ ಸಿಗಲಿ ಎನ್ನುವುದು ನಮ್ಮ ಆಶಯ ಸಿಗಲಿ ಎಂಬ ಕಾರಣಕ್ಕೆ ನಾವು ಅವುಗಳನ್ನು ನಡೆಸುತ್ತಿದ್ದೇವೆ. ಶೇ. 30ರಷ್ಟು ಮಾರ್ಗಗಳು ಲಾಭವೂ ಇಲ್ಲದ, ನಷ್ಟವೂ ಇಲ್ಲದ ಸ್ಥಿತಿಯಲ್ಲಿವೆ. ದೂರ ಪ್ರಯಾಣಿಸುವ ಬಸ್ಗಳಿಂದಾಗಿ ಶೇ. 40ರಷ್ಟು ಲಾಭ ಸಿಗಲಿದೆ. ರಾಜ್ಯದ ಶೇ. 98ರಷ್ಟು ಹಳ್ಳಿಗಳಿಗೆ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಸಮಾಜಕ್ಕೆ ಸೇವೆ ಸಲ್ಲಿಸುವುದು ಹೀಗೆಯೇ ಹೊರತು, ಕೇವಲ ಬೋರ್ಡ್ ಆಫ್ ಡೈರೆಕ್ಟರ್ಗಳ ಲಾಭಕ್ಕಲ್ಲ.
ಕರ್ನಾಟಕವು ಒಟ್ಟು 26,054 ಬಸ್ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಮಾತ್ರವೇ ನಾವು ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದೇವೆ. 7,108 ಬಸ್ಗಳ ಪೈಕಿ 1,686 ಎಲೆಕ್ಟ್ರಿಕ್ ಬಸ್ಗಳಿದ್ದು, ದಿನಕ್ಕೆ 13 ಲಕ್ಷ ಕಿ.ಮೀ ಸಂಚರಿಸುತ್ತಾ 66,000 ಟ್ರಿಪ್ಗಳನ್ನು ಪೂರೈಸುತ್ತಿದ್ದೇವೆ. ಇದು ಇಡೀ ಭಾರತದಲ್ಲೇ ಅತಿ ಹೆಚ್ಚು.
ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ ಸೇರಿದಂತೆ, ಬಿಜೆಪಿಯ ಯಾವುದಾದರೂ ಒಂದು ರಾಜ್ಯ ಅಥವಾ ನಗರ ಈ ಮಟ್ಟದ ಸಾರಿಗೆ ವ್ಯಾಪ್ತಿ ಮತ್ತು ದಕ್ಷತೆಯನ್ನು ಹೊಂದಿದ್ದರೆ ತೋರಿಸಿ. ಕಳೆದ ಕೇವಲ 2 ವರ್ಷಗಳಲ್ಲಿ ನಾವು 5,800ಕ್ಕೂ ಹೆಚ್ಚು ಹೊಸ ಬಸ್ಗಳನ್ನು ಸೇರಿಸಿದ್ದೇವೆ. ಮಾರ್ಚ್ 2026ರ ವೇಳೆಗೆ ಇನ್ನೂ 2,000 ಬಸ್ಗಳು ರಸ್ತೆಗಿಳಿಯಲಿವೆ.
2019 ರಿಂದ 2023ರವರೆಗಿನ ಬಿಜೆಪಿ ಆಡಳಿತದಲ್ಲಿ ಹೊಸ ಬಸ್ಗಳ ಸೇರ್ಪಡೆ ಸ್ಥಗಿತಗೊಂಡಿದ್ದಾಗ ಮತ್ತು ನಿಗಮಗಳು ಸೊರಗುತ್ತಿದ್ದಾಗ ನೀವು ಒಂದೇ ಒಂದು ಪ್ರಶ್ನೆ ಮಾಡಿಲ್ಲ ಏಕೆ. ಜನಪರ ಸರ್ಕಾರವು ಉತ್ತಮ ಕೆಲಸ ಮಾಡುತ್ತಿರುವಾಗ ಮಾತ್ರ ನಿಮ್ಮ ಈ 'ಕಾರ್ಪೊರೇಟ್ ಕಾಳಜಿ' ಎಚ್ಚರಗೊಳ್ಳುವುದು ಏಕೆ? ಎಂದು ಬಹಿರಂಗವಾಗಿ ಪ್ರಶ್ನೆ ಮಾಡಿದ್ದಾರೆ.