ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KSMCL: ಸರ್ಕಾರಕ್ಕೆ 1402 ಕೋಟಿ ರೂ. ಚೆಕ್ ಹಸ್ತಾಂತರಿಸಿದ ಕರ್ನಾಟಕ ಮಿನರಲ್ಸ್ ಕಾರ್ಪೋರೇಷನ್

KSMCL: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ 2023-24ನೇ ಸಾಲಿನ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ 15 ಕೋಟಿ ರೂ., 191.43 ಕೋಟಿ ರೂ. ಲಾಭಾಂಶ ಹಾಗೂ 1195.63 ಕೋಟಿ ರೂ. ವಿಶೇಷ ಲಾಭಾಂಶದ ಚೆಕ್‌ ಅನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಲಾಗಿದೆ.

KSMCLನಿಂದ ಸರ್ಕಾರಕ್ಕೆ 1402 ಕೋಟಿ ರೂ. ಚೆಕ್ ಹಸ್ತಾಂತರ

Profile Prabhakara R Mar 14, 2025 4:11 PM

ಬೆಂಗಳೂರು: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ (KSMCL) ವತಿಯಿಂದ ಸಿಎಂ ಸಿದ್ದರಾಮಯ್ಯ ಅವರ ಮೂಲಕ 1402 ಕೋಟಿ ರೂ.ಗಳ ಚೆಕ್ ಅನ್ನು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಹಸ್ತಾಂತರಿಸಲಾಯಿತು. ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಅಧ್ಯಕ್ಷ, ರೋಣ ಶಾಸಕ ಜಿ.ಎಸ್.ಪಾಟೀಲ್ ಅವರು 2023-24ನೇ ಸಾಲಿನ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ 15 ಕೋಟಿ ರೂ., 191.43 ಕೋಟಿ ರೂ. ಲಾಭಾಂಶ ಹಾಗೂ 1195.63 ಕೋಟಿ ರೂ. ವಿಶೇಷ ಲಾಭಾಂಶದ ಚೆಕ್‌ ಅನ್ನು ನೀಡಿದರು.

ಈ ಬಗ್ಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿ. ಅಧ್ಯಕ್ಷ ಜಿ.ಎಸ್. ಪಾಟೀಲ್ ಪ್ರತಿಕ್ರಿಯಿಸಿ, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ (ಈ ಹಿಂದೆ ಮೈಸೂರು ಮಿನರಲ್ಸ್ ಸಂಸ್ಥೆ) ಗಣಿಗಾರಿಕೆಯಲ್ಲಿ ತೊಡಗಿರುವ ಕರ್ನಾಟಕ ಸರ್ಕಾರದ ಸಂಪೂರ್ಣ ಮಾಲೀಕತ್ವದ ಒಂದು ಉನ್ನತ ಸಾರ್ವಜನಿಕ ಉದ್ದಿಮೆಯಾಗಿದ್ದು, ಸಂಸ್ಥೆಯು 2023-24ನೇ ಸಾಲಿನಲ್ಲಿ 1403.58 ಕೋಟಿ ರೂ. ವಹಿವಾಟು ನಡೆಸಿ 867.33 ಕೋಟಿ ರೂ. ತೆರಿಗೆ ಪೂರ್ವ ಲಾಭ ಹಾಗೂ 643.20 ಕೋಟಿ ರೂ. ತೆರಿಗೆ ನಂತರದ ಲಾಭ ಗಳಿಸಿದೆ.

ಮಾರ್ಚ್‌ 5 ರಂದು ನಡೆದ 354ನೇ ಮಂಡಳಿ ಸಭೆಯಲ್ಲಿ ಕಂಪನಿಯು 2023-24ನೇ ಸಾಲಿನಲ್ಲಿ ಗಳಿಸಿರುವ ನಿವ್ವಳ ಲಾಭದ (Net profit) ಮೇಲೆ ಷೇರುದಾರರಿಗೆ ಅಂದರೆ ಸರ್ಕಾರಕ್ಕೆ 191.43 ಕೋಟಿ ರೂ.ಗಳನ್ನು ಶೇ. 30 ಲಾಭಾಂಶವಾಗಿ ನೀಡಲು ಮಂಡಳಿ ನಿರ್ದೇಶಕರು ಒಪ್ಪಿಗೆ ನೀಡಿದ್ದು, ಇದು 58ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿದೆ ಎಂದು ತಿಳಿಸಿದ್ದಾರೆ.

ಆರ್ಥಿಕ ಇಲಾಖೆಯ 2024ರ ಜುಲೈ 15ರ ಆದೇಶ ಸಂಖ್ಯೆ.ಆಇ 51 ಐಎನ್ವಿ 2024 ರನ್ವಯ ಶೇ. 30 ವಿಶೇಷ ಲಾಭಾಂಶ 1195.63 ಕೋಟಿ ರೂ.ಗಳನ್ನು 2024ರ ಮಾರ್ಚ್‌ 31 ಬ್ಯಾಲೆನ್ಸ್ ಶೀಟ್ ಪ್ರಕಾರ ನಗದು ಮತ್ತು ನಗದು ಸಮಾನದ ಮೊತ್ತದ ಮೇಲೆ ವಿಶೇಷ ಲಾಭಾಂಶವಾಗಿ ನೀಡಲು ಮಂಡಳಿ ನಿರ್ದೇಶಕರು ಒಪ್ಪಿಗೆ ನೀಡಿದ್ದು, ಮಾರ್ಚ್ 5ರಂದು ನಡೆದ 58ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿದೆ.

ಪ್ರತಿ ವರ್ಷ ಈ ನಿಗಮದಿಂದ 15 ಕೋಟಿಗಳನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಆಯವ್ಯಯದಲ್ಲಿ ನಿಗದಿಪಡಿಸಲಾಗುತ್ತಿದ್ದು, 2023-24ನೇ ಸಾಲಿಗೆ 15.00 ಕೋಟಿಗಳನ್ನು ನಿಗದಿಪಡಿಸಿದ್ದು, 15.00 ಕೋಟಿಗಳನ್ನು ಈ ದಿನ ಮಾನ್ಯ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Pralhad Joshi: ಕೆಂಪು ಮೆಣಸಿನಕಾಯಿಗೆ ಬೆಂಬಲ ಬೆಲೆ; ಕರ್ನಾಟಕಕ್ಕೂ ವಿಸ್ತರಿಸಲು ಸಚಿವ ಪ್ರಲ್ಹಾದ್‌ ಜೋಶಿ ಒತ್ತಾಯ

1402 ಕೋಟಿ ರೂ.ಗಳ ಚೆಕ್ ಅನ್ನು ಸಿಎಂ ಸಿದ್ದರಾಮಯ್ಯಗೆ ಹಸ್ತಾಂತರಿಸುವ ವೇಳೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಮಣ್ ದೀಪ್ ಚೌಧರಿ ಹಾಗೂ ಕೆ.ಎಸ್.ಎಮ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬಿಳಗಿ ಹಾಗೂ ನಿಗಮದ ಅಧಿಕಾರಿಗಳು ಹಾಜರಿದ್ದರು.