Narada Sanchara: ಎಲ್ಲಾ ಇದ್ದೂ ಏನೂ ಆಗ್ಲಿಲ್ಲ..!
ಪಕ್ಷದ ಅಧಿನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಈ ಸಭೆಯ ನೇತೃತ್ವ ವಹಿಸಿ ಚೆನ್ನಾಗಿಯೇ ನಡೆಸಿದರಂತೆ; ಇದಕ್ಕೂ ಮೊದಲು ಅವರು ರೋಡ್ಷೋನಲ್ಲಿ ಉತ್ಸಾಹ ಭರಿತರಾಗಿ ಪಾಲ್ಗೊಂಡು ಬರೋಬ್ಬರಿ 19 ಕಿಲೋಮೀಟರ್ನಷ್ಟು ನಡೆದುಕೊಂಡು ಬಂದರಂತೆ ಹಾಗೂ ಅದರ ನಡುವೆಯೇ ಬಹಳ ವರ್ಷಗಳ ನಂತರ ತಮ್ಮ ಸೋದರ ಎಂ.ಕೆ.ಅಳಗಿರಿಯವರ ನೆಲೆಗೂ ಒಂದು ‘ಫ್ಲೈಯಿಂಗ್ ವಿಸಿಟ್’ ಕೊಟ್ಟರಂತೆ.


ನಾರದ ಸಂಚಾರ
naadigru@gmail.com
ಇದು ತಮಿಳುನಾಡಿನ ಮಧುರೈನಿಂದ ಹಾರಿ ಬಂದಿರುವ ಸುದ್ದಿ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಭಾರಿ ಸಮಾವೇಶ ವೊಂದನ್ನು ಅಲ್ಲಿ ಆಯೋಜಿಸಲಾಗಿತ್ತಂತೆ. ಇಂಥ ಘಟಾನುಘಟಿಗಳು ಒಂದೆಡೆ ಜಮಾವಣೆ ಯಾಗುತ್ತಾರೆ ಎಂದರೆ ಅದು ಪಕ್ಕಾ ‘ರಾಜಕೀಯ ಸಭೆ’ ಆಗಬೇಕಲ್ಲವೇ? ಆದರೆ ಹಾಗಾಗುವುದಕ್ಕೆ ಬದಲು ಅದು ಕಾಲುಭಾಗ ರಾಜಕೀಯ ಸಭೆ, ಮುಕ್ಕಾಲುಭಾಗ ‘ಆಹಾರೋತ್ಸವ’ವಾಗಿ ಬದಲಾಗಿ ಬಿಟ್ಟಿತಂತೆ!
ಪಕ್ಷದ ಅಧಿನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಈ ಸಭೆಯ ನೇತೃತ್ವ ವಹಿಸಿ ಚೆನ್ನಾಗಿಯೇ ನಡೆಸಿದರಂತೆ; ಇದಕ್ಕೂ ಮೊದಲು ಅವರು ರೋಡ್ಷೋನಲ್ಲಿ ಉತ್ಸಾಹ ಭರಿತರಾಗಿ ಪಾಲ್ಗೊಂಡು ಬರೋಬ್ಬರಿ 19 ಕಿಲೋಮೀಟರ್ನಷ್ಟು ನಡೆದುಕೊಂಡು ಬಂದರಂತೆ ಹಾಗೂ ಅದರ ನಡುವೆಯೇ ಬಹಳ ವರ್ಷಗಳ ನಂತರ ತಮ್ಮ ಸೋದರ ಎಂ.ಕೆ.ಅಳಗಿರಿಯವರ ನೆಲೆಗೂ ಒಂದು ‘ಫ್ಲೈಯಿಂಗ್ ವಿಸಿಟ್’ ಕೊಟ್ಟರಂತೆ. ಅವರು ಇಷ್ಟೆಲ್ಲಾ ಕಸರತ್ತುಗಳನ್ನು ಮಾಡಿ ಕೊಂಡು ಬರುವಷ್ಟರಲ್ಲಿ, ಸಮಾವೇಶದ ತಾಣದಲ್ಲಿ ಜಮೆಯಾಗಿದ್ದ ಪಕ್ಷದ ಎಲ್ಲ ಸ್ತರದ ಸದಸ್ಯರಿಗೆ ಪುಷ್ಕಳವಾಗಿ ಊಟೋಪಚಾರವನ್ನು ನೀಡಲಾಯಿತಂತೆ; ಬಿರಿಯಾನಿ, ಮಟನ್, ಮೀನು, ಸೀಗಡಿ ಮೀನು ಹೀಗೆ ಬಗೆಬಗೆಯಾದ ಭಕ್ಷ್ಯ-ಭೋಜ್ಯಗಳು ಈ ಔತಣದಲ್ಲಿ ಸೇರಿದ್ದವಂತೆ.
ಇದನ್ನೂ ಓದಿ: Yagati Raghu Naadig : ನೋಡಿಲ್ಲಿ ಕೊಂಚ..ಇದೇ ನೋಡು ಪ್ರವಾಸಿ ಪ್ರಪಂಚ
ತಮಾಷೆಯೆಂದರೆ, ಒಂದೆಡೆ ಊಟವು ಹೀಗೆ ‘ರುಚಿಕಟ್ಟು’ ಆಗಿದ್ದರೆ, ಮತ್ತೊಂದೆಡೆ ಸಭೆಯ ರಾಜಕೀಯ ನಡಾವಳಿಗಳಲ್ಲಿ ರುಚಿ ‘ಕಟ್’ ಆಗಿತ್ತಂತೆ. ಹೀಗಾಗಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವರಿಗೆ ರಾಜಕೀಯವಾಗಿ ಅದು ‘ಸಪ್ಪೆ ಸಪ್ಪೆ’ ಎನಿಸಿತಂತೆ.
ರಾಜಕೀಯ ಪಂಡಿತರು ಹೇಳುವ ಪ್ರಕಾರ, ಈ ಸಮಾವೇಶದಲ್ಲಿ ಸಿಎಂ ಸ್ಟಾಲಿನ್ರ ಪುತ್ರ ಹಾಗೂ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರನ್ನು ಮುಂಚೂಣಿಗೆ ತರುವ ಮಾತುಗಳು ಹೊಮ್ಮುತ್ತವೆ ಹಾಗೂ ಸಂಘಟನೆಯ ರಚನಾ ಸ್ವರೂಪದಲ್ಲಿ ಒಂದಷ್ಟು ಬದಲಾವಣೆಗಳಾಗಲಿವೆ ಎಂದೇ ಬಹುತೇಕರು ನಿರೀಕ್ಷಿಸಿದ್ದರಂತೆ. ಆದರೆ ಅಂಥದ್ದೇನೂ ಆಗದೆ ಕೆಲ ‘ರಾಜಕೀಯಾಸಕ್ತರು’ ನಿರಾಶರಾಗಬೇಕಾಗಿ ಬಂತಂತೆ. ‘ಹೋಗಲಿ ಬಿಡಿ, ಕಡೇ ಪಕ್ಷ ಬಾಯಿ ಚಪ್ಪರಿಸುವಂಥ ರಸದೌತಣ ವಾದರೂ ಸಿಕ್ಕಿತಲ್ಲಾ..’ ಎಂದು ಇಂಥವರಲ್ಲಿ ಕೆಲವರು ಉದ್ಗರಿಸಿ ‘ಢರ್’ ಎಂದು ತೇಗಿದರಂತೆ!
ನಾರಾಯಣ ನಾರಾಯಣ!
ಇತ್ತೀಚಿನ ವರ್ಷಗಳಲ್ಲಿ, ಕಲಬೆರಕೆ/ಕಳಪೆ ಆಹಾರದ ಸೇವನೆಯಿಂದಾಗಿ ಐವರಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಅಮರಿಕೊಳ್ಳುತ್ತಿದೆಯಂತೆ. ಮಾತ್ರವಲ್ಲ, ಕಳಪೆ ಆಹಾರದ ಮಾರಾಟದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಸಿಕ್ಕಿದೆಯಂತೆ. ಸರಿಹೋಯ್ತು ಬಿಡಿ! ಅಕ್ಕಪಕ್ಕದವರು ಯಾರಾದ್ರೂ ಜೋರಾಗಿ ಅಬ್ಬರಿಸಿ, “ಯಾಕೋ? ತಿಂದು ಕೊಬ್ಬು ಜಾಸ್ತಿಯಾಯ್ತಾ?" ಅಂತ ಕೇಳಿದ್ರೆ, “ಹೌದು" ಅಂತ ಹೇಳೋಕ್ಕೆ ನಮ್ ಜನಕ್ಕೆ ಒಂದು ಕಾರಣವಾದ್ರೂ ಸಿಕ್ತು ಅಂತ ಸಮಾಧಾನ ಪಟ್ಟುಕೊಳ್ಳೋಣ!!