Elephant Attack: ಶಿವಮೊಗ್ಗದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ, ಚಾಮರಾಜನಗರದಲ್ಲಿ ಮಹಿಳೆಯ ಹೊತ್ತೊಯ್ದ ಹುಲಿ
Elephant Attack : ಭದ್ರಾವತಿ ತಾಲೂಕಿನ ಬಂಡಿಗುಡ್ಡ ಗ್ರಾಮದಲ್ಲಿ ಕಾಡಾನೆ ಏಕಾಏಕಿ ನಡೆಸಿದ ದಾಳಿಗೆ 50 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಜಮೀನಿನಿಂದ ಮನೆಗೆ ತೆರಳುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿಯಿಂದಾಗಿ ಕುಮಾರ್ (50) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ರಾಜ್ಯದಲ್ಲಿ ಕಾಡುಪ್ರಾಣಿ- ಮಾನವ ಮುಖಾಮುಖಿಯಿಂದ ಜೀವಹಾನಿ ಸಂಭವಿಸಿದ ಇನ್ನೊಂದು ಘಟನೆ ನಡೆದಿದೆ. ಶಿವಮೊಗ್ಗ (Shivamogga news) ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ (Elephant Attack) ಮತ್ತೊಂದು ಬಲಿಯಾಗಿದೆ. ಭದ್ರಾವತಿ ತಾಲೂಕಿನ ಬಂಡಿಗುಡ್ಡ ಗ್ರಾಮದಲ್ಲಿ ಕಾಡಾನೆ ಏಕಾಏಕಿ ನಡೆಸಿದ ದಾಳಿಗೆ 50 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಜಮೀನಿನಿಂದ ಮನೆಗೆ ತೆರಳುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿಯಿಂದಾಗಿ ಕುಮಾರ್ (50) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚನ್ನಗಿರಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಹುಲಿ ದಾಳಿಗೆ ಇನ್ನೊಬ್ಬ ಮಹಿಳೆ ಬಲಿ
ಚಾಮರಾಜನಗರ: ಚಾಮರಾಜನಗರದ (Chamarajanagara) ಗುಂಡ್ಲುಪೇಟೆಯ ದೇಶಿಪುರ ಎಂಬ ಕಾಡಂಚಿನ ಗ್ರಾಮದಲ್ಲಿ ಹುಲಿ (Tiger) ಮತ್ತೊಂದು ಜೀವವನ್ನು ಬಲಿ ಪಡೆದಿದೆ. ದನ ಮೇಯಿಸಲು ತೆರಳಿದ್ದ ಮಧ್ಯವಯಸ್ಕ ಪುಟ್ಟಮ್ಮ ಎಂಬಾಕೆ ಹುಲಿ ದಾಳಿಗೆ (Tiger Attack) ಆಹಾರವಾಗಿದ್ದಾರೆ. ಗುರುವಾರ ಸಂಜೆ ದನಕರುಗಳು ಹಾಗೂ ಕುರಿಗಳ ಹಿಂಡನ್ನು ಮೇಯಿಸುತ್ತಿರುವಾಗಲೇ ಹಠಾತ್ ಆಗಿ ಹುಲಿ ದಾಳಿ ಮಾಡಿದೆ. ಪುಟ್ಟಮ್ಮನನ್ನು ಕೊಂದ ಹುಲಿ, ನಂತರ ಸ್ವಲ್ಪ ದೂರ ಎಳೆದೊಯ್ದಿತ್ತು. ಹೊಟ್ಟೆ ಬಗೆದು ತಿನ್ನುತ್ತಿರುವಾಗಲೇ, ಜನ ನೋಡಿ ಬೆಚ್ಚಿದ್ದಿದ್ದಾರೆ. ನಾಲ್ಕೈದು ಮಂದಿ ಬೊಬ್ಬೆ ಹೊಡೆದಿದ್ದಾರೆ. ಆಗ ಹುಲಿ ಪುಟ್ಟಮ್ಮ ಮೃತದೇಹ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದೆ.
ಈ ಘಟನೆ ನಡೆದು ಎರಡ್ಮೂರು ಗಂಟೆ ಕಳೆದರೂ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನ ಯಾವೊಬ್ಬ ಅಧಿಕಾರಿಯೂ ಸ್ಥಳದತ್ತ ಸುಳಿದಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಯಳಂದೂರಿನ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಯ ರಾಮಯ್ಯನಪೋಡು ಬಳಿ 4 ದಿನದ ಹಿಂದೆ ರಂಗಮ್ಮ ಎಂಬ ವೃದ್ಧೆಯನ್ನು ಹುಲಿ ಕೊಂದಿತ್ತು. ಆ ಘಟನೆಯ ಕಹಿ ನೆನೆಪು ಮಾಸುವ ಮುನ್ನವೇ ಈಗ ಪುಟ್ಟಮ್ಮ ಹುಲಿ ದಾಳಿಗೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Viral Video: ಫೋಟೋಗೆ ಪೋಸ್ ಕೊಡುತ್ತಿದ್ದ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿ; ವಿಡಿಯೋ ವೈರಲ್