Bigg Boss 12: ʻನನಗೂ ಪರಚಿದ ಕಲೆಗಳಿವೆ, ಆದ್ರೆ ಸಿಂಪತಿ ತಗೋಳೋ ಹುಚ್ಚು ನನಗಿಲ್ಲʼ; ಅಶ್ವಿನಿ ಗೌಡ ವಿರುದ್ಧ ಕಿಡಿಕಾರಿದ್ರಾ ಚೈತ್ರಾ ಕುಂದಾಪುರ?
ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಹೋಗಿದ್ದ ಚೈತ್ರಾ ಕುಂದಾಪುರ ಮತ್ತು ಸ್ಪರ್ಧಿ ಅಶ್ವಿನಿ ಗೌಡ ನಡುವಿನ ಜಗಳ ಮುಂದುವರಿದಿದೆ. ಟಾಸ್ಕ್ ವೇಳೆ ಅಶ್ವಿನಿ ತಮಗೆ ಗಾಯಗೊಳಿಸಿದ್ದನ್ನು ಹೇಳಿರುವ ಚೈತ್ರಾ, "ಸಿಂಪತಿ ಗಿಟ್ಟಿಸಿಕೊಳ್ಳಲು ನನ್ನ ಬಳಿ ಪಿಆರ್ ಟೀಮ್ ಇಲ್ಲ" ಎಂದು ಅಶ್ವಿನಿ ಗೌಡ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಠಿಣ ಸ್ಪರ್ಧಿ ಎನಿಸಿಕೊಂಡಿದ್ದವರು ಅಶ್ವಿನಿ ಗೌಡ. ಶೋ ಮಧ್ಯದಲ್ಲಿ ಅತಿಥಿಯಾಗಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿಬಂದಿದ್ದರು. ಆಗ ಇಬ್ಬರ ನಡುವೆ ಒಂದಷ್ಟು ಶೀತಲಸಮರ ನಡೆದಿತ್ತು. ಟಾಸ್ಕ್ ವೇಳೆ ಇಬ್ಬರು ಮೈ-ಕೈ ಎಲ್ಲಾ ಪರಚಿಕೊಂಡಿದ್ದೂ ಇದೆ. ಆದರೆ ಈ ಶೀತಲಸಮರ ಬಿಗ್ ಬಾಸ್ ಮನೆಯಿಂದ ಆಚೆ ಬಂದಮೇಲೂ ನಿಲ್ಲುವಂತೆ ಕಾಣುತ್ತಿಲ್ಲ.
ಇನ್ಸ್ಟಾಗ್ರಾಮ್ನಲ್ಲಿ ಕಿಡಿಕಾರಿದ ಚೈತ್ರಾ ಕುಂದಾಪುರ
"ನನ್ನ ತೂಕಕ್ಕಿಂತ ಎರಡು ಪಟ್ಟು ಹೆಚ್ಚು ತೂಕವಿರುವ ವ್ಯಕ್ತಿಯೊಬ್ಬರು ನಾನು ಮುಟ್ಟಿನ ಸಮಯದಲ್ಲಿ ನನ್ನ ಹೊಟ್ಟೆಯ ಮೇಲೆ ಕುಳಿತು ಕುತ್ತಿಗೆ ತಿರುಗಿಸಿದ್ದಾರೆ. ನನ್ನ ದೇಹದ ಮೇಲೂ ಉಗುರುಗಳ ಗುರುತುಗಳಿವೆ.. ಟಿಂಚರ್ ಹಚ್ಚಿದ ನಂತರವೂ ನೋವು ಕಡಿಮೆಯಾಗಲಿಲ್ಲ. ಆದರೆ ಕ್ಷಮಿಸಿ, ಇದನ್ನೆಲ್ಲ ಪ್ರದರ್ಶಿಸಲು ಮತ್ತು ಸಹಾನುಭೂತಿ ಪಡೆಯಲು ನನ್ನ ಬಳಿ ದುಡ್ಡು ನೀಡಿ ಇರಿಸಿಕೊಂಡಿರುವ ಪಿಆರ್ ತಂಡವಿಲ್ಲ" ಎಂದು ಸ್ಟೋರಿ ಹಾಕಿಕೊಂಡಿದ್ದಾರೆ ಚೈತ್ರಾ ಕುಂದಾಪುರ.
ನಾವು ಹೆಮ್ಮೆಯ ಕನ್ನಡ ಮೀಡಿಯಂ ಮಕ್ಕಳು
"ನನಗೂ ಪರಚಿದ ಕಲೆಗಳಿವೆ. ಆದರೆ, ಕ್ಷಮಿಸಿ ನನ್ನ ಬಳಿ ಪಿಆರ್ ಟೀಮ್ ಇಲ್ಲ. ನನಗೂ ನೋವು, ಕಲೆಗಳಿದೆ. ಆದರೆ ನನಗೆ ಆಟವನ್ನು ಆಟವಾಗಿಯೇ ನೋಡುವ ಮನಸ್ಥಿತಿ ಇದೆ. ಅಶ್ವಿನಿ ಗೌಡ ಸಾರಿ, ನಾವು ಹೆಮ್ಮೆಯ ಕನ್ನಡ ಮೀಡಿಯಂ ಮಕ್ಕಳು.. ಇಂಗ್ಲಿಷ್ ಮೀಡಿಯಂ ಅಲ್ಲಿ ಓದಿ, ಕನ್ನಡ ಹೋರಾಟ ರೋಲ್ ಕಾಲ್ ಮಾಡಲ್ಲ. ನಮಗೆ ಕನ್ನಡ ಹೋರಾಟಕ್ಕೆ ಅಲ್ಲಾ. ನಮ್ಮ ಹತ್ರ ಯಾರೂ ಕನ್ನಡದ ವಿಷ್ಯದಲ್ಲಿ ಸ್ಪರ್ಧೆ ಮಾಡೋ ಧೈರ್ಯ ಮಾಡಲ್ಲ.. ಅಶ್ವಿನಿ ಗೌಡ, ನನಗೆ ಪಿಆರ್ ಟೀಮ್ ಮತ್ತು ಸಿಂಪತಿ ತಗೋಳೋ ಹುಚ್ಚು ಇಲ್ಲ" ಎಂದು ಚೈತ್ರಾ ಕುಂದಾಪುರ ಬರೆದುಕೊಂಡಿದ್ದಾರೆ.
ʻಬಿಗ್ ಬಾಸ್ʼ ಅನ್ನೋದು ಒಂದು ರಿಯಾಲಿಟಿ ಶೋ. ಅಲ್ಲಿ ವಾಕ್ಸಮರ, ಜಗಳ, ಒಮ್ಮೊಮ್ಮೆ ಕೈಕೈ ಮಿಲಾಯಿಸುವಂತಹ ಸಂದರ್ಭಗಳು ಬರುತ್ತವೆ. ಆದರೆ ಅದೆಲ್ಲವೂ ಅಲ್ಲಿರುವ ತನಕ ಮಾತ್ರ ಇರುತ್ತದೆ. ಎಷ್ಟೋ ಸ್ಪರ್ಧಿಗಳು ಒಳಗೆ ಕಿತ್ತಾಡಿ, ಹೊರಗೆ ಬಂದಮೇಲೆ ಉತ್ತಮವಾದ ಸ್ನೇಹ ಸಂಬಂಧವನ್ನು ಹೊಂದಿರುವವರನ್ನು ನಾವು ನೋಡಿದ್ದೇವೆ. ಆದರೆ ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ ಅವರ ನಡುವಿನ ಈ ಜಗಳವು ಬಿಗ್ ಬಾಸ್ನಿಂದ ಹೊರಬಂದ ಮೇಲೂ ಮುಂದುವರಿದಿದೆ. ಅಸಲಿಗೆ, ಶೋನಲ್ಲಿ ಇರುವಾಗ ಈ ಘಟನೆಗೆ ಸಂಬಂಧಿಸಿದಂತೆ ಅಶ್ವಿನಿ ಮತ್ತು ಚೈತ್ರಾ ಪರಸ್ಪರ ಕ್ಷಮೆ ಕೇಳಿಕೊಂಡಿದ್ದರು.