Edagaiye Apaghatakke Karana Review: ಎಡಗೈಯೇ ಅಪಘಾತಕ್ಕೆ ಕಾರಣ; ಕುತೂಹಲಕರ ಕಥನ!
Edagaiye Apaghatakke Karana: ವಿಭಿನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದ ಸ್ಯಾಂಡಲ್ವುಡ್ ಚಿತ್ರ ʼಎಡಗೈಯೇ ಅಪಘಾತಕ್ಕೆ ಕಾರಣʼ ತೆರೆಕಂಡಿದೆ. ʼಪಂಚರಂಗಿʼ ಸಿನಿಮಾದ ಬಳಿಕ ದಿಗಂತ್ ಮತ್ತು ನಿಧಿ ಸುಬ್ಬಯ್ಯ ಮತ್ತೆ ಒಂದಾದ ಈ ಚಿತ್ರದಲ್ಲಿ ನಾಯಕಿಯಾಗಿ ಧನು ಹರ್ಷ ಕೂಡ ನಟಿಸಿದ್ದಾರೆ. ಶೀರ್ಷಿಕೆಯಂತೆಯೇ ಭಿನ್ನ ಕಥೆ ಹೊಂದಿರುವ ಈ ಚಿತ್ರ ಹೇಗಿದೆ? ಇಲ್ಲಿದೆ ವಿಮರ್ಶೆ.

ʼಎಡಗೈಯೇ ಅಪಘಾತಕ್ಕೆ ಕಾರಣʼ ಚಿತ್ರದ ಪೋಸ್ಟರ್.

-ಕಾರ್ತಿಕ್ ಹೆಗಡೆ
ಚಿತ್ರ: ʼಎಡಗೈಯೇ ಅಪಘಾತಕ್ಕೆ ಕಾರಣʼ
ತಾರಾಗಣ: ದಿಗಂತ್, ನಿಧಿ ಸುಬ್ಬಯ್ಯ, ಧನು ಹರ್ಷ, ರಾಧಿಕಾ ನಾರಾಯಣ್
ನಿರ್ದೇಶನ: ಸಮರ್ಥ್ ಬಿ. ಕಡಕೋಳ್
ಬೆಂಳೂರು: ಈ ವಾರ ತೆರೆಕಂಡ ಚಿತ್ರ 'ಎಡಗೈಯೇ ಅಪಘಾತಕ್ಕೆ ಕಾರಣ' (Edagaiye Apaghatakke Karana Movie) ತನ್ನ ಶೀರ್ಷಿಕೆ ಮತ್ತು ವಿಭಿನ್ನ ಕಥಾ ವಸ್ತುವಿನೊಂದಿಗೆ ಗಮನ ಸೆಳೆದಿದೆ. ಎಲ್ಲ ಕೆಲಸಕ್ಕೂ ಬಲಗೈ ಬಳಸುವವರೇ ಹೆಚ್ಚಿರುವ ಈ ಪ್ರಪಂಚದಲ್ಲಿ ವಿರಳವಾಗಿರುವ ಎಡಗೈ ಬಳಕೆದಾರರು ಎದುರಿಸುವ ಸಮಸ್ಯೆ ಮತ್ತು ಫಜೀತಿಗಳನ್ನು ಈ ಚಿತ್ರ ಪರಿಣಾಮಕಾರಿಯಾಗಿ ಬಿಂಬಿಸಿದೆ (Edagaiye Apaghatakke Karana Review). ಈ ಚಿತ್ರ ಕಾಮಿಡಿ ಕ್ರೈಮ್ ಥ್ರಿಲ್ಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತದೆ.
ನಟ ದಿಗಂತ್ ಪ್ರಮುಖ ಪಾತ್ರ ನಿಭಾಯಿಸಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಕ್ಕೆ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಹೆಸರೇ ಹೇಳುವಂತೆ, ಎಡಗೈ ಬಳಸುವವರ ಕಷ್ಟಗಳ ಸುತ್ತ ಕಥೆಯಿದೆ. ಸಿನಿಮಾದಲ್ಲಿ ದಿಗಂತ್ ಜತೆ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ನಟಿಸಿದ್ದು, ‘ಪಂಚರಂಗಿ’ ಸಿನಿಮಾ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದೆ.
‘ಲೋಹಿತ್ ರಾಜೇಶ್’ ಅಲಿಯಾಸ್ ಲೊಡ್ಡೆ ಲೋಹಿತ್ ಪಾತ್ರದಲ್ಲಿ ದಿಗಂತ್ ಗಮನ ಸೆಳೆದಿದ್ದಾರೆ. ಧನು ಹರ್ಷ ಮೊದಲ ಸಿನಿಮಾದಲ್ಲೇ ಮಿಂಚಿದ್ದಾರೆ. ಎಡಗೈ ಬಳಸುವವನು ಬಲಗೈ ಬಳಸಲು ಹೋದಾಗ ನಡೆಯುವ ಘಟನಾವಳಿಗಳೇ ಈ ಚಿತ್ರದ ಜೀವಾಳ.
ಈ ಸುದ್ದಿಯನ್ನೂ ಓದಿ: Yuddhakaanda Review: ʼಯುದ್ಧಕಾಂಡʼ ಸಿನಿ ವಿಮರ್ಶೆ: ನ್ಯಾಯವಾದಿಯಾಗಿ ಗೆದ್ದ ಅಜೇಯ್ ರಾವ್
ತಿಳಿ ಹಾಸ್ಯದ ಮೂಲಕ ಸಾಗುವ ಕತೆ ಆಗಾಗ ತಿರುವು ಪಡೆಯುತ್ತ ಕುತೂಹಲ ಮೂಡಿಸುತ್ತದೆ. ದಿಗಂತ್ ಒಂದು ಸುಂದರ ರಾತ್ರಿ ಗೆಳತಿ ನಿಧಿ ಸುಬ್ಬಯ್ಯ ಇರುವ ಫ್ಲ್ಯಾಟ್ಗೆ ಹೋಗುತ್ತಾರೆ. ರಸಮಯ ಆಗಬೇಕಿದ್ದ ಆ ರಾತ್ರಿ ಕರಾಳವಾಗಿ ಬದಲಾಗುತ್ತದೆ. ಹೆಣಗಳು ಬೀಳುತ್ತವೆ. ರಕ್ತ ಹರಿಯುತ್ತವೆ. ಟೆನ್ಶನ್ ಮೇಲೆ ಟೆನ್ಶನ್ ಶುರುವಾಗುತ್ತದೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡುತ್ತದೆ. ದಿಗಂತ್ ಏನೋ ಮಾಡಲು ಹೋದಾಗ ಇನ್ನೇನೋ ಆಗುತ್ತದೆ. ಈ ಬಲೆಯಿಂದ ದಿಗಂತ್ ಹೇಗೆ ಪಾರಾಗುತ್ತಾರೆ? ಪಾರಾಗಲು ಏನು ಮಾಡುತ್ತಾರೆ ಎನ್ನುವುದು ಸಸ್ಪೆನ್ಸ್ ಆಗಿಯೇ ಇರಲಿ!
ದಿಗಂತ್ ಚಿತ್ರದುದ್ದಕ್ಕೂ ಲವಲವಿಕೆಯಿಂದ ನಟಿಸಿದ್ದಾರೆ. ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿಧಿ ಸುಬ್ಬಯ್ಯ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಸಮರ್ಥ್ ಬಿ. ಕಡಕೋಳ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗಿದ್ದಾರೆ. ಒಮ್ಮೆ ನೋಡಬಹುದಾದ ಸಿನಿಮಾ ಇದು.