ʻಕಂಡೋರ ಚಿತೆಯಲ್ಲಿ ಬಿಸಿ ಕಾಯಿಸಿಕೊಳ್ಳುವುದು ಜೀವನ ಅಲ್ಲʼ; ಟ್ರೋಲ್ ಮಾಡಿದವರಿಗೆ ನಟಿ ಗೀತಾ ಭಾರತಿ ಭಟ್ ತಿರುಗೇಟು
ಜೀ ಕನ್ನಡ ವಾಹಿನಿಯ 'ಜೋಡಿ ನಂ. 1' ಶೋನಲ್ಲಿ ಪತಿ ರಾಜಾರಾಮ್ ಭಟ್ ಜೊತೆಗಿನ ಮಾತುಕತೆಯನ್ನು ಜಗಳ ಹಾಗೂ ಟಿಆರ್ಪಿ ಗಿಮಿಕ್ ಎಂದು ಬಿಂಬಿಸಿ ಟ್ರೋಲ್ ಮಾಡಿದವರಿಗೆ ನಟಿ ಗೀತಾ ಭಾರತಿ ಭಟ್ ಇನ್ಸ್ಟಾಗ್ರಾಮ್ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ.
-
ಜೀ ಕನ್ನಡ ವಾಹಿನಿಯ ಜೋಡಿ ನಂ. 1 ಶೋನಲ್ಲಿ ನಟಿ ಗೀತಾ ಭಾರತಿ ಭಟ್ ಮತ್ತು ಅವರ ಪತಿ ರಾಜಾರಾಮ್ ಭಟ್ ಅವರು ಭಾಗಿಯಾಗಿದ್ದಾರೆ. ಈಚೆಗೆ ಒಂದು ಸಂಚಿಕೆಯಲ್ಲಿ ಈ ದಂಪತಿ ವೇದಿಕೆ ಮೇಲೆಯೇ ಸಾಕಷ್ಟು ಮಾತಿನ ಚಕಮಕಿ ನಡೆಸಿತ್ತು. ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆ ಆಯಿತು. ಆ ಬಗ್ಗೆ ಇದೀಗ ಗೀತಾ ಭಾರತಿ ಭಟ್ ಅವರು ಸ್ಪಷ್ಟನೆ ನೀಡಿದ್ದಾರೆ. ಇನ್ಸ್ಸ್ಟಾಗ್ರಾಮ್ನಲ್ಲಿ ಒಂದು ವಿಡಿಯೋ ಹಂಚಿಕೊಂಡಿರುವ ಈ ದಂಪತಿ, ಹಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ.
ನಮ್ಮ ಮಾತನ್ನು ಪ್ಲೀಸ್ ಕೇಳಿಸಿಕೊಳ್ಳಿ
"ಎಲ್ಲರಿಗೂ ನಮಸ್ಕಾರ, ಇಷ್ಟು ದಿನ ನಿಮ್ಮ ಒಪಿನಿಯನ್ಸ್ನ ನಾವು ಕೇಳಿಸಿಕೊಂಡಿದ್ದೀವಿ, ನಾವು ಮಾತಾಡೋದನ್ನು ಪ್ಲೀಸ್ ಕೇಳಿಸಿಕೊಳ್ಳಿ. ನಾವು ಪ್ರೀತಿ ತೋರಿಸಿದಾಗ ಸ್ಕ್ರೋಲ್ ಮಾಡಿದ್ರಿ, ಸ್ನೇಹದ ಬಗ್ಗೆ ಮಾತಾಡಿದಾಗ ಅದನ್ನು ಸ್ಕಿಪ್ ಮಾಡಿದ್ರಿ. ಆದರೆ ಒಂದು ಮುಕ್ತ ಸಂವಹನವನ್ನು ನೀವೇ ಜಗಳ ಅಂತ ಅಂದುಕೊಂಡು, ಅದನ್ನು ಲೈಕ್, ಶೇರ್, ಕಮೆಂಟ್, ಡಿಬೇಟ್, ಡಿಸ್ಕಷನ್ ಮಾಡಿದ್ರಿ. ಅದರ ಬಗ್ಗೆ ವಿಡಿಯೋ ಮಾಡೋದೇನು, ಅದನ್ನು ವೈರಲ್ ಮಾಡೋದೇನು, ರಿಪೋಸ್ಟ್ ಮಾಡೋದೇನು..." ಎಂದು ಪ್ರಶ್ನೆ ಮಾಡಿದ್ದಾರೆ ಗೀತಾ ಭಾರತಿ ಭಟ್.
ದುಡ್ಡಿಗೋಸ್ಕರ ಸ್ಟೇಜ್ ಮೇಲೆ ಜಗಳ ಆಡ್ತಾರಾ?
"ಮನರಂಜನೆಗೋಸ್ಕರ ಅಂತ ಕೊಡುವ ಕಂಟೆಂಟ್ನ ನೀವು ತಿರುಗಿಯೂ ನೋಡೋದಿಲ್ಲ, ಆದರೆ ಈ ರೀತಿ ಏನಾದ್ರೂ ಒಂದು ಚಿಕ್ಕ ಕಾಂಟ್ರವರ್ಸಿ ನಡೆಯುತ್ತಿದೆ ಎಂದರೆ ತಕ್ಷಣ ಎಲ್ಲರೂ ಒಂದೊಂದು ರೀತಿ ವೈರಲ್ ಮಾಡ್ತೀರಲ್ಲಾ? ಟಿಆರ್ಪಿ ಗೋಸ್ಕರ ನಾವಿದನ್ನು ಮಾಡ್ತಾ ಇದ್ದೀವಿ, ದುಡ್ಡಿಗೋಸ್ಕರ ಸ್ಟೇಜ್ ಮೇಲೆ ಜಗಳ ಆಡ್ತಾ ಇದ್ದೀವಿ, ನಾಲ್ಕು ಗೋಡೆ ಮಧ್ಯೆ ಇರಬೇಕಾಗಿರೋ ವಿಚಾರನ ತಗೊಂಡು ಬಂದು ಪಬ್ಲಿಕ್ನಲ್ಲಿ ಡಿಸ್ಕಸ್ ಮಾಡ್ತಾ ಇದ್ದೀವಿ ಅಂತ ಜನರು ನಮಗೆ ಏನೇನೋ ಹೇಳ್ತಾ ಇದ್ದಾರೆ ಗೊತ್ತಾ" ಎಂದಿದ್ದಾರೆ ಗೀತಾ ಭಾರತಿ ಭಟ್.
ಎಲ್ಲರ ಮನೆಗಳಲ್ಲಿ ನಡೆಯುವಂತಹ ವಿಚಾರ
"ಸರಿ ಆಯ್ತು, ಇದು ನಿಮ್ಮ ಅಭಿಪ್ರಾಯ ಆಗಿರಬಹುದು, ಬಟ್ ನಮಗೂ ಒಂದು ಅಭಿಪ್ರಾಯ ಇದೆ ಅಲ್ಲಾ? ನಾಲ್ಕು ಗೋಡೆ ಮಧ್ಯೆ ಇರಬೇಕಾಗಿರೋ ವಿಚಾರನ ನಾವು ನಾಲ್ಕು ಗೋಡೆ ಮಧ್ಯೆನೇ ಇಟ್ಕೊಂಡಿದ್ದೀವಿ. ಚರ್ಚೆ ಮಾಡಬೇಕಾಗಿರೋ ವಿಚಾರವನ್ನ ಚರ್ಚೆ ಮಾಡಿದ್ದೀವಿ. ಎಲ್ಲರ ಮನೆಗಳಲ್ಲಿ ನಡೆಯುವಂತಹ ವಿಚಾರನ ನಾವು ಡಿಸ್ಕಸ್ ಮಾಡಿರೋದು. ಇವತ್ತು ಎಷ್ಟೋ ಹೆಣ್ಮಕ್ಕಳು ಅದನ್ನು ನೋಡಿ ನಮಗೆ ಮೆಸೇಜ್ ಮಾಡಿದ್ದಾರೆ. ಮ್ಯಾಮ್, ಇದರ ಬಗ್ಗೆ ನಾನು ಮಾತಾಡಬೇಕು ಅಂತ ಯಾವತ್ತೂ ಅನ್ಸಿರಲಿಲ್ಲ, ಮನಸ್ಸಲ್ಲೇ ಇಟ್ಕೊಂಡು ಕೊರಗ್ತಾ ಇದ್ದೆ, ಬಟ್ ಈ ಎಪಿಸೋಡ್ ನೋಡಿದ್ಮೇಲೆ ನಮಗೆ ಅನಿಸಿಕೆನ ಶೇರ್ ಮಾಡ್ಕೋಬೇಕು ಅಂತ ಅನಿಸ್ತು ಅಂತ ಹೇಳಿದ್ದಾರೆ" ಎಂದು ಗೀತಾ ತಿಳಿಸಿದ್ದಾರೆ.
"ಅದರಲ್ಲೂ ಈ ಸೋ-ಕಾಲ್ಡ್ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಇದ್ದಾರಲ್ಲ, ಈಗಾಗಲೇ ವೈರಲ್ ಆಗಿರೋ ವಿಡಿಯೋನ ತಗೊಂಡು ಅದರ ಮೇಲೆ ಅವರ ಒಪಿನಿಯನ್ ಹೇಳೋದು, ಅದನ್ನು ಇನ್ನೊಂದು ವಿಡಿಯೋ ಮಾಡಿ ಅದನ್ನು ಹಾಕ್ತಾರೆ. ಚಾನೆಲ್ನವರು ಅದನ್ನು ಡಿಲೀಟ್ ಮಾಡಿಸ್ತಾರೆ, ತಕ್ಷಣ ಇನ್ನೊಂದು ವಿಡಿಯೋ ಮಾಡ್ತಾರೆ. ʻಚಾನೆಲ್ನವರು ನಾನು ನಿಜ ಹೇಳಿದ್ದ ವಿಡಿಯೋನ ಡಿಲೀಟ್ ಮಾಡ್ಸಿದ್ದಾರೆ, ಇವಾಗ ಇನ್ನೊಂದು ವಿಡಿಯೋ ಮಾಡಿದ್ದೀನಿ, ಅದನ್ನು 1 ಮಿಲಿಯನ್ ಒಂದೇ ದಿನದಲ್ಲಿ ರೀಚ್ ಮಾಡಿಸಿʼ ಅಂತ ಹೇಳ್ತಾರೆ" ಎಂದು ನಟಿ ಗೀತಾ ಭಾರತಿ ಭಟ್ ತಿಳಿಸಿದ್ದಾರೆ.
Geetha Bharathi Bhat: ಚುಚ್ಚು ಮಾತುಗಳ ಬಾಣಕ್ಕೆ ಗೀತಾ ಭಾರತಿ ಭಟ್ ಡೋಂಟ್ ಕೇರ್; ನಟಿಗೆ ಪತಿಯೇ ಸಾಥ್
ಸಮಸ್ಯೆ ಇರೋದು ಎಲ್ಲಿ?
"ಇನ್ನೊಬ್ಬರಿಗೆ ಹೇಳೋದಕ್ಕಿಂತ ಮುಂಚೆ ನಾನು ಏನ್ ಮಾಡ್ತಾ ಇದ್ದೀನಿ ಅನ್ನೋದನ್ನು ತಿಳ್ಕೊಬೇಕು. ಕಂಡೋರು ಚಿತೆಯಲ್ಲಿ ಬಿಸಿ ಕಾಯಿಸಿಕೊಳ್ಳೋದಲ್ಲ ಜೀವನ. ಜೀವನ ಏನು? ನಾಲ್ಕು ಜನಕ್ಕೆ ಒಳ್ಳೇದು ಮಾಡಬೇಕು ಆಗಿರಬೇಕು. ನೀವು ಕಂಟೆಂಟ್ ಕೊಡ್ತೀರಾ ಅಂತಂದ್ರೆ ಸೆನ್ಸಿಬಲ್ ಆಗಿರೋ ಕಂಟೆಂಟ್ ಕೊಡಿ. ದಯವಿಟ್ಟು ನೀವೂ ಯೋಚನೆ ಮಾಡಿ, ಸಮಸ್ಯೆ ಇರೋದು ಪ್ರೋಗ್ರಾಮ್ನಲ್ಲ ಅಥವಾ ನೆಗೆಟಿವ್ನ ಮಾತ್ರ ಹುಡುಕಿ ಅದನ್ನು ವೈರಲ್ ಮಾಡೋವಂತಹ ನಿಮ್ಮ ಅಭ್ಯಾಸದಲ್ಲಾ... ದಯವಿಟ್ಟು ಯೋಚಿಸಿ" ಎಂದು ಗೀತಾ ಭಾರತಿ ಭಟ್ ತಿಳಿಸಿದ್ದಾರೆ.