ʻಯಾಕೆ ಅನ್ಫಾಲೋ ಮಾಡಿದೆ ಅಂತ ರಿಷಬ್ನ ನಾನು ಕೇಳಿಲ್ಲʼ; ನಟ ಪ್ರಮೋದ್ ಶೆಟ್ಟಿ ಹೇಳಿದ್ರು ಅಸಲಿ ವಿಷ್ಯ!
ರಿಷಬ್ ಶೆಟ್ಟಿ ಅವರು ಇನ್ಸ್ಟಾಗ್ರಾಮ್ನಲ್ಲಿ ಆಪ್ತ ಗೆಳೆಯರನ್ನೇ ಅನ್ಫಾಲೋ ಮಾಡಿರುವ ಕುರಿತು ನಟ ಪ್ರಮೋದ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಇದು ಕೇವಲ ಸೋಶಿಯಲ್ ಮೀಡಿಯಾ ಏಜೆನ್ಸಿಯ ಸ್ಟ್ರಾಟೆಜಿ ಇರಬಹುದೇ ಹೊರತು, ಸ್ನೇಹದಲ್ಲಿ ಯಾವುದೇ ಬಿರುಕಿಲ್ಲ ಎಂದು ಅವರು ತಿಳಿಸಿದ್ದಾರೆ.
-
ಈಚೆಗೆ ನಟ ರಿಷಬ್ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಎಲ್ಲರನ್ನೂ ಅನ್ಫಾಲೋ ಮಾಡಿ, ಬರೀ ತಮ್ಮ ಫಿಲ್ಮ್ ಬ್ಯಾನರ್, ಪತ್ನಿ ಪ್ರಗತಿ ಮತ್ತು ತಮ್ಮ ಫೌಂಡೇಷನ್ ಅನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಆಪ್ತರಾದ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಅವರನ್ನ ಕೂಡ ರಿಷಬ್ ಅನ್ಫಾಲೋ ಮಾಡಿದ್ದು, ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಆ ಬಗ್ಗೆ ಈಗ ಸ್ವತಃ ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ. ವಿಶ್ವವಾಣಿ ಟಿವಿಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅನ್ಫಾಲೋ ಮಾಡಿದ್ದು ಒಳ್ಳೇದಾಯ್ತಲ್ಲ ಅಂತ ಹೇಳಿದೆ
"ನನಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ನಮ್ ಆಫೀಸ್ ಹುಡುಗ ಈ ಬಗ್ಗೆ ಹೇಳಿದ. ʻಎಲ್ಲರನ್ನೂ ರಿಷಬ್ ಸರ್ ಅನ್ಫಾಲೋ ಮಾಡಿದ್ದಾರೆʼ ಎಂದ. ಎಲ್ಲರನ್ನು ಅನ್ಫಾಲೋ ಮಾಡಿದ್ದಾನೆ, ಒಳ್ಳೇದಾಯ್ತಲ್ಲ ಅಂತ ನಾನು ಹೇಳಿದೆ. ಆದರೆ ನನ್ನ ಮತ್ತು ರಕ್ಷಿತ್ನೂ ಅನ್ಫಾಲೋ ಮಾಡಿರುವುದು ನಮ್ ಹುಡುಗನಿಗೆ ಸಮಸ್ಯೆ ಆಗಿತ್ತು. ಏನಾಗುತ್ತೆ ಅಂದರೆ, ಬೆಳೀತಾ ಬೆಳೀತಾ ಎಲ್ಲವೂ ಬದಲಾಗುತ್ತದೆ. ನನ್ನ ಸೋಶಿಯಲ್ ಮೀಡಿಯಾ ಖಾತೆಯನ್ನು ಈಗ ನಾನೇ ಹ್ಯಾಂಡಲ್ ಮಾಡುತ್ತಿದ್ದೇನೆ. ಸ್ವಲ್ಪ ದಿನಗಳ ಬಳಿಕ ಅದಕ್ಕೆ ಒಬ್ಬರು ಇರಬಹುದು, ಒಂದು ಟೀಮ್ ಬರಬಹುದು" ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ.
Rishab Shetty: ರಕ್ಷಿತ್ ಶೆಟ್ಟಿ ಸೇರಿ ಎಲ್ಲರನ್ನ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ!
ಯಾಕೆ ಅನ್ಫಾಲೋ ಮಾಡಿದೆ ಅಂತ ರಿಷಬ್ಗೆ ಕೇಳಿಲ್ಲ
"ಸೋಶಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡಲು ಏಜೆನ್ಸಿ ಇರುತ್ತವೆ. ಎಲ್ಲರನ್ನೂ ಫಾಲೋ ಮಾಡುವುದು ಬೇಡ ಎಂಬುದು ಆ ಏಜೆನ್ಸಿಯ ಸ್ಟ್ರಾಟೆಜಿ ಇರಬಹುದು. ಅದನ್ನು ರಿಷಬ್ ಶೆಟ್ಟಿಗೆ ಹೇಳಿರಬಹುದು. ನಾನಂತೂ ರಿಷಬ್ಗೆ ಯಾಕೆ ಅನ್ಫಾಲೋ ಮಾಡಿದೆ ಎಂದು ಕೇಳಿಲ್ಲ. ಹಾಗೆ ಕೇಳೋದು ಅದೇನೋ ಸರಿ ಅನ್ನಿಸಲ್ಲ. ಗೆಳೆತನದಲ್ಲಿ ನಾವು ಮುಖಾಮುಖಿ ಕುಳಿತು ಮಾತನಾಡುವುದು ಬೇರೆ. ಆದರೆ ಇಂತಹ ವಿಚಾರಗಳಿಗೆಂದೇ ಫೋನ್ ಮಾಡುವುದು ಸರಿ ಆಗುವುದಿಲ್ಲ" ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ.
Rishab Shetty: ಹೊಂಬಾಳೆ ಬಳಿಕ ರಾಜ್ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ!
ಇದರ ಬಗ್ಗೆ ನಾನು ಜಾಸ್ತಿ ಯೋಚಿಸುವುದಿಲ್ಲ
"ನನ್ನ ಪ್ರಕಾರ, ಸೋಶಿಯಲ್ ಮೀಡಿಯಾ ಪೇಜ್ ಅನ್ನು ಹ್ಯಾಂಡಲ್ ಮಾಡಲು ಏಜೆನ್ಸಿಯವರು, ಎಲ್ಲರನ್ನೂ ಯಾಕೆ ಫಾಲೋ ಮಾಡುತ್ತಿದ್ದೀರಿ, ಅನ್ಫಾಲೋ ಮಾಡಿ ಎಂದು ಹೇಳಿರುತ್ತಾರೆ. ಅದಕ್ಕೆ ಈ ಥರ ಆಗಿರಬಹುದು. ನಾನು ಸೋಶಿಯಲ್ ಮೀಡಿಯಾವನ್ನು ಜಾಸ್ತಿ ಬಳಸೋದಿಲ್ಲ. ಹಾಗಾಗಿ, ಇದರ ಬಗ್ಗೆ ನಾನು ಜಾಸ್ತಿ ಯೋಚಿಸುವುದಿಲ್ಲ. ಇಷ್ಟುಬಿಟ್ಟರೆ ಸ್ನೇಹದಲ್ಲಿ ದೋಖಾ ಆಗಿದೆ ಅನ್ನೋದನ್ನೆಲ್ಲಾ ನಾನು ಒಪ್ಪಲ್ಲ. ಮೊನ್ನೆ ಕೂಡ ನನಗೆ ರಿಷಬ್ ಸಿಕ್ಕಿದ್ದ" ಎಂದು ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ.
ಪ್ರಮೋದ್ ಶೆಟ್ಟಿ ಸಂದರ್ಶನ
ರಿಷಬ್ ಹೈದರಾಬಾದ್ನಲ್ಲಿ ಬ್ಯುಸಿ ಇದ್ದಾನೆ
"ನನ್ನ ಜೊತೆಗೆ ರಿಷಬ್, ರಕ್ಷಿತ್, ರಾಜ್ ಬಿ ಶೆಟ್ಟಿ ಎಲ್ಲರೂ ಚೆನ್ನಾಗಿದ್ದಾರೆ. ಬಹುಶಃ ನಾವ್ಯಾರೂ ಒಟ್ಟಿಗೆ ಕಾಣಿಸುತ್ತಿಲ್ಲ ಅನ್ನೋದಕ್ಕೆ ಈ ರೀತಿ ಮಾತುಗಳು ಕೇಳಿಬರುತ್ತಿರಬಹುದು. ರಿಷಬ್ ಹೈದರಾಬಾದ್ನಲ್ಲಿ ಬ್ಯುಸಿ ಇದ್ದಾನೆ. ರಕ್ಷಿತ್ ಉಡುಪಿಯಲ್ಲಿ ಇದ್ದಾನೆ. ರಾಜ್ ಬಿ ಶೆಟ್ಟಿ ಚೆನ್ನೈನಲ್ಲಿ ಬ್ಯುಸಿ ಇದ್ದಾನೆ. ನಾನು ಬೆಂಗಳೂರಿನಲ್ಲಿ ಇದ್ದೇನೆ. ಬಹುಶಃ ನಾವೆಲ್ಲಾ ಒಟ್ಟಿಗೆ ಕಾಣಿಸಿಕೊಂಡರೆ ಎಲ್ಲದಕ್ಕೂ ತೆರೆಬೀಳಬಹುದು" ಎಂದು ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ.
ರಕ್ಷಿತ್ ಕಡೆಯಿಂದ ಗುಡ್ ನ್ಯೂಸ್
"ಕಾಂತಾರ ನಂತರ ನಾನು ಮತ್ತು ರಿಷಬ್, ರಕ್ಷಿತ್ನ ಮೀಟ್ ಮಾಡೋಣ ಅಂದುಕೊಂಡಿದ್ದೆವು. ಅಸಲಿಗೆ, ಅವನು ಸ್ಕ್ರಿಪ್ಟ್ಗಾಗಿ ಸುಮಾರು ಸಮಯ ಅಮೆರಿಕದಲ್ಲೇ ಕಳೆದಿದ್ದ. ನಾವು ಮೆಸೇಜ್ ಹಾಕಿದರೆ, ಎರಡ್ಮೂರು ದಿನ ಬಿಟ್ಟು ರಿಪ್ಲೈ ಬರುತ್ತದೆ. ಮೀಟ್ ಆಗುವುದು ಬೇಡ ಅಂತಲೇ ರಕ್ಷಿತ್ ಹೇಳಿದ. ಯಾಕೆಂದರೆ, ಅವನು ಕಥೆಯೊಳಗೆ ಹೋಗಿದ್ದಾನೆ. ಅದನ್ನು ಡೈವರ್ಟ್ ಮಾಡುವುದು ಬೇಡ. ಸ್ಕ್ರಿಪ್ಟ್ ಕೆಲಸಗಳು ಮುಗಿಯಲಿ ಎಂದು ನಾವೇ ಸುಮ್ಮನಾದೆವು. ಒಂದೆರಡು ತಿಂಗಳಲ್ಲಿ ರಕ್ಷಿತ್ ಶೆಟ್ಟಿ ಕಡೆಯಿಂದ ಭರ್ಜರಿ ನ್ಯೂಸ್ ಬರಲಿದೆ" ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ.