Dhruva Sarja: ನಿರ್ದೇಶಕರಿಂದ ಹಣ ಪಡೆದು ವಂಚನೆ ಆರೋಪ; ನಟ ಧ್ರುವ ಸರ್ಜಾ ವಿರುದ್ಧ FIR ದಾಖಲು
ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ (Dhruva Sarja) ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ ವಂಚನೆ ಆರೋಪದ ಮೇಲೆ ಅಂಬೋಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.


ಮುಂಬೈ: ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ (Dhruva Sarja) ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ ವಂಚನೆ ಆರೋಪದ ಮೇಲೆ ಅಂಬೋಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ರಾಘವೇಂದ್ರ ಹೆಗಡೆಯವರಿಂದ 3.15 ಕೋಟಿ ಹಣ ಪಡೆದಿರುವ ಧ್ರುವ ಸರ್ಜಾ ಅದನ್ನು ವಾಪಸ್ಸು ಕೊಡದೆ ಸತಾಯಿಸಿದ್ದಾರೆ ಎಂದು ನಿರ್ದೇಶಕ ಆರೋಪಿಸಿದ್ದಾರೆ. 2018, 2021ರ ನಡುವೆ ಹಣ ಪಡೆದಿದ್ದ ಧ್ರುವ ಸರ್ಜಾ, ತನ್ನ ಪಾತ್ರದ ಚಿತ್ರೀಕರಣಕ್ಕೆ ಹಾಜರಾಗಿಲ್ಲ. ಹಣವನ್ನೂ ವಾಪಸ್ ಕೊಟ್ಟಿಲ್ಲ ಎಂದು ಆರೋಪಿಸಿ ನಿರ್ದೇಶಕ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ, "ನನ್ನ ಮೊದಲ ಚಿತ್ರದ ಯಶಸ್ಸಿನ ನಂತರ, 2016 ರಲ್ಲಿ, ದಕ್ಷಿಣ ಭಾರತದ ಚಲನಚಿತ್ರ ನಟ ಧ್ರುವ ಕುಮಾರ್ ಅಲಿಯಾಸ್ ಧ್ರುವ ಸರ್ಜಾ ನನ್ನ ಕಚೇರಿಗೆ ಬಂದು ನನ್ನೊಂದಿಗೆ ಚಿತ್ರದಲ್ಲಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು. 2016 ರಿಂದ 2018 ರವರೆಗೆ ಸರ್ಜಾ ನನ್ನನ್ನು ಒಟ್ಟಿಗೆ ಕೆಲಸ ಮಾಡಲು ನಿರಂತರವಾಗಿ ಕೇಳುತ್ತಿದ್ದರು. ಒಂದು ಚಿತ್ರದ (ದಿ ಸೋಲ್ಜರ್) ಸ್ಕ್ರಿಪ್ಟ್ ಅನ್ನು ಸಹ ನನಗೆ ನೀಡಿದ್ದರು" ಎಂದು ಅಂಬೋಲಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಚಿತ್ರ ನಿರ್ಮಾಪಕ ರಾಘವೇಂದ್ರ ಹೆಗಡೆ ವಿವರಿಸಿದ್ದಾರೆ.
ಸರ್ಜಾ ಅವರ ಪದೇ ಪದೇ ವಿನಂತಿಗಳು ಮತ್ತು ಒತ್ತಾಯದ ನಂತರ, ನಾನು ಅವರೊಂದಿಗೆ ಸಿನಿಮಾ ಮಾಡಲು ಒಪ್ಪಿದ್ದೆ, ನಂತರ ಒಂದು ದಿನ, ಸರ್ಜಾ ಅವರು ತಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು 3 ಕೋಟಿ ರೂಪಾಯಿಗಳನ್ನು ನೀಡುವಂತೆ ನನ್ನನ್ನು ಕೇಳಿಕೊಂಡರು, ಇದರಿಂದ ನಾನು ಫ್ಲಾಟ್ ಖರೀದಿಸುತ್ತೇನೆ ಎಂದು ಹೇಳಿದ್ದರು. ಆ ಸಮಯದಲ್ಲಿ, ಸರ್ಜಾ ಅವರು ಮೇಲೆ ತಿಳಿಸಿದ ನಮ್ಮ ಚಿತ್ರದಲ್ಲಿ ಶೀಘ್ರದಲ್ಲೇ ಕೆಲಸ ಮಾಡಲು ಪ್ರಾರಂಭಿಸುವುದಾಗಿ ನನಗೆ ಭರವಸೆ ನೀಡಿದ್ದರು. ಹೀಗಾಗಿ ನಾನು ಹಣ ನೀಡಿದ್ದೆ ಎಂದು ಹೆಗಡೆ ದೂರಿನಲ್ಲಿ ತಿಳಿಸಿದ್ದಾರೆ.
ಸರ್ಜಾ ಅವರನ್ನು ನಂಬಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ಹಣವನ್ನು ಹೊಂದಿಸಿಕೊಂಡಿದ್ದು, ತಮ್ಮ ನಿರ್ಮಾಣ ಕಂಪನಿಗಳಾದ ಆರ್ಎಚ್ ಎಂಟರ್ಟೈನ್ಮೆಂಟ್ ಮತ್ತು ರೂ 9 ಎಂಟರ್ಟೈನ್ಮೆಂಟ್ ಮೂಲಕ ಹಾಗೂ ವೈಯಕ್ತಿಕ ನಿಧಿಯಿಂದ ಸರ್ಜಾ ಅವರಿಗೆ R3.15 ಕೋಟಿ ವರ್ಗಾಯಿಸಿದ್ದೇನೆ ಎಂದು ನಿರ್ದೇಶಕ ಹೇಳಿದ್ದಾರೆ. ಫೆಬ್ರವರಿ 21, 2019 ರಂದು ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಈ ವರ್ಗಾವಣೆ ನಡೆದಿದೆ. ಒಪ್ಪಂದದ ಪ್ರಕಾರ, ಚಿತ್ರೀಕರಣವು ಜನವರಿ 2020 ರಲ್ಲಿ ಪ್ರಾರಂಭವಾಗಿ ಜೂನ್ 2020 ರೊಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಅದ್ಯಾವುದೂ ನಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಹಣ ಪಡೆದ ಬಳಿಕ ನಟ ಹಲವು ಬಾರಿ ಅವಧಿ ವಿಸ್ತರಣೆಗಳನ್ನು ಕೋರಿದರು ಮತ್ತು ನಂತರ COVID-19 ಲಾಕ್ಡೌನ್ ತೆಗೆದುಹಾಕಿದ ನಂತರವೂ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಹೆಗಡೆ ಆರೋಪಿಸಿದ್ದಾರೆ. ಸ್ಕ್ರಿಪ್ಟ್ ರೈಟರ್ಗಳು ಮತ್ತು ಪ್ರಚಾರ ಸಲಹೆಗಾರರು ಸೇರಿದಂತೆ ಮೂರನೇ ವ್ಯಕ್ತಿಗಳಿಗೆ ಹೆಚ್ಚುವರಿ ಪಾವತಿಗಳನ್ನು ಮಾಡಲು ಸರ್ಜಾ ಅವರನ್ನು ಒತ್ತಾಯಿಸಿದರು, ಇದರಿಂದಾಗಿ ಒಟ್ಟು ವೆಚ್ಚವು 3.43 ಕೋಟಿಗೂ ಹೆಚ್ಚಾಗಿದೆ. ನಂತರ ಇದರ ಬಗ್ಗೆ ಕೇಳಿದರೆ, ನಟ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿರಲ್ಲಿಲ್ಲ ಎಂದು ರಾಘವೇಂದ್ರ ಹೆಗಡೆ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Deoghar temple: ದಿಯೋಘರ್ ದೇವಸ್ಥಾನಕ್ಕೆ ಬಲವಂತದ ಪ್ರವೇಶ; ಬಿಜೆಪಿ ನಾಯಕರ ಮೇಲೆ FIR ದಾಖಲು
ಹೆಗಡೆ ಅವರ ದೂರಿನ ಮೇರೆಗೆ ಕಾರ್ಯನಿರ್ವಹಿಸಿದ ಅಂಬೋಲಿ ಪೊಲೀಸರು ಸರ್ಜಾ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 316(2) (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು 318(4) (ವಂಚನೆ ಮತ್ತು ಆಸ್ತಿಯನ್ನು ಹಸ್ತಾಂತರಿಸಲು ಅಪ್ರಾಮಾಣಿಕ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ . ತನಿಖಾಧಿಕಾರಿಗಳು ಹೆಗ್ಡೆ ಸಲ್ಲಿಸಿದ ಹಣಕಾಸಿನ ದಾಖಲೆಗಳು, ಒಪ್ಪಂದಗಳು ಮತ್ತು ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸುತ್ತಿದ್ದಾರೆ.