ಕನ್ನಡದಲ್ಲೂ ಬರ್ತಿದೆ ಎಸ್. ಪಿ. ಬಾಲಸುಬ್ರಹ್ಮಣ್ಯಂ - ಲಕ್ಷ್ಮೀ ನಟನೆಯ ಜನಪ್ರಿಯ ʻಮಿಥುನಂʼ ಸಿನಿಮಾ
ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ನಟಿ ಲಕ್ಷ್ಮೀ ಅಭಿನಯದ ‘ಮಿಥುನಂ’ ಚಿತ್ರ ಈಗ ಕನ್ನಡದಲ್ಲಿ ಜೂನ್ 5 ರಂದು ತೆರೆಕಾಣಲಿದೆ. ವಿದೇಶದಲ್ಲಿರುವ ಮಕ್ಕಳಿಗಾಗಿ ಕಾಯುವ ವೃದ್ಧ ದಂಪತಿಗಳ ಭಾವುಕ ಬದುಕನ್ನು ಚಿತ್ರವು ಕಟ್ಟಿಕೊಡಲಿದ್ದು, ಎಸ್ಪಿಬಿ ಅವರ ಹುಟ್ಟುಹಬ್ಬದ ಅಂಗವಾಗಿ ಈ ವಿಶೇಷ ಚಿತ್ರವನ್ನು ಕನ್ನಡಿಗರಿಗೆ ಅರ್ಪಿಸಲಾಗುತ್ತಿದೆ.
-
ಭಾರತದ ಹೆಮ್ಮೆಯ ಗಾಯಕರಲ್ಲಿ ಒಬ್ಬರು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು. ಗಾಯನದ ಜೊತೆಗೆ ಅವರು ಅತ್ಯುತ್ತಮ ನಟರೂ ಕೂಡ ಹೌದು. ಅವರು ಅಭಿನಯಿಸಿದ ಕೊನೆಯ ಚಿತ್ರ ʻಮಿಥುನಂʼ. ಇದರಲ್ಲಿ ಎಸ್ಪಿಬಿಗೆ ಜೋಡಿಯಾಗಿದ್ದವರು ನಟಿ ಜೂಲಿ ಲಕ್ಷ್ಮಿ. ತನಿಕೆಳ್ಳ ಭರಣಿ ನಿರ್ದೇಶನದ ಈ ತೆಲುಗು ಚಿತ್ರವು ದೊಡ್ಡ ಯಶಸ್ಸನ್ನು ಕಂಡಿತ್ತು. ಇದೀಗ ಈ ಸಿನಿಮಾವನ್ನು ಕನ್ನಡದಲ್ಲೂ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜೂನ್ 5ರಂದು ಮಿಥುನಂ ರಿಲೀಸ್
ಜೂನ್ 4ರಂದು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಜೂನ್ 5ರಂದು ಮಿಥುನಂ ಸಿನಿಮಾವನ್ನು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಕನ್ನಡದಲ್ಲಿ ಹರಿದಾಸರ ಚಿತ್ರಗಳ ನಿರ್ದೇಶಕರು ಎಂದೇ ಹೆಸರಾಗಿರುವ ಮಧುಸೂದನ್ ಹವಾಲ್ದಾರ್ ಹಾಗೂ ತ್ರಿವಿಕ್ರಮ ಜೋಶಿ ಅವರ ಸಾರಥ್ಯದಲ್ಲಿ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ. ಶ್ರೀದೇವಿ ಶ್ರೀನಿವಾಸ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ.
Baali Death: ರಿದಂ ಕಿಂಗ್, ಸರಿಗಮಪ ಜ್ಯೂರಿ, ಲಯವಾದ್ಯ ಪರಿಣಿತ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ
"ನನಗೆ ನಿರ್ದೇಶಕ ತನಿಕೆಳ್ಳ ಭರಣಿ ಅವರು ಉತ್ತ,ಮ ಪರಿಚಯ. ಅವರ ಬಳಿ ಈ ಸಿನಿಮಾದ ರೈಟ್ಸ್ ಕೇಳಿದಾಗ, ಅವರು ನಿರ್ಮಾಪಕರನ್ನು ಕೇಳಿ ಎಂದರು. ನಿರ್ಮಾಪಕರು ಕನ್ನಡದಲ್ಲಿ ಬಿಡುಗಡೆ ಮಾಡುವುದಕ್ಕೆ ಖುಷಿಯಿಂದ ರೈಟ್ಸ್ ನೀಡಿದರು. ಅದರೆ ಚಿತ್ರವನ್ನು 6 ತಿಂಗಳಲ್ಲಿ ಬಿಡುಗಡೆ ಮಾಡಬೇಕು ಮತ್ತು ಎಸ್ಪಿಬಿ ಅವರ ಧ್ವನಿಗೆ ಯಾವುದೇ ಧಕ್ಕೆ ಬಾರದ ಹಾಗೆ ಅಂತಹವರಿಂದ ಡಬ್ಬಿಂಗ್ ಮಾಡಿಸ ಬೇಕು ಅಂತ ಹೇಳಿದ್ದರು" ಎಂದು ಮಧುಸೂದನ್ ಹವಾಲ್ದಾರ್ ತಿಳಿಸಿದ್ದಾರೆ.
"ಈ ಚಿತ್ರವು ಹದಿನೈದು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದು, ಆಗಿನ ಸೆನ್ಸಾರ್ ಮಂಡಳಿ ನಿಯಮಗಳಿಗೂ ಈಗಿನ ನಿಯಮಗಳಿಗೂ ವ್ಯತ್ಯಾಸವಿದೆ. ಅನಿಮಲ್ ಬೋರ್ಡ್ ಪರ್ಮಿಷನ್ ದೊರಕುವುದು ಸ್ವಲ್ಪ ತಡವಾಗಿರುವುದರಿಂದ ಕನ್ನಡದ ಅವತರಣಿಕೆ ಬಿಡುಗಡೆ ಸ್ವಲ್ಪ ತಡವಾಯಿತು. ಈಗ ಜೂನ್ 5 ರಂದು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ" ಎಂದು ಮಧುಸೂದನ್ ಹವಾಲ್ದಾರ್ ಹೇಳಿದ್ದಾರೆ.
ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ವಿಧಿವಶ
"ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಲಕ್ಷ್ಮೀ ಅವರು ಅದ್ಭುತ ಕಲಾವಿದರು. ವಿದೇಶದಲ್ಲಿರುವ ಮಕ್ಕಳು ತಂದೆ ತಾಯಿ ವೃದ್ಧಾಪ್ಯದ ಸಮಯದಲ್ಲೂ ನೋಡಿಕೊಳ್ಳಲು ಬರದೆ ಇದ್ದಾಗ ಆ ತಂದೆ ತಾಯಿ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದು ಈ ಚಿತ್ರದ ಕಥಾಸಾರಾಂಶ" ಎಂದು ತ್ರಿವಿಕ್ರಮ ಜೋಶಿ ತಿಳಿಸಿದರು.
ಇತ್ತೀಚೆಗೆ ಈ ಚಿತ್ರದ ಕನ್ನಡ ಅವತರಣಿಕೆಯ ಟೀಸರ್ ಬಿಡುಗಡೆ ಮತ್ತು ಚಿತ್ರದ ಪೂರ್ವಭಾವಿ ಪ್ರದರ್ಶನ ನಡೆಯಿತು. ನಟ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಂದರರಾಜ್, ಎಸ್ಪಿಬಿ ಅವರ ಆಪ್ತ ಗೋಪಿ, ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್, ಪಿಆರ್ಓ ಸುಧೀಂದ್ರ ವೆಂಕಟೇಶ್, ಶ್ರೀದೇವಿ ಶ್ರೀನಿವಾಸ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಎಸ್ ಪಿ ಬಿ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.