ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸರಳತೆಯೇ ಇವರ ಜೀವನ; ಸರ್ಕಾರಿ ಬಂಗಲೆ ಬಳಸಲ್ಲ, ನಡೆದುಕೊಂಡೇ ಕೋರ್ಟ್‌ಗೆ ತೆರಳುವ ಜಡ್ಜ್

Judge Simple Living: ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ಷಯ್ ಕುಮಾರ್ ದ್ವಿವೇದಿ ಅವರು ಸರಳ ಜೀವನಶೈಲಿಯಿಂದ ಗಮನ ಸೆಳೆಯುತ್ತಿದ್ದಾರೆ. ನ್ಯಾಯಾಧೀಶ ದ್ವಿವೇದಿ ಅವರು ಸರ್ಕಾರಿ ಬಂಗಲೆಯನ್ನು ಬಳಸಲು, ಅಧಿಕೃತ ವಾಹನವನ್ನು ಬಳಸಲು ಅಥವಾ ತಮ್ಮ ಹುದ್ದೆಯೊಂದಿಗೆ ಬರುವ ಇತರ ಸೌಕರ್ಯಗಳನ್ನು ಪಡೆಯಲು ನಿರಾಕರಿಸಿದ್ದಾರೆ.

ಸರ್ಕಾರಿ ಬಂಗಲೆ ಬಳಸಲ್ಲ, ನಡೆದುಕೊಂಡೇ ಕೋರ್ಟ್‌ಗೆ ತೆರಳುವ ಜಡ್ಜ್

ನ್ಯಾಯಾಧೀಶ ಅಕ್ಷಯ್ ಕುಮಾರ್ ದ್ವಿವೇದಿ -

Priyanka P
Priyanka P Jul 5, 2026 8:39 PM

ಇಂದೋರ್, ಜು.5: ಕೆಲವರು ತಾವು ಎಷ್ಟೇ ದೊಡ್ಡ ಹುದ್ದೆಗೇರಿದರೂ ಸರಳ ಜೀವನವನ್ನು ಇಷ್ಟಪಡುತ್ತಾರೆ. ಅಂಥವರು ಇರುವುದು ಬೆರಳೆಣಿಕೆ ಮಂದಿಯಷ್ಟೇ. ಹಾಗೆಯೇ, ಮಧ್ಯಪ್ರದೇಶದ (Madhya Pradesh) ಛಿಂದ್ವಾರಾ ಜಿಲ್ಲೆಯಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ಷಯ್ ಕುಮಾರ್ ದ್ವಿವೇದಿ (Axay Kumar Dwivedi) ಅವರು ಸರಳ ಜೀವನಶೈಲಿಯಿಂದ ಗಮನ ಸೆಳೆಯುತ್ತಿದ್ದಾರೆ. ಅವರ ನಡೆ-ನುಡಿ ಮತ್ತು ವೈಯಕ್ತಿಕ ಆಯ್ಕೆಗಳ ಕುರಿತು ಹಂಚಿಕೊಳ್ಳಲಾದ ಮಾಹಿತಿಯ ಪ್ರಕಾರ, ಅವರಿಗೆ ಲಭ್ಯವಿದ್ದ ಹಲವು ಸರ್ಕಾರಿ ಸೌಲಭ್ಯಗಳನ್ನು ಅವರು ಸ್ವಯಂಪ್ರೇರಿತವಾಗಿ ತಿರಸ್ಕರಿಸಿದ್ದು, ನ್ಯಾಯಾಂಗದ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಅತ್ಯಂತ ಸರಳ ಜೀವನವನ್ನು ನಡೆಸುತ್ತಿದ್ದಾರೆ.

ನ್ಯಾಯಾಧೀಶ ದ್ವಿವೇದಿ ಅವರು ಸರ್ಕಾರಿ ಬಂಗಲೆಯನ್ನು ಬಳಸಲು, ಅಧಿಕೃತ ವಾಹನವನ್ನು ಬಳಸಲು ಅಥವಾ ತಮ್ಮ ಹುದ್ದೆಯೊಂದಿಗೆ ಬರುವ ಇತರ ಸೌಕರ್ಯಗಳನ್ನು ಪಡೆಯಲು ನಿರಾಕರಿಸಿದ್ದಾರೆ. ಬದಲಾಗಿ, ಅವರು ಸಾಧಾರಣ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. ತಾವೇ ಸ್ವತಃ ಊಟವನ್ನು ತಯಾರಿಸುತ್ತಾರೆ. ಪ್ರತಿದಿನ ನ್ಯಾಯಾಲಯಕ್ಕೆ ನಡೆದುಕೊಂಡು ಹೋಗುತ್ತಾರೆ. ವೈಯಕ್ತಿಕ ಶಿಸ್ತು ಮತ್ತು ಸಾರ್ವಜನಿಕ ಸೇವೆಯ ಪ್ರತಿಬಿಂಬವೆಂದು ನೋಡುವ ಅನೇಕರಲ್ಲಿ ಇದು ಮೆಚ್ಚುಗೆಯನ್ನು ಹುಟ್ಟುಹಾಕಿವೆ.

ಅದರಲ್ಲೂ, ಮಧ್ಯಪ್ರದೇಶ ಹೈಕೋರ್ಟ್‌ಗೆ ಅವರು ತಮ್ಮ ಸಂಬಳವನ್ನು ಅರ್ಧದಷ್ಟು ಕಡಿತಗೊಳಿಸುವಂತೆ ಸಲ್ಲಿಸಿದ ಮನವಿಯು ಇನ್ನೂ ಹೆಚ್ಚಿನ ಗಮನ ಸೆಳೆದಿದೆ. ಅವರು ಬಹಳ ಕಡಿಮೆ ವೈಯಕ್ತಿಕ ಆಸ್ತಿಯನ್ನು ಹೊಂದಿದ್ದಾರೆ. ಅವರ ತಾಯಿ ಉಡುಗೊರೆಯಾಗಿ ನೀಡಿದ ಮೊಬೈಲ್ ಫೋನ್ ಅನ್ನು ಅಮೂಲ್ಯ ಆಸ್ತಿ ಎಂದೇ ಪರಿಗಣಿಸಿದ್ದಾರೆ. ಅಲ್ಲದೆ ಅವರು ಮದುವೆಯಾಗದಿರಲು ತೀರ್ಮಾನಿಸಿದ್ದಾರೆ.

PM Narendra Modi: ಪ್ರಧಾನಿ ಮೋದಿ ಸಹೋದರಿಯ ಸರಳತೆಯನ್ನೊಮ್ಮೆ ನೋಡಿ- ಇಲ್ಲಿದೆ ವಿಡಿಯೊ

ಅವರ ಈ ನಿರ್ಧಾರವು ಬಾಲ್ಯದಲ್ಲಿ ಅವರು ಅನುಭವಿಸಿದ ಯಾತನೆಯೇ ಕಾರಣವಾಗಿದೆ. ಆಸ್ತಿ ವಿವಾದವೊಂದರಲ್ಲಿ ತಮ್ಮ ತಾಯಿ ನ್ಯಾಯಾಲಯದ ವಿಚಾರಣೆಯನ್ನು ವರ್ಷಗಟ್ಟಲೆ ಕಳೆಯುವುದನ್ನು ನ್ಯಾಯಾಧೀಶ ದ್ವಿವೇದಿ ಕಣ್ಣಾರೆ ಕಂಡರು. ದೀರ್ಘಕಾಲದ ಮೊಕದ್ದಮೆಯಿಂದ ಉಂಟಾದ ಭಾವನಾತ್ಮಕ ಮತ್ತು ಆರ್ಥಿಕ ಒತ್ತಡವು ಅವರ ಮೇಲೆ ಶಾಶ್ವತವಾದ ಪ್ರಭಾವ ಬೀರಿತು. ಆ ಅನುಭವಗಳೇ ನ್ಯಾಯಾಂಗದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಅವರನ್ನು ಪ್ರೇರೇಪಿಸಿದವು.

ಅವರ ಈ ಹಿನ್ನೆಲೆ ನ್ಯಾಯಾಂಗ ಕಾರ್ಯವೈಖರಿಯ ಮೇಲೂ ಪ್ರಭಾವ ಬೀರಿದೆ. ವಿಶೇಷವಾಗಿ ಭೂಮಿ ಮತ್ತು ಆಸ್ತಿ ಸಂಬಂಧಿತ ವಿವಾದಗಳು ಅನಗತ್ಯ ವಿಳಂಬವಾಗದೆ ಶೀಘ್ರವಾಗಿ ಇತ್ಯರ್ಥವಾಗುವಂತೆ ಮಾಡುವ ಪ್ರಯತ್ನ ಮಾಡುತ್ತಾರೆ. ವಿವಾದಗಳ ನಿರ್ವಹಣೆಯಲ್ಲಿ ವಿಳಂಬವನ್ನು ಕಡಿಮೆ ಮಾಡಿ, ಅರ್ಜಿದಾರರಿಗೆ ಸಮಯೋಚಿತ ನ್ಯಾಯ ದೊರಕುವಂತೆ ಮಾಡುವುದು ಅವರ ಪ್ರಮುಖ ಉದ್ದೇಶವಾಗಿದೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳಿದ್ದಾರೆ.

ದ್ವಿವೇದಿಯವರ ಈ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿವೆ. ಅನೇಕ ಬಳಕೆದಾರರು ನ್ಯಾಯಾಧೀಶರ ಜೀವನಶೈಲಿಯನ್ನು ನಿಸ್ವಾರ್ಥತೆ ಮತ್ತು ಸಾರ್ವಜನಿಕ ಸೇವೆಗೆ ಬದ್ಧತೆಯ ಉದಾಹರಣೆ ಎಂದು ಬಣ್ಣಿಸಿದ್ದಾರೆ.