Justice Surya Kant: ಇಂದು ದೇಶದ 53ನೇ ಸಿಜೆಐ ಆಗಿ ನ್ಯಾ. ಸೂರ್ಯ ಕಾಂತ್ ಪ್ರಮಾಣವಚನ
Chief Justice of India: ನ್ಯಾ.ಸೂರ್ಯಕಾಂತ್ ಅವರು 2027ರ ಫೆ.9ರವರೆಗೆ ಸೇವೆ ಸಲ್ಲಿಸಲಿದ್ದು, 14 ತಿಂಗಳು ಅಧಿಕಾರದಲ್ಲಿರಲಿದ್ದಾರೆ. ಭಾನುವಾರ ತಮ್ಮ 65ನೇ ವಯಸ್ಸನ್ನು ತಲುಪಿದ ನ್ಯಾಯಮೂರ್ತಿ ಗವಾಯಿ, ಸಿಜೆಐ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಸುಪ್ರೀಂ ಕೋರ್ಟ್ನ ಅತ್ಯಂತ ಹಿರಿಯ ನ್ಯಾಯಾಧೀಶರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸುವ ಸಂಪ್ರದಾಯವನ್ನು ಅವರು ಎತ್ತಿ ಹಿಡಿದಿದ್ದಾರೆ.
ನ್ಯಾಯಮೂರ್ತಿ ಸೂರ್ಯ ಕಾಂತ್ -
ನವದೆಹಲಿ, ನ.24: ಇಂದು (ನ.24) ಭಾರತದ ಸುಪ್ರೀಂ ಕೋರ್ಟ್ (Supreme Court) 53ನೇ ಮುಖ್ಯ ನ್ಯಾಯಮೂರ್ತಿ (Chief Justice of India- ಸಿಜೆಐ- CJI) ಆಗಿ ನ್ಯಾ.ಸೂರ್ಯಕಾಂತ್ (Justice Surya Kant) ಅವರು ಪ್ರಮಾಣವಚನ (Oath) ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸಮಾರಂಭದಲ್ಲಿ ಭೂತಾನ್, ಕೀನ್ಯಾ, ಮಾರಿಷಿಯಸ್, ನೇಪಾಳ, ಶ್ರೀಲಂಕಾ, ಬ್ರೆಜಿಲ್ ಸೇರಿದಂತೆ 7 ದೇಶಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು ಭಾಗವಹಿಸಲಿದ್ದಾರೆ.
ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಜೆಐ ಪ್ರಮಾಣವಚನ ಸಮಾರಂಭಕ್ಕೆ ಬೇರೆ ದೇಶದ ನ್ಯಾಯಮೂರ್ತಿಗಳು ಭಾಗವಹಿಸುತ್ತಿದ್ದಾರೆ. ಜೊತೆಗೆ ಅವರ ಕುಟುಂಬಸ್ಥರು ಭಾಗಿಯಾಗುವ ನಿರೀಕ್ಷೆಯಿದೆ.
ಪ್ರಸ್ತುತ ಸಿಜೆಐಯಾಗಿರುವ ಗವಾಯಿ (BR Gavai) ಅವರ ಅಧಿಕಾರಾವಧಿಯು ನವೆಂಬರ್ 23ರಂದು ಕೊನೆಗೊಂಡಿದೆ. ಬಳಿಕ ನ್ಯಾ.ಸೂರ್ಯಕಾಂತ್ ಅವರು 2027ರ ಫೆ.9ರವರೆಗೆ ಸೇವೆ ಸಲ್ಲಿಸಲಿದ್ದು, 14 ತಿಂಗಳು ಅಧಿಕಾರದಲ್ಲಿರಲಿದ್ದಾರೆ. ಭಾನುವಾರ ತಮ್ಮ 65ನೇ ವಯಸ್ಸನ್ನು ತಲುಪಿದ ನ್ಯಾಯಮೂರ್ತಿ ಗವಾಯಿ, ಸಿಜೆಐ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಸುಪ್ರೀಂ ಕೋರ್ಟ್ನ ಅತ್ಯಂತ ಹಿರಿಯ ನ್ಯಾಯಾಧೀಶರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸುವ ಸಂಪ್ರದಾಯವನ್ನು ಅವರು ಎತ್ತಿ ಹಿಡಿದಿದ್ದಾರೆ.
ನ್ಯಾ. ಸೂರ್ಯಕಾಂತ್ ಅವರ ಕುಟುಂಬಸ್ಥರನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಅವರ ಸಹೋದರರಾದ ರಿಷಿಕಾಂತ್, ಶಿವಕಾಂತ್ ಮತ್ತು ದೇವಕಾಂತ್ ಅವರು ತಮ್ಮ ಕುಟುಂಬಗಳೊಂದಿಗೆ ಭಾಗಿಯಾಗಲಿದ್ದು, ಪ್ರಮಾಣವಚನಕ್ಕೂ ಒಂದು ದಿನ ಮೊದಲು ದೆಹಲಿಗೆ ತೆರಳಿ, ಬಳಿಕ ಹರಿಯಾಣ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಫೆಬ್ರವರಿ 10, 1962 ರಂದು ಹರಿಯಾಣದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನ್ಯಾಯಮೂರ್ತಿ ಸೂರ್ಯಕಾಂತ್, 1984 ರಲ್ಲಿ ಹಿಸಾರ್ನಲ್ಲಿ ತಮ್ಮ ಕಾನೂನು ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡಿದರು. ಹಲವು ವಿಶ್ವವಿದ್ಯಾಲಯಗಳು, ಮಂಡಳಿಗಳು, ನಿಗಮಗಳು, ಬ್ಯಾಂಕುಗಳು ಮತ್ತು ಹೈಕೋರ್ಟ್ ಅನ್ನು ಪ್ರತಿನಿಧಿಸುವ ವಿಶಾಲ ವ್ಯಾಪ್ತಿಯ ಸಾಂವಿಧಾನಿಕ, ಸೇವಾ ಮತ್ತು ನಾಗರಿಕ ವಿಷಯಗಳನ್ನು ನಿರ್ವಹಿಸಿದರು.
ಜುಲೈ 2000 ರಲ್ಲಿ ಹರಿಯಾಣದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡರು, 2001 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಜನವರಿ 9, 2004 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಕಾಯಂ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಅಕ್ಟೋಬರ್ 2018 ರಿಂದ ಮೇ 24, 2019 ರಂದು ಸುಪ್ರೀಂ ಕೋರ್ಟ್ಗೆ ಬಡ್ತಿ ಪಡೆಯುವವರೆಗೆ ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ನವೆಂಬರ್ 2024 ರಿಂದ ಅವರು ಸುಪ್ರೀಂ ಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: Justice Surya Kant: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾದ ನ್ಯಾ. ಸೂರ್ಯಕಾಂತ್
ಶನಿವಾರ, ಅಧಿಕಾರ ವಹಿಸಿಕೊಳ್ಳುವ ಮೊದಲು ಮಾಧ್ಯಮಗಳೊಂದಿಗಿನ ಸಂವಾದದಲ್ಲಿ, ನಿಯೋಜಿತ ಸಿಜೆಐ ಅವರು ಸುಪ್ರೀಂ ಕೋರ್ಟ್ ಮತ್ತು ದೇಶಾದ್ಯಂತದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುವುದು ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು. ದೀರ್ಘಕಾಲದವರೆಗೆ ಬಾಕಿ ಇರುವ ಪ್ರಮುಖ ಪ್ರಕರಣಗಳ ವಿಚಾರಣೆಗಾಗಿ ಮುಂದಿನ ಕೆಲವು ವಾರಗಳಲ್ಲಿ ಐದು, ಏಳು ಮತ್ತು ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠಗಳನ್ನು ರಚಿಸಲಾಗುವುದು ಎಂದು ಅವರು ಘೋಷಿಸಿದರು.