ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜೈಲಿನಲ್ಲಿ ಸಿಗುವ ಉಚಿತ ಊಟಕ್ಕಾಗಿ ಹುಸಿ ಬಾಂಬ್ ಬೆದರಿಕೆ ಹಾಕಿದ ಭೂಪ; ಕೊನೆಗೂ ಆತನ ಆಸೆ ಈಡೇರಲಿಲ್ಲ

ಜೈಲಿನಲ್ಲಿ ಉಚಿತ ಊಟ ಸಿಗುವ ಆಸೆಯಿಂದ ಕೇರಳದ ವ್ಯಕ್ತಿಯೊಬ್ಬ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹುಸಿ ಬೆದರಿಕೆ ಕರೆ ಮಾಡಿದ್ದರ ಹಿಂದಿನ ಕಾರಣ ತಿಳಿದು ಕೇರಳ ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ. 50 ನಿಮಿಷಗಳಲ್ಲಿ ಬಾಂಬ್ ಸ್ಫೋಟಗೊಳ್ಳಬಹುದು ಎಂದು ಪೊಲೀಸರಿಗೆ 112ಗೆ ತುರ್ತು ಕರೆ ಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಜೈಲಿನಲ್ಲಿ ಸಿಗುವ ಉಚಿತ ಊಟಕ್ಕಾಗಿ ಹುಸಿ ಬಾಂಬ್ ಬೆದರಿಕೆ

ಸಾಂದರ್ಭಿಕ ಎಐ ರಚಿತ ಚಿತ್ರ -

Priyanka P
Priyanka P Feb 24, 2026 8:55 PM

ತಿರುವನಂತಪುರ, ಫೆ. 24: ಜೈಲಿನಲ್ಲಿ ಉಚಿತ ಊಟ ಸಿಗುವ ಆಸೆಯಿಂದ ಕೇರಳದ ವ್ಯಕ್ತಿಯೊಬ್ಬ ಹುಸಿ ಬಾಂಬ್ ಬೆದರಿಕೆ (Fake bomb threat) ಕರೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹುಸಿ ಬೆದರಿಕೆ ಕರೆ ಮಾಡಿದ್ದರ ಹಿಂದಿನ ಕಾರಣ ತಿಳಿದು ಕೇರಳ ಪೊಲೀಸರು (Kerala Police) ದಿಗ್ಭ್ರಮೆಗೊಂಡಿದ್ದಾರೆ. ಕೊಲ್ಲಂ ಕಲೆಕ್ಟರೇಟ್ ಸಂಕೀರ್ಣದಲ್ಲಿ ಬಾಂಬ್ ಇಡಲಾಗಿದ್ದು, 50 ನಿಮಿಷಗಳಲ್ಲಿ ಬಾಂಬ್ ಸ್ಫೋಟಗೊಳ್ಳಬಹುದು ಎಂದು ಪೊಲೀಸರಿಗೆ ತುರ್ತು ಕರೆ ಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳು ಮೊಬೈಲ್ ಸಂಖ್ಯೆಯನ್ನು ಕೊಲ್ಲಂ ಜಿಲ್ಲೆಯ ಮಯ್ಯನಾಡ್ ನಿವಾಸಿ ಪ್ರಮೋದ್ ಜಾನಿ (44) ಎಂದು ಪತ್ತೆ ಹಚ್ಚಿದರು.

ಸ್ಥಳವನ್ನು ಪತ್ತೆಹಚ್ಚಿದ ನಂತರ ಪೊಲೀಸ್ ತಂಡವು ಆರೋಪಿಯನ್ನು ಬಂಧಿಸಲು ಮನೆಗೆ ಹೋಗಿದ್ದಾರೆ. ಈ ವೇಳೆ ಪ್ರಮೋದ್ ಪೊಲೀಸರಿಗಾಗಿ ಹೊರಗೆ ಕಾದು ಕುಳಿತಿದ್ದ. ಅದಕ್ಕೂ ಮುನ್ನ ಬಾಂಬ್ ನಿಷ್ಕ್ರಿಯ ದಳವು ಕಲೆಕ್ಟರೇಟ್ ಆವರಣವನ್ನು ಕೂಲಂಕಷವಾಗಿ ಪರಿಶೀಲಿಸಿತು. ಆದರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ.

"ದೆಹಲಿಯನ್ನು ಖಲಿಸ್ತಾನವನ್ನಾಗಿ ಮಾಡುತ್ತೇವೆ"; ಬೆಳ್ಳಂಬೆಳಗ್ಗೆ ಹತ್ತಾರು ಶಾಲೆಗಳಿಗೆ ಬಾಂಬ್ ಬೆದರಿಕೆ!

ವಿಚಾರಣೆಯ ಸಮಯದಲ್ಲಿ ಪ್ರಮೋದ್ ಬೆದರಿಕೆ ಕರೆ ಸುಳ್ಳು ಎಂದು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಅವನು ಯಾವುದೇ ದಾಳಿ ನಡೆಸುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ ದಿನಕ್ಕೆ ಮೂರು ಬಾರಿ ಉಚಿತ ಊಟ ಪಡೆಯಲು ಸಾಧ್ಯವಾಗುವಂತೆ ಬಂಧಿಸಿ ಜೈಲಿಗೆ ಕಳುಹಿಸಲು ಬಯಸಿದ್ದಾಗಿ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಮೋದ್ ಕೆಲಸ ಮಾಡುವುದನ್ನು ಇಷ್ಟಪಡುತ್ತಿರಲಿಲ್ಲ. ಈ ಹಿಂದೆ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳನ್ನು ಜೈಲಿನಲ್ಲಿ ಕಳೆದಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆ ಸಮಯದಲ್ಲಿ, ಅವನಿಗೆ ಜೈಲಿನ ಆಹಾರದ ಬಗ್ಗೆ ಒಲವು ಬೆಳೆಯಿತು. ಮತ್ತೆ ಬಂಧನಕ್ಕೊಳಗಾಗುವುದರಿಂದ ಉದ್ಯೋಗವಿಲ್ಲದೆ ಆರಾಮವಾಗಿ ಬದುಕಲು ಅವಕಾಶ ಸಿಗುತ್ತದೆ ಎಂದು ಯೋಚಿಸಿದ. ಹೀಗಾಗಿ ದೈಹಿಕ ಹಾನಿಯನ್ನು ತಪ್ಪಿಸಲು ಹಾಗೂ ಹಿಂಸಾತ್ಮಕ ಅಪರಾಧದಲ್ಲಿ ತೊಡಗುವ ಬದಲು ಬಾಂಬ್ ಬೆದರಿಕೆ ಹಾಕಲು ಅವನು ಆಯ್ಕೆ ಮಾಡಿಕೊಂಡ ಎನ್ನಲಾಗಿದೆ.

ಪ್ರಮೋದ್‍ನ ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಮತ್ತು ವಿಚಾರಣೆ ನಡೆಸಿದ ನಂತರ, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದರು. ಆದರೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಬದಲು, ಪ್ರಮೋದ್‌ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಇಸ್ಲಾಮಾಬಾದ್ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; ಕಾಶ್ಮೀರದಲ್ಲಿ ಭುಗಿಲೆದ್ದ ಪಾಕ್ ವಿರೋಧಿ ಪ್ರತಿಭಟನೆ

ಇದು ಸಿನಿಮಾ ಕಥೆಯಂತೆ ಕಂಡುಬಂದರೂ ಆತನ ಉದ್ದೇಶ ಮಾತ್ರ ನಗು ತರಿಸುವಂತಿದೆ. ಸೋಮಾರಿಯಾಗಿರುವ ಪ್ರಮೋದ್, ಉಚಿತ ಊಟ ಸಿಗುತ್ತದೆ ಎಂದು ಜೈಲಿಗೆ ಹೋಗಲು ಬಯಸಿದ್ದ. ಪ್ರಮೋದ್ ಕರೆ ಮಾಡಿದಾಗ, ಪೊಲೀಸ್ ತಂಡ ತಕ್ಷಣವೇ ಅವನ ಮನೆಗೆ ಬಂದಿತ್ತು. ಪೊಲೀಸರು ಬಂಧಿಸಿ ಜೈಲಿಗೆ ಕರೆದೊಯ್ಯುವವರೆಗೆ ಅವನು ಶಾಂತವಾಗಿ ಕಾಯುತ್ತಿದ್ದನು.

ಆರಂಭದಲ್ಲಿ ಅವನನ್ನು ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧ ಹೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ಪ್ರಮೋದ್ ನಿಜವಾದ ಕಾರಣವನ್ನು ಬಹಿರಂಗಪಡಿಸಿದಾಗ, ಅಧಿಕಾರಿಗಳು ಆಶ್ಚರ್ಯಚಕಿತರಾದರು. ಅವನು ಜೈಲಿನ ಆಹಾರವನ್ನು ತಿನ್ನಲು ಬಯಸುತ್ತೇನೆ ಎಂದು ಹೇಳಿದರಿಂದ ಅವನ ಉದ್ದೇಶವನ್ನು ಅರ್ಥ ಮಾಡಿಕೊಂಡ ಪೊಲೀಸರು, ಅವನನ್ನು ಜೈಲಿಗೆ ಕಳುಹಿಸುವ ಬದಲು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಹೀಗಾಗಿ, ಉಚಿತ ಆಹಾರವನ್ನು ಆನಂದಿಸುವ ಅವನ ಯೋಜನೆ ವಿಫಲವಾಯಿತು.