Manipur Police: ಮಣಿಪುರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; ಕೆಸಿಪಿ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಾರ್ಟಿಯ ಉಗ್ರರು ಲೂಟಿ ಮಾಡಿದ್ದ ಶಸ್ತ್ರಾಸ್ತ್ರಗಳ ಜೊತೆಗೆ ಅವರ ಬಳಿ ಇದ್ದ ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ಮಣಿಪುರದ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದು, ಒಬ್ಬ ಉಗ್ರನನ್ನು ಬಂಧಿಸಿದ್ದಾರೆ. ಲೂಟಿ ನಡೆದ ಒಂದು ದಿನದೊಳಗಾಗಿ ಈ ಕಾರ್ಯಾಚರಣೆ ನಡೆದಿದೆ.

Manipur Police

ಇಂಫಾಲ್: ತೌಬಲ್ ಜಿಲ್ಲೆಯ ಮಣಿಪುರ ರೈಫಲ್ಸ್ನ ಹೊರಠಾಣೆಯಿಂದ ಉಗ್ರಗಾಮಿ ಸಂಘಟನೆಯಾದ ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಾರ್ಟಿಯ (KPC) ಉಗ್ರರು ಲೂಟಿ ಮಾಡಿದ್ದ ಶಸ್ತ್ರಾಸ್ತ್ರಗಳ ಜೊತೆಗೆ ಅವರ ಬಳಿ ಇದ್ದ ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ಮಣಿಪುರದ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದು, ಒಬ್ಬ ಉಗ್ರನನ್ನು ಬಂಧಿಸಿದ್ದಾರೆ. ಲೂಟಿ ನಡೆದ ಒಂದು ದಿನದೊಳಗಾಗಿ ಈ ಕಾರ್ಯಾಚರಣೆ ನಡೆದಿದೆ.
ಪೊಲೀಸರ ಹೇಳಿಕೆಯ ಪ್ರಕಾರ, ಸುಮಾರು 30 ಶಸ್ತ್ರಸಜ್ಜಿಸಿದ ಉಗ್ರರ ಗುಂಪೊಂದು ಶನಿವಾರ ರಾತ್ರಿ , ತೌಬಲ್ ಜಿಲ್ಲೆಯ ಕಾಕ್ಮಯೈನಲ್ಲಿರುವ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ, ಠಾಣೆಯಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಉಗ್ರರು ಠಾಣೆಯಲ್ಲಿದ್ದ 9 ಶಸ್ತ್ರಾಸ್ತ್ರಗಳನ್ನು ಕದ್ದೊಯ್ದಿದ್ದರು. ಆರು ಎಸ್ಎಲ್ಆರ್ಗಳು, ಮೂರು ಎಕೆ ರೈಫಲ್ಗಳು ದೋಚಿದ್ದರು.
On the night of 08/02/2025, around 30 armed miscreants equipped with sophisticated weapons, breached at one police outpost at Kakmayai under Thoubal District and overpowered the police personnel deployed at the post. The armed miscreants then looted 09 (nine) arms (06 nos. of SLR… pic.twitter.com/eKNMbSiuh6
— Manipur Police (@manipur_police) February 9, 2025
ಘಟನೆಯ ನಂತರ ತಕ್ಷಣವೇ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ ಪೊಲೀಸರು ಕೆಸಿಪಿ ಉಗ್ರರಲ್ಲಿ ಒಬ್ಬನಾದ ಹಿಜಾಮ್ ನಿಂಗ್ಥೆಮ್ ಸಿಂಗ್ (49) ಎಂಬಾತನನ್ನು ಬಂಧಿಸಿದ್ದಾರೆ. ವಿವಿಧ ಸ್ಥಳಗಳಲ್ಲಿ ನಿರಂತರ ಶೋಧದ ನಂತರ ಭಾನುವಾರ ಮಧ್ಯಾಹ್ನ ನ್ಗಮುಖೋಂಗ್ ತಪ್ಪಲಿನಲ್ಲಿ ಲೂಟಿ ಮಾಡಿದ ಒಂಬತ್ತು ಶಸ್ತ್ರಾಸ್ತ್ರಗಳಲ್ಲಿ ಮೂರು ಎಕೆ ರೈಫಲ್ಗಳು ಮತ್ತು ಐದು ಎಸ್ಎಲ್ಆರ್ ರೈಫಲ್ ಸೇರಿದಂತೆ ಕೆಸಿಪಿಯ ಒಂದು ಅಡಗುತಾಣದಲ್ಲಿ ಅಪಾರ ಪ್ರಮಾಣದ ಗ್ರೇನೇಡ್ , ಸಿಡಿ ಮದ್ದುಗಳು ಹಾಗೂ ಒಂದು ಬೈನಾಕ್ಯುಲರ್, ಒಂದು ಜಿಪ್ಸಿ ಕಾರು, ಮೂರು ರಕ್ಷಾಕವಚ ಹೆಲ್ಮೆಟ್ಗಳು ಮತ್ತು ವಿವಿಧ ಮಿಲಿಟರಿ ಸಮವಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಕಾರ್ಯಾಚರಣೆ ನಡೆಯುತ್ತಿದ್ದು, ಭದ್ರತಾ ಪಡೆಗಳು ನಿಂಗೆಲ್, ಮಾಲೋಮ್, ಟೌಬುಲ್ ಮತ್ತು ಲಂಗಥೆಲ್ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಮಣಿಪುರದಲ್ಲಿ ಮೇ 3, 2023 ರಂದು ಭುಗಿಲೆದ್ದ ಜನಾಂಗೀಯ ಗಲಭೆಯಲ್ಲಿ, ಉಗ್ರರು ಪೊಲೀಸ್ ಠಾಣೆಗಳಿಂದ 6,000 ಕ್ಕೂ ಹೆಚ್ಚು ವಿವಿಧ ರೀತಿಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಲಕ್ಷಾಂತರ ವೈವಿಧ್ಯಮಯ ಮದ್ದುಗುಂಡುಗಳನ್ನು ಲೂಟಿ ಮಾಡಿದ್ದಾರೆ. ಭಾನುವಾರ ರಾಜೀನಾಮೆ ಸಲ್ಲಿಸಿದ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ಲೂಟಿ ಮಾಡಿದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೊಲೀಸರಿಗೆ ಹಿಂದಿರುಗಿಸುವಂತೆ ಒತ್ತಾಯಿಸಿದ್ದರು, ಇಲ್ಲದಿದ್ದರೆ ಸೂಕ್ತ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದರು.