ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ರಾಮ ಮಂದಿರ ವಿವಾದ: ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೊಡೆತಟ್ಟಲು ಸಜ್ಜಾದ ವಿರೋಧ ಪಕ್ಷಗಳು
NEET Question Paper Leak: ವಿವಾದಾತ್ಮಕ ಮಸೂದೆಗಳು ಮತ್ತು ತೃಣಮೂಲ ಕಾಂಗ್ರೆಸ್ ಸಂಸದರು ಎನ್ಡಿಎ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಕೇಂದ್ರ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಹೋರಾಟ ನಡೆಯುತ್ತಿರುವ ಮಧ್ಯೆಯೇ ಸಂಸತ್ತಿನ ಮಳೆಗಾಲದ ಅಧಿವೇಶನ ಇಂದಿನಿಂದ ಪ್ರಾರಂಭವಾಗಲಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಜು.20: ಸಂಸತ್ತಿನ ಮಳೆಗಾಲದ ಅಧಿವೇಶನ (Monsoon Session) ಇಂದಿನಿಂದ (ಸೋಮವಾರ, ಜು.20) ಆರಂಭವಾಗಲಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET Question Paper Leak), ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಉಪಾವಾಸ ಸತ್ಯಾಗ್ರಹದಿಂದ ಹಿಡಿದು ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಕೇಂದ್ರ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಹೋರಾಟ ನಡೆಯುತ್ತಿರುವ ಮಧ್ಯೆಯೇ ಸಂಸತ್ತಿನ ಮಳೆಗಾಲದ ಅಧಿವೇಶನ ಇಂದು ಪ್ರಾರಂಭವಾಗಲಿದೆ.
ಆಗಸ್ಟ್ 13 ರಂದು ಮುಂಗಾರು ಅಧಿವೇಶನ ಮುಗಿಯುವವರೆಗೆ 19 ಅಧಿವೇಶನಗಳಲ್ಲಿ ರಾಷ್ಟ್ರೀಯ ವಿವಾದಗಳ ಕುರಿತು ತೀವ್ರ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ. ಅಧಿವೇಶನ ಪ್ರಾರಂಭವಾಗುವ ಸ್ವಲ್ಪ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಜನರನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ಭಾರತೀಯ ರಾಷ್ಟ್ರೀಯ ನಾಗರಿಕರ ಪಕ್ಷ (ಎನ್ಸಿಪಿಐ) ವಿರೋಧ ಪಕ್ಷಗಳ ಪ್ರಮುಖ ಗುರಿಯಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸರ್ವಪಕ್ಷ ಸಭೆಗೆ ಎನ್ಸಿಪಿಐ ಅನ್ನು ಆಹ್ವಾನಿಸಿದ ನಿರ್ಧಾರವನ್ನು ವಿರೋಧಿಸಿ, ಭಾನುವಾರ (ಜು.19) ವಿರೋಧ ಪಕ್ಷಗಳು ಸಾಂಕೇತಿಕವಾಗಿ ಸಭಾತ್ಯಾಗ ಮಾಡಿದ್ದವು.
ಜುಲೈ 20 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ; ಯಾವೆಲ್ಲ ಬಿಲ್ಗಳಿಗೆ ಸಿಗಲಿದೆ ಗ್ರೀನ್ ಸಿಗ್ನಲ್?
ಕಳೆದ ಏಪ್ರಿಲ್ನಲ್ಲಿ ಸಂಸತ್ತಿನ ಉಭಯ ಸದನಗಳು ಕೊನೆಯದಾಗಿ ಸಭೆ ಸೇರಿದ ಬಳಿಕ, ನಾಲ್ಕು ವಿರೋಧ ಪಕ್ಷಗಳ ಕನಿಷ್ಠ 37 ಸಂಸದರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್ಡಿಎ) ಸೇರಿದ್ದಾರೆ. ಈ ಪಕ್ಷಾಂತರಗಳಿಂದ ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಅಗತ್ಯವಿರುವ 360 ಸದಸ್ಯರ ವಿಶೇಷ ಬಹುಮತದ ಹತ್ತಿರಕ್ಕೆ ತಂದಿವೆ.
ಒಂದು ರಾಷ್ಟ್ರ, ಒಂದು ಚುನಾವಣೆ ಹಾಗೂ ಕ್ಷೇತ್ರ ಮರುವಿಂಗಡಣೆ ಸೇರಿದಂತೆ ಪ್ರಮುಖ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಈ ವಿಶೇಷ ಬಹುಮತ ಅಗತ್ಯವಾಗಿದೆ. ಮಹಿಳಾ ಮೀಸಲಾತಿ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದ ಶಾಸಕಾಂಗ ಪ್ಯಾಕೇಜ್ ಅನ್ನು ಪುನಃ ಪರಿಚಯಿಸಲು ಸರ್ಕಾರ ಪರಿಗಣಿಸುತ್ತಿರುವ ಸಮಯದಲ್ಲಿ ಈ ಪಕ್ಷಾಂತರಗಳು ನಡೆದಿವೆ. ಕಳೆದ ಏಪ್ರಿಲ್ನಲ್ಲಿ ಲೋಕಸಭೆಯಲ್ಲಿ ಅಗತ್ಯವಾದ ಬೆಂಬಲವನ್ನು ಪಡೆಯುವಲ್ಲಿ ಸರ್ಕಾರದ ಹಿಂದಿನ ಪ್ರಯತ್ನ ವಿಫಲವಾಗಿತ್ತು.
ಮೂಲಗಳ ಪ್ರಕಾರ, ಟಿಎಂಸಿಯ 20 ಬಂಡಾಯ ಸಂಸದರನ್ನು ಎನ್ಸಿಪಿಐ ಜೊತೆ ವಿಲೀನಗೊಳಿಸುವ ಬಗ್ಗೆ ಸೋಮವಾರ ಆರಂಭವಾಗುವ ಪ್ರಕ್ರಿಯೆಗೂ ಮುನ್ನ ಲೋಕಸಭಾ ಸ್ಪೀಕರ್ ನಿರ್ಧರಿಸುವ ನಿರೀಕ್ಷೆಯಿದೆ. ಸ್ಪೀಕರ್ ವಿಲೀನವನ್ನು ಅನುಮೋದಿಸಿದರೆ, ಎನ್ಡಿಎ ಬಲ 318ಕ್ಕೆ ಏರುತ್ತದೆ.
ಜುಲೈ 20 ರಿಂದ ಆ.13 ರವರೆಗೆ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭ: ಸರ್ಕಾರದ ಕಾರ್ಯಸೂಚಿಯಲ್ಲಿ ಏನೇನಿದೆ?
ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ ಇತರ ಪ್ರಮುಖ ಮಸೂದೆಗಳಲ್ಲಿ ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2026 ಸೇರಿದೆ. ಇದನ್ನು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಡಿಸಲಿದ್ದಾರೆ. ಇದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಗರಿಷ್ಠ ಸಂಖ್ಯೆಯನ್ನು 33ರಿಂದ 37ಕ್ಕೆ ಹೆಚ್ಚಿಸುವ ಉದ್ದೇಶದಿಂದ ಹೊರಡಿಸಲಾದ ಅಧಿಸೂಚನೆಗೆ ಬದಲಿಯಾಗಿ ಜಾರಿಗೆ ಬರಲಿದೆ.
ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಈಗಾಗಲೇ ರಾಜ್ಯಸಭೆಯಲ್ಲಿ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಚರ್ಚಿಸಲು ನೋಟಿಸ್ ನೀಡಿದ್ದಾರೆ. ಅಯೋಧ್ಯೆ ರಾಮ ಮಂದಿರದ ಕಾಣಿಕೆ ಕಳ್ಳತನ ಪ್ರಕರಣದ ಬಗ್ಗೆಯೂ ವಿರೋಧ ಪಕ್ಷಗಳು ತೀವ್ರವಾಗಿ ಆರೋಪಗಳನ್ನು ಎತ್ತಲು ಯೋಜಿಸಿವೆ.