ನೇಪಾಳದಲ್ಲಿ ಭೀಕರ ಪ್ರವಾಹ: ಸದ್ಗುರು ಈಶಾ ಫೌಂಡೇಶನ್ನ 77 ಕೈಲಾಸ ಯಾತ್ರಿಕರು ನಾಪತ್ತೆ
Isha Foundation: ನೇಪಾಳದ ರಸುುವಾ ಜಿಲ್ಲೆಯಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದ್ದು, ಸದ್ಗುರು ಅವರ ಈಶಾ ಫೌಂಡೇಶನ್ನ ಕೈಲಾಸ ಮಾನಸ ಸರೋವರ ಯಾತ್ರಾ ತಂಡದ 77 ಮಂದಿ ನಾಪತ್ತೆಯಾಗಿದ್ದಾರೆ. ಟಿಬೆಟ್ನ ಗ್ಯಿರಾಂಗ್ನ ವಲಸೆ ಕಚೇರಿಯಲ್ಲಿದ್ದಾಗ ಪ್ರವಾಹ ಸಂಭವಿಸಿದ್ದು, ರಕ್ಷಣಾ ಕಾರ್ಯಕ್ಕೆ ಅಧಿಕಾರಿಗಳೊಂದಿಗೆ ಸಹಕರಿಸುತ್ತಿರುವುದಾಗಿ ಸದ್ಗುರು ತಿಳಿಸಿದ್ದಾರೆ. ಪ್ರವಾಹದಲ್ಲಿ ಹಲವು ಮನೆಗಳು ಹಾಗೂ ಸೇತುವೆಗಳು ಕೊಚ್ಚಿ ಹೋಗಿದ್ದು, 95 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನೇಪಾಳದಲ್ಲಿ ಸಂಭವಿಸಿದ ಪ್ರವಾಹ. ಒಳಚಿತ್ರದಲ್ಲಿ ಸದ್ಗುರು. -
ನವದೆಹಲಿ/ಕಠ್ಮಂಡು, ಆ. 26: ನೇಪಾಳದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ(Flash Flood) ಸದ್ಗುರು (Sadhguru) ಅವರ ಈಶಾ ಫೌಂಡೇಶನ್ಗೆ (Isha Foundation) ಸೇರಿದ ಕನಿಷ್ಠ 77 ಕೈಲಾಸ ಮಾನಸ ಸರೋವರ ಯಾತ್ರಿಕರು ನಾಪತ್ತೆಯಾಗಿದ್ದಾರೆ. ಟಿಬೆಟ್ನ ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ತಂಡವು ಟಿಬೆಟ್ನ ಗ್ಯಿರಾಂಗ್ ಪ್ರದೇಶದ ವಲಸೆ ಕಚೇರಿಯಲ್ಲಿದ್ದಾಗ ಪ್ರವಾಹ ಸಂಭವಿಸಿದೆ ಎಂದು ಸದ್ಗುರು ಆನ್ಲೈನ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಟಿಬೆಟ್ ಗಡಿಯಲ್ಲಿರುವ ನೇಪಾಳದ ರಸುುವಾ ಜಿಲ್ಲೆಯಲ್ಲಿ ಪ್ರವಾಹ ಭಾರಿ ಹಾನಿ ಉಂಟು ಮಾಡಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿವೆ. ಸೇತುವೆಗಳು ಹಾಗೂ ಮನೆಗಳು ಕೊಚ್ಚಿಹೋಗಿವೆ. ನೇಪಾಳದ ಮಾಧ್ಯಮಗಳ ವರದಿ ಪ್ರಕಾರ, ಇದುವರೆಗೆ 95 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸದ್ಗುರು ಅವರ ಎಕ್ಸ್ ಪೋಸ್ಟ್:
A terrible and tragic flash flood has taken place at Gyirong in Tibet - China, and one of our Kailash groups was caught in it. While on their way back, they were at the immigration office when the flood occurred and the building and much of the town seems to have been flooded.… pic.twitter.com/CqOBxsPlWo
— Sadhguru (@SadhguruJV) August 26, 2026
ಪ್ರವಾಹದ ಭೀಕರತೆಯನ್ನು ತೋರಿಸುವ ದೃಶ್ಯಗಳಲ್ಲಿ ಟಿಬೆಟ್ನ ಗ್ಯಿರಾಂಗ್ ಬಂದರು ಪ್ರದೇಶದಲ್ಲಿ ಭಾರಿ ಪ್ರಮಾಣದ ನೀರು ನುಗ್ಗಿ ವಲಸೆ ಕಚೇರಿಗೆ ಅಪ್ಪಳಿಸಿರುವುದು ಕಂಡುಬಂದಿದೆ. ಬಳಿಕ ನೀರಿನ ರಭಸ ನೇಪಾಳದ ರಸುುವಾ ಪ್ರದೇಶಕ್ಕೆ ಹರಿದು ಭೋಟೆ ಕೋಸಿ ನದಿ ಸುತ್ತಮುತ್ತ ಭಾರಿ ನಾಶ ಉಂಟುಮಾಡಿದೆ.
ನೇಪಾಳದಲ್ಲಿ ಭಾರಿ ಪ್ರವಾಹ: 8 ಮಂದಿ ಸಾವು, 105 ಭಾರತೀಯರು ನಾಪತ್ತೆ
ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡ ಸದ್ಗುರು, ತಮ್ಮ ಕೈಲಾಸ ಯಾತ್ರಾ ತಂಡವೊಂದು ಪ್ರವಾಹದಲ್ಲಿ ಸಿಲುಕಿದೆ ಎಂದು ತಿಳಿಸಿದ್ದಾರೆ. ಯಾತ್ರಿಕರು ವಾಪಸಾಗುವ ವೇಳೆ ವಲಸೆ ಕಚೇರಿಯಲ್ಲಿದ್ದಾಗ ಪ್ರವಾಹ ಸಂಭವಿಸಿದ್ದು, ಕಟ್ಟಡ ಸೇರಿದಂತೆ ಪಟ್ಟಣದ ಬಹುಭಾಗ ನೀರಿನಲ್ಲಿ ಮುಳುಗಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ನಾಪತ್ತೆಯಾದವರ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ಸದ್ಗುರು ವಿಷಾದಿಸಿದ್ದಾರೆ. ತಮ್ಮ ಸ್ವಯಂಸೇವಕರು ಹಾಗೂ ಸಹಾಯ ತಂಡಗಳು ರಕ್ಷಣಾ ಕಾರ್ಯಕ್ಕೆ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲು ಪ್ರಯತ್ನಿಸುತ್ತಿವೆ ಎಂದು ತಿಳಿಸಿದ್ದಾರೆ. ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ಸದ್ಗುರು ಅವರ ಪ್ರಕಾರ, ಕೈಲಾಸ ಯಾತ್ರೆಯಲ್ಲಿದ್ದ 21 ಗುಂಪುಗಳ ಪೈಕಿ 495 ಮಂದಿ ಸುರಕ್ಷಿತವಾಗಿ ವಾಪಸಾಗಿದ್ದಾರೆ. ಇನ್ನೂ 743 ಮಂದಿ ಟಿಬೆಟ್ನಲ್ಲಿ ಹಾಗೂ 148 ಮಂದಿ ನೇಪಾಳದಲ್ಲಿದ್ದಾರೆ. ನೇಪಾಳದ ತಿಮುರೆ ಪ್ರದೇಶದಲ್ಲಿ ಮೂವರು ಸ್ವಯಂಸೇವಕರು ಇದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಲಸೆ ಕಚೇರಿಯಲ್ಲಿದ್ದ 77 ಮಂದಿ, ನೇಪಾಳ ಪ್ರವಾಸೋದ್ಯಮ ಮಂಡಳಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿರುವ 105 ಭಾರತೀಯ ಕೈಲಾಸ ಯಾತ್ರಿಕರ ಪೈಕಿ ಇರಬಹುದು ಎಂದು ವರದಿಯಾಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಒಟ್ಟು 384 ಪ್ರಯಾಣಿಕರ ಸಂಪರ್ಕ ಕಡಿತಗೊಂಡಿದ್ದು, ಅವರಲ್ಲಿ 291 ಮಂದಿ ವಿದೇಶಿಗರು ಮತ್ತು 93 ಮಂದಿ ನೇಪಾಳದ ನಾಗರಿಕರು ಎಂದು ಹೇಳಲಾಗಿದೆ. ನಾಪತ್ತೆಯಾದವರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಸದ್ಗುರು, ಈ ಸಂಕಷ್ಟದ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ಯಾವುದೇ ಪ್ರಯತ್ನವನ್ನು ಕೈಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಗಮನಿಸಲು ತಾವು ಸ್ವತಃ ಪ್ರದೇಶದಲ್ಲಿರುವುದಾಗಿ ಅವರು ಹೇಳಿದ್ದಾರೆ.