ಸಂಪ್ರದಾಯ ಮುರಿದು ಬಿದ್ದಿದೆ: ಪುಟಿನ್ ಭೇಟಿಗೆ ವಿಪಕ್ಷಕ್ಕೆ ಅವಕಾಶ ನೀಡದಿರುವುದಕ್ಕೆ ಕೇಂದ್ರವನ್ನು ಟೀಕಿಸಿದ ರಾಹುಲ್ ಗಾಂಧಿ
Rahul Gandhi criticises the Central government: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ಅವಕಾಶ ನೀಡದಿರುವುದಕ್ಕೆ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಇದರಿಂದ ಭಾರತದಲ್ಲಿನ ರಾಜಕೀಯ ಸಂಪ್ರದಾಯ ಮುರಿಯಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ (ಸಂಗ್ರಹ ಚಿತ್ರ) -
ನವದೆಹಲಿ, ಡಿ. 4: ಕಾಂಗ್ರೆಸ್ ಸಂಸದ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರ್ಕಾರವನ್ನು (Central government) ಕಟುವಾಗಿ ಟೀಕಿಸಿದ್ದಾರೆ. ಕೇಂದ್ರವು ವಿರೋಧ ಪಕ್ಷದ ನಾಯಕರು ವಿದೇಶಿ ಗಣ್ಯರನ್ನು ಭೇಟಿಯಾಗುವುದನ್ನು ವ್ಯವಸ್ಥಿತವಾಗಿ ದೂರ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಹಿಂದಿನ ಆಡಳಿತಗಳು ಈ ಪದ್ಧತಿಯನ್ನು ಗೌರವಿಸುತ್ತಿದ್ದವು. ಆದರೆ ಈಗ ಅದನ್ನು ಕೈಬಿಡಲಾಗಿದೆ ಎಂದು ಅವರು ಹೇಳಿದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ನವದೆಹಲಿಗೆ ಆಗಮಿಸುವ ಮುನ್ನ ಮಾತನಾಡಿದ ರಾಹುಲ್ ಗಾಂಧಿ, ವಿದೇಶಿ ನಿಯೋಗಗಳೊಂದಿಗೆ ವಿರೋಧ ಪಕ್ಷದ ಸಭೆಗಳು ದೀರ್ಘಕಾಲದ ಸಂಸದೀಯ ರೂಢಿಯಾಗಿದೆ ಎಂದು ಹೇಳಿದರು. ಮಾಜಿ ಪ್ರಧಾನಿಗಳಾದ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಸರ್ಕಾರಗಳ ಅವಧಿಯಲ್ಲಿ ಇದು ನಡೆಯುತ್ತಿತ್ತು. ಇದು ಒಂದು ಸಂಪ್ರದಾಯ ಆದರೆ ಇತ್ತೀಚಿನ ದಿನಗಳಲ್ಲಿ, ವಿದೇಶಿ ಗಣ್ಯರು ಭೇಟಿ ನೀಡಿದಾಗ ಅಥವಾ ನಾನು ವಿದೇಶ ಪ್ರವಾಸ ಮಾಡುವಾಗ, ಸರ್ಕಾರವು ಅವರಿಗೆ ಎಲ್ಒಪಿಯನ್ನು ಭೇಟಿ ಮಾಡದಂತೆ ಸಲಹೆ ನೀಡುತ್ತದೆ. ನಾವು ಕೂಡ ಭಾರತವನ್ನು ಪ್ರತಿನಿಧಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಒಂದೇ ಕಾರಿನಲ್ಲಿ ತೆರಳಿದ್ದ ಮೋದಿ- ಪುಟಿನ್ ಅಂದು ಚರ್ಚಿಸಿದ್ದೇನು?
ಪ್ರಧಾನಿ ಸಚಿವಾಲ ಮತ್ತು ವಿದೇಶಾಂಗ ಸಚಿವಾಲಯ ವಿದೇಶದ ನಿಯೋಗಗಳನ್ನು ವಿಪಕ್ಷಗಳಿಂದ ದೂರವಿಡುತ್ತಿದೆ. ಭಾರತದ ನಿಲುವಿನ ಬಗ್ಗೆ ಎಲ್ಒಪಿ ವಿಭಿನ್ನ ದೃಷ್ಟಿಕೋನವನ್ನು ನೀಡುವುದನ್ನು ಸರ್ಕಾರ ಬಯಸುವುದಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಇಲ್ಲಿದೆ ವಿಡಿಯೊ:
VIDEO | Delhi: On Russian President Putin's visit, Lok Sabha LoP and Congress MP Rahul Gandhi (@RahulGandhi) says, "Generally, the tradition has been that whoever visits India, the LoP used to have a meeting. It used to happen in the Vajpayee government, the Manmohan Singh… pic.twitter.com/7dDoWCB3za
— Press Trust of India (@PTI_News) December 4, 2025
ಪುಟಿನ್ ದೆಹಲಿಗೆ ಬಂದಿಳಿಯಲಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಈ ಆರೋಪ ಹೊರಬಿದ್ದಿದೆ. ಕಳೆದ ವರ್ಷ ಮಾಸ್ಕೋದಲ್ಲಿ ಪುಟಿನ್, ಪ್ರಧಾನಿ ಮೋದಿ ಅವರಿಗೆ ಆತಿಥ್ಯ ನೀಡಿದ್ದರು. ಇದೀಗ ಪುಟಿನ್ ದೆಹಲಿಗೆ ಬಂದಿಳಿದ ಕೂಡಲೇ ಮೋದಿ ಅವರಿಗೆ ಖಾಸಗಿ ಭೋಜನ ಕೂಟವನ್ನು ಆಯೋಜಿಸಲಿದ್ದಾರೆ.
ಶುಕ್ರವಾರ ನಡೆಯಲಿರುವ ಅವರ ಔಪಚಾರಿಕ ಮಾತುಕತೆಗಳು ರಕ್ಷಣಾ ಸಹಕಾರವನ್ನು ವಿಸ್ತರಿಸುವುದು, ಭಾರತ-ರಷ್ಯಾ ವ್ಯಾಪಾರವನ್ನು ಬಾಹ್ಯ ಒತ್ತಡದಿಂದ ರಕ್ಷಿಸುವುದು ಮತ್ತು ಸಣ್ಣ ಮಾಡ್ಯುಲರ್ ಪರಮಾಣು ರಿಯಾಕ್ಟರ್ಗಳಲ್ಲಿನ ಸಹಯೋಗದ ಮೇಲೆ ಕೇಂದ್ರೀಕರಿಸುತ್ತದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್, ರಷ್ಯಾ ಮತ್ತು ಭಾರತದ ಸಂಬಂಧಗಳು ಬಹಳ ಹಿಂದಿನದ್ದು. ನಿಖರವಾಗಿ 70 ವರ್ಷಗಳ ಹಿಂದೆ ಯುಎಸ್ಎಸ್ಆರ್ನ ಎರಡು ಅಗ್ರ ನಾಯಕರು ಭಾರತಕ್ಕೆ ಬಂದರು. ನಿಕೊಲಾಯ್ ಬುಲ್ಗಾನಿನ್ ಮತ್ತು ನಿಕಿತಾ ಕ್ರುಶ್ಚೇವ್ 1955r ನವೆಂಬರ್ 18ರಿಂದ 30ರವರೆಗೆ ಮತ್ತು ಮತ್ತೆ 1955ರ ಡಿಸೆಂಬರ್ 7ರಿಂದ 14ರವರೆಗೆ 19 ದಿನಗಳ ಕಾಲ ಇಲ್ಲಿದ್ದರು. ಇದು ಆರು ತಿಂಗಳ ಹಿಂದೆ ಜವಾಹರಲಾಲ್ ನೆಹರೂ ಯುಎಸ್ಎಸ್ಆರ್ಗೆ ಪ್ರಯಾಣ ಬೆಳೆಸಿದ್ದರ ನಂತರ ನಡೆಯಿತು ಎಂದು ಹೇಳಿದರು.
ರಮೇಶ್ 1955ರಲ್ಲಿ ಸೋವಿಯತ್ ನಾಯಕರ ಭಾರತ ಭೇಟಿಯ ವಿಡಿಯೊ ತುಣುಕುಗಳನ್ನು ಸಹ ಹಂಚಿಕೊಂಡಿದ್ದಾರೆ. ಕೆಲವು ವರ್ಷಗಳ ನಂತರ, ತಂತ್ರಜ್ಞಾನ ಹಸ್ತಾಂತರದೊಂದಿಗೆ ಎಚ್ಎಎಲ್ನಲ್ಲಿ ಮಿಗ್ ವಿಮಾನಗಳನ್ನು ತಯಾರಿಸಲಾಗತೊಡಗಿತು. ಈ ಭೇಟಿಯು ಓಎನ್ಜಿಸಿ ಮತ್ತು ಐಡಿಪಿಎಲ್ನಂತಹ ಅನೇಕ ಸಾರ್ವಜನಿಕ ಕ್ಷೇತ್ರ ಸಂಸ್ಥೆಗಳ ಭವಿಷ್ಯ ರೂಪಿಸುವುದಕ್ಕೂ ಸಹಾಯ ಮಾಡಿತು. ಅವುಗಳ ಮೂಲಕ ಅನೇಕ ಖಾಸಗಿ ಉದ್ಯಮಗಳು ಹುಟ್ಟಿ ಬೆಳೆದವು ಎಂದು ಅವರು ಹೇಳಿದರು.
ರಷ್ಯಾ ಅಧ್ಯಕ್ಷರು ಶುಕ್ರವಾರ ರಾತ್ರಿ ಸುಮಾರು 9.30ರ ಸುಮಾರಿಗೆ ಭಾರತದಿಂದ ನಿರ್ಗಮಿಸಲಿದ್ದು, ಅವರ ಸುಮಾರು 28 ಗಂಟೆಗಳ ಪ್ರವಾಸವು ಮುಕ್ತಾಯಗೊಳ್ಳುತ್ತದೆ.