ಸೆಪ್ಟೆಂಬರ್ನಲ್ಲಿ ಪ್ರಧಾನಿ ಮೋದಿ ನಿವೃತ್ತಿ ಘೋಷಿಸುತ್ತಾರಾ? ಬಿಜೆಪಿಯ 75 ವರ್ಷಕ್ಕೆ ನಿವೃತ್ತಿಯ ಅಘೋಷಿತ ನಿಯಮದ ಬಗ್ಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
Mohan Bhagwat: ʼʼ75 ವರ್ಷ ತುಂಬುತ್ತಿದ್ದಂತೆ ನಾನು ನಿವೃತ್ತನಾಗುತ್ತೇನೆ ಅಥವಾ ಪ್ರಮುಖ ಹುದ್ದೆಯಲ್ಲಿರುವವರೊಬ್ಬರು ನಿವೃತ್ತರಾಗಿತ್ತಾರೆ ಎನ್ನುವ ಬಗ್ಗೆ ನಾನು ಎಂದಿಗೂ ಹೇಳಿಕೆ ನೀಡಿಲ್ಲʼʼ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆ ಮೂಲಕ ಈ ವರ್ಷದ ಪ್ರದಾನಿ ನರೇಂದ್ರ ಮೋದಿ ನಿವೃತ್ತರಾಗುತ್ತಾರೆ ಎನ್ನುವ ವದಂತಿಯನ್ನು ತಳ್ಳಿ ಹಾಕಿದ್ದಾರೆ.


ಹೊಸದಿಲ್ಲಿ: 75 ವರ್ಷಕ್ಕೆ ನಿವೃತ್ತಿ ಹೊಂದಬೇಕು ಎನ್ನುವ ಅಘೋಷಿತ ನಿಯಮ ಬಿಜೆಪಿಯಲ್ಲಿ ಜಾರಿಯಲ್ಲಿದೆ. ಹೀಗಾಗಿ ಈ ಸೆಪ್ಟೆಂಬರ್ 17ರಂದು 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ನಿವೃತ್ತಿ ಘೋಷಿಸುತ್ತಾರೆ ಎನ್ನುವ ಗಾಳಿಸುದ್ದಿ ಹರಿದಾಡುತ್ತಿದೆ. ಆದರೆ ಇದೀಗ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಎನಿಸಿಕೊಂಡಿರುವ ಆರ್ಎಸ್ಎಸ್ನ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಈ ವದಂತಿಯನ್ನು ಗುರುವಾರ (ಆಗಸ್ಟ್ 28) ತಳ್ಳಿ ಹಾಕಿದ್ದಾರೆ.
ಪ್ರಧಾನಿ ಮೋದಿ ಅವರಿಗಿಂತ 6 ದಿನ ಮೊದಲೇ (ಸೆಪ್ಟೆಂಬರ್ 11) 75 ವರ್ಷಕ್ಕೆ ಕಾಲಿಡುವ ಮೋಹನ್ ಭಾಗವತ್, 75 ವರ್ಷಕ್ಕೆ ನಿವೃತ್ತಿ ಎನ್ನುವ ಅಘೋಷಿತ ನಿಯಮದ ಬಗ್ಗೆ ಮಾತನಾಡಿದ್ದಾರೆ. ʼʼ75 ವರ್ಷ ತುಂಬುತ್ತಿದ್ದಂತೆ ನಾನು ನಿವೃತ್ತನಾಗುತ್ತೇನೆ ಅಥವಾ ಪ್ರಮುಖ ಹುದ್ದೆಯಲ್ಲಿರುವವರೊಬ್ಬರು ನಿವೃತ್ತರಾಗಿತ್ತಾರೆ ಎನ್ನುವ ಬಗ್ಗೆ ನಾನು ಎಂದಿಗೂ ಹೇಳಿಕೆ ನೀಡಿಲ್ಲʼʼ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
#WATCH | RSS chief Mohan Bhagwat says, "India's policy on population suggests 2.1 children, which means three children in a family. Every citizen should see that there should be three children in his/her family..." pic.twitter.com/1GR2Gv3oWl
— ANI (@ANI) August 28, 2025
ಈ ಸುದ್ದಿಯನ್ನೂ ಓದಿ: Mohan Bhagwat: ʼʼರಾಷ್ಟ್ರಗಳ ನಡುವಿನ ವ್ಯಾಪಾರವು ಒತ್ತಡ ಮುಕ್ತವಾಗಿರಬೇಕುʼʼ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ʼʼಆರ್ಎಸ್ಎಸ್ ಏನು ಹೇಳುತ್ತೋ ಅದನ್ನು ನಾವು ನಿರ್ವಹಿಸುತ್ತೇವೆʼʼ ಎಂದು ಅವರು ಹೇಳಿದ್ದಾರೆ. 75 ವರ್ಷ ತುಂಬುತ್ತಿದ್ದಂತೆ ಮೋದಿ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಬಿಜೆಪಿ ಪದೇ ಪದೆ ಹೇಳುತ್ತಲೇ ಬಂದಿದೆ. ಅದನ್ನು ಮೋಹನ್ ಭಾಗವತ್ ಇದೀಗ ಸಮರ್ಥಿಸಿಕೊಂಡಿದ್ದಾರೆ. 80 ವರ್ಷದ ಬಿಹಾರದ ನಾಯಕ ಜಿತನ್ ರಾಮ್ ಮಾಂಝಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಕಳೆದ ಕೆಲವು ವರ್ಷಗಳಿಂದ ವಿಪಕ್ಷಗಳು ಬಿಜೆಪಿಯ 75 ವರ್ಷಕ್ಕೆ ನೀವೃತ್ತರಾಗುವ 'ನಿಯಮ'ವನ್ನುಆಯುಧವಾಗಿ ಬಳಸಿಕೊಂಡು ಟೀಕಿಸುತ್ತಲೇ ಬಂದಿವೆ. 2019ರ ಲೋಕಸಭಾ ಚುನಾವಣೆಗೆ ಮೊದಲು ಗೃಹ ಸಚಿವ ಅಮಿತ್ ಶಾ ಮಾತನಾಡಿ 75 ವರ್ಷಕ್ಕಿಂತ ಮೇಲ್ಪಟ್ಟ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಬಿಜೆಪಿ ನಿರ್ಧರಿಸಿದೆ ಎಂಬ ಹೇಳಿಕೆ ನೀಡಿದ್ದರು. ಈ ಕಾರಣದಿಂದ ವಿಪಕ್ಷಗಳ ಟೀಕೆ ಉತ್ತುಂಗಕ್ಕೇರಿದೆ. ಅದಾದ ಬಳಿಕ "ಬಿಜೆಪಿಯ ನಿಯಮದಲ್ಲಿ ಎಲ್ಲಿಯೂ ವಯಸ್ಸಿನ ಬಗ್ಗೆ ಯಾವುದೇ ನಿಬಂಧನೆ ಇಲ್ಲ" ಎಂದು ಅಮಿತ್ ಶಾ ಸ್ಪಷನೆಯನ್ನೂ ನೀಡಬೇಕಾಯಿತು.
ಪಟ್ಟು ಬಿಡದ ವಿಪಕ್ಷವು, 2019ರಲ್ಲಿ 92 ಮತ್ತು 90 ವರ್ಷದ ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರನ್ನು ಚುನಾವಣಾ ಕಣದಿಂದ ದೂರವಿರಿಸಿದಾಗ ಅದೇ ಅಂಶವನ್ನು ದಾಳವಾಗಿ ಬಳಸಿತ್ತು. ಅದೇ ವರ್ಷ ಭಗತ್ ಸಿಂಗ್ ಕೋಶ್ಯಾರಿ (76) ಮತ್ತು ಬಿ.ಸಿ. ಖಂಡೂರಿ (85) ಸೇರಿದಂತೆ ಇತರ ಬಿಜೆಪಿ ನಾಯಕರನ್ನು ಕೈಬಿಡಲಾಗಿತ್ತು. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಕೂಡ ಕಳೆದ ವರ್ಷ 2025ರಲ್ಲಿ ಮೋದಿ ನೀವೃತ್ತರಾಗಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ನಿವೃತ್ತಿಯ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಜನಸಂಖ್ಯಾ ಅಸಮತೋಲನಕ್ಕೆ ಮತಾಂತರ ಕಾರಣ
ದೆಹಲಿಯಲ್ಲಿ ಆಯೋಜಿಸಿದ್ದ ಆರ್ಎಸ್ಎಸ್ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ʼʼಜನಸಂಖ್ಯಾ ಅಸಮತೋಲನಕ್ಕೆ ಮತಾಂತರ ಮತ್ತು ಅಕ್ರಮ ವಲಸೆ ಪ್ರಮುಖ ಕಾರಣ. ಸರ್ಕಾರ ಅಕ್ರಮ ವಲಸೆಯನ್ನು ತಡೆಯಲು ಪ್ರಯತ್ನಿಸುತ್ತಿರುವಾಗ ಸಮಾಜವೂ ತನ್ನ ಪಾತ್ರವನ್ನು ನಿರ್ವಹಿಸಬೇಕುʼʼ ಎಂದು ಕರೆ ನೀಡಿದ್ದಾರೆ. ಎಂದು ಹೇಳಿದರು.
ಧರ್ಮವು ವೈಯಕ್ತಿಕ ಆಯ್ಕೆಯಿಂದ ಬಂದಿದ್ದು, ಇದರಲ್ಲಿ ಯಾವುದೇ ಆಮಿಷ ಅಥವಾ ಬಲವಂತ ಇರಬಾರದು ಎಂದು ಪ್ರತಿಪಾದಿಸಿದರು.