ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ವಿಜಯ್ ಜತೆ ಸೇರಿಕೊಂಡಿರುವುದು ಅನೈತಿಕತೆ”: ಟಿವಿಕೆ ಜತೆಗಿನ ಮೈತ್ರಿ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ವಾಗ್ದಾಳಿ

TVK-Congress alliance: ನಾವು ಸಂಪೂರ್ಣವಾಗಿ ಅತಂತ್ರ ಸ್ಥಿತಿಯಲ್ಲಿದ್ದೇವೆ. ನಾವು ವಿಜಯ್ ಅವರೊಂದಿಗೆ ಕೈಜೋಡಿಸುವ ಮೂಲಕ ಕೇವಲ ಅನೈತಿಕತೆಯನ್ನಷ್ಟೇ ಮಾಡಿಲ್ಲ, ಬದಲಾಗಿ ಅವರಿಗೆ ಬಹುಮತ ಸಿಗುವಂತೆ ನೋಡಿಕೊಳ್ಳದ ರಾಜಕೀಯ ಮೂರ್ಖತನವನ್ನೂ ಮಾಡಿದ್ದೇವೆ. ಹಾಗಾಗಿ, ಈಗ ಅಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್‌ ನಾಯಕ ಮಣಿಶಂಕರ್ ಅಯ್ಯರ್ ಟೀಕಿಸಿದ್ದಾರೆ.

ಟಿವಿಕೆ ಜತೆಗಿನ ಮೈತ್ರಿ ಬಗ್ಗೆ ಮಣಿಶಂಕರ್ ಅಯ್ಯರ್ ವಾಗ್ದಾಳಿ

ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ (ಸಂಗ್ರಹ ಚಿತ್ರ) -

Priyanka P
Priyanka P May 8, 2026 6:29 PM

ನವದೆಹಲಿ, ಮೇ 8: ತಮಿಳುನಾಡಿನಲ್ಲಿ ಡಿಎಂಕೆ ಆಡಳಿತವನ್ನು ಕೊನೆಗೊಳಿಸಿ, ಚುನಾವಣೆಯಲ್ಲಿ ಕಿಂಗ್‌ಮೇಕರ್ ಆದ ಟಿವಿಕೆ (TVK) ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದಕ್ಕೆ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyar) ಅಸಮಾಧಾನಗೊಂಡಿದ್ದಾರೆ. ಈ ಮೈತ್ರಿಯನ್ನು ಅವರು ಭಯಾನಕ ಎಂದು ಕರೆದಿದ್ದಾರೆ. ಕಾಂಗ್ರೆಸ್‌ನ ಈ ನಡೆ ಕೀಳುಮಟ್ಟದ ರಾಜಕೀಯ ಅವಕಾಶವಾದ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಟಿವಿಕೆಯನ್ನು ಕಾಂಗ್ರೆಸ್‌ ವಿರೋಧಿಸಿತ್ತು. ಇದೀಗ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ, ಸ್ವರಾಜ್ಯವು ನೈತಿಕತೆಯ ಆಧಾರದ ಮೇಲೆ ಸರ್ಕಾರವಾಗಿರಬೇಕು ಎಂಬ ಮಹಾತ್ಮ ಗಾಂಧಿಯವರ 1925ರ ಸೂತ್ರವನ್ನು ಪಕ್ಷ ಉಲ್ಲಂಘಿಸಿದೆ ಎಂದು ಅವರು ಹೇಳಿದರು. ಇಂತಹ ಅನುಕೂಲಸಿಂಧು ರಾಜಕೀಯವು ಮುಂದುವರಿಯುವ ಮಾರ್ಗವಲ್ಲ ಎಂದು ಅಯ್ಯರ್ ತಿಳಿಸಿದರು.

ತಮಿಳುನಾಡಿನಲ್ಲಿ ಅಚ್ಚರಿಯ ಬೆಳವಣಿಗೆ; ರಾಜೀನಾಮೆಗೆ ಮುಂದಾದ ಎಲ್ಲ 107 ಟಿವಿಕೆ ಶಾಸಕರು!

ನಾವು ಸಂಪೂರ್ಣವಾಗಿ ಅತಂತ್ರ ಸ್ಥಿತಿಯಲ್ಲಿದ್ದೇವೆ. ನಾವು ವಿಜಯ್ ಅವರೊಂದಿಗೆ ಕೈಜೋಡಿಸುವ ಮೂಲಕ ಕೇವಲ ಅನೈತಿಕತೆಯನ್ನಷ್ಟೇ ಮಾಡಿಲ್ಲ, ಬದಲಾಗಿ ಅವರಿಗೆ ಬಹುಮತ ಸಿಗುವಂತೆ ನೋಡಿಕೊಳ್ಳದ ರಾಜಕೀಯ ಮೂರ್ಖತನವನ್ನೂ ಮಾಡಿದ್ದೇವೆ. ಹಾಗಾಗಿ, ಈಗ ಅಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಇದು ವಿವೇಕವೇ? ಅಥವಾ ಉತ್ತಮ ರಾಜಕೀಯವೇ? ಅಥವಾ ಒಳ್ಳೆಯ ನೈತಿಕತೆಯೇ? ಇಂತಹ ಅವಕಾಶವಾದಿ ರಾಜಕಾರಣದಿಂದ ಯಾವ ಮಾನದಂಡ ತಾನೇ ತೃಪ್ತಿಯಾಗುತ್ತದೆ? ಈ ರೀತಿಯ ರಾಜಕಾರಣದೊಂದಿಗೆ ನಾವು ಮುಂದೆ ಸಾಗಲು ಸಾಧ್ಯವಿಲ್ಲ ಎಂದು ಅಯ್ಯರ್ ಹೇಳಿದರು.

ಇದೀಗ ಸಣ್ಣ ಪಕ್ಷಗಳು ಸಹ ವಿಜಯ್ ಅವರನ್ನು ಬೆಂಬಲಿಸಿವೆ. ಅವರಿಗೆ ಬಹುಮತಕ್ಕೆ ಸಹಾಯ ಮಾಡಿವೆ ಎಂಬ ಸುದ್ದಿ ಈಗ ಹೊರಹೊಮ್ಮಿದೆ. ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿದ್ದು, ಡಿಎಂಕೆ ಜತೆಗಿನ ದಶಕಗಳಷ್ಟು ಹಳೆಯದಾದ ಮೈತ್ರಿಯ ಬಲದಿಂದ ಎಂದು ಅಯ್ಯರ್ ತಮ್ಮ ಟೀಕೆಯನ್ನು ಮುಂದುವರಿಸಿದರು.

ಬಿಜೆಪಿಗೆ ಅನುಕೂಲ?

ಮುಂದಿನ ವರ್ಷಗಳಲ್ಲಿ ವಿಜಯ್ ಸ್ಥಿರ ಬಹುಮತ ಗಳಿಸುವಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಅಯ್ಯರ್ ಪ್ರಶ್ನಿಸಿದರು. ಒಂದು ವೇಳೆ ಕಾಂಗ್ರೆಸ್‌ನ ಈ ನಿರ್ಧಾರವು ಕೋಮುವಾದಿ ಬಿಜೆಪಿಗೆ ತಮಿಳುನಾಡಿನ ರಾಜಕೀಯದೊಳಗೆ ಹಿಂಬಾಗಿಲಿನಿಂದ ಪ್ರವೇಶ ಪಡೆಯಲು ದಾರಿ ಮಾಡಿಕೊಟ್ಟರೆ, ಅದು ರಾಜಕೀಯ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸ್ವಯಂ ಗೋಲ್ ಎಂದು ಸಾಬೀತಾಗಲಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಈ ಅಸ್ಥಿರ ನಿರ್ಧಾರವು ಬಿಜೆಪಿಗೆ ಅನುಕೂಲ ಮಾಡಿಕೊಡಬಹುದು ಎಂದು ಅವರು ಎಚ್ಚರಿಸಿದ್ದಾರೆ. ಮತ್ತೆ ಯಾರು ನಮ್ಮನ್ನು ನಂಬುತ್ತಾರೆ? ಎಂದು ಅವರು ಪ್ರಶ್ನಿಸಿದರು.