ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಂದ್ರನಾಥ್ ರಾತ್ ಹತ್ಯೆಯ ಕಾರಣ ತಿಳಿಸಿದ ಸುವೇಂದು ಅಧಿಕಾರಿ; ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಯ ಸೋಲಿಗೆ ಈ ರೀತಿ ಸೇಡು ತೀರಿಸಿತಾ ಟಿಎಂಸಿ?

Chandranath Rath murder: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಹೀನಾಯವಾಗಿ ಸೋತಿದ್ದು, ಹಿಂಸಾಚಾರ ಭುಗಿಲೆದ್ದಿದೆ. ಭವಾನಿಪುರದಲ್ಲಿ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಸೋಲಿಸಿದ್ದಕ್ಕೆ ಚಂದ್ರನಾಥ್ ರಾತ್‌ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. “ರಾತ್ ನನ್ನ ಸಹಾಯಕರಾಗಿದ್ದರು. ನಾನು ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದೆ ಎಂಬ ಕಾರಣಕ್ಕಾಗಿ ಅವರನ್ನು ಕೊಲ್ಲಲಾಯಿತು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂದ್ರನಾಥ್ ರಾತ್ ಹತ್ಯೆ ಬಗ್ಗೆ ಸುವೇಂದು ಅಧಿಕಾರಿ ಹೇಳಿದ್ದೇನು?

ಚಂದ್ರನಾಥ್ ರಾತ್, ಹಾನಿಗೀಡಾದ ಕಾರ್‌ ಮತ್ತು ಸುವೇಂದು ಅಧಿಕಾರಿ -

Priyanka P
Priyanka P May 7, 2026 6:07 PM

ಕೋಲ್ಕತ್ತಾ, ಮೇ 7: ಆಪ್ತ ಸಹಾಯಕನ ಹತ್ಯೆ ಪ್ರಕರಣ ಸಂಬಂಧ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ (Suvendu Adhikari) ಗಂಭೀರ ಆರೋಪ ಮಾಡಿದ್ದಾರೆ. ಭವಾನಿಪುರದಲ್ಲಿ ತೃಣಮೂಲ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಸೋಲಿಸಿದ್ದಕ್ಕೆ ಚಂದ್ರನಾಥ್ ರಾತ್‌ (Chandranath Rath) ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿ ಆರೋಪಿಸಿದ್ದಾರೆ. “ರಾತ್ ನನ್ನ ಸಹಾಯಕರಾಗಿದ್ದರು. ನಾನು ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದೆ ಎಂಬ ಕಾರಣಕ್ಕಾಗಿ ಅವರನ್ನು ಕೊಲ್ಲಲಾಯಿತು” ಎಂದು ಅಧಿಕಾರಿ ರಾತ್ ಅವರ ಕುಟುಂಬವನ್ನು ಭೇಟಿಯಾದ ನಂತರ ಹೇಳಿದರು.

ʼʼಈ ಕೊಲೆಯನ್ನು ನಾವು ಎಷ್ಟೇ ಖಂಡಿಸಿದರೂ ಅದು ಕಡಿಮೆಯೇ. ಈ ಕೊಲೆ ಮಾಡಿದವರನ್ನು ಬಂಧಿಸಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂಬ ಅವರ ಕುಟುಂಬದ ಬೇಡಿಕೆಗೆ ನಾನು ಬದ್ಧನಾಗಿದ್ದೇನೆ. ಮರಣೋತ್ತರ ಪರೀಕ್ಷೆಯಲ್ಲಿ ನಾಲ್ಕು ಗುಂಡುಗಳನ್ನು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ಇದು ಪೂರ್ವಯೋಜಿತ ಕೊಲೆʼʼ ಎಂದು ಅವರು ತಿಳಿಸಿದರು.

ಸುವೇಂದು ಅಧಿಕಾರಿ ಮಾತನಾಡಿರುವ ವಿಡಿಯೊ ಇಲ್ಲಿದೆ:



ತೃಣಮೂಲ ಕಾಂಗ್ರೆಸ್ ಪೋಸ್ಟ್:



ಈ ಹತ್ಯೆಯನ್ನು ಸುವೇಂದು ಅಧಿಕಾರಿ ಯೋಜಿತ ಕೊಲೆ ಎಂದು ಹೇಳಿದ್ದಾರೆ. ದಾಳಿಯ ನಂತರ ರಾತ್ ಅವರನ್ನು ದಾಖಲಿಸಲಾಗಿದ್ದ ಆಸ್ಪತ್ರೆಯ ಹೊರಗೆ ಮಾತನಾಡಿದ ಅಧಿಕಾರಿ, ಈ ಘಟನೆಯು ಹೃದಯ ವಿದ್ರಾವಕ ಎಂದು ಕರೆದರು. ರಾತ್ ಪ್ರಯಾಣಿಸುತ್ತಿದ್ದ ಕಾರಿನ ಎಡಭಾಗದ ಮುಂಭಾಗದ ಕಿಟಕಿ ಬುಲೆಟ್ ತೂತುಗಳಿಂದ ಪುಡಿಯಾಗಿರುವುದನ್ನು ದೃಶ್ಯಗಳು ತೋರಿಸಿವೆ. ರಾತ್ ಅವರ ಚಾಲಕ ಬುದ್ಧದೇವ್ ಕೂಡ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆದ ಸಂದರ್ಭದಲ್ಲಿ ಅಧಿಕಾರಿ ರಾತ್ ಅವರೊಂದಿಗೆ ಇರಲಿಲ್ಲ.

ಮಾಜಿ ಯೋಧನಿಂದ ಸುವೇಂದು ಅಧಿಕಾರಿಯ ಆಪ್ತ ಸಹಾಯಕನವರೆಗೆ: ಹತ್ಯೆಗೀಡಾದ ಚಂದ್ರನಾಥ ರಾತ್ ಯಾರು?

ವಿಶೇಷ ತನಿಖಾ ತಂಡ

ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ʼʼಈ ಘಟನೆಯು ತೃಣಮೂಲ ಕಾಂಗ್ರೆಸ್‌ ವರ್ಷಗಳಿಂದ ಬೆಳೆಸುತ್ತಿರುವ ಹಿಂಸಾಚಾರದ ಸಂಸ್ಕೃತಿಯ ಸಂಕೇತ. ರಾತ್‌ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಇದರ ಬಗ್ಗೆ ತನಿಖೆ ನಡೆಸಬೇಕು. ಹತ್ಯೆಯ ಹಿಂದೆ ಪಿತೂರಿ ಇದೆʼʼ ಎಂದು ಬಿಜೆಪಿ ನಾಯಕ ನಿಖಿಲ್ ಪ್ರಸೂನ್ ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಈ ಕೊಲೆಯನ್ನು ಖಂಡಿಸಿದ್ದು, ಚುನಾವಣೋತ್ತರ ಹಿಂಸಾಚಾರಕ್ಕೆ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳು ಕಾರಣ ಎಂದು ಆರೋಪಿಸಿದೆ. 2021ರ ಬಂಗಾಳ ಚುನಾವಣೆಗೆ ಮುನ್ನ ಬಿಜೆಪಿಗೆ ಹಾರುವ ಮೊದಲು ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್‌ ನಾಯಕಿಯನ್ನು ಅವರದೇ ಭದ್ರಕೋಟೆ ಭವಾನಿಪುರದಲ್ಲಿ 15,106 ಮತಗಳಿಂದ ಸೋಲಿಸಿದರು. ಕಳೆದ ಚುನಾವಣೆಯಲ್ಲಿಯೂ ಅಧಿಕಾರಿ ಅವರನ್ನು ಸೋಲಿಸಿ, ನಂದಿಗ್ರಾಮವನ್ನು 1,956 ಮತಗಳಿಂದ ಗೆದ್ದಿದ್ದರು.

ಮೊದಲ ಬಾರಿ ಬಿಜೆಪಿ ಆಡಳಿತ

15 ವರ್ಷಗಳ ಕಾಲ ಮಮತಾ ಬ್ಯಾನರ್ಜಿ ಅವರ ಹಿಡಿತದಲ್ಲಿದ್ದ ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿದೆ. ಬಿಜೆಪಿಯು ಈ ಚುನಾವಣೆಯಲ್ಲಿ ರಾಜ್ಯದ 294 ಸ್ಥಾನಗಳಲ್ಲಿ 207 ಸ್ಥಾನಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ರಾಜ್ಯದ ಇತಿಹಾಸದಲ್ಲೇ ಬಿಜೆಪಿ ಮೊದಲ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದಿದೆ.

ಮತದಾರರ ಪಟ್ಟಿಯ ಎಸ್ಐಆರ್ ಮತ್ತು ಮತದಾನದ ಮೊದಲು ಆಯ್ದ ಉನ್ನತ ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಚುನಾವಣಾ ಆಯೋಗದೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಬಿಜೆಪಿ 100 ಸ್ಥಾನಗಳನ್ನು ಲೂಟಿ ಮಾಡಿದೆ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.