ಬದನೆಕಾಯಿ ಖಾದ್ಯ-ರೊಟ್ಟಿ ತಿಂದು 9 ತಿಂಗಳ ಮಗು ಸೇರಿ ಮೂವರು ಸಹೋದರಿಯರ ದುರ್ಮರಣ; ಸಾವಿನ ಸುತ್ತ ಅನುಮಾನದ ಹುತ್ತ
Food Poisoning: ಒಂಭತ್ತು ತಿಂಗಳ ಮಗು ಸೇರಿ ಮೂವರು ಅಪ್ರಾಪ್ತ ಸಹೋದರಿಯರು ಬೈಂಗನ್ ಭರ್ತಾ (ಹಿಸುಕಿದ ಬದನೆಕಾಯಿ) ಮತ್ತು ರೊಟ್ಟಿ ತಿಂದು ಮೃತಪಟ್ಟಿರುವ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆ ನಡೆಸದೆ ಕುಟುಂಬವು ಮೃತದೇಹವನ್ನು ಹೂಳಿದೆ ಎಂದು ಪೊಲೀಸರಿಗೆ ಅಧಿಕಾರಿಗಳು ತಿಳಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ -
ಭೋಪಾಲ್, ಆ. 22: ಒಂಭತ್ತು ತಿಂಗಳ ಮಗು ಸೇರಿದಂತೆ ಮೂವರು ಅಪ್ರಾಪ್ತ ಸಹೋದರಿಯರು ಬೈಂಗನ್ ಭರ್ತಾ (ಹಿಸುಕಿದ ಬದನೆಕಾಯಿ) ಮತ್ತು ರೊಟ್ಟಿ ತಿಂದು ಮೃತಪಟ್ಟ ದಾರುಣ ಘಟನೆ ಮಧ್ಯ ಪ್ರದೇಶದ (Madhya Pradesh) ಛತ್ತರ್ಪುರ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರಿಗೆ ತಿಳಿಸದೆ, ಮರಣೋತ್ತರ ಪರೀಕ್ಷೆಗಳನ್ನು ಏರ್ಪಡಿಸದೆ ಕುಟುಂಬವು ಮೃತದೇಹವನ್ನು ಹೂಳಿದೆ ಎಂದು ಅಧಿಕಾರಿಗಳಿಗೆ ತಿಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಮೃತರನ್ನು ಮಧ್ಯ ಪ್ರದೇಶದ ಛತ್ತರ್ಪುರ ಜಿಲ್ಲೆಯ ಪಿಪೋರಾ ಖುರ್ದ್ ಗ್ರಾಮದ ಬಲ್ಮುಕುಂದ್ ಕುಶ್ವಾಹ ಅವರ ಪುತ್ರಿಯರಾದ 7 ವರ್ಷದ ಪೂನಂ, 3 ವರ್ಷದ ಮನೀಷಾ ಮತ್ತು 9 ತಿಂಗಳ ಚಾಹತ್ ಎಂದು ಗುರುತಿಸಲಾಗಿದೆ. ಮಕ್ಕಳು ಸಾಯುವ ಮುನ್ನ ರೊಟ್ಟಿ ಮತ್ತು ಬದನೆ ಖಾದ್ಯ ಸೇವಿಸಿದ್ದರು ಎನ್ನಲಾಗಿದೆ. ಒಂಬತ್ತು ತಿಂಗಳ ಮಗು ಕರಿ ಮತ್ತು ರೊಟ್ಟಿ ತಿನ್ನಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಮೃದುವಾದ ಮತ್ತು ದ್ರವಾಹಾರವನ್ನು ನೀಡಲಾಗುತ್ತದೆ. ಹೀಗಾಗಿ ಶಿಶುವಿನ ಸಾವಿ ಇನ್ನಷ್ಟು ಜಟಿಲವಾಗಿದೆ.
ವೈದ್ಯಕೀಯ ಪರೀಕ್ಷೆ ಅಥವಾ ಪೊಲೀಸ್ ಹಸ್ತಕ್ಷೇಪವಿಲ್ಲದೆ ಶವಗಳನ್ನು ಹೂಳಲಾಗಿದೆ ಎಂಬ ಅಂಶವು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. ಅಲ್ಲದೆ, ಹಿಂದೂ ಸಮುದಾಯಕ್ಕೆ ಸೇರಿದ ಹುಡುಗಿಯರನ್ನು ಏಕೆ ಹೂಳಲಾಯಿತು? ದಹನ ಮಾಡಲಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಪತ್ನಿ, ಸಹೋದರಿ ಕೊಂದು ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಮಾಹಿತಿಯ ನಂತರ, ಪೊಲೀಸ್ ತಂಡ ಗ್ರಾಮಕ್ಕೆ ಭೇಟಿ ನೀಡಿ ಸಮಾಧಿ ಸ್ಥಳವನ್ನು ಪರಿಶೀಲಿಸಿತು. ಪೊಲೀಸರು ಈಗ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದಾರೆ. ಮಕ್ಕಳ ಸಾವು ಹೇಗಾಯಿತು? ಫುಡ್ ಪಾಯಿಸನ್, ಅನಾರೋಗ್ಯ ಅಥವಾ ಇತರ ಕಾರಣಗಳಿಂದ ಉಂಟಾಗಿದೆಯೇ ಎಂಬುದನ್ನು ನಿರ್ಧರಿಸಲು ತನಿಖೆ ಚುರುಕಿಗೊಳಿಸಲಾಗಿದೆ.
ಒಂದು ವೇಳೆ ಮೂವರು ಹೆಣ್ಣು ಮಕ್ಕಳು ಎನ್ನುವ ಕಾರಣಕ್ಕೆ ಕುಟುಂಬವೇ ಕೊಲೆ ಮಾಡಿತಾ ಎನ್ನುವ ಅನುಮಾನವೂ ಮೂಡಿದೆ. ಕುಟುಂಬಸ್ಥರ ಶಂಕಾಸ್ಪದ ನಡೆಯ ಮೇಲೆಯೇ ಸದ್ಯ ಚರ್ಚೆ ನಡೆಯುತ್ತಿದೆ. ತನಿಖೆಯ ಬಳಿಕವೇ ಸಾವಿಗೆ ನಿಜವಾದ ಕಾರಣ ಗೊತ್ತಾಗಲಿದೆ.