ಪಶ್ಚಿಮ ಬಂಗಾಳದಲ್ಲಿ ಕಳೆದ ಬಾರಿಯ 8 ಹಂತಗಳ ಬದಲು 2 ಹಂತಗಳಲ್ಲಿ ಮತದಾನ: ಕಾರಣವೇನು?
West Bengal to Vote in 2 Phases: ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ಮಾಡಲಿದೆ. ಕಳೆದ ಬಾರಿ 8 ಬಾರಿ ವಿಧಾನಸಭಾ ಚುನಾವಣೆ ನಡೆದಿತ್ತು. 2021ರಲ್ಲಿ ಬಂಗಾಳದಲ್ಲಿ ಮತದಾನವು ಸುಮಾರು ಒಂದು ತಿಂಗಳ ಕಾಲ ನಡೆದಿತ್ತು. ಈ ಬಾರಿ ವಾರದಲ್ಲೇ ಮತದಾನ ಪ್ರಕ್ರಿಯೆ ಮುಗಿಯಲಿದೆ.
ಮಮತಾ ಬ್ಯಾನರ್ಜಿ, ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ನವದೆಹಲಿ, ಮಾ. 15: ಚುನಾವಣಾ ಆಯೋಗವು (Election Commission) ಮಾ. 15ರಂದು 4 ರಾಜ್ಯಗಳಾದ ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ (West Bengal) ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿ, ಪಶ್ಚಿಮ ಬಂಗಾಳವು ಏಪ್ರಿಲ್ 23 ಮತ್ತು 29ರಂದು ಕೇವಲ 2 ಹಂತಗಳಲ್ಲಿ ಮತದಾನ ಮಾಡಲಿದೆ. ಇದು ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ಕಂಡುಬಂದ ಎಂಟು ಹಂತದ ಮತದಾನಗಿಂತ ತೀವ್ರ ಕುಸಿತ ಕಂಡಿದೆ.
2021ರಲ್ಲಿ ಬಂಗಾಳದಲ್ಲಿ ಮತದಾನವು ಎಂಟು ಹಂತಗಳಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆಯಿತು. ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗಿ ಏಪ್ರಿಲ್ 29ರಂದು ಮುಕ್ತಾಯವಾಯಿತು. ಎಲ್ಲರ ಅನುಕೂಲಕ್ಕಾಗಿ ಹಂತಗಳ ಸಂಖ್ಯೆಯನ್ನು ಎರಡಕ್ಕೆ ಕಡಿತಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ಚುನಾವಣಾ ಆಯೋಗವು, ಹಂತಗಳ ಕುರಿತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿತು. ಬಹು ಹಂತಗಳಲ್ಲಿ ನಡೆಯುವ ಚುನಾವಣೆಗಳು ಪ್ರಚಾರ ಅವಧಿಯನ್ನು ದೀರ್ಘಗೊಳಿಸುತ್ತವೆ. ಇದರಿಂದಾಗಿ ಹೆಚ್ಚಿನ ಖರ್ಚು ಹಾಗೂ ದೈಹಿಕ ಶ್ರಮ ಬೇಕಾಗುತ್ತದೆ ಎಂದು ಹಲವು ರಾಜಕೀಯ ನಾಯಕರು ಬಹುಕಾಲದಿಂದ ವಾದಿಸುತ್ತಿದ್ದಾರೆ.
ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆ; SIR ಪ್ರಕ್ರಿಯೆಗೆ ಅಡೆತಡೆ ಒಡ್ಡದಂತೆ ಸುಪ್ರೀಂ ಎಚ್ಚರಿಕೆ
ದೀರ್ಘಕಾಲ ಚುನಾವಣಾ ವೇಳಾಪಟ್ಟಿಯನ್ನು ಟೀಕಿಸುವವರು, ಇಂತಹ ಕ್ರಮವು ಚುನಾವಣೆ ಪ್ರಕ್ರಿಯೆಯನ್ನು ಆರ್ಥಿಕವಾಗಿ ಭಾರವಾಗಿಸುವುದಷ್ಟೇ ಅಲ್ಲದೆ ಮತದಾರರಿಗೆ ಕೂಡ ಬೇಸರದ ಸಂಗತಿ ಎಂದು ಹೇಳಿದ್ದಾರೆ.
ಬಹು ಹಂತಗಳಲ್ಲಿ ನಡೆಯುವ ಚುನಾವಣೆಗಳು ಚುನಾವಣೆ ಪ್ರಕ್ರಿಯೆಯನ್ನು ಆರ್ಥಿಕವಾಗಿ ಭಾರವಾಗಿಸುವುದರ ಜತೆಗೆ, ಸಂಪೂರ್ಣ ಪ್ರಕ್ರಿಯೆಯನ್ನು ದೀರ್ಘ ಮತ್ತು ಏಕತಾನವಾಗಿಯೂ ಮಾಡುತ್ತದೆ ಎನ್ನುವ ಮಾತು ಕೇಳಿ ಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಸಮಯದ ಮೇಲೆ ಪ್ರಭಾವ ಬೀರಿದ ಮತ್ತೊಂದು ಪ್ರಮುಖ ಅಂಶವೆಂದರೆ ಪ್ರಸ್ತುತ ರಾಜ್ಯ ವಿಧಾನಸಭೆಯ ಅಧಿಕಾರಾವಧಿ. ವಿಧಾನಸಭೆಯ ಅವಧಿ ಮೇ 7ರಂದು ಕೊನೆಗೊಳ್ಳಲಿದೆ. ಸಾಂವಿಧಾನಿಕ ನಿಬಂಧನೆಗಳ ಅಡಿಯಲ್ಲಿ, ಆಡಳಿತದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ವಿಧಾನಸಭೆಯ ಅವಧಿ ಮುಗಿಯುವ ಮೊದಲು ಚುನಾವಣೆಗಳನ್ನು ನಡೆಸಬೇಕು.
ರಾಜಕೀಯವಾಗಿ ತೀವ್ರ ಹೋರಾಟ ನಡೆಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮತದಾನದ ವೇಳಾಪಟ್ಟಿಯನ್ನು ನಿರ್ಧರಿಸುವಲ್ಲಿ ಭದ್ರತೆಯೂ ಪ್ರಮುಖ ಅಂಶವಾಗಿದೆ. ಚುನಾವಣೆ ಸಿದ್ಧತೆಗಾಗಿ ಕೇಂದ್ರ ಭದ್ರತಾ ಪಡೆಗಳ ಸುಮಾರು 480 ಬೆಟಾಲಿಯನ್ಗಳನ್ನು ಈಗಾಗಲೇ ರಾಜ್ಯಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣಾ ಅವಧಿಯಲ್ಲಿ ಶಾಂತಿಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಲಾಗಿದೆ.