Shubhanshu Shukla: ಬಾಹ್ಯಾಕಾಶಕ್ಕೆ ಹೋಗುವಾಗ ಶುಭಾಂಶು ತೆಗೆದುಕೊಂಡು ಹೋಗಿದ್ದೇನು? ಮೋದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶುಕ್ಲಾ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, (Shubhanshu Shukla) ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (Narendra Modi) ಇಂದು (ಶುಕ್ರವಾರ) ಸಂವಾದ ನಡೆಸಿದ್ದಾರೆ. ಸಂಭಾಷಣೆಯಲ್ಲಿ ಇಲ್ಲಿಂದ ತೆರಳಬೇಕಾದರೆ ಏನೇನು ತೆಗೆದುಕೊಂಡು ಹೋಗಿದ್ದೀರಿ ಎಂದು ಕೇಳಿದ್ದಾರೆ.


ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, (Shubhanshu Shukla) ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (Narendra Modi) ಇಂದು (ಶುಕ್ರವಾರ) ಸಂವಾದ ನಡೆಸಿದ್ದಾರೆ. ಸಂಭಾಷಣೆಯಲ್ಲಿ ಇಲ್ಲಿಂದ ತೆರಳಬೇಕಾದರೆ ಏನೇನು ತೆಗೆದುಕೊಂಡು ಹೋಗಿದ್ದೀರಿ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಶುಕ್ಲಾ, ಬಾಹ್ಯಾಕಾಶಕ್ಕೆ ತಮ್ಮೊಂದಿಗೆ ಗಜರ್ ಕಾ ಹಲ್ವಾ ಮತ್ತು ಆಮ್ರಾಸ್ (ಮಾವಿನ ತಿರುಳಿನ ರಸ) ತಂದಿದ್ದಾಗಿ ಹೇಳಿದ್ದಾರೆ. ತಮ್ಮ ಸಹ ಗಗನಯಾತ್ರಿಗಳಿಗೆ ಭಾರತೀಯ ಸಾಂಪ್ರದಾಯಿಕ ತಿನಿಸುಗಳನ್ನು ನೀಡಿರುವುದಾಗಿ ಹೇಳದ್ದಾರೆ.
ನಾನು ಗಜರ್ ಕಾ ಹಲ್ವಾ ಮತ್ತು ಆಮ್ರಾಸ್ನಂತಹ ಆಹಾರ ಪದಾರ್ಥಗಳನ್ನು ನನ್ನೊಂದಿಗೆ ಬಾಹ್ಯಾಕಾಶಕ್ಕೆ ತಂದಿದ್ದೇನೆ ಮತ್ತು ನನ್ನ ಸಹ ಗಗನಯಾತ್ರಿಗಳಿಗೆ ಅವುಗಳನ್ನು ನೀಡಿದೆ. ಅವರಿಗೆ ಭಾರತೀಯ ತಿನಿಸುಗಳು ತುಂಬಾ ಇಷ್ಟವಾಯಿತು. ಅವರು ಎಲ್ಲಾ ಪದಾರ್ಥಗಳನ್ನು ಇಷ್ಟಪಟ್ಟು ತಿಂದಿದ್ದಾರೆ ಎಂದು ಬಾಹ್ಯಾಕಾಶ ನಿಲ್ದಾಣದಿಂದ ಶುಕ್ಲಾ ಹೇಳಿದ್ದಾರೆ. ಮುಂದುವರಿದು ಪ್ರಧಾನಿಯವರು ಇಲ್ಲಿಯವರೆಗೆ ನೋಡಿದ್ದೇನು ಎಂಬುದನ್ನು ವಿವರಿಸಲು ಕೇಳಿದಾಗ ಶುಕ್ಲಾ, ಸ್ವಲ್ಪ ಸಮಯದ ಹಿಂದೆ, ನಾನು ಕಿಟಕಿಯಿಂದ ಹೊರಗೆ ನೋಡುತ್ತಿದ್ದಾಗ, ನಾವು ಹವಾಯಿಯ ಮೇಲೆ ಹಾರುತ್ತಿದ್ದೆವು. ನಾವು ದಿನಕ್ಕೆ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಕ್ಷೆಯಿಂದ ನೋಡುತ್ತೇವೆ. ನಮ್ಮ ರಾಷ್ಟ್ರವು ಬಹಳ ವೇಗದಲ್ಲಿ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದ, ನಾನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದೇನೆ. ಇಲ್ಲಿ ನಿಲ್ಲುವುದು ಸುಲಭವಾಗಿ ಕಾಣುತ್ತದೆ, ಆದರೆ ನನ್ನ ತಲೆ ಸ್ವಲ್ಪ ಭಾರವಾಗಿದೆ, ಕೆಲವು ತೊಂದರೆಗಳನ್ನು ಎದುರಿಸುತ್ತಿದೆ; ಆದರೆ ಇವು ಸಣ್ಣ ಸಮಸ್ಯೆಗಳಾಗಿವೆ ಎಂದು ಶುಕ್ಲಾ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ಬಾಹ್ಯಾಕಾಶದಲ್ಲಿ ಜೀವನ ಹೇಗಿದೆ? ಪ್ರಧಾನಿ ಮೋದಿಯೊಂದಿಗೆ ಸಂವಾದ ನಡೆಸಿದ ಶುಭಾಂಶು ಶುಕ್ಲಾ
ಪ್ರಧಾನಿ ಮೋದಿಯವರೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಶುಕ್ಲಾ ಅವರು ಭಾರತವು ನಕ್ಷೆಯಲ್ಲಿ ಕಾಣುವುದಕ್ಕಿಂತ ಬಾಹ್ಯಾಕಾಶದಿಂದ ನೋಡುವಾಗ ಭವ್ಯವಾಗಿ ಮತ್ತು ದೊಡ್ಡದಾಗಿ ಕಾಣುತ್ತದೆ ಎಂದು ಹೇಳಿದ್ದಾರೆ. ರಾಕೇಶ್ ಶರ್ಮಾ ಅವರ ಬಳಿಕ ಬಾಹ್ಯಾಕಾಶ ಪ್ರಯಾಣ ಕೈಗೊಂಡ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಪಾತ್ರರಾಗಿದ್ದಾರೆ. ಶುಕ್ಲಾ ಅವರು ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿದ್ದಾರೆ ಮತ್ತು ಕಾರ್ಯಾಚರಣೆಯ ಪೈಲಟ್ ಕೂಡ ಆಗಿದ್ದಾರೆ.