ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಬಂಧನಕ್ಕೂ ಹೆದರಲ್ಲ, ಶೇಖ್‌ ಹಸೀನಾ ದೃಢ ನಿರ್ಧಾರ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಬಂಧನ ಅಥವಾ ಜೈಲು ಶಿಕ್ಷೆಯ ಸಾಧ್ಯತೆ ಇದ್ದರೂ ಈ ವರ್ಷದ ಡಿಸೆಂಬರ್‌ನಲ್ಲಿ ದೇಶಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸ್ಥಿರತೆಯನ್ನು ಪುನಃ ಸ್ಥಾಪಿಸುವ ಉದ್ದೇಶದಿಂದಲೇ ತಮ್ಮ ಮರಳುವಿಕೆ ಎಂದು ಅವರು ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ದೇಶಕ್ಕೆ ಮರಳುತ್ತೇನೆ: ಶೇಖ್ ಹಸೀನಾ

ಶೇಖ್ ಹಸೀನಾ -

Profile
Sushmitha Jain Aug 6, 2026 6:36 PM

ನವದೆಹಲಿ, ಆ. 6: ಬಂಧನವಾಗಲಿ, ಜೈಲು ಶಿಕ್ಷೆ (Imprisonment)ಯಾಗಲಿ, ಯಾವುದೇ ಪರಿಣಾಮ ಎದುರಾದರೂ ಈ ವರ್ಷದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವುದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಘೋಷಿಸಿದ್ದಾರೆ. ಅಧಿಕಾರದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ದೆಹಲಿಯಿಂದ ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಆಡಿಯೋ ಸಂದೇಶ ನೀಡಿದ ಅವರು, "ನನ್ನ ದೇಶದ ಜನರು ಸಂಕಷ್ಟದಲ್ಲಿರುವಾಗ ನಾನು ದೂರ ಉಳಿಯಲು ಸಾಧ್ಯವಿಲ್ಲ. ನನ್ನನ್ನು ಬಂಧಿಸಬಹುದು, ಜೈಲಿಗೆ ಕಳುಹಿಸಬಹುದು. ಸುಳ್ಳು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲು ಪ್ರಯತ್ನಿಸಬಹುದು. ಆದರೆ ಭಯವು ನನ್ನ ಕರ್ತವ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ನನ್ನ ಜೀವನ ವೈಯಕ್ತಿಕ ಸುರಕ್ಷತೆಯ ಲೆಕ್ಕಾಚಾರಕ್ಕಿಂತ ದೇಶದ ಜನರಿಗಾಗಿ ಮೀಸಲಾಗಿದೆ," ಎಂದು ಹೇಳಿದ್ದಾರೆ.

"ನಾನು ಡಿಸೆಂಬರ್‌ನಲ್ಲಿ ದೇಶಕ್ಕೆ ಮರಳುವುದಾಗಿ ಈಗಾಗಲೇ ಘೋಷಿಸಿದ್ದೇನೆ. ಸೂಕ್ತ ಸಮಯದಲ್ಲಿ ನಿಖರ ದಿನಾಂಕವನ್ನು ಪ್ರಕಟಿಸುತ್ತೇನೆ," ಎಂದು ಹಸೀನಾ ತಿಳಿಸಿದ್ದಾರೆ. ತಮ್ಮ ಮರಳುವಿಕೆ ಅಧಿಕಾರಕ್ಕಾಗಿ ಅಲ್ಲ, ದೇಶದಲ್ಲಿ ಭದ್ರತೆ, ಅಭಿವೃದ್ಧಿ, ಸಮೃದ್ಧಿ, ಶಾಂತಿ ಹಾಗೂ ಪ್ರಜಾಪ್ರಭುತ್ವವನ್ನು ಪುನಃ ಸ್ಥಾಪಿಸುವುದಕ್ಕಾಗಿ ಎಂದು ಅವರು ಹೇಳಿದ್ದಾರೆ. ಬಾಂಗ್ಲಾದೇಶವು ಮತ್ತೆ ಅಭಿವೃದ್ಧಿಯ ಹಾದಿಗೆ ಮರಳಬೇಕು ಎಂಬುದು ತಮ್ಮ ಆಶಯ ಎಂದು ತಿಳಿಸಿದರು.

ರೈತನ ಜೀವ ಉಳಿಸಲು ತನ್ನ ಲೈಫ್ ಜಾಕೆಟ್ ನೀಡಿ ತಾನೇ ಪ್ರವಾಹದಲ್ಲಿ ಕೊಚ್ಚಿ ಹೋದ ಈಜು ತರಬೇತುದಾರ

ಪ್ರಸ್ತುತ ಮಧ್ಯಂತರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹಸೀನಾ, ದೇಶದ ಪ್ರಜಾಪ್ರಭುತ್ವ ಮತ್ತು ಧರ್ಮನಿರಪೇಕ್ಷ ಮೌಲ್ಯಗಳನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿದರು. "ದೇಶದ ಸ್ವಾತಂತ್ರ್ಯದ ಸ್ಮಾರಕಗಳು ಹಾಗೂ ರಾಷ್ಟ್ರೀಯ ಹೆಮ್ಮೆಯ ಸಂಕೇತಗಳನ್ನು ನಾಶಪಡಿಸಲಾಗಿದೆ" ಎಂದು ಅವರು ಟೀಕಿಸಿದರು.

ತಮ್ಮ ರಾಜಕೀಯ ಜೀವನವನ್ನು ನೆನಪಿಸಿಕೊಂಡ ಹಸೀನಾ, ಜೈಲು ಜೀವನ, ಆರು ವರ್ಷಗಳ ವಲಸೆ ಹಾಗೂ ಹಲವು ರಾಜಕೀಯ ಸವಾಲುಗಳನ್ನು ಎದುರಿಸಿದ್ದೇನೆ. ನನ್ನ ವಿರುದ್ಧ 19 ಬಾರಿ ಹತ್ಯೆ ಯತ್ನಗಳು ನಡೆದಿದ್ದರೂ ದೇಶದ ಸೇವೆಯಿಂದ ಹಿಂದೆ ಸರಿದಿಲ್ಲ ಎಂದು ಹೇಳಿದರು.

ಹಿನ್ನೆಲೆ:

2024ರ ಆಗಸ್ಟ್‌ 5ರಂದು ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಭಾರಿ ಪ್ರತಿಭಟನೆಗಳ ಬಳಿಕ ಶೇಖ್ ಹಸೀನಾ ಪ್ರಧಾನಿ ಸ್ಥಾನ ಕಳೆದುಕೊಂಡು ಭಾರತಕ್ಕೆ ಬಂದಿದ್ದರು. ಬಳಿಕ ಮಧ್ಯಂತರ ಸರ್ಕಾರವು ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಿತು. 2025ರಲ್ಲಿ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ 2024ರ ಪ್ರತಿಭಟನೆಗಳ ಹಿಂಸಾಚಾರ ಪ್ರಕರಣದಲ್ಲಿ ಹಸೀನಾ ಅವರನ್ನು ಗೈರುಹಾಜರಿಯಲ್ಲಿ ದೋಷಿ ಎಂದು ತೀರ್ಪು ನೀಡಿ ಮರಣದಂಡನೆ ವಿಧಿಸಿತು. ಆದರೆ ಈ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಹಸೀನಾ ತಳ್ಳಿಹಾಕಿದ್ದಾರೆ. ಅವರನ್ನು ಭಾರತದಿಂದ ಹಸ್ತಾಂತರಿಸುವಂತೆ ಬಾಂಗ್ಲಾದೇಶ ಮನವಿ ಸಲ್ಲಿಸಿದ್ದು, ಆ ಕುರಿತು ಭಾರತ ಸರ್ಕಾರ ಕಾನೂನು ಪ್ರಕ್ರಿಯೆ ಮುಂದುವರಿಸಿದೆ.