Vishwavani Editorial: ದೂರದಿಂದಲೇ ಜೀವ ಹಿಂಡುತಿದೆ...
ದೀಪು ಚಂದ್ರ ದಾಸ್, ಅಮೃತ್ ಮೊಂಡಲ್ ಎಂಬಿಬ್ಬರ ಮೇಲೆ ಉದ್ರಿಕ್ತ ಮುಸ್ಲಿಮರ ಗುಂಪು ಹೀಗೆಯೇ ಘೋರದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದದನ್ನು ಮರೆಯು ವಂತಿಲ್ಲ. ಖೋಕೋನ್ ದಾಸ್ ಎಂಬುವವರೂ ಮಾರಕ ದಾಳಿಗೆ ತುತ್ತಾಗಿದ್ದು, ಚೇತರಿಸಿಕೊಳ್ಳಲು ಇನ್ನೂ ಸಾಕಷ್ಟು ದಿನಗಳು ಬೇಕಾಗುತ್ತವೆ ಎನ್ನಲಾಗುತ್ತಿದೆ.
-
ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದು ವರಿದಿರುವುದು ವಿಷಾದನೀಯ. ಅಲ್ಲಿನ ಶರಿಯತ್ಪುರ ಜಿಲ್ಲೆಯಲ್ಲಿ ಉದ್ತಿಕ್ತರ ಗುಂಪೊಂದು ಮೊನ್ನೆ ತಡರಾತ್ರಿಯಲ್ಲಿ ಹಿಂದೂ ವ್ಯಕ್ತಿಯೊಬ್ಬನ ಮೇಲೆ ಮಾರಕ ಹಲ್ಲೆ ನಡೆಸಿ, ತರುವಾಯದಲ್ಲಿ ಬೆಂಕಿ ಹಚ್ಚಿ ಸಾಯಿಸಲು ಯತ್ನಿಸಿರುವುದು ವರದಿಯಾಗಿದೆ. ಆದರೆ ಆ ವ್ಯಕ್ತಿ ಸ್ವಲ್ಪದರಲ್ಲೇ ಪಾರಾಗಿರುವುದು ಸಮಾಧಾನಕರ ಸಂಗತಿ.
ಇದಕ್ಕೂ ಮುನ್ನ, ದೀಪು ಚಂದ್ರ ದಾಸ್, ಅಮೃತ್ ಮೊಂಡಲ್ ಎಂಬಿಬ್ಬರ ಮೇಲೆ ಉದ್ರಿಕ್ತ ಮುಸ್ಲಿಮರ ಗುಂಪು ಹೀಗೆಯೇ ಘೋರದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದದನ್ನು ಮರೆಯು ವಂತಿಲ್ಲ. ಖೋಕೋನ್ ದಾಸ್ ಎಂಬುವವರೂ ಮಾರಕ ದಾಳಿಗೆ ತುತ್ತಾಗಿದ್ದು, ಚೇತರಿಸಿಕೊಳ್ಳಲು ಇನ್ನೂ ಸಾಕಷ್ಟು ದಿನಗಳು ಬೇಕಾಗುತ್ತವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Vishwavani Editorial: ಅಕಟಕಟಾ, ಜೈಲಿನಲ್ಲೂ ವೈಭೋಗ!
ಮೇಲ್ನೋಟಕ್ಕೆ ಇದು ಬಾಂಗ್ಲಾದಲ್ಲಿ ತಲೆ ದೋರಿರುವ ‘ಹಿಂದೂ ಅಲ್ಪಸಂಖ್ಯಾತರ ಮೇಲಿನ, ಬಹುಸಂಖ್ಯಾತ ಮುಸ್ಲಿಮರ ಅಸಹಿಷ್ಣುತೆ’ಯ ಫಲಶ್ರುತಿ ಎನಿಸಿದರೂ, ಇದರ ಹಿಂದೆ ಒಂದಿಷ್ಟು ವಿದೇಶಿ ಶಕ್ತಿಗಳ ಕುಮ್ಮಕ್ಕು ಇರುವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗದು.
ಬಾಂಗ್ಲಾದ ಉದಯಕ್ಕೆ ಭಾರತವೇ ಕಾರಣವಾಗಿದ್ದುದರ ಜತೆಗೆ, ಆ ದೇಶಕ್ಕೆ ಹಲವು ನೆಲೆಗಟ್ಟಿನಲ್ಲಿ ಸಹಾಯವನ್ನು ನೀಡಿರುವುದು ಪ್ರಾಯಶಃ ಈಗ ಹಿಂಸಾಚಾರದಲ್ಲಿ ತೊಡಗಿರುವವರಿಗೆ ಅರಿವಿಲ್ಲ ಎನಿಸುತ್ತದೆ; ಒಂದೊಮ್ಮೆ ಹಾಗೆ ಅರಿವಿದ್ದಿದ್ದರೆ, ಅಲ್ಲಿನ ಹಿಂದೂ ಅಲ್ಪಸಂಖ್ಯಾತರನ್ನು ಅವರು ಹೀಗೆ ಕೆಟ್ಟದಾಗಿ ನಡೆಸಿಕೊಳ್ಳುತ್ತಿರಲಿಲ್ಲ.
ಇಲ್ಲಿ ಬಾಂಗ್ಲಾದ ಬಹುಸಂಖ್ಯಾತ ಅಸಹಿಷ್ಣುಗಳು ಮಾತ್ರವಲ್ಲದೆ, ಭಾರತದ ಪ್ರಗತಿಯನ್ನು ಸಹಿಸಲಾಗದ ‘ಪರದೇಶಿ’ ಶಕ್ತಿಗಳು ಮತ್ತು ಭಾರತದ ‘ಸಾಂಪ್ರದಾಯಿಕ ವಿರೋಧಿಗಳು’ ಕೂಡ ಇಂಥ ಹಿಂಸಾಚಾರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ಸಾಧ್ಯತೆಗಳಿವೆ. ಹೀಗಾಗಿ, ಭಾರತವು ತನ್ನ ನಿಲುವನ್ನು ಸ್ಪಷ್ಟವಾಗಿ ಪುನರುಚ್ಚರಿಸಬೇಕಾದ ಕಾಲ ಬಂದಿದೆ, ಮುಂದಿನ ನಿಷ್ಠುರ ಕ್ರಮಕ್ಕೆ ಸಜ್ಜಾಗಬೇಕಿದೆ...