ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಇದು ಭರವಸೆಯ ಆಶಾಕಿರಣ

ತಂಬಾಕು ಉತ್ಪನ್ನಗಳ ಖರೀದಿಗೆ ಇದ್ದ ವಯೋಮಿತಿಯನ್ನು 18 ವರ್ಷದಿಂದ 21ಕ್ಕೆ ಏರಿಸಿ ಆದೇಶ ಹೊರಡಿಸಿದೆ ರಾಜ್ಯ ಸರಕಾರ. ಇದು ನಿಜಕ್ಕೂ ಒಂದು ಶ್ಲಾಘನೀಯ ಉಪಕ್ರಮ ಎನ್ನಲಡ್ಡಿಯಿಲ್ಲ. ಏಕೆಂದರೆ, ಹದಿಹರೆಯದವರು, ಅದರಲ್ಲೂ ಗ್ರಾಮೀಣ ಪ್ರದೇಶದವರು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಗೀಳಿಗೆ ಒಳಗಾಗುತ್ತಿರುವ ಪರಿ ತೀವ್ರವಾಗಿರುವ ಈ ಕಾಲಘಟ್ಟದಲ್ಲೇ ಇಂಥ ದೊಂದು ತೀರ್ಮಾನ ಹೊರಬಿದ್ದಿರುವುದು ಹಾಗೂ ‘ವಿಶ್ವ ತಂಬಾಕುರಹಿತ ದಿನ’ವೇ ಅದಕ್ಕೆ ಪರ್ವಕಾಲ ವಾಗಿರುವುದು ಸ್ವೀಕಾರಾರ್ಹವೇ ಸರಿ

ಇದು ಭರವಸೆಯ ಆಶಾಕಿರಣ

Profile Ashok Nayak Jun 2, 2025 7:09 AM

ತಂಬಾಕು ಉತ್ಪನ್ನಗಳ ಖರೀದಿಗೆ ಇದ್ದ ವಯೋಮಿತಿಯನ್ನು 18 ವರ್ಷದಿಂದ 21ಕ್ಕೆ ಏರಿಸಿ ಆದೇಶ ಹೊರಡಿಸಿದೆ ರಾಜ್ಯ ಸರಕಾರ. ಇದು ನಿಜಕ್ಕೂ ಒಂದು ಶ್ಲಾಘನೀಯ ಉಪಕ್ರಮ ಎನ್ನಲಡ್ಡಿಯಿಲ್ಲ. ಏಕೆಂದರೆ, ಹದಿಹರೆಯದವರು, ಅದರಲ್ಲೂ ಗ್ರಾಮೀಣ ಪ್ರದೇಶದವರು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಗೀಳಿಗೆ ಒಳಗಾಗುತ್ತಿರುವ ಪರಿ ತೀವ್ರವಾಗಿರುವ ಈ ಕಾಲಘಟ್ಟದಲ್ಲೇ ಇಂಥದೊಂದು ತೀರ್ಮಾನ ಹೊರಬಿದ್ದಿರುವುದು ಹಾಗೂ ‘ವಿಶ್ವ ತಂಬಾಕುರಹಿತ ದಿನ’ವೇ ಅದಕ್ಕೆ ಪರ್ವಕಾಲವಾಗಿರುವುದು ಸ್ವೀಕಾರಾರ್ಹವೇ ಸರಿ.

ಇಂದು ಶಾಲಾ-ಕಾಲೇಜುಗಳ ಕೆಲವು ವಿದ್ಯಾರ್ಥಿಗಳು ತಂತಮ್ಮ ತರಗತಿಯ ಕೊಠಡಿಗಳಲ್ಲಿ ಇರುವು ದಕ್ಕಿಂತ, ತಂಬಾಕು ಉತ್ಪನ್ನಗಳ ಅಂಗಡಿಗಳ ಮುಂದೆಯೇ ಹೆಚ್ಚೆಚ್ಚು ಜಮೆಯಾಗುವುದು ಬಹಳ ಕಡೆ ಕಾಣಬರುವ ದೃಶ್ಯ. ತಂಬಾಕು ಉತ್ಪನ್ನವನ್ನು ಅದೊಂದು ದುರ್ಲಭ ಅಮೃತವೇನೋ ಎಂಬಷ್ಟರ ಮಟ್ಟಿಗೆ ಇವರೆಲ್ಲ ಜಗಿದು ಜಿಗಿದಾಡುವುದನ್ನು ನೋಡಿದಾಗ, ಭವ್ಯ ಭಾರತದ ಈ ಭವಿಷ್ಯದ ಪ್ರಜೆಗಳ ಭವಿತವ್ಯದ ಬಗ್ಗೆ ಆತಂಕ ಮೂಡುವುದು ಸಹಜ.

ಇದನ್ನೂ ಓದಿ: Vishwavani Editorial: ಸಂಚುಕೋರರಿಗೆ ಶಾಸ್ತಿಯಾಗಲಿ

ಶಿಕ್ಷಣ ಸಂಸ್ಥೆಗಳ ಇಂತಿಷ್ಟು ಅಂತರದ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂಬ ನಿಯಮವಿದ್ದರೂ ಅದು ಸಮರ್ಥವಾಗಿ ಪರಿಪಾಲನೆಯಾಗುತ್ತಿರುವುದರ ಬಗ್ಗೆ ಖಾತ್ರಿಯಿಲ್ಲ ಹಾಗೂ ಇಂಥ ಮಳಿಗೆಗಳ ಮುಂದೆ ಕಾಣುವ ಜಂಗುಳಿಯೂ ಕಮ್ಮಿಯಾಗುತ್ತಿಲ್ಲ. ಈಗ, ಸರಕಾರವು ಈ ಆದೇಶವನ್ನು ಹೊರಡಿಸಿದ ನಂತರವಾದರೂ ಪರಿಸ್ಥಿತಿಯಲ್ಲಿ ಸುಧಾರಣೆ ಯಾಗುವುದೇ ಎಂಬುದನ್ನು ಕಾದುನೋಡಬೇಕಾಗಿದೆ.

‘ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಎಂಬುದು ಬಲ್ಲವರು ಹೇಳಿರುವ ‘ಎಚ್ಚರಿಕೆ-ಭರಿತ’ ಮತ್ತು ವಿವೇಕಯುತ ಮಾತು. ತಂಬಾಕು ಉತ್ಪನ್ನಗಳಿಗೆ ಒಮ್ಮೆ ಬಾಯೊಡ್ಡಿದರೆ, ಮುಂದೆ ಯಾವುದಕ್ಕೂ ಬಾಯಿ ಒಡ್ಡಲಾರದಂಥ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದೂ ಅಪ್ರಿಯಸತ್ಯವೇ. ಆದರೆ ಈ ಚಟಕ್ಕೆ ಒಡ್ಡಿಕೊಂಡವರಿಗೆ ಇಂಥ ವಿವೇಕದ ಮಾತುಗಳು ಕೇಳುವುದಿಲ್ಲ, ಒಂದೊಮ್ಮೆ ಕೇಳಿದರೂ ರುಚಿಸುವುದಿಲ್ಲ ಎಂಬುದು ವಿಪರ್ಯಾಸ. ಮನೆಯಲ್ಲಿನ ಹಿರಿಯರೆನಿಸಿಕೊಂಡವರು ಈ ಕುರಿತು ಇನ್ನಷ್ಟು ಜಾಗ್ರತೆ ವಹಿಸಿ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಟೊಂಕ ಕಟ್ಟಬೇಕಿದೆ.