IND vs ZIM: ವೈಭವ್ ಸೂರ್ಯವಂಶಿಯಿಂದ ಔಟ್ ಆಫ್ ಫಾರ್ಮ್ ಅಭಿಷೇಕ್ ಶರ್ಮಾ ಸ್ಥಾನಕ್ಕೆ ಕುತ್ತು?
IND vs ZIM: ಭಾರತ ಹಾಗೂ ಜಿಂಬಾಬ್ವೆ ನಡುವಣ ಮೂರು ಪಂದ್ಯಗಳ ಟಿ20ಐ ಸರಣಿ ಮುಕ್ತಾಯವಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡ 3-0 ಅಂತರದಲ್ಲಿ ಟಿ20ಐ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಅವರು ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದ್ದರು. ಅವರು ಮೂರೂ ಪಂದ್ಯಗಳಲ್ಲಿ ಬ್ಲೆಸಿಂಗ್ ಮುಝರಾಬಾನಿಗೆ ವಿಕೆಟ್ ಒಪ್ಪಿಸಿದ್ದರು.
ಸ್ಪೋಟಕ ಬ್ಯಾಟಿಂಗ್ ಮೂಲಕ ಅಭಿಷೇಕ್ಗೆ ಒತ್ತಡ ಹೇರಿದ ವೈಭವ್ ಸೂರ್ಯವಂಶಿ. -
ನವದೆಹಲಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿದಾಯ ಹೇಳಿದ ಬಳಿಕ ಭಾರತ ಚುಟುಕು ತಂಡದಲ್ಲಿನ ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆಯುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ದೇಶಿ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಿದರೂ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಸಂಜು ಸ್ಯಾಮ್ಸನ್ ಎಂದರೆ ತಪ್ಪಾಗಲಾರದು. ಕೇರಳ ಮೂಲದ ಬ್ಯಾಟ್ಸ್ಮನ್ 2015ರಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರೂ ಅವರು ಇನ್ನೂ ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಯುಕೆ ಪ್ರವಾಸದ ತಂಡದಲ್ಲಿ ಆಡಿದ್ದ ಅವರು, ಜಿಂಬಾಬ್ವೆ ಎದುರಿನ ಸರಣಿಯಲ್ಲಿ ಆಡಿದರೂ ಇದೀಗ ಜಿಂಬಾಬ್ವೆ ಸರಣಿಯಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೂ ಯುಕೆ ಪ್ರವಾಸದಲ್ಲಿ ವಿಫಲರಾದ ಕಾರಣ ಅವರನ್ನು ಜಿಂಬಾಬ್ವೆ ಪ್ರವಾಸದಿಂದ ಕೈ ಬಿಡಲಾಗಿತ್ತು. ಇದಕ್ಕೆ ಪ್ರಮುಖ ಕಾರಣ ವೈಭವ್ ಸೂರ್ಯವಂಶಿ ಎಂದರೆ ತಪ್ಪಾಗಲಾರದು. ಇದೀಗ ಅದೇ ಸನ್ನಿವೇಶ ಅಭಿಷೇಕ್ ಶರ್ಮಾ ಅವರಿಗೂ ಎದುರಾಗಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಯೋಗ್ಯ ಪ್ರದರ್ಶನವನ್ನು ತೋರಿದ್ದ ಅವರು, ಜಿಂಬಾಬ್ವೆ ಎದುರು ಅದೇ ಲಯವನ್ನು ಮುಂದುವರಿಸಲು ಸಾಧ್ಯವಾಗಿಲ್ಲ. ಅವರು ಕಳೆದ ಆರು ಟಿ20ಐ ಇನಿಂಗ್ಸ್ಗಳಿಂದ ಗಳಿಸಿದ್ದು ಕೇವಲ 40 ರನ್ಗಳು ಮಾತ್ರ. ಇದರಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಏನೆಂದರೆ, ಮೂರೂ ಪಂದ್ಯಗಳಲ್ಲಿ ಅವರು ಬ್ಲೆಸಿಂಗ್ ಮುಝರಾಬಾನಿ ಅವರಿಗೆ ವಿಕೆಟ್ ಒಪ್ಪಿಸಿದ್ದರು.
ಶುಭಮನ್ ಗಿಲ್ ಬೇಡ, ರೋಹಿತ್ ಶರ್ಮಾ ಜೊತೆ ವೈಭವ್ ಸೂರ್ಯವಂಶಿ ಇನಿಂಗ್ಸ್ ಆರಂಭಿಸಬೇಕೆಂದ ಫಾರೂಖ್ ಇಂಜಿನಿಯರ್!
ಅಭಿಷೇಕ್ ಶರ್ಮಾರ ದೌರ್ಬಲ್ಯವನ್ನು ಬಯಲಿಗೆಳೆದ ಮುಝರಾಬಾನಿ
ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸಿಂಗ್ ಮುಝರಾಬಾನಿ ಅವರು ಈ ಟಿ20ಐ ಸರಣಿಯಲ್ಲಿ ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ನ ಒಂದು ದೌರ್ಬಲ್ಯವನ್ನು ಪರಿಣಾಮಕಾರಿಯಾಗಿ ಬಯಲಿಗೆಳೆದಿದ್ದಕ್ಕಾಗಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆಫ್ ಸ್ಟಂಪ್ ಹೊರಭಾಗದಲ್ಲಿ ಬರುವ ಎಸೆತಗಳನ್ನು ಅಭಿಷೇಕ್ ಶರ್ಮಾ ಅತ್ಯಂತ ಅಪಾಯಕಾರಿ ರೀತಿಯಲ್ಲಿ ದಂಡಿಸುತ್ತಾರೆ. ವಿಶೇಷವಾಗಿ ಪವರ್ಪ್ಲೇ ವೇಳೆ ಕವರ್ಸ್ ಪ್ರದೇಶದ ಮೂಲಕ ಆಡುವ ಅವರ ಸಾಮರ್ಥ್ಯವೇ ಅವರನ್ನು ಭಾರತದ ಅತ್ಯಂತ ಅಪಾಯಕಾರಿ ವೈಟ್ಬಾಲ್ ಬ್ಯಾಟರ್ಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಆದರೆ ಮುಝರಾಬಾನಿ, ಅಭಿಷೇಕ್ ಅವರ ಈ ಬಲವನ್ನು ಬಳಸಿಕೊಳ್ಳಲು ಯಾವುದೇ ಅವಕಾಶ ನೀಡಲಿಲ್ಲ.
ಬದಲಾಗಿ, ಎತ್ತರದ ಮೈಕಟ್ಟಿನ ಮುಝರಾಬಾನಿ ನಿರಂತರವಾಗಿ ಹಾರ್ಡ್ ಬ್ಯಾಕ್-ಆಫ್-ಎ-ಲೆನ್ತ್ ಎಸೆತಗಳನ್ನು ಹಾಕಿದರು. ತಮ್ಮ ಹೆಚ್ಚುವರಿ ಬೌನ್ಸ್ ಹಾಗೂ ಎಡಗೈ ಬ್ಯಾಟರ್ನಿಂದ ಹೊರಕ್ಕೆ ಸಾಗುವ ಸಹಜವಾದ ಆಂಗಲ್ ಅನ್ನು ಸಮರ್ಥವಾಗಿ ಬಳಸಿಕೊಂಡು, ಅಭಿಷೇಕ್ಗೆ ಮುಕ್ತವಾಗಿ ಹೊಡೆಯಲು ಯಾವುದೇ ಜಾಗ ನೀಡಲಿಲ್ಲ.
ಪ್ರತಿ ಬಾರಿ ಅಭಿಷೇಕ್ ರನ್ಗಳ ವೇಗ ಹೆಚ್ಚಿಸಲು ಪ್ರಯತ್ನಿಸಿದಾಗ, ಅವರು ತಮ್ಮ ಸಹಜ ಮತ್ತು ಸ್ಥಿರ ಬ್ಯಾಟಿಂಗ್ ಶೈಲಿಯಿಂದ ಶಾಟ್ ಆಡಲು ಸಾಧ್ಯವಾಗದೆ ವಿಫಲರಾಗಿದ್ದರು. ಇದೇ ಕಾರಣಕ್ಕೆ ಅವರ ಸಾಮಾನ್ಯ ಆಕ್ರಮಣಕಾರಿ ಆಟವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮುಝರಾಬಾನಿಗೆ ಸಾಧ್ಯವಾಯಿತು.
ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ
ಅಭಿಷೇಕ್ ಶರ್ಮಾ ಎದುರು ಜಿಂಬಾಬ್ವೆ ರಣತಂತ್ರ
ಸರಣಿಯುದ್ದಕ್ಕೂ ಅಭಿಷೇಕ್ ಶರ್ಮಾ ಔಟಾದ ರೀತಿ ನೋಡಿದರೆ, ಜಿಂಬಾಬ್ವೆ ತಂಡ, ಅವರ ವಿರುದ್ಧ ಎಷ್ಟು ಸೂಕ್ಷ್ಮವಾಗಿ ಯೋಜನೆ ರೂಪಿಸಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಮೊದಲ ಟಿ20ಐ ಪಂದ್ಯದಲ್ಲಿ ಬ್ಲೆಸಿಂಗ್ ಮುಝರಾಬಾನಿ, ಆರಂಭದಲ್ಲಿ ಹಲವು ಬ್ಯಾಕ್-ಆಫ್-ಲೆನ್ತ್ ಎಸೆತಗಳನ್ನು ಹಾಕಿದ ಬಳಿಕ, ಇದ್ದಕ್ಕಿದ್ದಂತೆ ಲೆನ್ತ್ ಬದಲಾಯಿಸಿ ಅಭಿಷೇಕ್ ಅವರನ್ನು ದೊಡ್ಡ ಹೊಡೆತಕ್ಕೆ ಪ್ರೇರೇಪಿಸಿದರು. ಹೆಚ್ಚುವರಿ ಬೌನ್ಸ್ಗೆ ಹೊಂದಿಕೊಳ್ಳಲು ವಿಫಲರಾದ ಅಭಿಷೇಕ್, ಚೆಂಡನ್ನು ನಿಯಂತ್ರಿಸಲು ಸಾಧ್ಯವಾಗದೆ ಥರ್ಡ್ಮ್ಯಾನ್ ಕಡೆಗೆ ಹೊಡೆದು ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು.
ಎರಡನೇ ಪಂದ್ಯದಲ್ಲೂ ಇದೇ ತಂತ್ರ ಯಶಸ್ವಿಯಾಯಿತು. ಮತ್ತೊಮ್ಮೆ ಮುಝರಾಬಾನಿ ಸವಾಲಿನ ಲೆನ್ತ್ನಲ್ಲಿ ಎಡಗೈ ಬ್ಯಾಟರ್ನಿಂದ ಹೊರಕ್ಕೆ ಸಾಗುವ ರೀತಿಯಲ್ಲಿ ಬೌಲ್ ಮಾಡಿದರು. ಇದರಿಂದ ಅಭಿಷೇಕ್ ಬ್ಯಾಟ್ ಮುಖವನ್ನು ತೆಗೆದು ಆಡಬೇಕಾದ ಪರಿಸ್ಥಿತಿ ಎದುರಾಯಿತು. ಪರಿಣಾಮ, ರಯಾನ್ ಬರ್ಲ್ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಸುಲಭ ಕ್ಯಾಚ್ ಪಡೆದು ಜಿಂಬಾಬ್ವೆಗೆ ಆರಂಭದಲ್ಲೇ ಮತ್ತೊಂದು ಮಹತ್ವದ ವಿಕೆಟ್ ದೊರಕಿಸಿಕೊಟ್ಟರು.
ಮೂರನೇ ಪಂದ್ಯಕ್ಕೆ ಬರುವಷ್ಟರಲ್ಲಿ ಈ ಪೈಪೋಟಿ ಸಂಪೂರ್ಣವಾಗಿ ಜಿಂಬಾಬ್ವೆಯ ಪರವಾಗಿ ತಿರುಗಿತ್ತು. ಆಫ್ ಸ್ಟಂಪ್ ಹೊರಭಾಗದಲ್ಲಿ ಬಿದ್ದ ಫುಲ್ಲರ್ ಲೆನ್ತ್ ಎಸೆತದ ವಿರುದ್ಧ ಜಾಗ ಮಾಡಿಕೊಂಡು ತಮ್ಮ ಟ್ರೇಡ್ಮಾರ್ಕ್ ಕವರ್ಸ್ ಮೇಲಿನ ಲಾಫ್ಟೆಡ್ ಶಾಟ್ ಆಡಲು ಅಭಿಷೇಕ್ ಯತ್ನಿಸಿದರು. ಆದರೆ ಚೆಂಡು ಬ್ಯಾಟ್ನ ಅಂಚು ತಾಗಿ ವಿಕೆಟ್ಕೀಪರ್ ತಾಡಿವಾನಾಶೆ ಮಾರುಮಣಿ ಅವರ ಕೈ ಸೇರಿತು. ಹೀಗಾಗಿ, ಜಿಂಬಾಬ್ವೆಯ ಯೋಜನೆ ಮೂರನೇ ಪಂದ್ಯದಲ್ಲೂ ಫಲ ನೀಡಿತು.
ಜಿಂಬಾಬ್ವೆ ವಿರುದ್ಧ ಸರಣಿ ಕ್ಲೀನ್ಸ್ವೀಪ್ ಸಾಧನೆಗೈದ ಭಾರತ; ಅಂತಿಮ ಪಂದ್ಯದಲ್ಲಿ 35 ರನ್ ಗೆಲುವು
ಅಭಿಷೇಕ್ ಶರ್ಮಾಗೆ ಭಾರೀ ಹಿನ್ನಡೆ
ಕಳೆದ 24 ತಿಂಗಳುಗಳಲ್ಲಿ ಅಭಿಷೇಕ್ ಶರ್ಮಾ ಪ್ರದರ್ಶಿಸಿದ್ದ ಸ್ಫೋಟಕ ಬ್ಯಾಟಿಂಗ್ನ್ನು ಗಮನಿಸಿದರೆ, ಅವರ ಇತ್ತೀಚಿನ ಕಳಪೆ ಫಾರ್ಮ್ ಇನ್ನಷ್ಟು ಅಚ್ಚರಿ ಮೂಡಿಸುತ್ತದೆ.
ಇಂಗ್ಲೆಂಡ್ ವಿರುದ್ಧದ ಟಿ20y ಸರಣಿಯಲ್ಲಿ ಅಭಿಷೇಕ್, ಭಾರತ ನಂಬಿಕೆ ಇಟ್ಟಿದ್ದ ಸ್ಫೋಟಕ ಆರಂಭಿಕ ಬ್ಯಾಟರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಅವರು 59 ಮತ್ತು 43 ರನ್ಗಳ ಆಕರ್ಷಕ ಇನಿಂಗ್ಸ್ಗಳನ್ನು ಆಡಿದ್ದರು. ಇದೇ ಸರಣಿಯಲ್ಲಿ ಪುರುಷರ ಟಿ20ಐ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 100 ಸಿಕ್ಸರ್ಗಳನ್ನು ಪೂರೈಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿ, ಆರಂಭಿಕನಾಗಿ ಎಷ್ಟು ಅಪಾಯಕಾರಿ ಬ್ಯಾಟರ್ ಎಂಬುದನ್ನು ತೋರಿಸಿದ್ದರು. ಆದರೆ ಇದಾದ ಬಳಿಕ ಅವರ ಫಾರ್ಮ್ ಕುಸಿತ ಕಂಡಿದೆ.
ಪ್ರತಿಸ್ಪರ್ಧಿ ಬೌಲರ್ಗಳು, ಅಭಿಷೇಕ್ಗೆ ಆಫ್ ಸ್ಟಂಪ್ ಹೊರಭಾಗದಲ್ಲಿ ವೈಡ್ ಬಾಲ್ ಹಾಕದೆ, ಹೆಚ್ಚುವರಿ ಬೌನ್ಸ್ನೊಂದಿಗೆ ಅಸಹಜ ಸ್ಥಿತಿಯಲ್ಲಿ ಬ್ಯಾಟ್ ಮಾಡುವಂತೆ ಒತ್ತಡ ಹೇರಿದರೆ ಅವರ ರನ್ ಗಳಿಸುವ ಅವಕಾಶಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂಬುದನ್ನು ಅರಿತುಕೊಂಡಿದ್ದಾರೆ. ಜಿಂಬಾಬ್ವೆ ತಂಡ ಈ ತಂತ್ರವನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿತು.
ಯಾರ್ಕರ್ ಅಥವಾ ಫುಲ್ಲರ್ ಲೆನ್ತ್ ಎಸೆತಗಳಿಗಾಗಿ ಪ್ರಯತ್ನಿಸುವ ಬದಲು, ಜಿಂಬಾಬ್ವೆಯ ಬೌಲರ್ಗಳು ನಿರಂತರವಾಗಿ ಆಫ್ ಸ್ಟಂಪ್ ಹೊರಭಾಗದಲ್ಲಿ ಹಾರ್ಡ್ ಲೆನ್ತ್ ಎಸೆತಗಳನ್ನು ಹಾಕಿ ಅಭಿಷೇಕ್ ಮೇಲೆ ಒತ್ತಡ ಹೇರಿದರು. ಅದ್ಭುತ ಎಸೆತಗಳಿಗಾಗಿ ಪ್ರಯತ್ನಿಸುವ ಬದಲು, ಅವರು ತಾಳ್ಮೆಯಿಂದ ಅಭಿಷೇಕ್ ಅವರ ತಪ್ಪಿಗಾಗಿ ಕಾಯುತ್ತಾ ತಮ್ಮ ಯೋಜನೆಯನ್ನು ಯಶಸ್ವಿಗೊಳಿಸಿದರು.
ಇಂತಹ ಹಂತವು ಪ್ರತಿಯೊಬ್ಬ ಶ್ರೇಷ್ಠ ಬ್ಯಾಟರ್ಗೂ ಒಂದಲ್ಲೊಂದು ಸಮಯದಲ್ಲಿ ಎದುರಾಗುತ್ತದೆ. ಬೌಲರ್ಗಳು ಬ್ಯಾಟರ್ನ ಆಟದ ಮಾದರಿಯನ್ನು ಅರ್ಥಮಾಡಿಕೊಂಡ ಬಳಿಕ, ಅವರ ವಿರುದ್ಧ ಪ್ರಾಬಲ್ಯ ಸಾಧಿಸುವುದಕ್ಕಿಂತ ಹೊಸ ಮಾರ್ಗಗಳನ್ನು ಕಂಡುಹಿಡಿದು ಅದಕ್ಕೆ ಹೊಂದಿಕೊಳ್ಳುವುದೇ ದೊಡ್ಡ ಸವಾಲಾಗುತ್ತದೆ. ಅತ್ಯುತ್ತಮ ಬ್ಯಾಟರ್ಗಳು ಈ ಸವಾಲಿಗೆ ತಕ್ಕಂತೆ ತಮ್ಮ ಆಟವನ್ನು ಬದಲಿಸಿಕೊಳ್ಳುತ್ತಾರೆ. ಈಗ ಅಭಿಷೇಕ್ ಶರ್ಮಾ ಅವರ ಮುಂದಿರುವ ಸವಾಲೂ ಇದೇ.
ಇಂಗ್ಲೆಂಡ್ ಹಿಂದಿಕ್ಕಿ ಮತ್ತೆ ಟಿ20 ನಂ.1 ಸ್ಥಾನಕ್ಕೇರಿದ ಭಾರತ
ಅಭಿಷೇಕ್ಗೆ ಪೈಪೋಟಿ ಮತ್ತಷ್ಟು ಕಠಿಣ
ಸಾಮಾನ್ಯವಾಗಿ ಕೆಲ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುವುದರಿಂದ ಯಾವುದೇ ಆಟಗಾರನ ಸ್ಥಾನಕ್ಕೆ ದೊಡ್ಡ ಅಪಾಯ ಎದುರಾಗುವುದಿಲ್ಲ. ಆದರೆ ಅಭಿಷೇಕ್ ಶರ್ಮಾ ಅವರ ಪರಿಸ್ಥಿತಿಯಲ್ಲಿ ಪ್ರಮುಖ ಸವಾಲು ಎಂದರೆ, ಅವರ ಸ್ಥಾನಕ್ಕಾಗಿ ಕಾಯುತ್ತಿರುವ ಪ್ರತಿಭಾವಂತ ಆಟಗಾರರ ಸಂಖ್ಯೆ ಹೆಚ್ಚಿರುವುದು.
ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಉದಯವು ಭಾರತದ ದೀರ್ಘಕಾಲೀನ ಆರಂಭಿಕ ಬ್ಯಾಟರ್ ಸ್ಥಾನಕ್ಕೆ ಅವರ ಹಕ್ಕನ್ನು ಮತ್ತಷ್ಟು ಬಲಪಡಿಸಿದೆ. ಮತ್ತೊಂದೆಡೆ, ಜಿಂಬಾಬ್ವೆ ಪ್ರವಾಸದಲ್ಲಿ ಅವಕಾಶ ಪಡೆಯದಿದ್ದರೂ, ಈ ಹಿಂದೆ ಅಭಿಷೇಕ್ ಜೊತೆಗೆ ಇನಿಂಗ್ಸ್ ಆರಂಭಿಸಿದ್ದ ಸಂಜು ಸ್ಯಾಮ್ಸನ್ ಕೂಡ ಇನ್ನೂ ಭಾರತದ ಯೋಜನೆಗಳಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಅವರ ಅನುಪಸ್ಥಿತಿಯಿಂದ ಇತರರಿಗೆ ಅವಕಾಶ ಸಿಕ್ಕಿತೇ ಹೊರತು, ತಂಡದಲ್ಲಿನ ಅವರ ಸ್ಥಾನಮಾನಕ್ಕೆ ಯಾವುದೇ ಧಕ್ಕೆಯಾಗಿಲ್ಲ.
ಇದರ ಜೊತೆಗೆ, ಮತ್ತೊಂದು ಯಶಸ್ವಿ ಐಪಿಎಲ್ ಹಾಗೂ ದೇಶಿ ಕ್ರಿಕೆಟ್ ಋತುವಿನ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಪ್ರಭ್ಸಿಮ್ರನ್ ಸಿಂಗ್ ಕೂಡ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ಅವರಿಗೆ ಅವಕಾಶ ಸಿಗದಿದ್ದರೂ, ಅವರ ನಿರಂತರ ಪ್ರದರ್ಶನ ಅವರನ್ನು ಭಾರತದ ಭವಿಷ್ಯದ ಯೋಜನೆಗಳಲ್ಲಿ ಉಳಿಸಿಕೊಂಡಿದೆ.
ಹೀಗಾಗಿ, ಅಭಿಷೇಕ್ ಶರ್ಮಾ ಅವರಿಗೆ ಈಗ ಪ್ರತಿಯೊಂದು ಕಡಿಮೆ ಮೊತ್ತದ ಇನಿಂಗ್ಸ್ ಕೂಡ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ. ಏಕೆಂದರೆ, ಅವರ ಪಾತ್ರವನ್ನು ನಿರ್ವಹಿಸಬಲ್ಲ ಹಲವು ಆಕ್ರಮಣಕಾರಿ ಆರಂಭಿಕ ಬ್ಯಾಟರ್ಗಳು ಭಾರತ ತಂಡದಲ್ಲಿ ಲಭ್ಯವಿದ್ದಾರೆ.
ಆದರೆ ಇದರಿಂದ ಅಭಿಷೇಕ್ ಶರ್ಮಾ ಇದುವರೆಗೆ ಸಾಧಿಸಿರುವ ಎಲ್ಲವೂ ವ್ಯರ್ಥವಾಗುವುದಿಲ್ಲ. ಅವರ ಭಯಮುಕ್ತ ಬ್ಯಾಟಿಂಗ್ ಶೈಲಿಯು ಭಾರತದ ಟಿ20 ಬ್ಯಾಟಿಂಗ್ ತತ್ವವನ್ನೇ ಹೊಸ ಮಟ್ಟಕ್ಕೆ ಕೊಂಡೊಯ್ದಿದೆ. ಅವರಂತಹ ಪ್ರತಿಭಾವಂತ ಆಟಗಾರರು ಸಾಮಾನ್ಯವಾಗಿ ಹೆಚ್ಚು ಸಮಯ ಕಳಪೆ ಫಾರ್ಮ್ನಲ್ಲಿ ಉಳಿಯುವುದಿಲ್ಲ.
ಇದಲ್ಲದೆ, ಆಕ್ರಮಣಕಾರಿ ಆರಂಭಿಕ ಬ್ಯಾಟರ್ಗಳ ಪಾತ್ರವೇ ನಿರಂತರವಾಗಿ ಸಕಾರಾತ್ಮಕ ಮನೋಭಾವದೊಂದಿಗೆ ಬ್ಯಾಟಿಂಗ್ ಮಾಡುವುದಾಗಿರುವುದರಿಂದ, ಕೆಲವೊಮ್ಮೆ ಅವರು ಕಳಪೆ ಫಾರ್ಮ್ ಎದುರಿಸುವುದು ಸಹಜ ಎಂಬುದನ್ನು ಆಯ್ಕೆಗಾರರೂ ಚೆನ್ನಾಗಿ ಅರಿತಿದ್ದಾರೆ.