ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KAR vs RAJ: ಮಯಾಂಕ್‌ ಅಗರ್ವಾಲ್‌ ಶತಕ, ಕರ್ನಾಟಕ ತಂಡಕ್ಕೆ ಸತತ ಆರನೇ ಜಯ!

ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ ಆರನೇ ಗೆಲುವು ಸಾಧಿಸಿದೆ. ಮಂಗಳವಾರ ರಾಜಸ್ಥಾನ್‌ ವಿರುದ್ಧ 150 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕಕ್ಕೆ ಸತತ ಆರನೇ ಜಯ!

ರಾಜಸ್ಥಾನ್‌ ವಿರುದ್ಧ ಕರ್ನಾಟಕ ತಂಡಕ್ಕೆ ಜಯ. -

Profile
Ramesh Kote Jan 6, 2026 7:42 PM

ನವದೆಹಲಿ: ಮಯಾಂಕ್‌ ಅಗರ್ವಾಲ್‌ (Mayank Agarwal) ಶತಕ ಹಾಗೂ ದೇವದತ್‌ ಪಡಿಕ್ಕಲ್‌ (Devdutt Padikkal) ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡ , ಆರನೇ ಸುತ್ತಿನ ಪಂದ್ಯದಲ್ಲಿ ರಾಜಸ್ಥಾನ್‌ ವಿರುದ್ಧ 150 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯಲ್ಲಿ ಸತತ ಆರನೇ ಜಯ ದಾಖಲಿಸಿತು ಹಾಗೂ ಎ ಗುಂಪಿನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. 107 ಎಸೆತಗಳಲ್ಲಿ 100 ರನ್‌ ಗಳಿಸಿ ಕರ್ನಾಟಕ ಗೆಲುವಿಗೆ ನೆರವು ನೀಡಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅಹಮದಾಬಾದ್‌ನ ಗುಜರಾತ್‌ ಕಾಲೇಜು ಗ್ರೌಂಡ್‌ನಲ್ಲಿ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ ತಂಡ ನೀಡಿದ್ದ 325 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ರಾಜಸ್ಥಾನ್‌ ತಂಡ, ಪ್ರಸಿಧ್‌ ಕೃಷ್ಣ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 38 ಓವರ್‌ಗಳಿಗೆ 174 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 150 ರನ್‌ಗಳಿಂದ ಸೋಲು ಅನುಭವಿಸಿತು. ಈ ಟೂರ್ನಿಯಲ್ಲಿ ರಾಜಸ್ಥಾನ ತಂಡದ ಐದನೇ ಸೋಲು ಇದಾಗಿದ್ದು, ಪಾಯಿಂಟ್ಸ್‌ ಟೇಬಲ್‌ನಲ್ಲಿ ಏಳನೇ ಸ್ಥಾನಕ್ಕೆ ಕುಸಿಯಿತು. ಇನ್ನು ಈ ಪಂದ್ಯದ ಗೆಲುವಿನ ಮೂಲಕ ಕರ್ನಾಟಕ ತಂಡ ಕ್ವಾರ್ಟರ್‌ಫೈನಲ್‌ಗೆ ಬಹುತೇಕ ಅರ್ಹತೆ ಪಡೆದಿದೆ. ಆದರೂ ಜನವರಿ 8 ರಂದು ಮಧ್ಯ ಪ್ರದೇಶ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಆಡಲಿದೆ.

ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಸ್ಟಾರ್‌ ದೇವದತ್‌ ಪಡಿಕ್ಕಲ್‌!

ರಾಜಸ್ಥಾನ ಪರ ಕರಣ್‌ ಲಂಬಾ 55 ರನ್‌ ಗಳಿಸಿದರೆ, ದೀಪಕ್‌ ಹೂಡಾ 29 ರನ್‌ ಮತ್ತು ಕುಕ್ನಾ ಅಜಯ್‌ ಸಿಂಗ್‌ 25 ರನ್‌ ಗಳಿಸಿದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕರ್ನಾಟಕ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು ಕರ್ನಾಟಕ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದಿ ಪ್ರಸಿಧ್‌ ಕೃಷ್ಣ 8 ಓವರ್‌ಗಳಿಗೆ 36 ರನ್‌ ನೀಡಿ 5 ವಿಕೆಟ್‌ ಸಾಧನೆ ಮಾಡಿದರು. ಶ್ರೀಶಾ ಆಚಾರ್‌ ಹಾಗೂ ಶ್ರೇಯಸ್‌ ಗೋಪಾಲ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಿತ್ತರು.



ಮಯಾಂಕ್‌-ಪಡಿಕ್ಕಲ್‌ ಜುಗಲ್‌ಬಂದಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಕರ್ನಾಟಕ ತಂಡದ ಪರ ಇನಿಂಗ್ಸ್‌ ಆರಂಭಸಿದ್ದ ಮಯಾಂಕ್‌ ಅಗರ್ವಾಲ್‌ ಹಾಗೂ ದೇವದತ್‌ ಪಡಿಕ್ಕಲ್‌ ಜೋಡಿ ಅದ್ಭುತವಾಗಿ ಆಡಿತು. ಈ ಇಬ್ಬರೂ ಮುರಿಯದ ಮೊದಲನೇ ವಿಕೆಟ್‌ಗೆ 184 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿದರು. ಈ ಸೀಸನ್‌ನಲ್ಲಿ ಭಯಾನಕ ಫಾರ್ಮ್‌ನಲ್ಲಿರುವ ದೇವದತ್‌ ಪಡಿಕ್ಕಲ್‌, 82 ಎಸೆತಗಳಲ್ಲಿ 91 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಕೇವಲ 9 ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು.

Vijaya Hazare Trophy: ಬಂಗಾಳ ವಿರುದ್ಧ ದ್ವಿಶತಕ ಬಾರಿಸಿದ ಅಮನ್‌ ರಾವ್‌ ಯಾರು?

ಮಯಾಂಕ್‌ ಅಗರ್ವಾಲ್‌ ಶತಕ

ಅದ್ಭುತವಾಗಿ ಬ್ಯಾಟ್‌ ಮಾಡಿದ ನಾಯಕ ಮಯಾಂಕ್‌ ಅಗರ್ವಾಲ್‌ ಶತಕವನ್ನು ಬಾರಿಸಿದರು. ಇವರು ಆಡಿದ 107 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 100 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಕರ್ನಾಟಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಕೆಎಲ್‌ ರಾಹುಲ್‌ 25 ರನ್‌ ಹಾಗೂ ಅಭಿನವ್‌ ಮನೋಹರ್‌ 35 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದರು.